ಏರ್ ಇಂಡಿಯಾ ಗ್ರಾಹಕರ ವಿಶ್ವಾಸ ಮರುಗಳಿಸಬೇಕು: ನಟರಾಜನ್ ಚಂದ್ರಶೇಖರನ್
ಕಳೆದ 18 ತಿಂಗಳುಗಳಲ್ಲಿ ಭೌಗೋಳಿಕ ರಾಜಕೀಯ ಅಸ್ಥಿರತೆಗಳು, ಇಂಧನ ಬೆಲೆಯಲ್ಲಿನ ಏರಿಳಿತಗಳು ಹಾಗೂ ವಿಮಾನ ಸುರಕ್ಷತೆಗೆ ಸಂಬಂಧಿಸಿದ ಸವಾಲುಗಳಿಂದಾಗಿ ಸಂಸ್ಥೆಯು ಕಠಿಣ ಹಂತವನ್ನು ಎದುರಿಸಿದೆ ಎಂದು ಚಂದ್ರಶೇಖರನ್ ತಿಳಿಸಿದ್ದಾರೆ.
ಏರ್ ಇಂಡಿಯಾ ಅಧ್ಯಕ್ಷರಾದ ನಟರಾಜನ್ ಚಂದ್ರಶೇಖರನ್ ಅವರು ಏರ್ ಇಂಡಿಯಾ ನೌಕರರನ್ನು ಉದ್ದೇಶಿಸಿ ಮಾತನಾಡುತ್ತಾ, ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ವಿಶ್ವಾಸವನ್ನು ಮರುಗಳಿಸುವುದು ಮತ್ತು ಕಟ್ಟುನಿಟ್ಟಾದ ಆರ್ಥಿಕ ಶಿಸ್ತನ್ನು (Cost Discipline) ಪಾಲಿಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಫೆಬ್ರವರಿಯಲ್ಲಿ ತಾವು ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ ನಂತರ ನಡೆದ ಮೊದಲ ಕಂಪೆನಿ ಮಟ್ಟದ ಸಭೆಯಲ್ಲಿ ಅವರು ಈ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಜಕಾರ್ತಾ ವಿಮಾನ ನಿಲ್ದಾಣ ಸೇರಿದಂತೆ ಐದು ಏರ್ಪೋರ್ಟ್ಗಳ ಪುನಾರಂಭ
ಕಳೆದ 18 ತಿಂಗಳುಗಳಲ್ಲಿ ಭೌಗೋಳಿಕ ರಾಜಕೀಯ ಅಸ್ಥಿರತೆಗಳು, ಇಂಧನ ಬೆಲೆಯಲ್ಲಿನ ಏರಿಳಿತಗಳು ಹಾಗೂ ವಿಮಾನ ಸುರಕ್ಷತೆಗೆ ಸಂಬಂಧಿಸಿದ ಸವಾಲುಗಳಿಂದಾಗಿ ಸಂಸ್ಥೆಯು ಕಠಿಣ ಹಂತವನ್ನು ಎದುರಿಸಿದೆ ಎಂದು ಚಂದ್ರಶೇಖರನ್ ತಿಳಿಸಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 22,000 ಕೋಟಿ ರು.ಗಳಿಗೂ ಅಧಿಕ (220 ಬಿಲಿಯನ್ ರೂ.) ದಾಖಲೆಯ ನಷ್ಟವನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ 'ಗ್ರಾಹಕರ ವಿಶ್ವಾಸ, ಕಾರ್ಯಾಚರಣೆಯ ಉತ್ಕೃಷ್ಟತೆ ಮತ್ತು ವೆಚ್ಚ ನಿಯಂತ್ರಣ'ಕ್ಕೆ ಪ್ರಮುಖ ಆದ್ಯತೆ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
ವಿಮಾನಯಾನ ರಂಗದಲ್ಲಿ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯವಿದ್ದು, ಏರ್ ಇಂಡಿಯಾದ ಸುರಕ್ಷತಾ ಮಾನದಂಡಗಳು ಜಾಗತಿಕ ಮಟ್ಟದ ಅತ್ಯುತ್ತಮ ಏರ್ಲೈನ್ಸ್ಗಳಿಗಿಂತಲೂ ಉತ್ತಮವಾಗಿರಬೇಕು ಎಂದು ಅವರು ತಿಳಿಸಿದ್ದಾರೆ. ಟಾಟಾ ಸನ್ಸ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆಗಳಿಂದ ಸುಮಾರು 10,000 ಕೋಟಿ ರು.ಗಳ ಬಂಡವಾಳ ನೆರವು ಪಡೆಯುವ ಹಂತದಲ್ಲಿರುವ ಏರ್ ಇಂಡಿಯಾ, ಹೊಸ ಸಿಇಒ ತೆವೊಲ್ಡೆ ಗೆಬ್ರೆಮರಿಯಮ್ (Tewolde Gebremariam) ಅವರ ನೇತೃತ್ವದಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.