ಯಾಳ ರಾಷ್ಟ್ರೀಯ ಉದ್ಯಾನವನದಲ್ಲಿ ತಾತ್ಕಾಲಿಕ ನಿರ್ಬಂಧ
ದೀರ್ಘಕಾಲದ ಬರಗಾಲ ಮತ್ತು ಮಳೆಯ ಕೊರತೆಯಿಂದಾಗಿ ಉದ್ಯಾನವನದೊಳಗಿನ ನೈಸರ್ಗಿಕ ಜಲಮೂಲಗಳು, ಕೊಳಗಳು ಮತ್ತು ಜಲಾಶಯಗಳು ಬತ್ತಿಹೋಗುತ್ತಿದ್ದು, ಪ್ರಾಣಿಗಳಿಗೆ ತೀವ್ರವಾದ ಉಷ್ಣತೆಯ ಒತ್ತಡ ಉಂಟಾಗಿದೆ.
ಶ್ರೀಲಂಕಾದ ಪ್ರಸಿದ್ಧ ಯಾಳ ರಾಷ್ಟ್ರೀಯ ಉದ್ಯಾನವನವು (Yala National Park) ತೀವ್ರವಾದ ಒಣಹವೆ ಮತ್ತು ನೀರಿನ ತೀವ್ರ ಕೊರತೆಯಿಂದಾಗಿ ಗಂಭೀರ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿದೆ. ವನ್ಯಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಜನಪ್ರಿಯ ಸಫಾರಿ ವಲಯಗಳಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ವನ್ಯಜೀವಿ ಸಫಾರಿಗೆ ದರ ಏರಿಕೆ: ವಯಸ್ಕರ ಬಸ್ ಟಿಕೆಟ್ 1,000 ರು.
ದೀರ್ಘಕಾಲದ ಬರಗಾಲ ಮತ್ತು ಮಳೆಯ ಕೊರತೆಯಿಂದಾಗಿ ಉದ್ಯಾನವನದೊಳಗಿನ ನೈಸರ್ಗಿಕ ಜಲಮೂಲಗಳು, ಕೊಳಗಳು ಮತ್ತು ಜಲಾಶಯಗಳು ಬತ್ತಿಹೋಗುತ್ತಿದ್ದು, ಪ್ರಾಣಿಗಳಿಗೆ ತೀವ್ರವಾದ ಉಷ್ಣತೆಯ ಒತ್ತಡ ಉಂಟಾಗಿದೆ. ವನ್ಯಜೀವಿಗಳಿಗೆ ಸುಲಭವಾಗಿ ನೀರು ಲಭ್ಯವಾಗುವಂತೆ ಮಾಡಲು ಮತ್ತು ಪ್ರವಾಸಿಗರ ಹಾಗೂ ಸಫಾರಿ ವಾಹನಗಳ ಓಡಾಟದಿಂದ ಪ್ರಾಣಿಗಳಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸಲು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 15, 2026 ರವರೆಗೆ ಯಾಳ ಉದ್ಯಾನವನದ ಬ್ಲಾಕ್ 1 ಮತ್ತು 2 ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಆದಾಗ್ಯೂ, ಬ್ಲಾಕ್ 3 ರಿಂದ 6ರವರೆಗಿನ ಪ್ರದೇಶಗಳು ಪ್ರವಾಸಿಗರಿಗೆ ಎಂದಿನಂತೆ ತೆರೆದಿರುತ್ತವೆ.
ವನ್ಯಜೀವಿಗಳ ಪ್ರಾಣ ರಕ್ಷಣೆಗಾಗಿ ಉದ್ಯಾನವನದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾಳ ಸೇರಿದಂತೆ ವಿಲ್ಪಟ್ಟು, ಕುಮಾನ ಮತ್ತು ಬುಂದಾಲ ರಾಷ್ಟ್ರೀಯ ಉದ್ಯಾನವನಗಳ ಪ್ರಮುಖ ವಲಯಗಳಿಗೆ ವಾಟರ್ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಜತೆಗೆ, ಸೌರಶಕ್ತಿ ಚಾಲಿತ ಪಂಪಿಂಗ್ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಿ ಜಲಾಶಯಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಚಿರತೆಗಳು, ಆನೆಗಳು, ಮೊಸಳೆಗಳು ಮತ್ತು ಜಿಂಕೆಗಳಂಥ ಪ್ರಮುಖ ಪ್ರಾಣಿಗಳಿಗೆ ಈ ಉಳಿದಿರುವ ಜಲಮೂಲಗಳೇ ಈಗ ಜೀವನಾಧಾರವಾಗಿವೆ. ಶ್ರೀಲಂಕಾದ್ಯಂತ ವ್ಯಾಪಿಸಿರುವ ಈ ಬರ ಪರಿಸ್ಥಿತಿಯು ಕೃಷಿ ಹಾಗೂ ಪರಿಸರದ ಮೇಲೂ ದುಷ್ಪರಿಣಾಮ ಬೀರಿದ್ದು, ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲು ಕಾರ್ಯತಂತ್ರಗಳ ಅಗತ್ಯವನ್ನು ಈ ಘಟನೆಯು ಎತ್ತಿ ತೋರಿಸಿದೆ.