ಗಾಂಧಿಗೆ ಪರದೇಶದಲ್ಲೂ ಸುಖವಿಲ್ಲ
ಭಾರತದಲ್ಲಿ ನೆಮ್ಮದಿಯಿಲ್ಲ ಎಂದು ಗಾಂಧೀಜಿ ಆಸ್ಟ್ರೇಲಿಯಾದಲ್ಲಿ ಕಂಚಿನ ಪುತ್ಥಳಿಯಾಗಿ ನೆಮ್ಮದಿಯಾಗಿ ನಿಂತಿದ್ದರೆ, ಅಲ್ಲಿಯೂ ಕಿಡಿಗೇಡಿಗಳು ಪ್ರತಿಮೆ ಧ್ವಂಸಗೊಳಿಸಿದ್ದಾರಲ್ಲ. ಅಷ್ಟಕ್ಕೇ ಸುಮ್ಮನಾಗದೇ ಕಾಲು ಕತ್ತರಿಸಿ ಹೋಗಿದ್ದಾರಂತೆ. ಅಹಿಂಸೆಗಾಗಿ ಹೋರಾಡಿದ ಗಾಂಧೀಜಿ, ಈಗ ತಮ್ಮ ಪುತ್ಥಳಿ ಮೇಲೆಯೇ ಹಿಂಸಾಚಾರ ನಡೆದಿರುವುದನ್ನು ಮೇಲಿನಿಂದಲೇ ನಿಂತು ನೋಡಿ, ಹೇಗೆ ಯೋಚಿಸುತ್ತಿರಬಹುದು?
ಆಸ್ಟ್ರೇಲಿಯಾದಲ್ಲಿ ಸಂಜಯ್ ದತ್ ಅಭಿನಯದ ಲಗೇ ರಹೋ ಮುನ್ನಾಭಾಯ್ ಚಿತ್ರ ಏನಾದರೂ ಮರುಬಿಡುಗಡೆ ಆಗಿದೆಯಾ? ಈ ಪ್ರಶ್ನೆ ಉದ್ಭವಿಸುವುದಕ್ಕೆ ಕಾರಣವಿದೆ. ಒಂದೂವರೆ ದಶಕದ ಹಿಂದೆ ಗಾಂಧಿಗಿರಿ ಎಂಬ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದ್ದ ಲಗೇರಹೋ ಮುನ್ನಾಭಾಯ್ ಚಿತ್ರ ಗಾಂಧಿಯ ತತ್ತ್ವಗಳನ್ನು ಹೊಸ ರೀತಿಯಲ್ಲಿ ತಲುಪಿಸುವ ಪ್ರಯತ್ನ ಮಾಡಿತ್ತು. ಅದರಲ್ಲಿ ಗಾಂಧಿ ಪಾತ್ರಧಾರಿ ತನ್ನ ಅನುಯಾಯಿಗಳಿಗೆ ಹೇಳುವ ಮಾತೇನೆಂದರೆ, ’ನನ್ನ ಪ್ರತಿಮೆಗಳನ್ನು ಎಲ್ಲೆಲ್ಲಿ ನಿಲ್ಲಿಸಿದ್ದಾರೋ, ಅವೆಲ್ಲವನ್ನೂ ಕೆಡವಿಬಿಡಿ. ನನ್ನ ಫೊಟೋಗಳನ್ನು ಎಲ್ಲೆಲ್ಲಿ ನೇತುಹಾಕಿದ್ದಾರೋ ಅವೆಲ್ಲವನ್ನೂ ತೆಗೆದು ಎಸೆದುಬಿಡಿ. ನಿಮಗೆ ನಿಜಕ್ಕೂ ನನ್ನ ಮೇಲೆ ಗೌರವ ಅಭಿಮಾನ ಇದ್ದರೆ ನನ್ನ ತತ್ತ್ವಗಳನ್ನು ಅಳವಡಿಸಿಕೊಂಡು ಬಾಳಿ.’
ಇದನ್ನೂ ಓದಿ: ಪ್ರವಾಸಸ್ನೇಹಿ ಬಜೆಟ್-ಬಜೆಟ್ ಸ್ನೇಹಿ ಪ್ರವಾಸ
ಕನ್ನಡದ ಹನಿಗವಿ ಡುಂಡಿರಾಜ್ ಹಿಂದೊಮ್ಮೆ ಒಂದು ಹನಿಗವನ ಬರೆದಿದ್ದರು. ’ಗಾಂಧೀಜಿಯ ಪ್ರತಿಮೆಗಳನ್ನು ಎಲ್ಲೆಡೆ ನಿಲ್ಲಿಸಲಾಗಿದೆ. ಅಂತೆಯೇ ಅವರ ಆದರ್ಶಪರಿಪಾಲನೆಯನ್ನೂ ನಿಲ್ಲಿಸಲಾಗಿದೆ.’ ಎಂದು. ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಗಾಂಧೀಜಿಯ ಕಂಚಿನ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸಮಾಡಿದ್ದಾರೆ ಎಂದು ವರದಿಗಳು ಬಂದಾಗ ಮೊದಲು ನೆನಪಾಗಿದ್ದು ಮುನ್ನಾಭಾಯ್ ಚಿತ್ರವೇ! ಕಳೆದ ಒಂದು ತಿಂಗಳಿನಿಂದ ಭಾರತದಲ್ಲಿ ನರೇಗಾ ಮತ್ತು ವಿಜಿ ರಾಮ್ ಜಿ ವಿಷಯದಿಂದಾಗಿ ಗಾಂಧೀಜಿ ಸುದ್ದಿಯಲ್ಲಿದ್ದಾರೆ.

ಕನ್ನಡ ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರತಿದಿನ ಗಾಂಧೀಜಿ ರಾರಾಜಿಸುತ್ತಿದ್ದಾರೆ. ಎರಡು ಪಕ್ಷಗಳೂ ಗಾಂಧೀಜಿಯನ್ನು ಹಿಡಿದು ಜಗ್ಗಾಡುತ್ತಿವೆ. ಭಾರತದಲ್ಲಿ ನೆಮ್ಮದಿಯಿಲ್ಲ ಎಂದು ಗಾಂಧೀಜಿ ಆಸ್ಟ್ರೇಲಿಯಾದಲ್ಲಿ ಕಂಚಿನ ಪುತ್ಥಳಿಯಾಗಿ ನೆಮ್ಮದಿಯಾಗಿ ನಿಂತಿದ್ದರೆ, ಅಲ್ಲಿಯೂ ಕಿಡಿಗೇಡಿಗಳು ಪ್ರತಿಮೆ ಧ್ವಂಸಗೊಳಿಸಿದ್ದಾರಲ್ಲ. ಅಷ್ಟಕ್ಕೇ ಸುಮ್ಮನಾಗದೇ ಕಾಲು ಕತ್ತರಿಸಿ ಹೋಗಿದ್ದಾರಂತೆ. ಅಹಿಂಸೆಗಾಗಿ ಹೋರಾಡಿದ ಗಾಂಧೀಜಿ, ಈಗ ತಮ್ಮ ಪುತ್ಥಳಿ ಮೇಲೆಯೇ ಹಿಂಸಾಚಾರ ನಡೆದಿರುವುದನ್ನು ಮೇಲಿನಿಂದಲೇ ನಿಂತು ನೋಡಿ, ಹೇಗೆ ಯೋಚಿಸುತ್ತಿರಬಹುದು? 426 ಕೆಜಿ ತೂಕದ ಈ ಪುತ್ಥಳಿಯು ಭಾರತ ಆಸ್ಟ್ರೇಲಿಯಾಗೆ ಕೊಟ್ಟ ಉಡುಗೊರೆ. ನಮ್ಮ ದೇಶದಲ್ಲಿ ಗಾಂಧಿ ನೋಟೊಂದನ್ನು ಬಿಟ್ಟು ಗಾಂಧಿಯ ಇನ್ಯಾವ ವಸ್ತುವನ್ನೂ ಕದಿಯುವುದಿಲ್ಲ. ಕೆಲವರು ಅವರ ಸರ್ನೇಮ್ ಕದ್ದಿರುವುದಿದೆ. ಅದು ಬಿಡಿ. ಆಸ್ಟ್ರೇಲಿಯಾ ಕಳ್ಳರ ದೇಶ ಎಂದೇ ಪ್ರವಾಸಿಗರು ದೂರುತ್ತಾ ಇರುತ್ತಾರೆ. ಈ ಘಟನೆಯಿಂದ ಅದು ನಿಜ ಎನ್ನುವಂತಾಗಿದೆ.