Wednesday, April 1, 2026
Wednesday, April 1, 2026

ಮೇಲುಕೋಟೆಯ ಮೇರು ಇತಿಹಾಸ

ವಿ‌ಷ್ಣುವಿಗೆ ಸಮರ್ಪಿತವಾದ ಚೆಲುವನಾರಾಯಣಸ್ವಾಮಿ ದೇವಸ್ಥಾನ ತಿರುನಾರಾಯಣ, ಚೆಲುವರಾಯ ಎಂದೂ ಕರೆಯಲ್ಪಡುತ್ತದೆ. ದೇವರ ಉತ್ಸವಮೂರ್ತಿಯನ್ನು ಚೆಲುವಪಿಲ್ಲೆರಾಯ ಎಂದು ಕರೆಯಲಾಗುತ್ತದೆ. ನಾವು ಹೋದ ಸಂಜೆ ವೇಳೆ ಉತ್ಸವಮೂರ್ತಿಯನ್ನು ಅಡ್ಡೆಯಲ್ಲಿಟ್ಟು ದೇವಸ್ಥಾನ ಸುತ್ತಾ ಪ್ರದಕ್ಷಿಣೆ ಮಾಡುವುದನ್ನು ವೀಕ್ಷಿಸಿದೆವು. ಈ ದೇವಸ್ಥಾನವು ಮೈಸೂರು ರಾಜಮನೆತನದ ಆಶ್ರಯದಲ್ಲಿದ್ದು ಒಡೆಯರು ಸ್ವಾಮಿಗೆ ಅಮೂಲ್ಯವಾದ ಆಭರಣಗಳನ್ನು ಹಾಕಿದ್ದಾರೆ.

- ಗೊರೂರು ಅನಂತರಾಜು

ಲೇಖಕರು: ಸಾಹಿತಿ

12ನೇ ಶತಮಾನದಲ್ಲಿ ಶ್ರೀ ರಾಮಾನುಜಾಚಾರ್ಯರು ನೆಲೆಸಿದ್ದ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ, ಯೋಗನರಸಿಂಹಸ್ವಾಮಿ ದೇವಾಲಯ, ಕಲ್ಯಾಣಿ ಮತ್ತು ವೈರಮುಡಿ ಉತ್ಸವಕ್ಕೆ ಹೆಸರಾಗಿದೆ. 3589 ಅಡಿ ಎತ್ತರದ ಯದುಗಿರಿ ಬೆಟ್ಟದ ಮೇಲಿರುವ ಇದು ರಾಯಗೋಪುರ, ಪಂಚಕಲ್ಯಾಣಿ, ಅಕ್ಕತಂಗಿಯರ ಕೊಳ, ಧನುಷ್ಕೋಟಿ ಇರುವ ಧಾರ್ಮಿಕ ಕ್ಷೇತ್ರ. ಮೇಲುಕೋಟೆಗೆ ಯಾದವಾದ್ರಿ, ವೇದಾದ್ರಿ, ನಾರಾಯಣಾದ್ರಿ, ಯತಿಶೈಲ, ಯದುಗಿರಿ ಎಂಬ ಹೆಸರುಗಳಿವೆ. ಶಾಸನಗಳಲ್ಲಿ ಯಾದವಗಿರಿ, ಯದುಗಿರಿ, ವೈಕುಂಠವರ್ಧನ ಕ್ಷೇತ್ರ, ದಕ್ಷಿಣ ಬದರಿಕಾಶ್ರಮ, ತಿರುನಾರಾಯಣಪುರ, ಮೇಲುಕೋಟೆ ಹೆಸರಿನ ಉಲ್ಲೇಖವಿದೆ. 1189ರಲ್ಲಿ ಕೋಟೆ ಇದ್ದ ಬಗ್ಗೆ ಆಧಾರಗಳು ದೊರೆತಿವೆ. ಹೋಬಳಿ ಕೇಂದ್ರವಾದ ಇದು ಹೊಯ್ಸಳರ ವಿಷ್ಣುವರ್ಧನ (ಕ್ರಿ.ಶ.1008-1148) ಕಾಲದಿಂದ ಮೈಸೂರು ಅರಸರ ಕಾಲದವರೆಗೆ ರಾಜಾಶ್ರಯ ಪಡೆದಿತ್ತು. ಶ್ರೀ ರಾಮಾನುಜಾಚಾರ್ಯರು ಈ ಸ್ಥಳಕ್ಕೆ ಬರುವ ಮೊದಲೇ ಇಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಸ್ಥಾನಗಳಿದ್ದವು.

ಇದನ್ನೂ ಓದಿ: ಚೆಲುವ ನಾರಾಯಣನ ಸನ್ನಿಧಿಗೆ ಕೆಎಸ್‌ಟಿಡಿಸಿ ಪ್ರವಾಸ ರಥ

ಶ್ರೀ ರಾಮಾನುಜಾಚಾರ್ಯರು 14 ವರ್ಷ ಇಲ್ಲಿ ವಾಸಿಸುತ್ತಿದ್ದರಾಗಿ ಇದು ಬ್ರಾಹ್ಮಣರ ಶ್ರೀವೈಷ್ಣವ ಪಂಥದ ಪ್ರಮುಖ ಕೇಂದ್ರವಾಯಿತು. ದಕ್ಷಿಣ ಭಾರತದಲ್ಲಿ ಶ್ರೀವೈಷ್ಣವ ಕ್ಷೇತ್ರಗಳೆಂದು ಖ್ಯಾತವಾಗಿರುವ ನಾಲ್ಕು ಪುಣ್ಯಕ್ಷೇತ್ರಗಳ ಪೈಕಿ ಮೇಲುಕೋಟೆಯೂ ಒಂದು. ಇನ್ನುಳಿದ ಮೂರು ಕ್ಷೇತ್ರಗಳು ಕಾಂಚಿ, ತಿರುಪತಿ ಮತ್ತು ಶ್ರೀರಂಗ. ಕೃತಯುಗದಲ್ಲಿ ಸನತ್ಕುಮಾರ ಇಲ್ಲಿ ತಿರುನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಾರಾಯಣಾದ್ರಿ ಎಂದೂ, ತ್ರೇತಾಯುಗದಲ್ಲಿ ದತ್ತಾತ್ರೇಯರು ಈ ಪರ್ವತದಲ್ಲಿ ವೇದ ಪಾರಾಯಣ ಮಾಡಿ ವೇದಾದ್ರಿಯೆಂದೂ, ದ್ವಾಪರದಲ್ಲಿ ಶ್ರೀಕೃಷ್ಣನಿಂದ ಪೂಜಿಸಲ್ಪಟ್ಟು ಯಾದವಾದ್ರಿಯೆಂದೂ, ಆಚಾರ್ಯ ರಾಮಾನುಚಾರ್ಯರು ಇಲ್ಲಿ ನೆಲೆಸಿ ಯತಿಶೈಲವೆಂದೂ ಹೆಸರು ಪಡೆದಿದೆ ಎನ್ನುತ್ತದೆ ಸ್ಥಳಪುರಾಣ. ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಈ ಕ್ಷೇತ್ರ 14ನೇ ಶತಮಾನದಲ್ಲಿ ಮಹಮದೀಯರ ದಾಳಿಗೆ ಒಳಗಾಗಿತ್ತು. 1460ರಲ್ಲಿ ಹಾಳಾಗಿದ್ದ ದೇವಾಲಯವನ್ನು ವಿಜಯನಗರದ ಅರಸರು ಜೀರ್ಣೋದ್ಧಾರ ಮಾಡಿದರು. 1771ರಲ್ಲಿ ಮರಾಠರು ಮೇಲುಕೋಟೆಯನ್ನು ಲೂಟಿ ಮಾಡಿದರು. ಅನಂತರ ಮತ್ತೆ ದೇಗುಲ ಜೀರ್ಣೋದ್ಧಾರಗೊಂಡು ಊರು ಪುನರ್ ನಿರ್ಮಾಣವಾಯಿತು

ರಾಯನ ಚೆಲುವು:

New Project (10)

ವಿ‌ಷ್ಣುವಿಗೆ ಸಮರ್ಪಿತವಾದ ಚೆಲುವನಾರಾಯಣಸ್ವಾಮಿ ದೇವಸ್ಥಾನ ತಿರುನಾರಾಯಣ, ಚೆಲುವರಾಯ ಎಂದೂ ಕರೆಯಲ್ಪಡುತ್ತದೆ. ದೇವರ ಉತ್ಸವಮೂರ್ತಿಯನ್ನು ಚೆಲುವಪಿಲ್ಲೆರಾಯ ಎಂದು ಕರೆಯಲಾಗುತ್ತದೆ. ನಾವು ಹೋದ ಸಂಜೆ ವೇಳೆ ಉತ್ಸವಮೂರ್ತಿಯನ್ನು ಅಡ್ಡೆಯಲ್ಲಿಟ್ಟು ದೇವಸ್ಥಾನ ಸುತ್ತಾ ಪ್ರದಕ್ಷಿಣೆ ಮಾಡುವುದನ್ನು ವೀಕ್ಷಿಸಿದೆವು. ಈ ದೇವಸ್ಥಾನವು ಮೈಸೂರು ರಾಜಮನೆತನದ ಆಶ್ರಯದಲ್ಲಿದ್ದು ಒಡೆಯರು ಸ್ವಾಮಿಗೆ ಅಮೂಲ್ಯವಾದ ಆಭರಣಗಳನ್ನು ಹಾಕಿದ್ದಾರೆ. ದಾನಧರ್ಮಗಳ ಜತೆಗೆ ಕಲಾತ್ಮಕ ಮಂಟಪಗಳನ್ನು ಕಟ್ಟಿಸಿದ್ದಾರೆ. ಹಲವು ಭೂಭಾಗಗಳನ್ನು ಉಂಬಳಿಯಾಗಿ ನೀಡಿದ್ದಾರೆ. ಚಿಕ್ಕದೇವರಾಜರು ಯೋಗನರಸಿಂಹಸ್ವಾಮಿಯ ಬೆಟ್ಟಕ್ಕೆ ನೂತನ ರಾಜಗೋಪುರವನ್ನೂ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಪ್ರತಿವರ್ಷ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ರಾಜಮುಡಿ, ರಾಜಮುಡಿ, ವೈರಮುಡಿ, ಬ್ರಹ್ಮೋತ್ಸವಗಳು ವೈಭವದಿಂದ 10 ದಿನಗಳ ಕಾಲ ನಡೆಯುತ್ತದೆ. 280 ಅಡಿ ಚೌಕಾರದ ವಿಸ್ತಾರವಾದ ಕಟ್ಟಡ ಸುತ್ತಲೂ ಕೈಸಾಲೆ, ಮಹಾದ್ವಾರ, 150 ಅಡಿ ಎತ್ತರದ ರಾಜಗೋಪುರ, ಪ್ರಾಕಾರ, ಚಿಕ್ಕಗುಡಿಗಳು, ಯಾಗಶಾಲೆ, ಪಾಕಶಾಲೆ, ನಗರಂಗ, ಮಂಟಪಗಳನ್ನು ಒಳಗೊಂಡಿದೆ. ಸಭಾಮಂಟಪದ ಕಲ್ಲುಕಂಭಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಚಿತ್ರಣವಿದೆ. ಕೃಷ್ಣರಾಜಮುಡಿ ಮತ್ತು ವೈರಮುಡಿ ಅಥವಾ ವಜ್ರಮುಕುಟ ಎಂದು ಕರೆಯಲಾಗುವ 2 ಸುಂದರವಾದ ಕಿರೀಟಗಳನ್ನು ಒಡೆಯರು ಉಡುಗೊರೆಯಾಗಿ ನೀಡಿದ್ದಾರೆ. ಮಾರ್ಚ್‌ ಏಪ್ರಿಲ್‌ನಲ್ಲಿ ನಡೆಯುವ ವೈರಮುಡಿಯ ದಿನ ಮುಖ್ಯ ದೇವರು ತಿರುನಾರಾಯಣನನ್ನು ವಜ್ರದ ಕೀರಿಟದಿಂದ ಅಲಂಕರಿಸಿ ಮೆರವೆಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.

New Project (12)

ಬೆಟ್ಟದ ಮೇಲಿನ ದೇವಾಲಯವು ಯೋಗನರಸಿಂಹನಿಗೆ ಅರ್ಪಿತವಾಗಿದೆ. ಗರ್ಭಗುಡಿಯ ಮುಖ್ಯ ದೇವರು ಯೋಗ ಭಂಗಿಯಲ್ಲಿ ಕುಳಿತಿದ್ದಾನೆ. ಇದನ್ನು ನೋಡುವಾಗ ಗೊರೂರು ಶ್ರೀ ಯೋಗನರಸಿಂಹಸ್ವಾಮಿ ದೇವರ ನೆನಪಾಯಿತು. ಅಲ್ಲಿಯಂತೆಯೇ ಇಲ್ಲಿಯೂ ನರಸಿಂಹನು ಹಿರಣ್ಯಕಶಿಪುವನ್ನು ಕೊಲ್ಲುವ ದೃಶ್ಯವಿದೆ. 1853ರ ಈ ದೇವಾಲಯದ ಒಳಗೆ ಸಂಸ್ಕೃತ ಪಾಠಶಾಲೆಯಿದೆ. ಬೆಟ್ಟದ ಮೇಲಿನ ದೇವರ ದರ್ಶನಕ್ಕೆ ನಾನೂರು ಮೆಟ್ಟಿಲು ಹತ್ತಿದೆವು.

ಪ್ರಕೃತಿಯ ಕಲೆ:

New Project (11)

ಇಲ್ಲಿ ಮೂರು ಕೊಳಗಳಿದ್ದು, ಎರಡು ತಪ್ಪಲಿನಲ್ಲಿ ಇನ್ನೊಂದು ಬೆಟ್ಟದ ಮೇಲಿದೆ. ಚೆಲುವನಾರಾಯಣಸ್ವಾಮಿ ದೇವಾಲಯ ಬಳಿ ಇರುವ ಕಲ್ಯಾಣಿ ದೊಡ್ಡದಾಗಿದ್ದು, ಸುಂದರವಾಗಿ ಕೆತ್ತಿದ ಕಂಬದ ಮಂಟಪಗಳಿಂದ ಕೂಡಿದೆ. ಗೋಪಾಲರಾಯ ಪ್ರವೇಶದ್ವಾರ ಎಂದೂ ಕರೆಯಲ್ಪಡುವ ಇಲ್ಲಿನ ರಾಯಗೋಪುರ ಮೇಲುಕೋಟೆ ಬೆಟ್ಟದ ಅಪೂರ್ಣ ರಚನೆ. ಇದು ನಾಲ್ಕು ಎತ್ತರದ ಸ್ತಂಭಗಳನ್ನು ಹೊಂದಿದ್ದು ಮಾಮಲ್ಲಾಪುರಂ ರಾಜಗೋಪುರಂಗೆ ಹೋಲುತ್ತದೆ. ಇದು ಚಲನಚಿತ್ರಗಳ ಶೂಟಿಂಗ್ ತಾಣವಾಗಿದ್ದು, ಹಲವಾರು ಸಿನಿಮಾಗಳಲ್ಲಿ ವೀಕ್ಷಿಸಿರುತ್ತೇವೆ. ಇದನ್ನು ಖುದ್ದು ನೋಡಬೇಕೆಂಬ ನನ್ನ ಆಸೆ ಈಡೇರಿತ್ತು. ನಾವು ಹೋದಾಗಲೂ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಚಿತ್ರದ ಹೀರೋ ಚಿಕ್ಕಣ್ಣ ಎಂದು ರಾಣಿ ಮೇಡಂ ಹೇಳಿದರು. ಸಂಜೆ ಆರು ಗಂಟೆ ಸಮಯವಾಗಿತ್ತು. ಕೃತಕವಾಗಿ ಪೈಪು ಮೂಲಕ ನೀರು ಚಿಮ್ಮಿ ಎರಡು ಸ್ತಂಭಗಳ ಮುಂದೆ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಇದರ ಹಿಂಬದಿಯ ಸ್ಥಂಭಗಳ ಮುಂದೆ ಯಾರೋ ಬೆಂಗಳೂರಿನ ನವಜೋಡಿಗಳ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಯುತ್ತಿತ್ತು. ನಾವು ಅಲ್ಲಿ ನಿಂತು ನಮ್ಮ ಗ್ರೂಪ್ ಪೋಟೋ ತೆಗೆಸಿಕೊಂಡವು. ಇದಕ್ಕೂ ಮೊದಲು ನಾವು ಧನುಷ್ಕೋಟಿಗೆ ಹೋಗಿಬಂದೆವು. ಇದು ಬೆಟ್ಟದ ಮೇಲಿರುವ ಒಂದು ತಾಣವಾಗಿದ್ದು ರಾಮಾಯಣದಲ್ಲಿ ಬರುವ ಘಟನೆಗೆ ಸಂಪರ್ಕವಿದೆ. ರಾಮನು ತನ್ನ ಪತ್ನಿ ಸೀತೆಯ ಬಾಯಾರಿಕೆಯನ್ನು ನೀಗಿಸಲು ನೀರಿನ ಬುಗ್ಗೆ ಸೃಷ್ಟಿಸಲು ತನ್ನ ಬಾಣದಿಂದ ಭೂಮಿಗೆ ಹೊಡೆದ ಸ್ಥಳವೆಂದು ನಂಬಲಾಗಿದೆ. ನಾನು ಕಲ್ಲುಬಂಡೆಯ ಬ್ಯಾಗ್ರೌಂಡ್‌ನಲ್ಲಿ ಪೋಟೋ ತೆಗೆಸಿಕೊಂಡೆ.

ಇದನ್ನೂ ಓದಿ: ಚೆಲುವರಾಯನ ಮೇಲುಕೋಟೆ... ಅಂದಿನ ಫೇವರಿಟ್ ಶೂಟಿಂಗ್ ಸ್ಪಾಟ್

ಪ್ರಸಿದ್ಧ ಸಾಹಿತಿ ಪು.ತಿ.ನರಸಿಂಹಾಚಾರ್ ಅವರ ಮನೆ ಇಲ್ಲಿದ್ದು, ಅದು ಈಗ ಸ್ಮಾರಕವಾಗಿದೆ. ಮೇಲುಕೋಟೆಯ ಪುಳಿಯೊಗರೆ ಬಹಳ ರುಚಿಕರ ಮತ್ತು ಪ್ರಸಿದ್ಧ. ನಾವು ಯೋಗನರಸಿಂಹಸ್ವಾಮಿ ಬೆಟ್ಟ ಹತ್ತಿ ಇಳಿದು ಬರುವಷ್ಟರಲ್ಲಿ ಬೆಟ್ಟ ಹತ್ತದೆ ಕೆಳಗೆ ಉಳಿದಿದ್ದ ಕಾರ್ ಮಾಲೀಕರು ಕುಮಾರ್ ಯಾರಿಗೋ ಪೋನ್ ಮಾಡಿ ಬಸ್‌ಸ್ಯಾಂಡ್ ಬಳಿಗೆ ಪುಳಿಯೋಗರೆ ತರಿಸಿಕೊಂಡರು.

ದಾರಿ ಹೇಗೆ?

ಜಿಲ್ಲಾ ಕೇಂದ್ರ ಮಂಡ್ಯದಿಂದ 40ಕಿಮೀ. ಪಾಂಡವಪುರ ತಾಲ್ಲೂಕು ಕೇಂದ್ರದಿಂದ ೨೪ ಕಿ.ಮೀ. ಉತ್ತರಕ್ಕೆ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..