ಹನುಮನನ್ನೇ ಬಂಧಿಸಿದ ಜಗನ್ನಾಥ!
ಪವನಸುತನು ಜಗನ್ನಾಥ, ಬಲಭದ್ರ ಮತ್ತು ಸುಭದ್ರರನ್ನು ನೋಡಲು ಒಳಗೆ ಹೋಗಲು ಪ್ರಯತ್ನಿಸಿದಾಗ, ಸಮುದ್ರವೂ ಅವನ ಹಿಂದೆ ನಗರವನ್ನು ಪ್ರವೇಶಿಸಲು ಪ್ರಾರಂಭಿಸಿತು. ಇದನ್ನು ನೋಡಿದ ಜಗನ್ನಾಥ ದೇವರು ಹನುಮಂತನನ್ನು ಈ ಚಿನ್ನದ ಸಂಕೋಲೆಗಳಿಂದ ಕಟ್ಟಿದರು. ಆದ್ದರಿಂದಲೇ ಈ ದೇವಾಲಯವನ್ನು ಬೇಡಿ ಹನುಮಾನ್ ದೇವಾಲಯ ಎಂದು ಕರೆಯಲಾಗುತ್ತದೆ.
-ಚಿರಂಜೀವಿ
ಒಡಿಶಾದ ಪುರಿ ಧಾಮದಲ್ಲಿ ಜಗನ್ನಾಥ ದೇವರು ಆಸೀನರಾಗಿದ್ದಾರೆ. ಜಗನ್ನಾಥ ದೇವಾಲಯದಲ್ಲಿ ನಾವು ಕಂಡು ಕೇಳರಿಯದ ಅದೆಷ್ಟೋ ನಿಗೂಢ ಕಥೆಗಳಿವೆ. ಜಗನ್ನಾಥನ ಸುತ್ತಲೂ ಅನೇಕ ಇತಿಹಾಸ ಹೊಂದಿರುವ ವಿಶಿಷ್ಟ ದೇವಾಲಯಗಳಿವೆ. ಅವುಗಳಲ್ಲಿ ಒಂದು ಹನುಮಾನ್ ದೇವಾಲಯ. ಈ ದೇವಾಲಯದಲ್ಲಿ ಹನುಮಾನ್ ದೇವರನ್ನು ಬಂಗಾರದ ಸರಪಳಿಯಲ್ಲಿ ಬಂಧಿಸಲಾಗಿದೆ. ಕೇಳೋದಕ್ಕೆ ಅಚ್ಚರಿ ಎನಿಸಿದ್ರೂ ಇದು ಸತ್ಯ. ಈ ದೇವಾಲಯವನ್ನು ಬೇಡಿ ಹನುಮಾನ್ ದೇವಾಲಯ ಎಂದು ಕರೆಯಲಾಗುತ್ತದೆ. ಬಂಗಾರದ ಸರಪಳಿಯಲ್ಲಿ ಬಂಧಿಸಲ್ಪಟ್ಟಿರುವ ಈ ದೇವರನ್ನು ಕಾಣೋದಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಜಗನ್ನಾಥ ದೇವರು ಯಾವುದೋ ಕಾರಣಕ್ಕಾಗಿ ಹನುಮಂತನಿಗೆ ದೇವಾಲಯದ ಹೊರಗೆ ನಿಲ್ಲಲು ಹೇಳಿದ್ದರು. ಆದರೆ ಹನುಮಂತನು ಜಗನ್ನಾಥನ ಮಾತನ್ನು ಕೇಳಲೇ ಇಲ್ಲ. ಆದ್ದರಿಂದ ಸ್ವತಃ ಜಗನ್ನಾಥ ಸ್ವಾಮಿಯೇ ಹನುಮಾನ್ ದೇವರನ್ನು ಸರಪಳಿಯಿಂದ ಬಂಧಿಸಿದನು ಎಂಬ ಕಥೆ ಈ ದೇವಾಲಯದ ಹನುಮಂತನ ವಿಗ್ರಹದ ಬಗೆಗೆ ಇದೆ.
ಇದನ್ನೂ ಓದಿ: ಇದು ಶಕ್ತಿಯ ಶನಿದೋಷ ನಿವಾರಿಸಿದ್ದ ಕ್ಷೇತ್ರ
ದೇವಾಲಯದ ರಕ್ಷಕ ಹನುಮ!
ಜಗನ್ನಾಥ ಸ್ವಾಮಿಯ ಜಗನ್ನಾಥ ದೇವಾಲಯವು ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಾಲಯವಾಗಿದೆ. ಸಪ್ತಪುರಿಗಳಲ್ಲಿ ಒಂದಾದ ಪುರಿಯಲ್ಲಿರುವ ಈ ಜಗನ್ನಾಥ ದೇವಾಲಯವು ನಾಲ್ಕು ಧಾಮಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಬಹುತೇಕ ಎಲ್ಲರಿಗೂ ಈ ವಿಶ್ವಪ್ರಸಿದ್ಧ ದೇವಾಲಯದ ಬಗ್ಗೆ ತಿಳಿದಿದೆ. ಆದರೆ ಕೆಲವೇ ಜನರಿಗೆ ಮಾತ್ರ ಇದರ ವಿಶೇಷತೆಯ ಬಗ್ಗೆ ತಿಳಿದಿದೆ. ಉದಾಹರಣೆಗೆ, ಜಗನ್ನಾಥ ದೇವಾಲಯವನ್ನು ಯಾರು ರಕ್ಷಿಸುತ್ತಾರೆಂದು ನಿಮಗೆ ತಿಳಿದಿದೆಯೇ? ಶ್ರೀ ರಾಮನ ಪರಮ ಭಕ್ತನಾದ ಹನುಮಂತನು ಈ ದೇವಾಲಯವನ್ನು ನೋಡಿಕೊಳ್ಳುತ್ತಾನೆ. ಜಗನ್ನಾಥನಿಗೆ ಹನುಮನ ಕಾವಲು ಅಂದರೆ ಅಚ್ಚರಿಯಾಗಬಹುದಲ್ಲವೇ? ಮುಂದೆ ಓದಿ.

ಅಂಜನಾ ಮಡಿಲಲ್ಲಿ ಆಂಜನೇಯ
ಪೂರ್ವಕ್ಕೆ ಮುಖ ಮಾಡಿದ ಹನುಮಾನ್ ದೇವಾಲಯದ ವಾಸ್ತುಶಿಲ್ಪವು ತುಂಬಾ ಸರಳವಾಗಿದ್ದರೂ ಸುಂದರವಾಗಿದೆ. ದೇವಾಲಯದ ಮುಖ್ಯ ದೇವರು ಭಗವಾನ್ ಹನುಮಂತನ ಬಲಗೈಯಲ್ಲಿ ಗದೆ ಮತ್ತು ಎಡಗೈಯಲ್ಲಿ ಲಡ್ಡೂ ಇದೆ. ದೇವಾಲಯದ ಹೊರ ಗೋಡೆಗಳ ಮೇಲೆ, ವಿವಿಧ ದೇವರು ಮತ್ತು ದೇವತೆಗಳ ಚಿತ್ರಗಳಿವೆ. ದಕ್ಷಿಣ ಗೋಡೆಯ ಮೇಲೆ ಗಣೇಶನ ವಿಗ್ರಹವಿದೆ. ಪಶ್ಚಿಮ ಗೋಡೆಯ ಮೇಲೆ ಹನುಮನ ತಾಯಿ ಅಂಜನಾ ವಿಗ್ರಹವಿದೆ. ಅವರ ಮಡಿಲಲ್ಲಿ ಬಾಲ ಹನುಮಾನ್ ಕುಳಿತಿದ್ದಾನೆ. ಮತ್ತು ಉತ್ತರ ಗೋಡೆಯ ಮೇಲೆ ಅನೇಕ ದೇವರು ಮತ್ತು ದೇವತೆಗಳ ಚಿತ್ರಗಳಿವೆ.
ಬೇಡಿ ಹನುಮಾನ್ ಹೆಸರು ಏಕೆ?
ಈ ದೇವಾಲಯಕ್ಕೆ ಬೇಡಿ ಹನುಮಾನ್ ದೇವಾಲಯ ಎಂದು ಏಕೆ ಹೆಸರಿಸಲಾಗಿದೆ ಅನ್ನೋ ಪ್ರಶ್ನೆ ಹಲವರಲ್ಲಿ ಇಂದಿಗೂ ಇದೆ. ವಾಸ್ತವವಾಗಿ, ಇದಕ್ಕೆ ಸಂಬಂಧಿಸಿದ ಹಲವು ಪೌರಾಣಿಕ ಕಥೆಗಳಿವೆ. ಪ್ರಾಚೀನ ಕಾಲದಲ್ಲಿ, ಸಮುದ್ರದ ಅಲೆಗಳು ಮೂರು ಬಾರಿ ಜಗನ್ನಾಥ ದೇವಾಲಯಕ್ಕೆ ನುಗ್ಗಿ ಬರ್ತಾ ಇದ್ವು. ಇದರಿಂದ ಮಹಾಪ್ರಭು ಜಗನ್ನಾಥ, ಪವನ ಪುತ್ರ ಹನುಮಂತನನ್ನು ಸಮುದ್ರವನ್ನು ನಿಯಂತ್ರಿಸಲು ಇಲ್ಲಿ ನೇಮಿಸಿದರು. ಆದರೆ ಪವನಸುತನು ಜಗನ್ನಾಥ, ಬಲಭದ್ರ ಮತ್ತು ಸುಭದ್ರರನ್ನು ನೋಡಲು ಒಳಗೆ ಹೋಗಲು ಪ್ರಯತ್ನಿಸಿದಾಗ, ಸಮುದ್ರವೂ ಅವನ ಹಿಂದೆ ನಗರವನ್ನು ಪ್ರವೇಶಿಸಲು ಪ್ರಾರಂಭಿಸಿತು. ಇದನ್ನು ನೋಡಿದ ಜಗನ್ನಾಥ ದೇವರು ಹನುಮಂತನನ್ನು ಈ ಚಿನ್ನದ ಸಂಕೋಲೆಗಳಿಂದ ಕಟ್ಟಿದರು. ಆದ್ದರಿಂದಲೇ ಈ ದೇವಾಲಯವನ್ನು ಬೇಡಿ ಹನುಮಾನ್ ದೇವಾಲಯ ಎಂದು ಕರೆಯಲಾಗುತ್ತದೆ.
ಸುತ್ತಮುತ್ತ ಏನಿದೆ?
ಅಪಾರ ಮಹಿಮೆಯುಳ್ಳ ಸರಪಳಿಯಲ್ಲಿ ಬಂಧಿತನಾಗಿರುವ ಹನುಮಾನ್ ನ ಭೇಟಿಯ ಬಳಿಕ ಪ್ರವಾಸಿಗರು ಹತ್ತಿರದ ಕಡಲತೀರಕ್ಕೆ ಹೋಗಿ ಅಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಈ ದೇವಾಲಯದ ಹೊರತಾಗಿ, ಪುರಿಯಲ್ಲಿ ಭೇಟಿ ನೀಡಲೇಬೇಕಾದ ಇನ್ನೂ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಅವುಗಳೆಂದರೆ ಜಗನ್ನಾಥ ದೇವಾಲಯ, ಗುಂಡಿಚ ದೇವಾಲಯ, ಮಾರ್ಕಂಡೇಶ್ವರ ದೇವಾಲಯ, ಲೋಕನಾಥ ದೇವಾಲಯ ಮತ್ತು ರಾಮಚಂಡಿ ದೇವಾಲಯ.

ದಾರಿ ಹೇಗೆ?
ಪುರಿ ನಗರವು ಭಾರತದ ಹಲವು ಪ್ರಮುಖ ನಗರಗಳೊಂದಿಗೆ ರೈಲು ಸಂಪರ್ಕ ಹೊಂದಿದೆ. ವಿಮಾನ ಪ್ರಯಾಣ ಸೌಲಭ್ಯವೂ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರಸ್ತುತ, ಪುರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಸುಮಾರು 60 ಕಿ.ಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಇಳಿದ ನಂತರ, ಪ್ರವಾಸಿಗರು ಭುವನೇಶ್ವರದಲ್ಲಿರುವ ಯಾವುದೇ ಉತ್ತಮ ಟ್ಯಾಕ್ಸಿ ಸೇವೆಯಿಂದ ಖಾಸಗಿ ಟ್ಯಾಕ್ಸಿ ತೆಗೆದುಕೊಳ್ಳುವ ಮೂಲಕ ಪುರಿ ತಲುಪಬಹುದು.
ಬೇಡಿ ಹನುಮಾನ್ ದೇವಾಲಯವು ಪುರಿ ರೈಲು ನಿಲ್ದಾಣದಿಂದ ಸುಮಾರು 1.3 ಕಿ.ಮೀ ಮತ್ತು ಪುರಿ ಬಸ್ ನಿಲ್ದಾಣದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಅಲ್ಲಿಗೆ ತಲುಪಲು, ಪ್ರವಾಸಿಗರು ಟ್ಯಾಕ್ಸಿ, ಆಟೋ ರಿಕ್ಷಾ ಅಥವಾ ಬ್ಯಾಟರಿ ಚಾಲಿತ ರಿಕ್ಷಾವನ್ನು ಬಳಸಬಹುದು.