• ಶಾಂತಾ ಜಯಾನಂದ್‌

ಹೊಸವರ್ಷದ ಆಗಮನಕ್ಕೆ ಪೇಟೆಗಳು ಸಿಂಗಾರಗೊಳ್ಳುತ್ತವೆ. ಹಳ್ಳಿಗಳಲ್ಲೂ ಹೊಸವರ್ಷ ಸ್ವಾಗತಿಸುವ ಕ್ರಮ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಹಾಡು-ನೃತ್ಯ, ಕುಡಿತ-ಕುಣಿತ, ಮದ್ಯರಾತ್ರಿ ಹನ್ನೆರಡಕ್ಕೆ ಕೇಕ್ ಕತ್ತರಿಸುವುದು, ದೀಪ ನಂದಿಸಿ ಬೆಳಗಿಸುವುದು ಹೀಗೆ ಪಾಶ್ಚಾತ್ಯ ಸಂಸಕೃತಿಗೆ ನಾವು ಆತುಕೊಂಡಿದ್ದೇವೆ. ಇಷ್ಟೆಲ್ಲದರ ನಡುವೆ ಹೊಸ ವರ್ಷದ ದಿನವನ್ನು ಮೌನವಾಗಿ ಆಚರಿಸುವ ದೇಶವೂಂದಿದೆ. ಅದೇ ನಾವು ಇತ್ತೀಚೆಗೆ ಭೇಟಿ ಕೊಟ್ಚ ಇಂಡೋನೇಷ್ಯದ ಬಾಲಿ ದ್ವೀಪ. ಇಲ್ಲಿ ಒಂದು ದಿನ ಅಂದರೆ ಇಪ್ಪತ್ನಾಲ್ಕು ಗಂಟೆಗಳ ಕಾಲ ಪೂರ್ತಿ ಮೌನವಾಗಿ ಆಚರಿಸಲಾಗುತ್ತದೆ. ಇದನ್ನು (Nyepi) ನೈಪಿ ಮೌನದಿನಾಚರಣೆ ಎಂದು ಕರೆಯಲಾಗುತ್ತದೆ.

ಪ್ರತಿವರ್ಷ ಮಾರ್ಚ್‌ 29ರಂದು ಬಾಲಿಯನ್ನರಿಗೆ ಹೊಸವರ್ಷ. ಬೆಳಗಿನ ಆರುಗಂಟೆಗೆ ಆರಂಭವಾಗುವ ಈ ಮೌನ ಮಾರನೆಯ ದಿನ ಬೆಳಗ್ಗೆ ಆರುಗಂಟೆಯವರೆಗೂ ಮುಂದುವರೆಯುತ್ತದೆ.

ಇದನ್ನೂ ಓದಿ: ಹಿರೋಶಿಮಾ ನೆಲದಲ್ಲೀಗ ಶಾಂತಿಯ ದಿಗ್ವಿಜಯ

ಮೌನ ದ್ವೀಪ ನೋ ಮೋರ್‌ ವಿದ್ಯುತ್‌ ದೀಪ

ನೈಪಿಯ ದಿನದಂದು ಇಡೀ ದ್ವೀಪದವರು ಯಾರು ಎಲ್ಲಿಯೂ ಪ್ರಯಾಣ ಮಾಡುವಂತಿಲ್ಲ. ಯಾವುದೇ ವಾಹನಗಳು ಒಡಾಡುವಂತಿಲ್ಲ. ಅಲ್ಲಿಯ ಪ್ರಜೆಗಳು ಮಾತ್ರವಲ್ಲ ಅಲ್ಲಿಗೆ ಹೋದವರೂ ಯಾವುದೇ ಕೆಲಸವನ್ನೂ ಮಾಡುವಂತೆಯೇ ಇಲ್ಲ. ಮನರಂಜನೆಯ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸಲಾಗುತ್ತದೆ. ಇನ್ನು ಮುಖ್ಯ ವಿಷಯವೆಂದರೆ ವಿದ್ಯುತ್ ದೀಪಗಳನ್ನೂ ಬೆಳಗಿಸುವಂತಿಲ್ಲ. ಎಲ್ಲೆಲ್ಲೂ ಮೌನ ಸಾಮ್ರಾಜ್ಯ, ನನಗಂತೂ ಈ ಪರಿಕಲ್ಪನೆಯೇ ಎಷ್ಚು ಚೆಂದ ಅನಿಸಿತು.

Untitled design (48)

ಈ ದ್ವೀಪದ ಹೊಸವರ್ಷ ಹಿಂದೂ ಕ್ಯಾಲೆಂಡರಿನಂತೆ

ವಿಶೇಷವೆಂದರೆ ಇದು ಹಿಂದೂಗಳ ದ್ವೀಪ. ಹಿಂದೂ ಧರ್ಮದ ದೇವರುಗಳನ್ನು ಇವರು ಮುಖ್ಯವಾಗಿ ಆರಾದಿಸುತ್ತಾರೆ. ನಮ್ಮ ದೇಶದ ಹಿಂದೂಗಳಂತೆಯೇ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಸೃಷ್ಟಿ, ಸ್ಥಿತಿ, ಲಯ ಕರ್ತರನ್ನಾಗಿ ನಂಬುತ್ತಾರೆ. 13ನೆಯ ಶತಮಾನದಲ್ಲಿ ಮಾರ್ಕಂಡೆಯ ಮಹಾಮುನಿ ಇಲ್ಲಿಗೆ ಬಂದು ಹಿಂದೂ ಧರ್ಮವನ್ನು ಸ್ಥಾಪಿಸಿದರೆಂದು ಅಲ್ಲಿನ ಗೈಡ್ ನಮಗೆ ತಿಳಿಸಿದರು. ಅಲ್ಲಿನ ಜನ ಹೊಸವರ್ಷದಂದು ಯಾರು ಮನೆಬಿಟ್ಟು ಹೊರಬರುವಂತಿಲ್ಲ. ಜನವರಿ 1ರಂದು ಅವರು ಹೊಸವರ್ಷ ಆಚರಿಸುವುದಿಲ್ಲ ಬದಲಿಗೆ ಅವರದೇ ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸವರ್ಷವನ್ನು ಆಚರಿಸುತ್ತಾರೆ.

ಅವರ ನೈಪಿ ದಿನದಂದು ಈ ಆಚರಣೆ ನೆಡೆಸಲು ಸಹಾಯಕವಾಗುವಂತೆ ʻಪೆಕಲಾಂಗ್ʼ ಎಂದು ಕರೆಯುವ ಗಸ್ತು ಸಿಬ್ಬಂದಿ ಇರುತ್ತಾರೆ.

ಬಾಲಿಯಲ್ಲಿ ನೈಪಿ ಆರಂಭವಾಗುವ ಮೊದಲು ಹಿಂದೂಗಳು ಮೆರವಣಿಗೆಯನ್ನು ನೆಡೆಸುತ್ತಾರೆ. ಇದರಲ್ಲಿ ರಾಕ್ಷಸರ ಪ್ರತಿಮೆಯನ್ನು ಕೊಂಡೊಯ್ಯವುದು ಇವರ ಸಂಪ್ರದಾಯ. ಇದು ಬರುವ ವರ್ಷಕ್ಕೆ ಶಕ್ತಿಯನ್ನು ನೀಡುತ್ತದೆ ಎಂಬುದು ಇವರ ನಂಬಿಕೆ.

ನೈಪಿಯಂದು ಯಾವುದೇ ದೇಶದ ಪ್ರವಾಸಿಗರು ಅಲ್ಲಿ ಇದ್ದರೂ ಅವರೂ ಮೌನವಾಗಿ ತಾವು ಉಳಿದಲ್ಲಿಯೇ ಇರಬೇಕು. ಯಾವುದೇ ಸಾರಿಗೆ ಸಂಪರ್ಕ ಇರುವುದಿಲ್ಲ. ಅವರು ಉಳಿದಲ್ಲಿಯೇ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಶುದ್ದ ʻಮೌನ-ಧ್ಯಾನʼ ಮಾಡಲು ಇಡೀ ದಿನ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವುದರಿಂದ ಪ್ರಕೃತಿ ಪುನಃಚೈತನ್ಯ ಪಡೆಯುತ್ತದೆ ಎಂಬುದು ಇವರ ನಂಬಿಕೆ.

Untitled design (47)

ಇದರ ವಿಶಿಷ್ಚ ಸಂಸ್ಕೃತಿಯ ಬಗ್ಗೆ ಕೇಳಿದ್ದ ನನಗೆ, ʻನೈಪಿʼಯಲ್ಲೇ ಇಲ್ಲಿಗೆ ಪ್ರವಾಸ ಬರಬೇಕೆನಿಸಿತು. ನಮ್ಮ ಮಾರ್ಗ ದರ್ಶಕಿ ʻಆಯುʼವನ್ನು ಈ ಕುರಿತು ಕೇಳಿದಾಗ ಅವಳು ಬಹಳಷ್ಟು ಪ್ರವಾಸಿಗರು ನೈಪಿ ಆಚರಿಸಲೆಂದೇ ಬರುತ್ತಾರೆ ಮೊದಲೇ ರೂಮ್‌, ರೆಸಾರ್ಟ್‌ಗಳು ಬುಕ್ ಆಗಿಬಿಡುತ್ತವೆ ಎಂದು ತಿಳಿಸಿದಳು. ಪ್ರವಾಸಿಗರೂ ರೂಮ್‌ಗಳಲ್ಲಿ ಕುಳಿತು ಮೌನ-ಧ್ಯಾನವನ್ನು ಆಚರಿಸಬೇಕಾಗುತ್ತದೆ. ಮೊಬೈಲ್ ಯಾವ ಕಾರಣಕ್ಕೂ ಉಪಯೋಗಿಸುವಂತಿಲ್ಲ. ಲ್ಯಾಪ್‌ಟಾಪ್, ಟಿವಿ ಆನ್ ಮಾಡುವಂತಿಲ್ಲ. ನೈಪಿ ಆಚರಣೆಗೆಂದೇ ಬರುವ ಪ್ರವಾಸಿಗರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಡುತ್ತಾರೆ. ಇಡೀ ದ್ವೀಪದ ಮೌನವನ್ನು ಅನುಭವಿಸುತ್ತಾ ಹಸಿರು ಗಿಡ- ಬಳ್ಳಿ, ಅಳಿಲು, ಪಕ್ಷಿಗಳ ಕಲರವ ಆಲಿಸುತ್ತಾ ಕಡಲ ಕಿನಾರೆಯಲ್ಲಿ ಮೌನವಾಗಿ ಕುಳಿತು ಪ್ರಕೃತಿಯೊಂದಿಗಿದ್ದು ಜೀವವನ್ನು ಪುನಃಶ್ಚೇತನಗೊಳಿಸಬಹುದು. ಮುಂದೆ ಬಾಲಿಗೆ ಬರುವ ಅವಕಾಶ ಸಿಕ್ಕರೆ ʻನೈಪಿʼ ದಿನವೇ ಹೋಗಬೇಕು ಎಂದು ಮನಸು ನಿರ್ಧರಿಸಿದೆ. ನೀವು ಹೋಗಿಬನ್ನಿ ನೈಪಿಯಂದು.