ಮೈಸೂರಿನ ಹತ್ತಿರ ಸೋಮನಾಥಪುರ…
ಒಂದು ಕಾಲದಲ್ಲಿ ಸಮೃದ್ಧ ಶಿಲ್ಪಗಳಿಂದ ಕಣ್ಮನ ಸೆಳೆಯುವ ದೇಗುಲವಾಗಿದ್ದ ಇದರ ಮೇಲೆ 1911ರಲ್ಲಿ ಮಲ್ಲಿಕಾಪರ್ ಹಾಗೂ 1026ರಲ್ಲಿ ಮೊಹಮ್ಮದ್ ಬಿನ್ ತುಘಲಕ್ನಿಂದ ದಾಳಿಗೊಳಗಾಯಿತು. ಮುಕ್ಕಾಯಿತು. ಅಷ್ಟೊಂದು ಶಿಲ್ಪಿಗಳ ಶ್ರಮವನ್ನು ಈ ದಾಳಿಕೋರರು ಮಣ್ಣುಪಾಲು ಮಾಡಿದ್ದಾರೆ. ಯಾವ ಶಿಲ್ಪವು ಭಿನ್ನವಾಗದೆ ಉಳಿದಿಲ್ಲ. ದೇಗುಲದ ಪೂಜಾ ಮೂರ್ತಿಗಳು ಸಹ ಇವರ ದಾಳಿಗೆ ಸಿಲುಕಿ ಊನವಾಗಿವೆ. ಇದು ದೊಡ್ಡ ದುರಂತ. ತುಂಬಲಾಗದ ನಷ್ಟ.
- ಪಾರ್ವತಿ ಶಂಭು
ಪೂಜೆ ಇಲ್ಲದ ಗುಡಿಯೊಂದು ನಮ್ಮ ಮೈಸೂರು ಜಿಲ್ಲೆಯಲ್ಲಿದೆ. ಅತ್ಯಂತ ಸುಂದರವಾದ ಈ ದೇವಾಲಯ ಹೊಯ್ಸಳ ವಾಸ್ತುಶಿಲ್ಪ ಹೊಂದಿದ್ದು, ಸೋಮನಾಥಪುರ ದೇವಾಲಯ ಎಂದು ಪ್ರಸಿದ್ಧವಾಗಿದೆ. ಈ ದೇವಾಲಯವು ಕಾವೇರಿ ನದಿಯ ದಡದಲ್ಲಿದ್ದು, ಶಿಲ್ಪಕಲೆಗಷ್ಟೇ ಅಲ್ಲ ಸುಂದರ ಪರಿಸರಕ್ಕೂ ಹೆಸರುವಾಸಿಯಾಗಿದೆ.
ಇದನ್ನೂ ಓದಿ:ನೆಲ್ಲಿತೀರ್ಥದ ಗುಹೆಯೊಳಗೆ ಸ್ವಯಂಭೂ ಸೋಮನಾಥ
ಇದು ವಿಷ್ಣು ದೇವಾಲಯ
13ನೆಯ ಶತಮಾನದಲ್ಲಿ ಹೊಯ್ಸಳ ದೊರೆಯಾಗಿದ್ದ ಮೂರನೆಯ ನರಸಿಂಹನ ಆಸ್ಥಾನದಲ್ಲಿ ದಂಡಾಧಿಕಾರಿಯಾಗಿದ್ದ ಸೋಮನಾಥ ಎಂಬುವವರು ಈ ದೇಗುಲವನ್ನು ಕಟ್ಟಿಸಿದರು ಎನ್ನಲಾಗಿದೆ. ಸೋಮನಾಥ ಎಂಬ ಅಧಿಕಾರಿ ಇದನ್ನು ಕಟ್ಟಿಸಿದ ಕಾರಣ ಇದಕ್ಕೆ ಸೋಮನಾಥಪುರ ಎಂಬ ಹೆಸರು ಬಂದಿದೆ. ಇದು ವಿಷ್ಣುವಿನ ದೇವಸ್ಥಾನ. ಪೂರ್ತಿ ದೇವಾಲಯ ಬಳಪದ ಕಲ್ಲಿನಿಂದ ನಿರ್ಮಾಣವಾಗಿದ್ದು, ಒಂದೇ ಜಗಲಿಯಲ್ಲಿ ಮೂರು ಗರ್ಭಗುಡಿಗಳಿವೆ. ಕೃಷ್ಣ, ಚನ್ನಕೇಶವ ಹಾಗೂ ವಿಷ್ಣುವಿನ ವಿಗ್ರಹಗಳಿವೆ. ಎಲ್ಲಾ ಹೊಯ್ಸಳ ದೇವಾಲಯಗಳಂತೆಯೇ ನಕ್ಷತ್ರಾಕಾರದ ವಿನ್ಯಾಸ ಹಾಗೂ ಮೂರು ಶಿಖರಗಳನ್ನು (ತ್ರಿಕೂಟಾಚಲ) ಹೊಂದಿದೆ. ಇದರ ನಿರ್ಮಾಣ ಕಾರ್ಯವು ಸತತವಾಗಿ 68 ವರ್ಷಗಳಷ್ಟು ದೀರ್ಘಕಾಲ ನಡೆಯಿತು ಹಾಗೂ ಸುಮಾರು 500 ರಷ್ಟು ನುರಿತ ಶಿಲ್ಪಿಗಳು ಇದಕ್ಕಾಗಿ ದುಡಿದರು ಎನ್ನಲಾಗಿದೆ.

ಅಪ್ರತಿಮ ಶಿಲ್ಪಕಲೆ
ಈ ದೇವಾಲಯದಲ್ಲಿನ ಶಿಲ್ಪಕಲೆಯನ್ನು ನೋಡಲು ಎರಡು ಕಣ್ಣು ಸಾಲದು. ರಾಮಾಯಣ, ಮಹಾಭಾರತ, ಕೃಷ್ಣಲೀಲೆಗಳ ಜತೆಗೆ ವಿಷ್ಣುವಿನ 164 ವಿಗ್ರಹಗಳಿವೆ. ಎಲ್ಲಾ ವಿಗ್ರಹಗಳು ಭಿನ್ನವಾಗಿವೆ. ವಿಷ್ಣು ಕೂತು ಧ್ಯಾನ ಮಾಡುತ್ತಿರುವ ಅಪರೂಪದ ವಿಗ್ರಹ ಇಲ್ಲಿದೆ. ಈ ರೀತಿ ವಿಷ್ಣು ಧ್ಯಾನಕ್ಕೆ ಕುಳಿತಿರುವ ಎರಡನೆಯ ವಿಗ್ರಹ ಇದು ಎನ್ನಲಾಗಿದೆ. ಮೊದಲನೆಯದು ಬದರಿನಾಥದಲ್ಲಿದೆ ಎಂದು ಇಸಿಹಾಸ ತಜ್ಞರು ಹೇಳಿದ್ದಾರೆ. ಕಲ್ಲಿನಲ್ಲಿ ಆನೆ-ಕುದುರೆಗಳು, ಯಮುನಾ ನದಿ, ಹೂಬಳ್ಳಿ ಮುಂತಾದವನ್ನು ಬಹಳ ಸೂಕ್ಷ್ಮವಾಗಿ ಕೆತ್ತಲಾಗಿದೆ. ಭೀಮನ ಕಥೆಮ, ಅವನ ಮದುವೆ, ಮಗುವಿನ ನಾಮಕರಣ ಎಲ್ಲವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಸುಮಾರು 547 ಆನೆಗಳಿದ್ದು, ಒಂದರಂತೆ ಒಂದಿಲ್ಲ. ಪ್ರಹ್ಲಾದನ ಕಥೆಯನ್ನೂ ಕೆತ್ತಲಾಗಿದ್ದು, ಸುಮಾರು 18 ವಿಶಿಷ್ಟ ಬಗೆಯ ಕಂಬಗಳಿವೆ.
ದಾಳಿಯಿಂದಾದ ಮುಕ್ಕಾದ ದೇವಾಲಯ
ಇಂಥ ಶ್ರೀಮಂತ ವೈಭವವನ್ನು ಸವಿಯುತ್ತಾ ಒಂದು ಸುತ್ತು ಬರುವಷ್ಟರಲ್ಲಿ ಎಲ್ಲರ ಮನಸಿನಲ್ಲೂ ವಿಷಾದದ ಛಾಯೆ ಮನೆ ಮಾಡುತ್ತದೆ. ಒಂದು ಕಾಲದಲ್ಲಿ ಸಮೃದ್ಧ ಶಿಲ್ಪಗಳಿಂದ ಕಣ್ಮನ ಸೆಳೆಯುವ ದೇಗುಲವಾಗಿದ್ದ ಇದರ ಮೇಲೆ 1911ರಲ್ಲಿ ಮಲ್ಲಿಕಾಪರ್ ಹಾಗೂ 1026ರಲ್ಲಿ ಮೊಹಮ್ಮದ್ ಬಿನ್ ತುಘಲಕ್ನಿಂದ ದಾಳಿಗೊಳಗಾಯಿತು. ಮುಕ್ಕಾಯಿತು. ಅಷ್ಟೊಂದು ಶಿಲ್ಪಿಗಳ ಶ್ರಮವನ್ನು ಈ ದಾಳಿಕೋರರು ಮಣ್ಣುಪಾಲು ಮಾಡಿದ್ದಾರೆ. ಯಾವ ಶಿಲ್ಪವು ಭಿನ್ನವಾಗದೆ ಉಳಿದಿಲ್ಲ. ದೇಗುಲದ ಪೂಜಾ ಮೂರ್ತಿಗಳು ಸಹ ಇವರ ದಾಳಿಗೆ ಸಿಲುಕಿ ಊನವಾಗಿವೆ. ಇದು ದೊಡ್ಡ ದುರಂತ. ತುಂಬಲಾಗದ ನಷ್ಟ. ಇದರ ಮಹತ್ವ ಅರಿತ ಪುರಾತತ್ವ ಇಲಾಖೆಯು ಉಳಿದ ಮೂರ್ತಿಗಳನ್ನು ಹಾಗೂ ದೇವಾಲಯವನ್ನು ಸಂರಕ್ಷಿಸಿಕೊಂಡು ಬಂದಿದೆ. ಭವ್ಯ ದೇಗುಲವಾಗಿದ್ದ ಇದು ಇಂದು ಸ್ಮಾರಕವಾಗಿ ಉಳಿದಿದೆ. ಭಿನ್ನವಾದ ವಿಗ್ರಹಗಳಿಗೆ ಪೂಜೆ ಸಲ್ಲಿಸುವಂತಿಲ್ಲ. ಹಾಗಾಗಿ ಇಲ್ಲಿ ಪೂಜಾದಿಕಾರ್ಯಗಳು ನೆರವೇರುವುದಿಲ್ಲ.

ವಿಶ್ವ ಪಾರಂಪರಿಕ ಮಾನ್ಯತೆಯ ತಾಣ
ಯುನೆಸ್ಕೋ ಇದನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ಗತವೈಭವದ ಈ ದೇಗುಲವನ್ನು ನಾಡಿನ ಜನರಲ್ಲದೆ ಹೆಚ್ಚಿನ ಸಂಖ್ಯೆಯ ವಿದೇಶಿಯರೂ ಭೇಟಿನೀಡಿ ವೀಕ್ಷಿಸುತ್ತಾರೆ. ಅಧ್ಯಯನ ನಡೆಸುತ್ತಾರೆ. ಸ್ವಚ್ಛವಾದ ಹಸಿರಿನ ವಾತಾವರಣದಲ್ಲಿ ಇದನ್ನು ಸಂರಕ್ಷಿಸಿರುವುದೇ ಬಹುದೊಡ್ಡ ಸಂತೋಷ. ಸ್ಮಾರಕದ ಸುತ್ತಮುತ್ತ ಅಂಗಡಿಗಳಿವೆ. ತಿನಿಸುಗಳು ಕುಡಿಯಲು ಎಳನೀರಿನಿಂದ ಹಿಡಿದು ಎಲ್ಲವೂ ಮಾರಾಟವಾಗುತ್ತವೆ. ಅದರ ಜತೆಗೆ ಪ್ಲಾಸ್ಟಿಕ್ ಲೋಟ, ಬಾಟಲಿ, ತಟ್ಟೆ, ಕಸ-ಕಡ್ಡಿ ಎಲ್ಲದರ ರಾಶಿಯು ಕೊಡುಗೆಯಾಗಿ ಬಂದು ಬೀಳುತ್ತದೆ. ಇದೆಲ್ಲವನ್ನು ನಿಯಂತ್ರಿಸಿ, ಪರಿಸರವನ್ನು ಸ್ವಚ್ಛಂದವಾಗಿ ಕಾಪಾಡಿಕೊಳ್ಳಬೇಕು ಅಷ್ಟೆ.
ದಾರಿ ಹೇಗೆ?
ಈ ಅಪೂರ್ವ ಶಿಲ್ಪಕಲೆಯ ದೇವಾಲಯವು ಮೈಸೂರಿನಿಂದ ಕೇವಲ 30 ಕಿಮೀ., ಬೆಂಗಳೂರಿನಿಂದ 140 ಕಿಮೀ. ದೂರದಲ್ಲಿದೆ. ಮೈಸೂರಿನಿಂದ ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.