ಕಲ್ಪತರು ನಾಡಿನ ಆಹಾರದ ರುಚಿ
ಬನಶಂಕರಿ 6ನೇ ಹಂತದಲ್ಲಿರುವ ತುರಹಳ್ಳಿ ಫಾರೆಸ್ಟ್ ಸಮೀಪದಲ್ಲೇ ಇರುವ ʻದಿ ರಂಗವಿಲಾಸ್ ಕೆಫೆʼಗೆ ನೀವು ಎಂದಾದರೂ ಭೇಟಿನೀಡಿದ್ದೀರಾ? ಕಲ್ಪತರು ನಾಡಿನ ಶುಚಿ ರುಚಿಯಾದ ಆಹಾರಗಳ ಜತೆಗೆ ಆಹಾರ ಪ್ರಿಯರಿಗಾಗಿ ಎಲ್ಲಾ ಬಗೆಯ ತಿಂಡಿ ತಿನಿಸುಗಳಲ್ಲೂ ಆಯ್ಕೆಗಳು ಇಲ್ಲಿವೆ. ತುರಹಳ್ಳಿ ಸುತ್ತಾಡಿ ಬಂದರೆ ತಪ್ಪದೆ ಈ ಕೆಫೆಗೊಂದು ವಿಸಿಟ್ ಮಾಡಿ.
ಒಮ್ಮೊಮ್ಮೆ ಬೇಡವೆಂದು ಅದೆಷ್ಟು ಬಾರಿ ಅಂದುಕೊಂಡರೂ ಕೆಲವು ಪ್ರದೇಶಗಳ ಆಹಾರಗಳ ಮೋಡಿಗೆ ಒಳಗಾಗಿ ಬಿಡುತ್ತೇವೆ. ಪ್ರವಾಸದ ನಡುವೆ ಸವಿದ ಅದೇ ಸ್ವಾದಕ್ಕಾಗಿ ಮತ್ತೆ ಹುಡುಕಾಟ ನಡೆಸುತ್ತೇವೆ. ಅಂಥ ಅನುಭವದಿಂದ ನಾನೂ ಹೊರತಾಗಿಲ್ಲ. ಕಲ್ಪತರುಗಳ ನಾಡು ಎಂದೇ ಹೆಸರಾಗಿರುವ ತಿಪಟೂರಿಗೆ ಭೇಟಿ ನೀಡಿದ್ದಾಗ ತಿಂದಿದ್ದ ಆಹಾರ ಪದಾರ್ಥಗಳ ರುಚಿ ಇಂದಿಗೂ ನೆನಪಿಗೆ ಬಂದು ಬೆಂಗಳೂರಿನಲ್ಲಿ ಆ ರುಚಿ ನೀಡಬಲ್ಲ ಆಹಾರ ಕೇಂದ್ರ ಎಲ್ಲಿದೆ ಎಂದು ಹುಡುಕಾಡುತ್ತಲೇ ಇರುತ್ತೇನೆ. ಆ ಸ್ವಾದ, ಆ ರುಚಿಯನ್ನು ಮೀರುವಂಥ ಮಲೆನಾಡಿನ ಖಾದ್ಯಗಳು ಈಗ ಬೆಂಗಳೂರಿನಲ್ಲೂ ಲಭ್ಯವಿದೆ.
ರವೀಂದ್ರ ಅವರ ಕನಸಿನ ಕೂಸು

ಬನಶಂಕರಿಯಲ್ಲಿ ಸಿಗುವಷ್ಟು ಆಹಾರ ಕೇಂದ್ರಗಳು, ಹೊಟೇಲ್, ರೆಸ್ಟೋರೆಂಟ್ಗಳು ಬೇರೆಲ್ಲೂ ಸಿಗುವುದೇ ಇಲ್ಲವೇನೋ. ಅಷ್ಟರಮಟ್ಟಿಗೆ ವಿಶೇಷ ರುಚಿಯನ್ನು ನೀಡುವ ವಿಭಿನ್ನ ಶೈಲಿಯ ಫುಡ್ ಸೆಂಟರ್ಗಳು ಬನಶಂಕರಿಯ ಮೂಲೆ ಮೂಲೆಯಲ್ಲೂ ತಲೆಎತ್ತಿವೆ. ಅಂಥ ಹೊಟೇಲ್ಗಳ ಪೈಕಿ ಸದ್ಯ ಸುದ್ದಿಯಲ್ಲಿರುವುದು ʻದಿ ರಂಗವಿಲಾಸ್ ಕೆಫೆʼ. ಖುದ್ದು ಆಹಾರ ಪ್ರಿಯನಾಗಿರುವ ರವೀಂದ್ರ ಎಂಬುವವರು ಇದರ ಮಾಲೀಕರಾಗಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ದಿ ರಂಗವಿಲಾಸ್ ಕೆಫೆಯನ್ನು ಗ್ರಾಹಕರಿಗೆ ಮುಕ್ತವಾಗಿಸಿದ್ದಾರೆ.
ರುಚಿಕರ ಆಹಾರಕ್ಕಾಗಿ ಹುಡುಕಾಡುವ ಇಂದಿನ ಜನತೆ ಅಚ್ಚುಕಟ್ಟಾದ ತಿಪಟೂರು ಶೈಲಿಯ ಆಹಾರವನ್ನು ಸವಿಯುವ ಅವಕಾಶ ಸಿಕ್ಕರೆ ಸುಮ್ಮನಿರಲು ಹೇಗೆ ಸಾಧ್ಯ?. ವಾರಾಂತ್ಯಕ್ಕಷ್ಟೇ ಸೀಮಿತವಾಗಿರದೆ ನಿತ್ಯವೂ ಇಲ್ಲಿ ಸಾವಿರಾರು ಗ್ರಾಹಕರು ಭೇಟಿ ನೀಡುತ್ತಾರೆ. ಪ್ರತಿ ದಿನ ಬೆಳಗ್ಗೆ 6:30 ರಿಂದ ರಾತ್ರಿ 10:30ರ ವರೆಗೂ ಗ್ರಾಹಕರಿಗೆ ಉತ್ತಮ ಆಹಾರದ ಜತೆಗೆ ತ್ವರಿತಗತಿಯ ಸೇವೆ ನೀಡುವ ಇಲ್ಲಿನ ಸಿಬ್ಬಂದಿಯನ್ನು ಮೆಚ್ಚಿಕೊಳ್ಳದವರೇ ಇಲ್ಲ.
ಹಬೆ ವಡೆ, ರಾಗಿ ಹಾಲು ಬಾಯಿ ಮಿಸ್ ಮಾಡದಿರಿ

ಕಲ್ಪತರುಗಳ ನಾಡಿನ ವಿಭಿನ್ನ ಶೈಲಿಯ ಹಬೆ ವಡೆ ಹಾಗೂ ಗಸಗಸೆಯ ಹಾಲಿಗೆ ಇಲ್ಲಿ ಹೆಚ್ಚಿನ ಬೇಡಿಕೆಯಿದೆ. ಇಡ್ಲಿ, ವಡೆ ಸಾಂಬಾರ್ಗಿಂತಲೂ ಹೆಚ್ಚಾಗಿ ಇಲ್ಲಿ ವ್ಯಾಪಾರವಾಗುವುದು ಯುನಿಕ್ ಬ್ರೇಕ್ ಫಾಸ್ಟ್. ಅವರೆಬೇಳೆ ಖಾರಾ ಬಾತ್, ಪಡ್ಡು, ಅಕ್ಕಿ ಒತ್ತು ಶ್ಯಾವಿಗೆ, ರಾಗಿ ಒತ್ತು ಶ್ಯಾವಿಗೆ, ಶ್ಯಾವಿಗೆ ಬಾತ್, ಮಶ್ರೂಮ್ ಧಮ್ ಬಿರಿಯಾನಿ, ಮಂಗಳೂರು ಬನ್ಸ್, ಜತೆಗೆ ಪೂರಿ ಸಾಗುವಿಗಂತೂ ಇಲ್ಲಿ ಗ್ರಾಹಕರು ಸಾಲುಗಟ್ಟಿ ನಿಲ್ಲುತ್ತಾರೆ. ಇಲ್ಲಿಗೆ ಭೇಟಿ ನೀಡುವವರು ರುಚಿಕರ ಹಾಗೂ ಆರೋಗ್ಯಕರವಾದ ರಾಗಿ ಹಾಲುಬಾಯಿ ತಿನ್ನದೇ ಹೋಗಲು ಸಾಧ್ಯವೇ ಇಲ್ಲ.
ಇಲ್ಲಿ ಬರಿಯ ತಿಪಟೂರಿನ ಖಾದ್ಯಗಳಷ್ಟೇ ಸಿಗುವುದು ಅಂದುಕೊಳ್ಳಬೇಡಿ. ಅದಕ್ಕೆ ಹೊರತಾಗಿ ಸೌತ್ ಇಂಡಿಯನ್, ಚೈನೀಸ್, ಚಾಟ್ಸ್, ಜ್ಯೂಸ್, ಐಸ್ ಕ್ರೀಮ್ಸ್ ಹಾಗೂ ಮಾಕ್ಟೇಲ್ಸ್ ಸಹ ಲಭ್ಯವಿದೆ. ವಿಶೇಷವೆಂದರೆ ಖುದ್ದು ಹೊಟೇಲ್ ಮಾಲೀಕರೇ ಆಹಾರ ತಯಾರಿಕೆಯಲ್ಲಿ ಮುಂದಾಳತ್ವ ವಹಿಸುತ್ತಾರೆ, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾರೆ. ಅಲ್ಲದೆ ಮಾಲೀಕನೆಂದು ಕೈಕಟ್ಟಿ ಕೂರದೆ, ಗ್ರಾಹಕರೊಂದಿಗೆ ಬೆರೆತು, ಅವರ ಬೇಕು ಬೇಡಗಳನ್ನು ವಿಚಾರಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಗ್ರಾಹಕರಿಗೆ ಆರೋಗ್ಯಕರ ಮನೆಯೂಟದ ಅನುಭವ ನೀಡುವ ಮೂಲಕ ಶುಚಿ, ರುಚಿಗೆ ಆದ್ಯತೆ ನೀಡುವ ದಿ ರಂಗವಿಲಾಸ್ ಕೆಫೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ಸುದ್ದಿಯಲ್ಲಿದ್ದು, ತಡಮಾಡದೇ ನೀವೂ ಒಮ್ಮೆ ಇಲ್ಲಿಗೆ ಭೇಟಿ ನೀಡಿ. ಇಲ್ಲಿ ಸಿಗುವ ಆಹಾರದ ಮೋಡಿಗೆ ಮಾರುಹೋಗುತ್ತೀರಿ.

ಅನೇಕ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊಟೇಲ್ ಉದ್ಯಮಕ್ಕೆ ಇಳಿಯಬೇಕು ಎಂಬುದು ನನ್ನ ಬಹು ದಿನಗಳ ಕನಸಾಗಿತ್ತು. ಆದರೆ ಎಲ್ಲಕಡೆಯೂ ಸಿಗುವ ತಿನಿಸುಗಳೇ ಆಗದೆ ಗ್ರಾಹಕರಿಗೆ ಹೊಸತನವನ್ನು ನೀಡಬೇಕೆಂಬ ಕಾರಣಕ್ಕೆ ನನ್ನ ಹುಟ್ಟೂರಾದ ತಿಪಟೂರಿನ ಆಯ್ದ ಆಹಾರ ಪದಾರ್ಥಗಳನ್ನು ನಮ್ಮ ಹೊಟೇಲ್ನಲ್ಲಿ ಗ್ರಾಹಕರಿಗಾಗಿ ಪರಿಚಯಿಸಿದೆ. ಅವುಗಳ ಪೈಕಿ ಹಬೆ ವಡೆ ಹಾಗೂ ಗಸಗಸೆಯ ಹಾಲು ಸವಿದ ಗ್ರಾಹಕರು ಮೆಚ್ಚಿಕೊಂಡು, ಮತ್ತೆ ಮತ್ತೆ ಬರುತ್ತಾರೆ. ಅವನ್ನು ಟೇಸ್ಟ್ ಮಾಡುವುದಕ್ಕಾಗಿಯೇ ಬೆಂಗಳೂರಿನ ಎಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಹಾರ ಪ್ರಿಯರು ಇಲ್ಲಿಗೆ ಬರುತ್ತಾರೆ. ಹೊಟೇಲ್ ಮಾಲೀಕನಾದವನಿಗೆ ಇದಕ್ಕಿಂತ ಖುಷಿಯ ವಿಚಾರವೇನಿರಲು ಸಾಧ್ಯ ? ಗ್ರಾಹಕರ ಪ್ರತಿಕ್ರಿಯೆಯನ್ನು ಕಂಡಮೇಲಂತೂ ಬೆಂಗಳೂರಿನಲ್ಲೀಯೇ ಇನ್ನೊಂದು ಶಾಖೆಯನ್ನು ತೆರೆದರೆ ಹೇಗೆ ಎಂಬ ಯೋಚನೆ ಶುರುವಾಗಿದೆ.
- ರವೀಂದ್ರ, ಮಾಲೀಕರು, ದಿ ರಂಗವಿಲಾಸ್ ಕೆಫೆ
ವಿಳಾಸ:
#623, 100 ಅಡಿ ರಸ್ತೆ, 5ನೇ ಬ್ಲಾಕ್, ಬಿಎಸ್ಕೆ 6ನೇ ಹಂತ, ಬೆಂಗಳೂರು - 560 062.