Monday, July 21, 2025
Monday, July 21, 2025

ಇಳಿದು ಬಾ ತಾಯಿ ಇಳಿದು ಬಾ

ರಾಮನಿಗೆ ಬಾಯಾರಿಕೆಯಾದಾಗ ಅನುಜ ಲಕ್ಷ್ಮಣನು ಬ್ರಹ್ಮಗಿರಿ ಬೆಟ್ಟಕ್ಕೆ ಬಾಣ ಹೊಡೆದನು. ಆಗ ಆ ಸ್ಥಳದಿಂದ ರಾಮನ ಬಾಯಾರಿಕೆ ನೀಗಿಸಲು ಲಕ್ಷ್ಮಣ ತೀರ್ಥ ನದಿ ಹೊರಹೊಮ್ಮಿತು. ಇರುಪ್ಪು ಜಲಪಾತವು ಈ ಪವಿತ್ರ ಹೊಳೆಯಿಂದ ಹುಟ್ಟಿಕೊಂಡಿದೆ. ಹಾಗಾಗಿ ಪ್ರವಾಸಿಗರು ನಿಸರ್ಗದಾಳದಲ್ಲಿ ಕಳೆದು ಹೋಗಲು ಮಾತ್ರವಲ್ಲದೆ ದೈವಿಕ ಕಾರಣಗಳಿಂದಲೂ ಇಲ್ಲಿಗೆ ಬರುತ್ತಾರೆ.

- ನವೀನಕೃಷ್ಣ ಎಸ್. ಉಪ್ಪಿನಂಗಡಿ

ಎಲ್ಲೆಲ್ಲಿಯೂ ಪಚ್ಚೆಯೇ ಕಾಣುವ ಪಶ್ಚಿಮಘಟ್ಟಗಳ ಹೃದಯದಾಳಕ್ಕೆ ಬೀಳುವ ಮಂಜುಗಳು ಪ್ರಾಚೀನ ರಹಸ್ಯಗಳನ್ನು ಪಿಸುಗುಟ್ಟಲಾರಂಭಿಸಿವೆ. ಆ ತಾಣದಲ್ಲಿ ಬೆಳ್ಳಿಯ ಗೊಂಚಲುಗಳು ಪರ್ವತಗಳೆಡೆಯಿಂದ ಧಾರಾಕಾರವಾಗಿ ಬೀಳುತ್ತಿವೆ. ಆ ಶಬ್ದ ಇಡೀ ಕಾಡಿನಲ್ಲಿ ಮಾರ್ದನಿಸುತ್ತಿದ್ದರೆ, ಪರ್ವತಗಳು ಪಠಿಸಿದ ಸ್ತೋತ್ರದಂತೆ ಭಾಸವಾಗುತ್ತಿದೆ. ರಮಣೀಯ ನಿಸರ್ಗ ಸೌಂದರ್ಯದ ನಡುವೆ ಮೈತಳೆದಿರುವ ಇರುಪ್ಪು ಜಲಪಾತದ ಸೊಬಗಿದು! ಕೊಡಗಿನ ಆತ್ಮದಲ್ಲಿ ಹೆಣೆಯಲ್ಪಟ್ಟ ಸ್ವರ್ಗೀಯ ಕವಿತೆಯಂತೆ ಭಾಸವಾಗುವ ಈ ಜಲಪಾತ ಹೊರಡಿಸುವ ಶಬ್ದ ಕಿಲೋಮೀಟರ್‌ಗಳಾಚೆಗೂ ಸ್ಪಷ್ಟವಾಗಿ ಕೇಳಿಸುತ್ತದೆ. ಇಲ್ಲಿ ಪ್ರಕೃತಿ, ಪುರಾಣ, ಪ್ರಶಾಂತತೆಯು ಕಾಲಾತೀತ ಸಾಮರಸ್ಯದಲ್ಲಿ ಒಂದಾಗುತ್ತವೆ.

ಇರುಪ್ಪು ಜಲಪಾತವು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಸುಂದರ ಜಲಪಾತ. ಇದು ಕೇರಳದ ವಯನಾಡು ಜಿಲ್ಲೆಯ ಗಡಿಯಲ್ಲಿದೆ. ನಾಗರಹೊಳೆಗೆ ಸಾಗುವ ಹೆದ್ದಾರಿಯಲ್ಲಿರುವ ಪ್ರಕೃತಿಯ ಈ ಅನರ್ಘ್ಯರತ್ನವು ವಿರಾಜಪೇಟೆಯಿಂದ 48 ಕಿಮೀ., ಮಡಿಕೇರಿಯಿಂದ 85 ಕಿಮೀ ಮತ್ತು ಮೈಸೂರಿನಿಂದ 120 ಕಿಮೀ. ದೂರದಲ್ಲಿದೆ. ಸುಮಾರು 170 ಅಡಿ ಎತ್ತರದಿಂದ ಬೀಳುವ ಈ ಜಲಪಾತ ಉಷ್ಣವಲಯದ ಕಾಡುಗಳ ಹಚ್ಚ ಹಸಿರಿನ ನಡುವೆ ಭವ್ಯವಾದ ದೃಶ್ಯವನ್ನು ರೂಪಿಸುತ್ತದೆ.

iruppu

ಈ ಜಲಪಾತವು ಕಾವೇರಿ ನದಿಯ ಉಪನದಿಯಾದ ಲಕ್ಷ್ಮಣ ತೀರ್ಥ ನದಿಯಿಂದ ಹುಟ್ಟಿಕೊಂಡಿದೆ. ಈ ನದಿಯು ಬ್ರಹ್ಮಗಿರಿ ಬೆಟ್ಟಗಳಲ್ಲಿ ಹುಟ್ಟಿ ದಟ್ಟವಾದ ಮಳೆಕಾಡುಗಳ ಮೂಲಕ ಹರಿಯುತ್ತದೆ. ನಂತರ ಭವ್ಯವಾದ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಹಾಗಾಗಿ ಇದನ್ನು 'ಲಕ್ಷ್ಮಣ ತೀರ್ಥ ಜಲಪಾತ' ಎಂದೂ ಕರೆಯುವುದುಂಟು. ಸ್ಥಳೀಯ ದಂತಕಥೆಯ ಪ್ರಕಾರ ಶ್ರೀ ರಾಮನು ತನ್ನ ಸಹೋದರ ಲಕ್ಷ್ಮಣನೊಂದಿಗೆ ಸೀತೆಯನ್ನು ಹುಡುಕುವಾಗ ಈ ಪ್ರದೇಶದ ಮೂಲಕ ಹಾದುಹೋದನು. ರಾಮನಿಗೆ ಬಾಯಾರಿಕೆಯಾದಾಗ ಅನುಜ ಲಕ್ಷ್ಮಣನು ಬ್ರಹ್ಮಗಿರಿ ಬೆಟ್ಟಕ್ಕೆ ಬಾಣ ಹೊಡೆದನು. ಆಗ ಆ ಸ್ಥಳದಿಂದ ರಾಮನ ಬಾಯಾರಿಕೆ ನೀಗಿಸಲು ಲಕ್ಷ್ಮಣ ತೀರ್ಥ ನದಿ ಹೊರಹೊಮ್ಮಿತು. ಇರುಪ್ಪು ಜಲಪಾತವು ಈ ಪವಿತ್ರ ಹೊಳೆಯಿಂದ ಹುಟ್ಟಿಕೊಂಡಿದೆ. ಹಾಗಾಗಿ ಪ್ರವಾಸಿಗರು ನಿಸರ್ಗದಾಳದಲ್ಲಿ ಕಳೆದು ಹೋಗಲು ಮಾತ್ರವಲ್ಲದೆ ದೈವಿಕ ಕಾರಣಗಳಿಂದಲೂ ಇಲ್ಲಿಗೆ ಬರುತ್ತಾರೆ. ಶಿವರಾತ್ರಿಯ ಸಮಯದಲ್ಲಂತೂ ಈ ಪ್ರದೇಶ ಜನನಿಬಿಡವಾಗುತ್ತದೆ. ಬ್ರಹ್ಮಗಿರಿ ಬೆಟ್ಟದ ಬುಡದಲ್ಲಿ, ಜಲಪಾತಕ್ಕೆ ಸಮೀಪವಾಗಿ ರಾಮೇಶ್ವರ ದೇವಾಲಯವಿದೆ. ಆ ದೇಗುಲದಲ್ಲಿರುವ ಲಿಂಗವನ್ನು ಶ್ರೀರಾಮನೇ ಸ್ವತಃ ಸ್ಥಾಪಿಸಿದ್ದಾನೆಂದು ನಂಬಲಾಗಿದೆ. ಇದು ಸ್ಥಳದ ಪಾವಿತ್ರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇರುಪ್ಪು ಜಲಪಾತವು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದೊಳಗಿದೆ. ಇದು ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿರುವ ಸಂರಕ್ಷಿತ ಪ್ರದೇಶ ಎಂಬುದು ದಿಟ. ಈ ಪ್ರದೇಶವು ನಿತ್ಯಹರಿದ್ವರ್ಣ ವೃಕ್ಷಗಳು, ಔಷಧೀಯ ಸಸ್ಯಗಳು, ಆರ್ಕಿಡ್‌ಗಳು ಮತ್ತು ಜರೀಗಿಡಗಳು ಸೇರಿದಂತೆ ವಿವಿಧ ರೀತಿಯ ಸಸ್ಯ ಪ್ರಭೇದಗಳಿಗೆ ನೆಲೆ. ಈ ಅಭಯಾರಣ್ಯವು ಹಲವಾರು ಪ್ರಾಣಿ ಪ್ರಭೇದಗಳಿಗೂ ಆವಾಸಸ್ಥಾನ. ಆನೆ, ಕಾಡುಹಂದಿ, ಸಾಂಬಾರ್ ಜಿಂಕೆ, ಕಾಡೆಮ್ಮೆ, ಕರಡಿ, ಚಿರತೆಗಳು ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಇರುಪ್ಪು ಜಲಪಾತವು ಕೊಡಗಿನ ಜನಪ್ರಿಯ ಪ್ರವಾಸಿ ತಾಣ. ಪ್ರವಾಸಿಗರು ಇಲ್ಲಿಗೆ ಬರಲು ಅರಣ್ಯ ಇಲಾಖೆಯ ಪ್ರವೇಶ ದ್ವಾರದಿಂದ ಸುಮಾರು 1 ಕಿಮೀ. ಲಘು ಚಾರಣ ಮಾಡಬೇಕು. ಈ ಹಾದಿಯ ಸ್ಥಿತಿಗತಿ ಚೆನ್ನಾಗಿದೆ, ಆದರೆ ಮಳೆಗಾಲದ ಸಮಯದಲ್ಲಿ ಜಾರುವುದರಿಂದ ಜಾಗರೂಕರಾಗಿರುವುದು ಅವಶ್ಯ. ಇಲ್ಲಿ ವಿಶ್ರಾಂತಿ ಪಡೆಯಲು ಬೆಂಚುಗಳಿವೆ. ಬ್ರಹ್ಮಗಿರಿ ಬೆಟ್ಟದಲ್ಲಿನ ಅರಣ್ಯ ಹಾದಿಗಳ ಮೂಲಕ ಚಾರಣ, ಪ್ರಕೃತಿ ಛಾಯಾಗ್ರಹಣ ಮತ್ತು ಪಕ್ಷಿ ವೀಕ್ಷಣೆ, ಸುರಕ್ಷಿತ ವಾತಾವರಣವಿದ್ದರೆ ಜಲಪಾತದ ತಂಪಾದ ನೀರಿನಲ್ಲಿ ಉಲ್ಲಾಸಕರ ಸ್ನಾನ, ರಾಮೇಶ್ವರ ದೇವಾಲಯಕ್ಕೆ ಭೇಟಿ - ಇಲ್ಲಿ ಸಂದರ್ಶಕರು ಮಾಡಬಹುದಾದ ಚಟುವಟಿಕೆಗಳು. ಹೆಚ್ಚು ಸಾಹಸಮಯ ಅನುಭವವನ್ನು ಬಯಸುವವರಿಗೆ ಬ್ರಹ್ಮಗಿರಿ ಶಿಖರದ ಚಾರಣವಿದೆ. ಇದು ಇರುಪ್ಪು ಬಳಿಯಿಂದ ಪ್ರಾರಂಭವಾಗಿ ವಯನಾಡ್ ಜಿಲ್ಲೆಯತ್ತ ವಿಸ್ತರಿಸುತ್ತದೆ.

iruppu 1

ಇಲ್ಲಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮಾನ್ಸೂನ್‌ನಲ್ಲಿ ಭೇಟಿ ನೀಡಬಹುದು. ಆದರೆ ಮೈಯೆಲ್ಲಾ ಕಣ್ಣಾಗಿರುವುದು ಅಗತ್ಯ. ಮಾನ್ಸೂನ್ ನಂತರದ ಅವಧಿ (ಅಕ್ಟೋಬರ್‌ನಿಂದ ಫೆಬ್ರವರಿ) ಅತ್ಯಂತ ಆಹ್ಲಾದಕರ ಹವಾಮಾನವನ್ನು ಒಳಗೊಂಡಿರುತ್ತದೆ. ಇದು ಭೇಟಿ ನೀಡಲು ಸೂಕ್ತ ಸಮಯ. ಇರುಪ್ಪು ಜಲಪಾತವನ್ನು ಹತ್ತಿರದ ಪಟ್ಟಣಗಳಾದ ಗೋಣಿಕೊಪ್ಪಲು ಅಥವಾ ಶ್ರೀಮಂಗಲದಿಂದ ರಸ್ತೆ ಮೂಲಕ ತಲುಪಬಹುದು. ಹತ್ತಿರದ ರೈಲ್ವೇ ನಿಲ್ದಾಣ ಮೈಸೂರು.

ಪಾರ್ಕಿಂಗ್, ವಿಶ್ರಾಂತಿ ಕೊಠಡಿಗಳು, ಕುಡಿಯುವ ನೀರು ಮತ್ತು ಅರಣ್ಯ ಪ್ರವೇಶ ಪರವಾನಗಿಗಳಂಥ ಮೂಲಭೂತ ಸೌಲಭ್ಯಗಳು ಪ್ರವೇಶದ್ವಾರದ ಬಳಿ ಲಭ್ಯವಿವೆ. ಇರುಪ್ಪು ಜಲಪಾತ ಮತ್ತು ಅದರ ಸುತ್ತಮುತ್ತಲಿನ ಪರಿಸರ ಬಗ್ಗೆ ನಿರಂತರ ಸಂರಕ್ಷಣಾ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಇರುಪ್ಪು ಜಲಪಾತವು ಪ್ರಕೃತಿ, ಪುರಾಣ, ಅಧ್ಯಾತ್ಮ ಮತ್ತು ಜೀವವೈವಿಧ್ಯದ ಸಂಗಮ. ನೀವು ದೇವರ ಅನುಗ್ರಹವನ್ನು ಬಯಸುವ ಯಾತ್ರಿಕರಾಗಿರಲಿ, ಸಾಹಸವನ್ನು ಬಯಸುವ ಚಾರಣಿಗರಾಗಿರಲಿ ಅಥವಾ ನೆಮ್ಮದಿಗಾಗಿ ಹಂಬಲಿಸುವ ಪ್ರಕೃತಿ ಪ್ರೇಮಿಯಾಗಿರಲಿ, ಇರುಪ್ಪು ಜಲಪಾತವು ಎಲ್ಲರಿಗೂ ಎಲ್ಲವನ್ನೂ ಕೊಡುವ ಕಾಮಧೇನುವಿನಂತೆ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..