ಕುಶಲವೇ.. ಕ್ಷೇಮವೇ.. ಎನ್ನುತ್ತಾ ಕೈಬೀಸುವ ‘ಕ್ಷೇಮವನʼ
ಕ್ಷೇಮವನ ವಿಶ್ವದ ಪ್ರಮುಖ ಹೀಲಿಂಗ್ ಹಾಸ್ಪಿಟಾಲಿಟಿ ಬ್ರ್ಯಾಂಡ್ ಆಗಿರುವ ‘Healing Hotels of the Worldʼ ಸಂಸ್ಥೆಯ ಭಾಗವಾಗಿದ್ದು, ಆರೋಗ್ಯ ಮತ್ತು ಸಮಗ್ರ ಚಿಕಿತ್ಸಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಸಂಸ್ಥೆಯ ಚಿಕಿತ್ಸಾ ತತ್ವಶಾಸ್ತ್ರವು ಸುಮಾರು 300 ವರ್ಷಗಳ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಆಧಾರಿತವಾಗಿದ್ದು, ಆಧುನಿಕ ಆರೋಗ್ಯ ಸೇವೆಗಳೊಂದಿಗೆ ಸಂಯೋಜಿತವಾಗಿದೆ.
- ಧಾರಿಣಿ ಮಾಯಾ
ನಮ್ಮ ಮಾನಸಿಕ ಹಾಗೂ ದೈಹಿಕ ಕುಶಲ ಕ್ಷೇಮವನ್ನು ಉತ್ತಮಗೊಳಿಸಿಕೊಳ್ಳಲು ನಾವು ಅನುಸರಿಸುವ ಜೀವನಶೈಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಹಾಗೆಯೇ ನಡೆಯುತ್ತಿದ್ದರೂ ಅದರಲ್ಲಿ ಕೆಲವೊಮ್ಮೆ ಅಸಮತೋಲನ ಉಂಟಾಗುವ ಸಾಧ್ಯತೆಯಿರುತ್ತದೆ. ನಮ್ಮ ಆರೋಗ್ಯ ಸುಧಾರಿಸಲು ಸದಾ ಮಾತ್ರೆ, ಅಲೋಪತಿ ಔಷಧಗಳ ಮೊರೆ ಹೊಕ್ಕದೆ ನೈಸರ್ಗಿಕ ವಿಧಾನದಿಂದ ಸಾಕಷ್ಟು ಮಟ್ಟಿಗೆ ನಮ್ಮ ಆರೋಗ್ಯ ಹಾಗೂ ಜೀವನಶೈಲಿಯನ್ನು ಸುಧಾರಿಸಬಹುದಾಗಿದೆ. ಇದು ಸಾಧ್ಯವಾಗಿಸುವುದು ‘ಕ್ಷೇಮವನʼ ಎಂಬ ಕೇಂದ್ರದಲ್ಲಿ.

ಪ್ರಕೃತಿ ಚಿಕಿತ್ಸೆ ಮತ್ತು ಆರೋಗ್ಯಧಾಮವಾದ (Naturopathy and Wellness Centre) ಕ್ಷೇಮವನವು ಸುಮಾರು 22 ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದು, ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿದೆ. 2022ರಲ್ಲಿ ಸ್ಥಾಪಿತವಾದ ಕ್ಷೇಮವನವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಂಸ್ಥೆಯ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. ‘ಶಾಂತಿವನʼ ಎಂಬ ವೆಲೆನೆಸ್ ಸೆಂಟರ್ ಧರ್ಮಸ್ಥಳದ ಉಜಿರೆಯಲ್ಲಿ 1987ರಲ್ಲೇ ಸ್ಥಾಪಿತವಾಗಿದೆ.
ಕ್ಷೇಮವನದಲ್ಲಿ ಸಂಪೂರ್ಣವಾಗಿ ಔಷಧರಹಿತ ಪ್ರಕೃತಿ ಚಿಕಿತ್ಸಾ ವಿಧಾನಗಳು, ಸಮತೋಲನ ಆಹಾರ, ಯೋಗ, ಧ್ಯಾನ ಮತ್ತು ಜಲಚಿಕಿತ್ಸೆಯಂಥ ನೈಸರ್ಗಿಕ ವಿಧಾನಗಳ ಮೂಲಕ ದೇಹದ ಸ್ವಾಭಾವಿಕ ಸ್ವಯಂ-ಚಿಕಿತ್ಸಾ ಸಾಮರ್ಥ್ಯವನ್ನು (self-healing ability) ಉತ್ತೇಜಿಸಿ ನಿತ್ಯ ಒತ್ತಡದಿಂದ ಮುಕ್ತವಾಗಿ ಮೈಮನವನ್ನು
ಮರುಚೈತನ್ಯ ತುಂಬಿ ಹೋಲಿಸ್ಟಿಕ್ ಹೆಲ್ತ್ ಕಡೆ ಕೇಂದ್ರೀಕರಿಸಲು ಸಹಕಾರಿಯಾಗಿಸುತ್ತದೆ.
ಡಿಟಾಕ್ಸ್ಗಾಗಿ ನಾನೂ ಕೂಡ ಇತ್ತೀಚೆಗೆ ಸುಮಾರು ಹತ್ತು ದಿನಗಳ ಕಾಲ ಕ್ಷೇಮವನದಲ್ಲಿ ಇದ್ದು ಬಂದೆ. ಹಾಗಾಗಿ ಇಲ್ಲಿ ನಡೆಯುವ ಕಾರ್ಯವೈಖರಿ, ವಿಧಿವಿಧಾನ ಹಾಗೂ ನನ್ನ ವೈಯಕ್ತಿಕ ಅನುಭವವನ್ನೂ ಇಲ್ಲಿ ಹಂಚಿಕೊಂಡಿರುವೆ. ಇಲ್ಲಿ ಸೇರಿಕೊಂಡವರಿಗೆ ‘ಸಾಧಕʼ ಎಂದು ಕರೆಯಲಾಗುತ್ತದೆ. ಕ್ಷೇಮವನದಲ್ಲಿ ದಾಖಲಾಗಬೇಕಾದರೆ ಕನಿಷ್ಠ 8 ದಿನಗಳಾದರೂ ತಂಗಬೇಕು. ಯಾವುದೇ ಸಾಧಕರಿಗೆ ಇಲ್ಲಿ ರೂಪಿಸುವ ನೈಸರ್ಗಿಕ ಚಿಕಿತ್ಸೆಯ ಪರಿಣಾಮ ಗೊತ್ತಾಗಬೇಕಾದರೆ ಒಂದು ವಾರವಾದರೂ ಬೇಕಾಗುತ್ತದೆ. ಇಚ್ಛೆಯಿದ್ದಲ್ಲಿ ಅವರ ಆರೋಗ್ಯ ಸಮಸ್ಯೆಗೆ ಅನುಗುಣವಾಗಿ ಅದಕ್ಕಿಂತ ಇನ್ನೂ ಹೆಚ್ಚಿಗೆ ಎಷ್ಟು ದಿನಗಳಾದರೂ ತಂಗಬಹುದು. ಕೆಲವರು ಇಲ್ಲಿಗೆ ಡಿಟಾಕ್ಸ್ಗೆಂದು ಬಂದರೆ, ಬಹುತೇಕರು ದೇಹ ತೂಕ ಇಳಿಸಲು ಮತ್ತು ಶರೀರದಲ್ಲಿನ inflammation ಕಡಿಮೆ ಮಾಡಿಕೊಳ್ಳಲು ಬರುತ್ತಾರೆ.
ರಚನಾತ್ಮಕ ವಿನ್ಯಾಸ:

ಕ್ಷೇಮವನ ಕಟ್ಟಡ ಸಮಕಾಲೀನ, ಪ್ರಕೃತಿ ಪ್ರೇರಿತ ಹಾಗೂ ಪುರಾತನ ಶೈಲಿಯಿಂದ ರಚಿತವಾಗಿದೆ. ಹಳೆಯ ದಕ್ಷಿಣ ಭಾರತದ ಮಹಲುಗಳು ಮತ್ತು ದೇವಾಲಯಗಳಿಂದ ಪುರಾತನ ಮರದ ಬಾಗಿಲುಗಳನ್ನು ಮರುಪಡೆದು ಮುಖ್ಯವಾದ ಗರುಡ ಸಭಾಂಗಣದಲ್ಲಿ ಹಾಗೂ ಸಾಧ್ಯವಾದಲ್ಲೆಲ್ಲಾ ಅಳವಡಿಸಲಾಗಿದ್ದು, ಗೋಡೆಗೆ ಒರಗಿದ ಬೃಹತ್ ಕನ್ನಡಿಗಳಿಗೆ ಚೌಕಟ್ಟಾಗಿಯೂ ಉಪಯೋಗಿಸಲಾಗಿದೆ. ನೀರು ಕಾಯಿಸುವ ತಾಮ್ರದ ಹಂಡೆಗಳನ್ನು ಪ್ರದರ್ಶನ ವಸ್ತುಗಳನ್ನಾಗಿ ಅಲ್ಲಲ್ಲಿ ಇಡಲಾಗಿದ್ದು, ಕೆಲವನ್ನು ಚಾವಣಿಯಿಂದ ಹಗ್ಗಕ್ಕೆ ಕಟ್ಟಿ ನೇತು ಹಾಕಲಾಗಿದ್ದು ನೋಡಲು ಅತ್ಯಾಕರ್ಷಕವಾಗಿವೆ. ಸಂಪೂರ್ಣ ಕ್ಷೇಮವನವು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿತವಾಗಿದೆ. ವಾಸ್ತುಶಿಲ್ಪಿ ಮಹೇಶ್ ಡಿಯೋಪೋಡೆ ಇದರ ಇಂಟೀರಿಯರ್ ವಿನ್ಯಾಸಕಾರರಾಗಿದ್ದು, ಇದೆಲ್ಲವನ್ನೂ ಕಾರ್ಯಗತಗೊಳಿಸಿದವರು ಆಯುಷ್ ಕಸ್ಲಿವಾಲ್ ಎಂಬುವರು.
ಮೂರು ಮುಖ್ಯ ಸಭಾಂಗಣ:
ಈ ಕ್ಷೇಮಧಾಮ ರಿಟ್ರೀಟ್ನ ಮೂರು ಮುಖ್ಯ ಕಟ್ಟಡಗಳಲ್ಲಿ ಮುಖ್ಯ ಸ್ವಾಗತ ಸಭಾಂಗಣವನ್ನು (reception) ‘ಗರುಡ’ ಎಂದು ಹೆಸರಿಸಲಾಗಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿಂಟೇಜ್ ವಾಹನಗಳ ಸಂಗ್ರಹಣೆಯ ಸರದಾರರು ಎಂದು ಎಲ್ಲರಿಗೂ ತಿಳಿದ ವಿಷಯ. ಅದರ ಕುರುಹಾಗಿ ಇಲ್ಲಿಯೂ ಸರ್ ಸಿ.ವಿ. ರಾಮನ್ ರವರು ಉಪಯೋಗಿಸುತ್ತಿದ್ದ ಕಾರನ್ನು ಗರುಡ ಹಾಲ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

‘ಕೂರ್ಮ’ (ಆಮೆ) ಸಭಾಂಗಣವು ಒಂದು ವಿಶಿಷ್ಟ ವಾಸ್ತುಶಿಲ್ಪ ವಿನ್ಯಾಸವನ್ನು ಹೊಂದಿದೆ. ಇದರ ಪ್ರಮುಖ ಆಕರ್ಷಣೆ ಹೊರ ಛಾವಣಿಯಲ್ಲಿ ಕಾಣುವ ಕೂರ್ಮ. ಒಳಗಡೆಯ ಸಭಾಂಗಣವು ಬೃಹದಾಕಾರವಾಗಿ ಸುರುಳಿಯಾಗಿ ಅಥವಾ ಅಲೆಯಂತೆ ಹರಿಯುವ ವಿನ್ಯಾಸದ ಛಾವಣಿಯಾಗಿದೆ. ವೇದಿಕೆಯ ಹಿಂದೆ ಹಿಂದೂ ಪೌರಾಣಿಕ ಘಟನೆಯ ಆಧಾರಿತ ಸಮುದ್ರ ಮಂಥನದ ಚಿತ್ರಕಲೆ ಅಮೋಘವಾಗಿದೆ. ಜತೆಗೆ ಧ್ಯಾನ, ಯೋಗಕ್ಕೆ ಬೇರೆ ಬೇರೆ ಸಭಾಂಗಣಗಳಿವೆ. ಆಧುನಿಕ ಮಾದರಿಯ ಜಿಮ್ ಹಾಗೂ ತಾಪಮಾನ ನಿಯಂತ್ರಿತ ಈಜುಕೊಳವೂ ಇದೆ.
‘ನಂದಿ’ ಕಟ್ಟಡವು ಭೂಮಿ ಮೇಲಿನ ಜೀವಿಗಾಗಿ ಎಂಬ ಅರ್ಥವಿದೆ. ಈ ಸಭಾಂಗಣದ ಮಧ್ಯ ಭಾಗದಲ್ಲಿ ಐತಿಹಾಸಿಕ ಪ್ರಾಚೀನ ಕೆತ್ತನೆಯುಳ್ಳ ಐದು ನಂದಿ ಪ್ರತಿಮೆಗಳಿವೆ. ಇವುಗಳು ಊನವಾಗಿದ್ದರೂ ನೋಡಲು ಬಹು ಸುಂದರವಾಗಿವೆ. ಈ ಸಭಾಂಗಣವು ಆಹಾರ ಕೇಂದ್ರವಾಗಿದೆ.
ಇಲ್ಲಿ ಒಂದು ಪುಟ್ಟ ಗ್ರಂಥಾಲಯವೂ ಇದೆ. ವೈವಿಧ್ಯ ಪುಸ್ತಕಗಳ ಮಧ್ಯೆ ಶ್ರೀ ವೀರೇಂದ್ರ ಹೆಗ್ಗಡೆಯವರ ಕುರಿತ ಮುಖಪುಟ ಲೇಖನ ಹೊತ್ತ ವಿಶ್ವವಾಣಿ ಪತ್ರಿಕೆಯನ್ನು ಕೈಯಲ್ಲಿ ಹಿಡಿದಾಗ ದುಪ್ಪಟ್ಟು ಖುಷಿಯಾಯಿತು. ಬಿಡುವಿನ ವೇಳೆ ಆಟವಾಡಲು ಹೊರಾಂಗಣ ಹಾಗೂ ಒಳಾಂಗಣ ಕ್ರೀಡೆಗಳೂ ಇವೆ. ಇಲ್ಲಿನ ಆವರಣದಲ್ಲಿ ಕಲ್ಲಿನ ಕಂಬಗಳ ಮಧ್ಯೆ ಮುನೇಶ್ವರನ ಒಂದು ಪುಟ್ಟ ಗುಡಿಯಿದೆ.
ಥೆರಪಿ ಮತ್ತು ಆಹಾರ ಪದ್ಧತಿ:
ಇಲ್ಲಿ ತಂಗುವವರಿಗೆಂದೇ ವನ, ಪುಷ್ಪ, ತರು, ಫಲಾ, ಲತಾ ಎಂದು ವಿವಿಧ ಬ್ಲಾಕ್ಗಳಿವೆ. ಇಲ್ಲಿನ ಪ್ರತಿಯೊಬ್ಬ ಸಾಧಕರಿಗೂ ಒಬ್ಬೊಬ್ಬ ವೈದ್ಯರು ನಿಯೋಜನೆಯಾಗಿರುತ್ತಾರೆ. ಕ್ಷೇಮವನದ ಅತಿಥಿಗಳು ಇಲ್ಲಿಗೆ ಕಾಲಿಟ್ಟೊಡನೆ ಮೊದಲಿಗೆ ಪ್ರತಿನಿತ್ಯದ ಥೆರಪಿಯ ಕಟ್ಟುಪಾಡುಗಳ ಜತೆ ನಿರ್ದಿಷ್ಟ ಪೌಷ್ಟಿಕಾಂಶದ ತಂತ್ರವನ್ನು ಅವರ ಮನಸು ಹಾಗೂ ಕರುಳಿನ ಆರೋಗ್ಯವನ್ನು ಗುಣಪಡಿಸುವ ನಿಮಿತ್ತ ರೂಪಿಸಲಾಗುತ್ತದೆ. ಗ್ರೇನ್ ಫ್ರೀ ಡಯಟ್ ಇಲ್ಲಿನ ಆಹಾರ ಪದ್ಧತಿಯೂ ವಿಭಿನ್ನ. ಇಲ್ಲಿ ಸಂಪೂರ್ಣ ಧಾನ್ಯ ಮುಕ್ತ (grain free diet) ಎನ್ನುವುದೇ ವಿಶಿಷ್ಟ. ಧಾನ್ಯ ಮುಕ್ತ ಆಹಾರಕ್ರಮದ ಪರಿಕಲ್ಪನೆಯು ದೇಹ ಸ್ವಯಂ ಚಿಕಿತ್ಸೆ ಮತ್ತು ನಿರ್ವಿಶೀಕರಣ (detoxification) ಹೊಂದುವಲ್ಲಿ ಬೆಂಬಲಿಸುತ್ತದೆ.
ನಿತ್ಯ ಚಟುವಟಿಕೆಗಳು:
ಬೆಳಗ್ಗೆ 5.30ಕ್ಕೆ ಶುರುವಾಗುವ ಯೋಗಾಭ್ಯಾಸ, ಜಲನೇತಿ ಕ್ರಿಯೆ, ಕಣ್ಣಿಗೆ- ಹೊಟ್ಟೆಗೆ ಮಡ್ ಪ್ಯಾಕ್, 7.30ಕ್ಕೆ ಉಪಹಾರದ ನಂತರ ದಿನದ ಚಿಕಿತ್ಸೆಗಳು (ಬಾಡಿ ಪ್ಯಾಕ್/ಮಸಾಜ್) ಸಾಗುತ್ತಲೇ ಹೋಗುತ್ತದೆ. ಮಧ್ಯಾಹ್ನ 12 ಗಂಟೆಯ ಊಟದ ನಂತರ ಎರಡು ಗಂಟೆಗೊಂದು ಹಣ್ಣಿನ ರಸ, ಮತ್ತೆ ಕೆಲವು ಚಿಕಿತ್ಸೆಗಳು ಮುಂದುವರೆಯುತ್ತವೆ. ನಿತ್ಯವೂ ಸಂಜೆ 5 ಗಂಟೆಗೆ ಪ್ರಾಣಾಯಾಮ, ಧ್ಯಾನವಿರುತ್ತದೆ. ನಂತರ ಕೆಲ ಹೊತ್ತು ವಿರಾಮದ ನಂತರ 7 ಗಂಟೆಗೆ ರಾತ್ರಿಯ ಊಟ, ನಂತರ ಯೋಗ ನಿದ್ರಾ/ ತ್ರಾಟಕ/ ಮೈಂಡ್ ಸೌಂಡ್ ರೆಸೋನೆನ್ಸ್ ಟೆಕ್ನಿಕ್/ ಸೌಂಡ್ ಬೌಲ್ ಮೆಡಿಟೇಷನ್ ಹೀಗೆ ಪ್ರತಿದಿನವೂ ಒಂದೊಂದು ವಿಶ್ರಾಂತಿ ತಂತ್ರ (relaxation technique) ಇರುತ್ತದೆ.
ಸೌಂಡ್ ಬೌಲ್ ಮೆಡಿಟೇಷನ್:

ಇವುಗಳಲ್ಲಿ ಸೌಂಡ್ ಬೌಲ್ ಮೆಡಿಟೇಷನ್ ಒಂದು ವಿಶಿಷ್ಟ ಧ್ಯಾನಾವಸ್ಥೆ. ಸೌಂಡ್ ಬೌಲ್ ಮೆಡಿಟೇಷನ್ಗೆಂದೇ ಒಂದು ಸುವ್ಯವಸ್ಥಿತ ಗೋಳಾಕಾರದ ಕೊಠಡಿಯಿದೆ. ಇಲ್ಲಿ ಸಂಪೂರ್ಣ ಮಂದವಾದ ಬೆಳಕಿದ್ದು, ನೆಲದ ಮೇಲೆ ವಿವಿಧ ಗಾತ್ರದ ಬಟ್ಟಲುಗಳನ್ನು ಇರಿಸಲಾಗಿರುತ್ತದೆ. ಕುಳಿತುಕೊಳ್ಳುವವರಿಗೆ ಸುತ್ತಲೂ ಸಿಮೆಂಟಿನ ಆಸನಗಳಿವೆ.
ಇಲ್ಲಿ ಟಿಬೇಟಿಯನ್ ಬೌಲ್ (ಮಿಶ್ರಲೋಹದ ಬಟ್ಟಲುಗಳು) ಮತ್ತು ಕ್ರಿಸ್ಟಲ್ ಬೌಲ್ಗಳನ್ನು ಉಪಯೋಗಿಸಿ ಅವುಗಳನ್ನು ಮರದ ಸುತ್ತಿಗೆಯಿಂದ ಮುಟ್ಟಿಸಿ ಸುತ್ತಲೂ ತಿರುಗಿಸುತ್ತಾ ಧೀರ್ಘವಾದ ವೈವಿಧ್ಯ ಆವರ್ತನದ ನಿರಂತರ ಕಂಪನವನ್ನು ಹೊರಹೊಮ್ಮಿಸಲಾಗುತ್ತದೆ. ಇದರಿಂದ ಮಾನಸಿಕ- ದೈಹಿಕ ವಿಶ್ರಾಂತಿ ಹಾಗೂ ದೇಹದ ಚಕ್ರಗಳ ಸಮತೋಲನಕ್ಕೆ ಸಹಕಾರಿ ಎಂದು ಹೇಳಲಾಗಿದೆ. ಇವುಗಳ ಜತೆಗೆ ಇನ್ನೂ ಎರಡು ಮೂರು ರೀತಿಯ ಸಂಗೀತ ವಾದ್ಯಗಳನ್ನು ಇಟ್ಟಿದ್ದು ಅವುಗಳಿಂದಲೂ ಬೇರೆ ರೀತಿಯ ಕಂಪನದ ಅಲೆಗಳನ್ನು ಮೂಡಿಸುತ್ತಾರೆ. ಇದನ್ನೆಲ್ಲಾ ಇಲ್ಲಿನ ಯೋಗ ಶಿಕ್ಷಕರೇ ನಡೆಸುತ್ತಾರೆ.
ಮರಳಿ ಕ್ಷೇಮವನಕ್ಕೆ:
ಕ್ಷೇಮವನ ವೆಲ್ನೆಸ್ ರಿಟ್ರೀಟ್ನಲ್ಲಿ 90ಕ್ಕೂ ಹೆಚ್ಚು ಆರೋಗ್ಯ ಸಮಸ್ಯೆಗಳಿಗೆ ಸಮಗ್ರ ಪರಿಹಾರಗಳನ್ನು ಒದಗಿಸಲಾಗುತ್ತಿದ್ದು, ದೈಹಿಕ, ಮಾನಸಿಕ ಮತ್ತು ಆತ್ಮೀಯ ಆರೋಗ್ಯವನ್ನು ಉತ್ತೇಜಿಸುವ ವಿವಿಧ ಚಿಕಿತ್ಸಾ ವಿಧಾನಗಳು ಇಲ್ಲಿ ಲಭ್ಯವಿವೆ. ಹಾಗಾಗಿ ಕ್ಷೇಮವನಕ್ಕೆ ಪ್ರತಿ ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ಖಡ್ಡಾಯವಾಗಿ ಬರುವವರಿದ್ದಾರೆ. ಇಲ್ಲಿ ಬರುವವರು ಹೆಚ್ಚಾಗಿ ದಂಪತಿಗಳು ಅಥವಾ ಸ್ನೇಹಿತರು ಜತೆಯಾಗಿ ಬಂದು ಹೋಗುತ್ತಾರೆ. ಒಬ್ಬರೇ ಇಲ್ಲಿ ಇದ್ದರೂ ಬೇಸರವೆನಿಸುವುದಿಲ್ಲ. ಏಕೆಂದರೆ ದಿನಪೂರ್ತಿ ನಡೆಯುವ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಸಂಪೂರ್ಣ ಕಾರ್ಯನಿರತರಾಗಿದ್ದು, ಬಿಡುವಿನ ವೇಳೆ ಎಂಬುದು ಸಿಗುವುದೇ ವಿರಳ. ಇಲ್ಲಿ ಬಂದವರಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿ ಸ್ನೇಹಿತರಾಗಿಬಿಡುತ್ತಾರೆ. ಅವರವರ ಚಿಕಿತ್ಸೆ, ಆಹಾರ ಪದ್ಧತಿಯನ್ನು ಪರಸ್ಪರ ಚರ್ಚಿಸುತ್ತಾರೆ. ಒಟ್ಟಿನಲ್ಲಿ ಇಲ್ಲಿ ತಂಗುವ ಅವಧಿ ಮುಗಿಯುವ ಹೊತ್ತಿಗೆ ಶಾರೀರಿಕವಾಗಿ, ಮಾನಸಿಕವಾಗಿ ಚಿಕಿತ್ಸೆಗಳು ಫಲಪ್ರದವಾಗಿ ಸಾಧಕರು ಮೈ-ಮನ ಹಿತವಾಗಿ ಮನೆಗೆ ಹಿಂದಿರುಗುತ್ತಾರೆ ಕ್ಷೇಮವನ ಪುನಃ ಕೈಬೀಸಿ ಕರೆಯುವ ತನಕ.