• ಮಂಜುನಾಥ ಡಿ. ಎಸ್.

ನೇಪಾಳದ ಪೋಖ್ರ ನಗರದ ಮುಖ್ಯ ರಸ್ತೆಯಲ್ಲಿ ಶಿಖರದಲ್ಲಿ ಶಿವನ ಪ್ರತಿಮೆ ಇರುವ ಬೌದ್ಧ ವಾಸ್ತುವಿನ್ಯಾಸದ ದ್ವಾರವಿದೆ. ಇದು ಗುಪ್ತೇಶ್ವರ್ ಮಹಾದೇವ ಗುಹೆಗೆ ಹೋಗುವ ಮಾರ್ಗದ ದ್ವಾರ. ದ್ವಾರವನ್ನು ಪ್ರವೇಶಿಸಿ ಸಣ್ಣ ಗಲ್ಲಿಯಲ್ಲಿ ಸ್ವಲ್ಪ ದೂರ ಸಾಗಿದರೆ ಬಲಭಾಗದಲ್ಲಿ ವೃತ್ತಾಕಾರದ ಆಕರ್ಷಕ ಕಟ್ಟಡ ಕಾಣಸಿಗುತ್ತದೆ. ಈ ಕಟ್ಟಡದಲ್ಲಿನ ಸುರುಳಿ ಸುತ್ತಿದಂತೆ ಮೆಟ್ಟಿಲುಗಳಿವೆ. ಇವು ನಾವೀಗ ಮಾತನಾಡುತ್ತಿರುವ ಗುಹೆಗೆ ಕರೆದೊಯ್ಯುತ್ತವೆ. ಮೆಟ್ಟಲುಗಳ ಬದಿಯ ಗೋಡೆಗಳ ಮೇಲೆ ಸಮುದ್ರ ಮಂಥನ ಸೇರಿ ಹಲವಾರು ಪೌರಾಣಿಕ ಪ್ರಸಂಗಗಳನ್ನು ಚಿತ್ರಿಸಿದ್ದಾರೆ. ಹಲವಾರು ದೇವತೆಗಳ ಸುಂದರ ಮೂರ್ತಿಗಳನ್ನೂ ಸ್ಥಾಪಿಸಿದ್ದಾರೆ. ಇವುಗಳನ್ನು ಕಣ್ತುಂಬಿಕೊಳ್ಳುತ್ತಾ ಮೆಟ್ಟಿಲುಗಳಲ್ಲಿ ಇಳಿದರೆ ಗುಹೆಯ ಪ್ರವೇಶ ದ್ವಾರ ಸಿಗುತ್ತದೆ.

ಇದನ್ನೂ ಓದಿ: ಮೈ ಚಳಿ ಬಿಡಿಸಿದ ವಿಮಾನ ಯಾನ

ನಿರಂತರ ಜಿನುಗುತ್ತಿರುವ ನೀರಿನ ಹನಿಗಳಿಂದ ಗುಹೆಯ ನೆಲ ಸದಾ ಒದ್ದೆಯಾಗಿರುತ್ತದೆ. ಆದ್ದರಿಂದ ಜಾರದಂತೆ ಎಚ್ಚರವಹಿಸಿ ಜಾಗ್ರತೆಯಿಂದ ಹೆಜ್ಜೆ ಇಡಬೇದು. ಆಗಾಗ ಮೈಮೇಲೆ ಬೀಳುವ ನೀರಿನ ಹನಿಗಳು ಅಂಗಿಯನ್ನು ತೇವವಾಗಿಸುತ್ತವೆ. ವಿದ್ಯುತ್ ದೀಪದ ಬೆಳಕಿನಲ್ಲಿ ಕಡಿದಾದ ಮೆಟ್ಟಿಲುಗಳನ್ನಿಳಿದರೆ ಗುಪ್ತೇಶ್ವರ್ ಮಹಾದೇವನ ದರ್ಶನವಾಗುತ್ತದೆ. ಇದೊಂದು ಸುಣ್ಣಕಲ್ಲಿನ ಶಿವಲಿಂಗವಾಗಿದ್ದು, ನಿರಂತರವಾಗಿ ಬೆಳೆಯುತ್ತಿದೆ ಎಂಬುದು ಶ್ರದ್ಧಾಳುಗಳ ಮಾತು. ಈ ಮಹಾದೇವನಿಗೆ ಪೂಜೆ ಸಲ್ಲಿಸಿ ಮುಂದುವರೆಯುವುದು ಇಲ್ಲಿನ ಪದ್ಧತಿಯಾಗಿದೆ.

Untitled design - 2026-03-09T163022.554

ಪಾದರಕ್ಷೆಗಳನ್ನು ಕಳಚಿಟ್ಟು ದೇವರ ಸನ್ನಿಧಿಗೆ ತೆರಳುವಾಗ ಪಾದಗಳು ಮರಗಟ್ಟಿದ ಅನುಭವವಾಗುತ್ತದೆ. ದರ್ಶನ ಮುಗಿದ ನಂತರ ಒದ್ದೆ ಕಾಲಿಗೆ ಪಾದರಕ್ಷೆಗಳನ್ನು ಧರಿಸಿಕೊಂಡು ಮುಂದೆ ಸಾಗುವಾಗ ಸ್ವಲ್ಪ ಇರುಸು ಮುರುಸು ಎನಿಸುತ್ತದೆ. ದಾರಿ ಕಿರಿದಾಗುವುದರಿಂದ ಒಬ್ಬೊಬ್ಬರೇ ನುಸುಳಿಕೊಂಡು ಅನತಿ ದೂರ ಕ್ರಮಿಸಬೇದು. ಎದುರಿನಿಂದ ಯಾರಾದರೂ ಬರುತ್ತಿದ್ದರೆ ಕಾದು ಮುಂದುವರೆಯುವುದು ಉತ್ತಮ.

ಮುಂದೆ ಗುಹೆ ವಿಶಾಲವಾಗುತ್ತದೆ. ಸುಣ್ಣಕಲ್ಲಿನ ನಾನಾ ಬಗೆಯ ನೈಸರ್ಗಿಕ ರಚನೆಗಳು ಗಮನ ಸೆಳೆಯುತ್ತವೆ. ಕೆಲವು ಪ್ರವಾಸಿಗರು ಅವುಗಳ ಹಿ ಜತೆಗೆ ಫೊಟೋ ತೆಗೆಸಿಕೊಳ್ಳುತ್ತಿದ್ದರೆ ಮತ್ತೆ ಕೆಲವರು ಆ ರಚನೆಗಳ ಚಿತ್ರಗಳನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿಯುತ್ತಿದ್ದರು.

ಕಬ್ಬಿಣದಿಂದ ಮಾಡಿದ ಹಾಗು ಕಡಿದಾದ ಸುಮಾರು ಇಪ್ಪತ್ತು ಮೆಟ್ಟಿಲುಗಳನ್ನು ಇಳಿದರೆ ಚಪ್ಪಟೆಯಾದ ಚಿಕ್ಕ ಜಾಗ ಸಿಗುತ್ತದೆ. ಇಲ್ಲಿ ನಿಂತು ಇಣುಕಿದಾಗ ಡೇವಿಸ್ ಜಲಪಾತದಿಂದ ಹರಿದು ಬರುವ ಸಪೂರ ಜಲಧಾರೆಯ ನೋಟ ಕಾಣಸಿಗುತ್ತದೆ. ಈ ದೃಶ್ಯವನ್ನು ನೋಡಲು ಪ್ರವಾಸಿಗರು ಸಾಕಷ್ಟು ಪ್ರಯಾಸ ಪಟ್ಟು ಇಲ್ಲಿಗೆ ಬರುತ್ತಾರೆ. ಸಣ್ಣ ಝರಿಯೊಂದನ್ನು ನೋಡಲು ಇಷ್ಟು ಕಷ್ಟ ಪಡಬೇಕೆ ಎಂದು ಕೆಲವರಿಗೆ ಅನಿಸಲೂ ಬಹುದು. ಅದು ಅವರವರ ಭಾವಕ್ಕೆ ಸಂಬಂಧಿಸಿದ್ದು.

Untitled design - 2026-03-09T162700.544

ಗುಪ್ತೇಶ್ವರ್‌ ಮಹಾದೇವ ಗುಹೆಗೆ ಹಲವಾರು ಐತಿಹ್ಯಗಳಿವೆ. ಶತಮಾನಗಳ ಹಿಂದೆ ಕುರಿಗಾಹಿಯೊಬ್ಬ ಇಲ್ಲಿ ಹುದುಗಿದ್ದ ಕಲ್ಲಿನ ನೈಸರ್ಗಿಕ ಶಿವಲಿಂಗವನ್ನು ನೋಡಿದ. ಆದ್ದರಿಂದ ಇದಕ್ಕೆ ಗುಪ್ತೇಶ್ವರ್ ಎಂಬ ಹೆಸರು ಬಂದಿತು ಎನ್ನಲಾಗಿದೆ. ಅಲ್ಲದೆ, ಈ ಗುಹೆ ಹಿಂಧೂಗಳ ಪವಿತ್ರ ಸ್ಥಳವಾಗಳು ಇದು ಕಾರಣವಾಗಿದೆ.

ದಂಡಕ ಅರಣ್ಯದಲ್ಲಿ ವಾಸವಾಗಿದ್ದಾಗ ಸ್ವತಃ ಶ್ರೀರಾಮಚಂದ್ರನೇ ಈ ಶಿವಲಿಂಗವನ್ನು ಅರ್ಚನೆ ಮಾಡಿ ಪೂಜಿಸಿದ್ದ ಎಂಬ ಪ್ರತೀತಿ ಇಲ್ಲಿದೆ. ಇದನ್ನು ಭಕ್ತಿಯಿಂದ ಪೂಜಿಸುವುದರಿಂದ ಮನದಲ್ಲಿನ ಆಸೆಗಳು ಈಡೇರುವುದೆಂದೂ ನಂಬಲಾಗಿದೆ. ಆಧ್ಯಾತ್ಮಿಕ ಮತ್ತು ನೈಸರ್ಗಿಕ ಕಾರಣಗಳಿಂದ ವೀಕ್ಷಕರನ್ನು ತನ್ನತ್ತ ಸೆಳೆಯುವ ಗುಪ್ತೇಶ್ವರ್ ಮಹಾದೇವ ಗುಹೆ ನೇಪಾಳದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.