ಕನ್ನಡಿಗನ ಕಲಿತನ ತಿಳಿಸುವ ಬಾದಾಮಿ ಪ್ರವಾಸ
ಪ್ರತಿಯೊಬ್ಬ ಕನ್ನಡಿಗನೂ ತನ್ನ ಅಸ್ಮಿತೆಯನ್ನು ಹುಡುಕಲು ಭೇಟಿನೀಡಬೇಕಾದ ಸ್ಮಾರಕ 'ಕಪ್ಪೆ ಅರಭಟ್ಟನ ಶಾಸನ'. ಬೆಟ್ಟದ ಮೇಲೆ ಕೆತ್ತಲಾಗಿರುವ ಈ 7ನೆಯ ಶತಮಾನದ ಶಾಸನವು ಕನ್ನಡ ಸಾಹಿತ್ಯದ ಅತ್ಯಂತ ಹಳೆಯ 'ತ್ರಿಪದಿ' ಶಾಸನ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ʻಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತಂ ಪರನಲ್ಲʼ ಎಂಬ ಈ ಸಾಲುಗಳು ಕನ್ನಡಿಗರ ಸೌಜನ್ಯ ಮತ್ತು ಶೌರ್ಯದ ನಡುವಿನ ಅದ್ಭುತ ಸಮತೋಲನವನ್ನು ಸಾರುತ್ತವೆ. ಅಂದು ಕಲ್ಲಿನಲ್ಲಿ ಕೆತ್ತಿದ ಈ ಅಕ್ಷರಗಳು ಇಂದಿಗೂ ಸಮಾಜಕ್ಕೆ ಮಾನವೀಯ ಮೌಲ್ಯಗಳ ದಾರಿದೀಪವಾಗಿವೆ.
- ನಿರಂಜನ್ ಹೆಚ್ ಬಿ
ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ನದಿಯ ಮಡಿಲಲ್ಲಿನ ಬಾದಾಮಿ, ಭಾರತೀಯ ವಾಸ್ತುಶಿಲ್ಪದ ವಿಕಸನದ ಹಾದಿಯನ್ನು ಸಾರುವ ಮಹಾನ್ ವಿದ್ಯಾಪೀಠ ಎಂದರೆ ತಪ್ಪಾಗದು. ಭಾರತವು ಸುಮಾರು 1,500ಕ್ಕೂ ಹೆಚ್ಚು ಗುಹಾಂತರ ವಾಸ್ತುಶಿಲ್ಪಗಳ ತವರೂರು. ಬಿಹಾರದ ಬರಾಬರ್ ಗುಹೆಗಳಿಂದ ಹಿಡಿದು ಮಹಾರಾಷ್ಟ್ರದ ಅಜಂತಾ-ಎಲ್ಲೋರದವರೆಗೆ ಹರಡಿರುವ ಈ ಕಲಾ ಪರಂಪರೆಯಲ್ಲಿ ಬಾದಾಮಿ ವಿಶಿಷ್ಟ ಸ್ಥಾನ ಪಡೆದಿದೆ. ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಅಂದು 'ವಾತಾಪಿ' ಹೆಸರಿನಿಂದ ಜಗತ್ಪ್ರಸಿದ್ಧವಾಗಿತ್ತು. ಚಾಲುಕ್ಯರು ಪರಿಚಯಿಸಿದ 'ವೇಸರ' ವಾಸ್ತುಶಿಲ್ಪ ಶೈಲಿಯು 'ನಾಗರ' ಮತ್ತು 'ದ್ರಾವಿಡ' ಶೈಲಿಗಳ ಅಪೂರ್ವ ಸಂಗಮವಾಗಿದೆ.
ರಾಕ್ಷಸರ ಸಂಹಾರವಾಗಿದ್ದ ಸ್ಥಳ
ಬಾದಾಮಿಯ ಪ್ರತಿ ಮಣ್ಣಿನ ಕಣದಲ್ಲೂ ಇತಿಹಾಸ ಮತ್ತು ಪುರಾಣಗಳ ಮಿಶ್ರಣವಿದೆ. ವಾತಾಪಿ ಮತ್ತು ಇಲ್ವಲ ಎಂಬ ರಾಕ್ಷಸ ಸಹೋದರರು ಈ ಪ್ರದೇಶಕ್ಕೆ ಬರುವವರನ್ನು ಉಪಾಯದಿಂದ ಕೊಂದು ತಿನ್ನುತ್ತಿದ್ದರು. ಅಗಸ್ತ್ಯ ಮುನಿಗಳು ತಮ್ಮ ತಪೋಬಲದಿಂದ ಈ ರಾಕ್ಷಸರನ್ನು ಸಂಹರಿಸಿದ ಪುಣ್ಯಭೂಮಿ ಇದು ಎಂಬುದು ಜನಪದರ ನಂಬಿಕೆ.
ಕರ್ನಾಟಕದ ಹೆಮ್ಮೆ ಈ ಕಚ್ಚಾ ಬಾದಾಮಿ
ಕೆಂಪು ಕಲ್ಲಿನ ಕೋಟೆ
ಕ್ರಿಶ 543ರಲ್ಲಿ ಒಂದನೆಯ ಪುಲಕೇಶಿ ಇಲ್ಲಿ ಬಲಿಷ್ಠವಾದ ಕೋಟೆ ನಿರ್ಮಿಸಿ ಬಾದಾಮಿಯನ್ನು ತನ್ನ ಸಾಮ್ರಾಜ್ಯ ಕೇಂದ್ರವಾಗಿ ಮಾಡಿಕೊಂಡನು. ಇಲ್ಲಿನ ಬೆಟ್ಟದ ಶಿಲೆಗಳು ಬಾದಾಮಿ ಹಣ್ಣಿನ ಬಣ್ಣವನ್ನು ಹೋಲುತ್ತದೆ ಹಾಗಾಗಿ ಇದಕ್ಕೆ 'ಬಾದಾಮಿ' ಎಂಬ ಹೆಸರು ಬಂದಿದೆ. ಈ ಕೋಟೆಯನ್ನು ಏರುವಾಗ ಕಾಣುವ ಚಾಲುಕ್ಯರ ರಕ್ಷಣಾ ತಂತ್ರಗಳು ನೋಡುಗರನ್ನು ಚಕಿತಗೊಳಿಸುತ್ತವೆ. ಈ ಕೋಟೆ ಇಡೀ ದಕ್ಷಿಣ ಪಥವನ್ನು ಆಳಿದ ಇಮ್ಮಡಿ ಪುಲಿಕೇಶಿಯ ಸಾಹಸಗಾಥೆಗಳಿಗೂ ಸಾಕ್ಷಿಯಾಗಿದೆ.

ಬಾದಾಮಿಯ ಗುಹಾಂತರ ದೇವಾಲಯಗಳು
ಬಾದಾಮಿ ಪ್ರವಾಸದ ಪ್ರಮುಖ ಆಕರ್ಷಣೆಗಳು ಇಲ್ಲಿನ ನಾಲ್ಕು ಗುಹಾಂತರ ದೇವಾಲಯಗಳು. ಈ ಗುಹೆಗಳು ಭಾರತೀಯ ರಾಕ್-ಕಟ್ (Rock-cut) ವಾಸ್ತುಶಿಲ್ಪದ ಶ್ರೇಷ್ಠ ಹಂತವನ್ನು ಪ್ರತಿನಿಧಿಸುತ್ತವೆ. ಅಜಂತಾ -ಎಲ್ಲೋರದ ಗುಹೆಗಳಿಗಿಂತ ಇವು ವಿಭಿನ್ನವಾಗಿವೆ. ಏಕೆಂದರೆ ಇಲ್ಲಿ ಪ್ರತಿ ಗುಹೆಯೂ ಸುಸಜ್ಜಿತವಾದ 'ಮುಖ ಮಂಟಪ', 'ಅರ್ಧ ಮಂಟಪ' ಮತ್ತು ಗರ್ಭಗೃಹವನ್ನು ಹೊಂದಿವೆ.
ಮೊದಲನೆಯ ಗುಹೆ: ಈ ಗುಹೆಯು ಶೈವ ಧರ್ಮಕ್ಕೆ ಅರ್ಪಿತವಾಗಿದೆ. ಇಲ್ಲಿನ 18 ಬಾಹುಗಳ ನಟರಾಜನ ಶಿಲ್ಪ ವಿಶ್ವದ ಕಲಾಪ್ರೇಮಿಗಳನ್ನು ಸೆಳೆಯುತ್ತದೆ. ಈ ಶಿಲ್ಪವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಆ ಹದಿನೆಂಟು ಕೈಗಳು ಭರತನಾಟ್ಯದ ಒಟ್ಟು 81 ವಿಭಿನ್ನ ಭಂಗಿಗಳನ್ನು ಸಂಯೋಜಿಸುತ್ತವೆ. ಇದು ಅಂದಿನ ಶಿಲ್ಪಿಗಳ ನೃತ್ಯಶಾಸ್ತ್ರದ ಜ್ಞಾನಕ್ಕೆ ನಿದರ್ಶನ. ಇದರೊಂದಿಗೆ ಹರಿಹರ, ಅರ್ಧನಾರೀಶ್ವರ ಮತ್ತು ಮಹಿಷಾಸುರಮರ್ಧಿನಿ ಕೆತ್ತನೆಗಳು ಇಲ್ಲಿನ ವೈಭವವನ್ನು ಹೆಚ್ಚಿಸಿವೆ. ಮುಖಮಂಟಪದ ಮೇಲ್ಛಾವಣಿಯಲ್ಲಿ ಕೆತ್ತಲಾಗಿರುವ ನಾಗರಾಜನ ಶಿಲ್ಪ ಚಾಲುಕ್ಯರ ಶಿಲ್ಪಕಲೆಗೆ ಹಿಡಿದ ಕೈಗನ್ನಡಿಯಂತಿದೆ.
ಎರಡು ಮತ್ತು ಮೂರನೆಯ ಗುಹೆಗಳು: ಈ ಗುಹೆಗಳು ವೈಷ್ಣವ ಧರ್ಮದ ಮೇಲಿನ ಚಾಲುಕ್ಯರ ಅಪಾರ ಶ್ರದ್ಧೆಯನ್ನು ಬಿಂಬಿಸುತ್ತವೆ. ಎರಡನೆಯ ಗುಹೆಯಲ್ಲಿ ವಿಷ್ಣುವು 'ತ್ರಿವಿಕ್ರಮ' ರೂಪದಲ್ಲಿ ಇಡೀ ಬ್ರಹ್ಮಾಂಡವನ್ನೇ ಅಳೆಯುತ್ತಿರುವ ದೃಶ್ಯ ಮತ್ತು ಭೂದೇವಿಯನ್ನು ರಕ್ಷಿಸುತ್ತಿರುವ 'ವರಾಹ'ನ ಭವ್ಯ ಮೂರ್ತಿಗಳು ಮನೋಜ್ಞವಾಗಿವೆ.
ಕಾಂತಾರದ ಯಶಸ್ಸಿನ ಹಿಂದಿದೆಯಾ ಮೂಡಗಲ್ಲು ಗುಹಾಂತರ ದೇವಾಲಯ?
ಮೂರನೆಯ ಗುಹೆಯು ಎಲ್ಲಕ್ಕಿಂತ ದೊಡ್ಡದು ಮತ್ತು ಅತ್ಯಂತ ಸುಂದರವಾದ ಕೆತ್ತನೆಗಳಿಂದ ಕೂಡಿದೆ. ಕ್ರಿಶ 578ರಲ್ಲಿ ಮಂಗಳೇಶ ರಾಜನ ಕಾಲದಲ್ಲಿ ನಿರ್ಮಿತ ಈ ಗುಹೆಯಲ್ಲಿ ವೈಕುಂಠ ವಿಷ್ಣು, ನರಸಿಂಹ ಮತ್ತು ಆದಿಶೇಷನ ಮೇಲೆ ಕುಳಿತಿರುವ ವಿಷ್ಣುವಿನ ಶಿಲ್ಪಗಳೂ ಇವೆ. ಮೇಲ್ಛಾವಣಿಯ ಫಲಕಗಳಲ್ಲಿ ಕುಬೇರ, ಇಂದ್ರ ಮತ್ತು ಸಮುದ್ರ ಮಥನದಂಥ ಪುರಾಣ ಕಥೆಗಳು ಕಲಾತ್ಮಕವಾಗಿ ಕೆತ್ತಲಾಗಿವೆ.
ನಾಲ್ಕನೆಯ ಗುಹೆ: ಈ ಗುಹೆಯು ಜೈನ ಧರ್ಮಕ್ಕೆ ಸಂಬಂಧಿಸಿದ್ದಾಗಿದ್ದು, ಮಹಾವೀರ ಮತ್ತು ಪಾರ್ಶ್ವನಾಥರ ಶಾಂತಿಯುತ ಪ್ರತಿಮೆಗಳು ನಮ್ಮ ಮನಸಿನ ಅರಿವನ್ನು ಜಾಗೃತಗೊಳಿಸುತ್ತವೆ. ಇಲ್ಲಿನ ಕಂಬಗಳ ಮೇಲೆ 12ನೆಯ ಶತಮಾನದ ಕನ್ನಡ ಶಾಸನಗಳಿವೆ. ಇದು ಈ ತಾಣದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ.

ಅಗಸ್ತ್ಯ ತೀರ್ಥ
ಬಾದಾಮಿಯ ಸೌಂದರ್ಯಕ್ಕೆ ಮುಕುಟಪ್ರಾಯ ಇಲ್ಲಿನ ಅಗಸ್ತ್ಯ ತೀರ್ಥ ಸರೋವರ. ಇದು ಚಾಲುಕ್ಯರು ನಿರ್ಮಿಸಿದ್ದ ಪ್ರಾಚೀನ ಮಳೆನೀರು ಕೊಯ್ಲು ಪದ್ಧತಿಯ ಅತ್ಯುತ್ತಮ ಮಾದರಿಯಾಗಿದೆ. ಬೆಟ್ಟದ ಸಾಲುಗಳಿಂದ ಹರಿದು ಬರುವ ಪ್ರತಿಹನಿ ಮಳೆನೀರನ್ನೂ ಈ ಕೆರೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಈ ವ್ಯವಸ್ಥೆ ಇಂದಿನ ಇಂಜಿನಿಯರ್ಗಳಿಗೂ ಮಾದರಿಯಾಗಿದೆ. ಕೆರೆಯ ಪೂರ್ವ ದಂಡೆಯ ಮೇಲೆ ನೆಲೆಸಿರುವ ಭೂತನಾಥ ದೇವಾಲಯ ಸಮೂಹವು ಸೂರ್ಯಾಸ್ತದ ಸಮಯದಲ್ಲಿ ಬಂಗಾರದ ಬಣ್ಣಕ್ಕೆ ತಿರುಗಿ ನೀರಿನ ಮೇಲೆ ಪ್ರತಿಫಲಿಸುವ ದೃಶ್ಯವು ದೈವಿಕ ಅನುಭವ ನೀಡುತ್ತದೆ. ಈ ಪರಿಸರದಲ್ಲಿ ಯಲ್ಲಮ್ಮ ದೇವಾಲಯ, ವಿರೂಪಾಕ್ಷ ದೇವಾಲಯ ಮತ್ತು ಮಾಲೆಗಿತ್ತಿ ಶಿವಾಲಯಗಳು ಚಾಲುಕ್ಯರ ವಾಸ್ತುಶಿಲ್ಪದ ವಿವಿಧ ವಿಕಾಸದ ಹಂತಗಳನ್ನು ನಮಗೆ ಪರಿಚಯಿಸುತ್ತವೆ.
ಕನ್ನಡಿಗರ ಪೌರುಷ ತಿಳಿಸುವ ಕಪ್ಪೆ ಅರಭಟ್ಟನ ಶಾಸನ
ಪ್ರತಿಯೊಬ್ಬ ಕನ್ನಡಿಗನೂ ತನ್ನ ಅಸ್ಮಿತೆಯನ್ನು ಹುಡುಕಲು ಭೇಟಿನೀಡಬೇಕಾದ ಸ್ಮಾರಕ 'ಕಪ್ಪೆ ಅರಭಟ್ಟನ ಶಾಸನ'. ಬೆಟ್ಟದ ಮೇಲೆ ಕೆತ್ತಲಾಗಿರುವ ಈ 7ನೆಯ ಶತಮಾನದ ಶಾಸನವು ಕನ್ನಡ ಸಾಹಿತ್ಯದ ಅತ್ಯಂತ ಹಳೆಯ 'ತ್ರಿಪದಿ' ಶಾಸನ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ʻಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನೀತಂ ಪರನಲ್ಲʼ ಎಂಬ ಈ ಸಾಲುಗಳು ಕನ್ನಡಿಗರ ಸೌಜನ್ಯ ಮತ್ತು ಶೌರ್ಯದ ನಡುವಿನ ಅದ್ಭುತ ಸಮತೋಲನವನ್ನು ಸಾರುತ್ತವೆ. ಅಂದು ಕಲ್ಲಿನಲ್ಲಿ ಕೆತ್ತಿದ ಈ ಅಕ್ಷರಗಳು ಇಂದಿಗೂ ಸಮಾಜಕ್ಕೆ ಮಾನವೀಯ ಮೌಲ್ಯಗಳ ದಾರಿದೀಪವಾಗಿವೆ.
ಬಾದಾಮಿಯ ಪ್ರವಾಸ ಹೋದಾಗ ಈ ಸ್ಥಳಗಳನ್ನು ಸಂದರ್ಶಿಸಿ. ಆದರೆ ಇಲ್ಲಿಗೆ ಬಾದಾಮಿ ಪ್ರವಾಸ ಮುಗಿಯಿತು ಎನ್ನುವ ಆಲೋಚನೆ ಬೇಡ. ಈ ಪ್ರವಾಸದ ಸಾರ್ಥಕತೆ ಪೂರ್ಣಗೊಳ್ಳುವುದು ಇಲ್ಲಿನ ಆಹಾರ ಪದ್ಧತಿಯಿಂದ. ಉತ್ತರ ಕರ್ನಾಟಕದ ಪ್ರಸಿದ್ಧ ಜೋಳದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ ಪಲ್ಯ ಮತ್ತು ಕೆಂಪು ಚಟ್ನಿ ಪುಡಿಯ ರುಚಿಯನ್ನು ಸವಿಯದಿದ್ದರೆ ಬಾದಾಮಿ ಯಾತ್ರೆ ಅಪೂರ್ಣವಾಗುತ್ತದೆ.
ಭೇಟಿ ನೀಡಲು ಉತ್ತಮ ಸಮಯ
ಬಾದಾಮಿಗೆ ಭೇಟಿ ನೀಡಲು ಅಕ್ಟೋಬರ್ನಿಂದ ಮಾರ್ಚ್ವರೆಗಿನ ಚಳಿಗಾಲದ ಅವಧಿ ಅತ್ಯಂತ ಸೂಕ್ತವಾದುದು. ಈ ಸಮಯದಲ್ಲಿ ಪ್ರಶಾಂತವಾದ ಗಾಳಿ ಮತ್ತು ತಿಳಿಯಾದ ಸೂರ್ಯನ ಬೆಳಕು ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.
ದಾರಿ ಹೇಗೆ?
ವಿಜಯಪುರದಿಂದ ಬಾದಾಮಿ ಗುಹಾಂತರ ದೇವಾಲಯಗಳು ಸುಮಾರು 120 ಕಿಮೀ ದೂರದಲ್ಲಿವೆ. ವಿಜಯಪುರದಿಂದ ನೇರವಾಗಿ ಸರಕಾರಿ ಬಸ್ ಸಾರಿಗೆ ಮೂಲಕ ಬಾದಾಮಿ ತಲುಪಬಹುದು. ಸ್ಥಳಿಯ ವಾಹನಗಳ ಮೂಲಕ ಪ್ರವಾಸಿ ತಾಣಕ್ಕೆ ಭೇಟಿ ನೀಡಬಹುದು. ರಾಜ್ಯದ ವಿವಿದೆಡೆಯಿಂದ ಬಾದಮಿಗೆ ನೇರ ರೈಲು ಸಂಪರ್ಕವೂ ಉತ್ತಮವಾಗಿದೆ.