ವಿಹಂಗಮ ಸಂಗಮ
ಇತರರ ಜೊತೆಗೂಡಿ ನಾನೂ ಒಂದು ದೋಣಿ ಹತ್ತಿ ಕುಳಿತೆ. ನಿಧಾನವಾಗಿ ತೇಲುತ್ತಾ ದೋಣಿ ಸಾಗಿದಾಗ ಏನೋ ಪುಳಕ. ಯಮುನಾ ನದಿಯ ನೀಲಿ ಬಣ್ಣದ ನೀರಿನ ಮೇಲೆ ತೇಲುತ್ತಾ ಸಂಗಮದ ಕಡೆಗೆ ಸಾಗತೊಡಗಿದೆವು.
ಪ್ರಯಾಗರಾಜ್(Prayagraj) ಅಥವಾ ಅಲಹಾಬಾದ್(Allahabad) ಅತ್ಯಂತ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವುದು ಸರ್ವವಿದಿತ. ಯಮುನಾ(Yamuna) ಗಂಗಾ(Ganga) ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮವಿರುವ ಈ ಸ್ಥಳ ಮಹಾ ಕುಂಭಮೇಳ(Mahakumbh) ನಡೆಯುವ ಪವಿತ್ರ ತಾಣ. ಶ್ರಾದ್ಧಕ್ರಿಯೆ ಹಾಗೂ ವೇಣಿದಾನ ಇಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು. ಪ್ರಯಾಗ, ಕಾಶಿ ಮತ್ತು ಗಯಾ ಮೂರೂ ಪವಿತ್ರ ಸ್ಥಳಗಳಲ್ಲಿ ಮರಣ ಹೊಂದಿದ ಪೂರ್ವಿಕರಿಗೆ ಪಿಂಡಗಳನ್ನು ಅರ್ಪಿಸುವುದು ತಲೆತಲಾಂತರಗಳಿಂದ ಬಂದಿರುವ ಆಚರಣೆ.
ವೇಣಿದಾನವು ಈ ಸ್ಥಳದಲ್ಲಿ ಪ್ರಸಿದ್ಧ. ಇದರಲ್ಲಿ ಪುರೋಹಿತರ ಮಂತ್ರ ಪಠಣದೊಂದಿಗೆ ಗಂಡಂದಿರು ಹೆಂಡಂದಿರ ಕೂದಲನ್ನು ಬಾಚಿ, ಜಡೆ ಹೆಣೆದು, ಅದರ ತುದಿ ಭಾಗವನ್ನು ಕತ್ತರಿಸಬೇಕು. ಈ ಕೂದಲನ್ನು ಸಂಗಮದಲ್ಲಿ ನದಿಗೆ ಅರ್ಪಿಸಬೇಕು. ಗಂಡಂದಿರ ದೀರ್ಘಾಯುಷ್ಯಕ್ಕೋಸ್ಕರ ಪ್ರಾರ್ಥನೆ ಹಾಗೂ ಏಳು ಜನ್ಮಗಳಲ್ಲೂ ಜೊತೆಯಾಗಿ ಬದುಕಬೇಕೆಂಬ ಹಾರೈಕೆ ಈ ಕಾರ್ಯದಲ್ಲಿ ಅಡಕವಾಗಿದೆ.

ಧಾರ್ಮಿಕ ಆಚರಣೆಗಳನ್ನು ನಡೆಸಲು ಉತ್ಸುಕರಾಗಿದ್ದ ಪ್ರಯಾಣಿಕರ ಜೊತೆಗೆ ಪ್ರಯಾಗಕ್ಕೆ ಭೇಟಿ ಕೊಡುವ ಅವಕಾಶ ಇತ್ತೀಚೆಗೆ ಒದಗಿ ಬಂತು. ಶ್ರಾದ್ಧ ಕ್ರಿಯೆ ನಡೆಸಿದವರು ಹಾಗೂ ವೇಣಿದಾನ ಮಾಡಿದವರು ದೋಣಿಯಾನ ಮಾಡಿ ಸಂಗಮವನ್ನು ತಲುಪಿ, ಅಲ್ಲಿ ಪಿಂಡಗಳನ್ನು ಹಾಗೂ ವೇಣಿಯನ್ನು ನೀರಿನಲ್ಲಿ ವಿಸರ್ಜಿಸಬೇಕು.ಇಲ್ಲಿನ ದೋಣಿಗಳೆಲ್ಲವೂ 10-11 ಜನರನ್ನು ಕುಳ್ಳಿರಿಸಿಕೊಂಡು ಹುಟ್ಟು ಹಾಕುವ ಅಂಬಿಗರ ಸಹಾಯದಿಂದ ನೀರಿನ ಮೇಲೆ ತೇಲಿಕೊಂಡು ಹೋಗುವ ಮರದ ನಿರ್ಮಿತಿಗಳು. ಇಲ್ಲಿ ಯಾವುದೇ ಮೋಟಾರ್ ಚಾಲಿತ ದೋಣಿಗಳಿಲ್ಲ. ಹಾಗಾಗಿ ಮೋಟಾರ್ ಗಳ ಕರ್ಕಶ ಶಬ್ದ, ಡೀಸೆಲ್ ನ ವಾಸನೆ ಇಲ್ಲವೇ ಇಲ್ಲ. ಇತರರ ಜೊತೆಗೂಡಿ ನಾನೂ ಒಂದು ದೋಣಿ ಹತ್ತಿ ಕುಳಿತೆ. ನಿಧಾನವಾಗಿ ತೇಲುತ್ತಾ ದೋಣಿ ಸಾಗಿದಾಗ ಏನೋ ಪುಳಕ. ಯಮುನಾ ನದಿಯ ನೀಲಿ ಬಣ್ಣದ ನೀರಿನ ಮೇಲೆ ತೇಲುತ್ತಾ ಸಂಗಮದ ಕಡೆಗೆ ಸಾಗತೊಡಗಿದೆವು.
ನೀರಿನೆಲ್ಲೆಡೆ ಸೀ ಗಲ್ ಹಕ್ಕಿಗಳ ಗುಂಪು, ಅವಕ್ಕೆ ತಿನಿಸುಗಳನ್ನು ಎಸೆದಾಗ ಗುಂಪಾಗಿ ನಮ್ಮ ದೋಣಿಯ ಬುಡಕ್ಕೇ ಬರುತ್ತವೆ. ಚಳಿಗಾಲದಲ್ಲಿ ಇಲ್ಲಿಗೆ ಬರುವ ವಲಸೆ ಪಕ್ಷಿಗಳೆಂದು ಅಂಬಿಗ ಹೇಳಿದರು. ಸಂಗಮ ತಲುಪಿದಾಗ ಯಮುನಾ ನದಿಯ ನೀಲಿ ಬಣ್ಣದ ನೀರು ತಿಳಿಬಣ್ಣದ ಗಂಗಾನೀರನ್ನು ಸಂಧಿಸುವ ರೇಖೆಯನ್ನು ಗುರುತಿಸುವಾಗ ವಿವರಿಸಲು ಅಸಾಧ್ಯವಾದ ಖುಷಿ. ನದಿಗಳ ನೀರಿನ ಮಟ್ಟವನ್ನು ಹೊಂದಿಕೊಂಡು ಸಂಗಮದ ರೇಖೆ ಇರುವ ಸ್ಥಳ ಕಾಲ ಕಾಲಕ್ಕೆ ಬದಲಾಗುವುದು ಸಹಜ. ಸಂಗಮದಲ್ಲಿ ಪಿಂಡ ವಿಸರ್ಜನೆ ಮತ್ತು ವೇಣಿ ವಿಸರ್ಜನೆ ಮಾಡಿದ ನಂತರ ನೀರಿನಲ್ಲಿ ಸ್ನಾನ. ಇಲ್ಲಿ ಮುಳುಗು ಹಾಕಿದರೆ ಕಾಶಿಯಲ್ಲಿ ಮುಳುಗು ಹಾಕಿದಾಗ ದೊರೆಯುವ ಪುಣ್ಯಕ್ಕಿಂತ ನೂರು ಪಟ್ಟು ಪುಣ್ಯ ಪ್ರಾಪ್ತಿಯಾಗುತ್ತದೆಂಬ ನಂಬಿಕೆ.
ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವವರಿಗೋಸ್ಕರ ಇರುವ ವ್ಯವಸ್ಥೆಯೂ ಅಚ್ಚರಿ ಹುಟ್ಟಿಸುವಂತಹುದು. ಇಲ್ಲಿನ ನೀರಿನ ಆಳ 60- 70 ಅಡಿಗಳಷ್ಟಿದೆಯೆಂದು ಅಂಬಿಗ ತಿಳಿಸಿದರು. ದೋಣಿಗಳ ನಡುವೆ ಸುಮಾರು ನಾಲ್ಕೈದು ಅಡಿಗಳ ಆಳದಲ್ಲಿ ಒಂದು ಕೃತಕ ಪ್ಲಾಟ್ ಫಾರ್ಮ್ ನಿರ್ಮಿಸಿದ್ದಾರೆ. ನಮ್ಮ ದೋಣಿಯಿಂದ ಇನ್ನೊಂದು ದೋಣಿಗೆ ಹೋಗಿ ಅದರಾಚೆಗಿರುವ ಪ್ಲಾಟ್ ಫಾರ್ಮ್ ಗೆ ಇಳಿದು ಮೂರು ಬಾರಿ ನೀರಿನಲ್ಲಿ ಮುಳುಗು ಹಾಕಿ ಹೊರ ಬರಬೇಕು. ಒದ್ದೆ ಬಟ್ಟೆಗಳ ಜೊತೆಗೇ ನಮ್ಮ ದೋಣಿಗೆ ಬಂದು ಕುಳಿತುಕೊಳ್ಳಬೇಕು. ಒಂದು ಸಾರಿ ಈ ಪ್ಲಾಟ್ ಫಾರ್ಮ್ ನಲ್ಲಿ ನಾಲ್ಕು ಜನ ಮುಳುಗು ಹಾಕಬಹುದು. ಯಾರೋ ಒಬ್ಬರು ಮುಳುಗು ಹಾಕುತ್ತಾ ಬದಿಗೆ ಸರಿದಾಗ ಅಂಬಿಗ ಆತಂಕದಿಂದ ಮತ್ತೆ ಬದಿಗೆ ಹೋಗಬಾದೆಂದು ಎಚ್ಚರಿಸಿದರು. ಜೊತೆಗೆ ತೆಂಗಿನ ಕಾಯಿ ಅರ್ಪಿಸಲು ಇಚ್ಛೆ ಪಡುವವರಿಗೆ ಅದರ ಸೌಲಭ್ಯವೂ ಲಭ್ಯ, ನೀರಿನಲ್ಲಿ ಮುಳುಗು ಹಾಕಿ ಏಳುವಾಗ ಫೋಟೊ ಕ್ಲಿಕ್ಕಿಸಲು ಫೊಟೊಗ್ರಾಫರ್ ಗಳೂ ರೆಡಿ. ಇವೆಲ್ಲದಕ್ಕೂ ತೆರುವ ಶುಲ್ಕವನ್ನು ನಮ್ಮ ದೋಣಿಗೆ ಮರಳಿದ ಕೂಡಲೇ ಕೊಡಬಹುದು. ಫೋಟೊಗಳು ದೋಣಿ ತಿರುಗಿ ಹೊರಡುವ ಮೊದಲೇ ಕೈಸೇರುತ್ತವೆ. ಪವಿತ್ರಸ್ನಾನ ಕೈಗೊಳ್ಳುವಲ್ಲಿ ದೋಣಿ ನಿಲ್ಲಿಸಿದ್ದಕ್ಕೆ ತಲಾ ಇಪ್ಪತ್ತು ರೂಪಾಯಿಗಳ ಶುಲ್ಕ. ದೋಣಿಯ ಶುಲ್ಕ ನಮ್ಮ ಟ್ರಾವೆಲ್ಸ್ ನವರು ಎಷ್ಟು ಪಾವತಿಸಿದ್ದರೋ ತಿಳಿಯದು.

ಇದೆಲ್ಲ ಆದ ನಂತರ ತೀರಕ್ಕೆ ಬಂದು ಬಟ್ಟೆಗಳನ್ನು ಬದಲಿಸಿ, ನದಿ ದಡದಲ್ಲಿರುವ ಬಡಾ(ದೊಡ್ಡ)ಆಂಜನೇಯನ ದರ್ಶನ ಮಾಡಬೇಕು. ಧಾರ್ಮಿಕ ವಿಧಿಗಳ ಕೊನೆಯ ಭಾಗ ಈ ದೇವಸ್ಥಾನದ ಭೇಟಿ. ಇಲ್ಲಿ ಮಲಗಿರುವ ಆಂಜನೇಯನ ವಿಗ್ರಹವಿದೆ. ತಲೆಯಿಂದ ಕಾಲಿನ ವರೆಗೆ ಆಂಜನೇಯನ ಅಳತೆ ಸುಮಾರು ಇಪ್ಪತ್ತು ಅಡಿ. ಈ ವಿಗ್ರಹ ಭೂಮಟ್ಟದಿಂದ ಏಳೆಂಟು ಅಡಿಗಳ ಆಳದಲ್ಲಿ ಸ್ಥಾಪಿತವಾಗಿದೆ. ನದಿಯಲ್ಲಿ ಪ್ರವಾಹ ಉಕ್ಕೇರಿದಾಗ ಆಂಜನೇಯನ ಕಾಲುಗಳು ನೀರಿನಲ್ಲಿ ಮುಳುಗುತ್ತವಂತೆ. ಬಗಲಲ್ಲೇ ಅಕ್ಬರನ ಕೋಟೆ ಇದೆ. ಈ ಕೋಟೆಯ ನಿರ್ಮಾಣವಾಗುವಾಗ ಆಂಜನೇಯನ ಮೂರ್ತಿಯನ್ನು ಸ್ಥಳಾಂತರಿಸಲು ಯತ್ನಿಸಿದರಂತೆ. ಅದು ಸಾಧ್ಯವಾಗದೇ ಇದ್ದಾಗ ಅಕ್ಬರನು ಪ್ರಯತ್ನ ಕೈಬಿಟ್ಟನಂತೆ.
ಮಲಗಿರುವ ಭಂಗಿಯಲ್ಲಿರುವ ಆಂಜನೇಯನ ದೇವಸ್ಥಾನ ಇದೊಂದೇ ಎಂದು ಪ್ರಸಿದ್ಧವಾಗಿದೆ.