ಪ್ರಸಾದ್ ಯೋಜನೆಯಿಂದ ತೆಲಂಗಾಣದ ಧಾರ್ಮಿಕ ತಾಣಗಳಿಗೆ ನವ ಚೈತನ್ಯ
ಪೂರ್ಣಗೊಂಡ ಯೋಜನೆಯಾದ ಜೋಗುಳಾಂಬ ದೇವಿ–ಅಲಂಪುರ ದೇವಸ್ಥಾನ ಅಭಿವೃದ್ಧಿ ಕಾರ್ಯವನ್ನು 33.07 ಕೋಟಿ ರು.ವೆಚ್ಚದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ. ಈ ಯೋಜನೆಯಡಿ ದೇವಾಲಯದ ಸುತ್ತಮುತ್ತಲಿನ ಮೂಲಸೌಕರ್ಯ, ಯಾತ್ರಿಕರ ಸೌಲಭ್ಯಗಳು ಹಾಗೂ ಪ್ರವಾಸಿ ಅನುಭವವನ್ನು ಸುಧಾರಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರ ಸರಕಾರದ ಪ್ರಸಾದ್ (PRASHAD- Pilgrimage Rejuvenation and Spiritual, Heritage Augmentation Drive) ಯೋಜನೆಯಡಿ ತೆಲಂಗಾಣ ರಾಜ್ಯದಲ್ಲಿ ಒಂದು ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಪೂರ್ಣಗೊಂಡಿದ್ದು, ಇನ್ನೂ ಮೂರು ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಪೂರ್ಣಗೊಂಡ ಯೋಜನೆಯಾದ ಜೋಗುಳಾಂಬ ದೇವಿ–ಅಲಂಪುರ ದೇವಸ್ಥಾನ ಅಭಿವೃದ್ಧಿ ಕಾರ್ಯವನ್ನು 33.07 ಕೋಟಿ ರು. ವೆಚ್ಚದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿದೆ. ಈ ಯೋಜನೆಯಡಿ ದೇವಾಲಯದ ಸುತ್ತಮುತ್ತಲಿನ ಮೂಲಸೌಕರ್ಯ, ಯಾತ್ರಿಕರ ಸೌಲಭ್ಯಗಳು ಹಾಗೂ ಪ್ರವಾಸಿ ಅನುಭವವನ್ನು ಸುಧಾರಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಇದೇ ವೇಳೆ, ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ರಾಮಪ್ಪ ದೇವಸ್ಥಾನದ ಧಾರ್ಮಿಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಯೋಜನೆ 62 ಕೋಟಿ ರು. ವೆಚ್ಚದಲ್ಲಿ ಜಾರಿಯಲ್ಲಿದ್ದು, ಇದುವರೆಗೆ 32.73 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿ ಇದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಭದ್ರಾಚಲಂ (ಭದ್ರಾದ್ರಿ–ಕೋತಗುದೇಂ ಜಿಲ್ಲೆ) ಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಮತ್ತೊಂದು ಯೋಜನೆ 41.38 ಕೋಟಿ ರು. ಅನುದಾನದೊಂದಿಗೆ ಮುಂದುವರಿಯುತ್ತಿದೆ. ಈ ಯೋಜನೆಗಾಗಿ ಇದುವರೆಗೆ 8.43 ಕೋಟಿ ರು. ಬಿಡುಗಡೆ ಆಗಿದ್ದು, ಮೂಲಸೌಕರ್ಯ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.
ಇನ್ನೊಂದು ಯೋಜನೆಯಾಗಿ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸುತ್ತಮುತ್ತ ಪ್ರವಾಸಿ ಮೂಲಸೌಕರ್ಯ ಅಭಿವೃದ್ಧಿಗೆ 4.22 ಕೋಟಿ ರು. ಅನುದಾನ ಮಂಜೂರಾಗಿದ್ದರೂ, ಈವರೆಗೆ ಹಣ ಬಿಡುಗಡೆ ಆಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
PRASHAD ಯೋಜನೆಯ ಉದ್ದೇಶ ಧಾರ್ಮಿಕ ಹಾಗೂ ಪಾರಂಪರಿಕ ತಾಣಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಿ, ಯಾತ್ರಿಕರು ಮತ್ತು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಒದಗಿಸುವುದಾಗಿದೆ. ಈ ಯೋಜನೆಗಳ ಮೂಲಕ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಸಿಗುವುದರ ಜತೆಗೆ, ತೆಲಂಗಾಣದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.