ಹೊಸ ವರ್ಷದ ಆರಂಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ಹೊಸ ಉತ್ಸಾಹ, ಹೊಸ ಚೈತನ್ಯ ಮತ್ತು ಹೊಸ ದಿಕ್ಕು ಪಡೆದುಕೊಂಡಿದೆ. ಕೋವಿಡ್ ನಂತರದ ಸವಾಲುಗಳನ್ನು ಮೀರಿ, ಕಳೆದ ಕೆಲವು ವರ್ಷಗಳಿಂದ ನಿಧಾನವಾಗಿ ಚೇತರಿಸಿಕೊಂಡಿದ್ದ ಪ್ರವಾಸೋದ್ಯಮ ಕ್ಷೇತ್ರ ಇದೀಗ ಸಂಪೂರ್ಣವಾಗಿ ಚುರುಕುಗೊಂಡಿರುವುದು ಸಂತಸದ ಸಂಗತಿ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹೊಸ ಉತ್ಸವಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಕೆಎಸ್‌ಟಿಡಿಸಿ (KSTDC) ಸಹಯೋಗದೊಂದಿಗೆ ಜಾರಿಯಾಗಿರುವ ಹೊಸ ಯೋಜನೆಗಳು ಕರ್ನಾಟಕ ಪ್ರವಾಸೋದ್ಯಮವನ್ನು ಕಣ್ಣರಳಿಸಿ ನೋಡುವಂತೆ ಮಾಡುತ್ತಿವೆ. ಅದರಲ್ಲೂ ಕರಾವಳಿ ಪ್ರವಾಸೋದ್ಯಮದ ಕುರಿತಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ದನಿಯೆತ್ತಿ ಮಾತನಾಡಿರುವುದು, ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತಯಾರಿಸುವ ಬಗ್ಗೆ ಮಾತನಾಡಿರುವುದು ಹೊಸ ಹುಮ್ಮಸ್ಸು ಕೊಟ್ಟಂತಾಗಿದೆ. ವೈವಿಧ್ಯಮಯ ರಾಜ್ಯವಾಗಿರುವ ಕರ್ನಾಟಕದಲ್ಲಿ ಜಿಲ್ಲಾವಾರು ಪ್ರವಾಸೋದ್ಯಮ ನೀತಿ ತಯಾರಿಸಿದರೂ ಸ್ವಾಗತಾರ್ಹವೇ.

ಇದನ್ನೂ ಓದಿ: ಕಾಡಿನ ಬಾಗಿಲು ಮುಚ್ಚಿಸಿದ ಹುಲಿರಾಯ!

ಕರ್ನಾಟಕ ಪ್ರವಾಸೋದ್ಯಮದ ದೊಡ್ಡ ಶಕ್ತಿ ಇರುವುದು ಅದರ ವೈವಿಧ್ಯದಲ್ಲಿ. ಕರಾವಳಿಯ ಸಮುದ್ರ ತೀರಗಳು, ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳು, ಐತಿಹಾಸಿಕ ಸ್ಮಾರಕಗಳು, ವಿಶ್ವಪಾರಂಪರಿಕ ತಾಣಗಳು, ವನ್ಯಜೀವಿ ಉದ್ಯಾನಗಳು, ಧಾರ್ಮಿಕ ಕ್ಷೇತ್ರಗಳು—ಎಲ್ಲವೂ ಒಂದೇ ರಾಜ್ಯದಲ್ಲಿ ಇರುವ ಅಪರೂಪದ ಸೌಭಾಗ್ಯ ಕರ್ನಾಟಕಕ್ಕೆ ಇದೆ. ಮರುಭೂಮಿ ಮತ್ತು ಹಿಮಾಲಯ ಇವೆರಡನ್ನು ಹೊರತುಪಡಿಸಿ ಇಲ್ಲಿ ಎಲ್ಲವೂ ಇದೆ. ಇದು ಪ್ರವಾಸೋದ್ಯಮ ಸಚಿವರು ಪದೇಪದೆ ಹೇಳುವ ಮಾತು. ಕರ್ನಾಟಕದ ಈ ವೈವಿಧ್ಯಮಯ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನಗಳು ಹೊಸ ವರ್ಷದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿವೆ.

Powering Tourism Growth_ Karnataka Government’s Multi-Pronged Initiatives

ರಾಜ್ಯ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆ, ಕೇವಲ ಸಾಂಪ್ರದಾಯಿಕ ತಾಣಗಳ ಪ್ರಚಾರಕ್ಕೆ ಸೀಮಿತವಾಗದೆ, ಥೀಮ್ ಆಧಾರಿತ ಪ್ರವಾಸೋದ್ಯಮದತ್ತ ಗಮನ ಹರಿಸಿರುವುದು ಪ್ರಶಂಸನೀಯ. ಸಾಂಸ್ಕೃತಿಕ ಉತ್ಸವಗಳು, ಜನಪದ ಕಲಾ ಕಾರ್ಯಕ್ರಮಗಳು, ಆಹಾರ ಉತ್ಸವಗಳು, ಸಂಗೀತ ಹಾಗೂ ಸಾಹಿತ್ಯ ಮೇಳಗಳು, ಸಾಹಸ ಪ್ರವಾಸೋದ್ಯಮ ಚಟುವಟಿಕೆಗಳು—ಇವುಗಳು ಪ್ರವಾಸಿಗರಿಗೆ ಹೊಸ ಅನುಭವಗಳನ್ನು ನೀಡುವ ಜೊತೆಗೆ ಸ್ಥಳೀಯ ಆರ್ಥಿಕತೆಗೆ ಜೀವ ತುಂಬುತ್ತಿವೆ. ಹಳ್ಳಿ ಪ್ರವಾಸೋದ್ಯಮ, ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಪರಿಕಲ್ಪನೆಗಳು ಕೂಡ ನಿಧಾನವಾಗಿ ಬೇರು ಬಿಡುತ್ತಿರುವುದು ಪಾಸಿಟಿವ್ ಬೆಳವಣಿಗೆ. ಈ ಎಲ್ಲ ಚಟುವಟಿಕೆಗಳಲ್ಲಿ ಕೆಎಸ್‌ಟಿಡಿಸಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೆಎಸ್‌ಟಿಡಿಸಿ ಸಹಯೋಗದಲ್ಲಿ ಹೊಸ ಪ್ರವಾಸಿ ಪ್ಯಾಕೇಜುಗಳು, ಸುಧಾರಿತ ಪ್ರವಾಸಿ ಬಸ್ ಸೇವೆಗಳು, ವಸತಿ ಸೌಲಭ್ಯಗಳ ನವೀಕರಣ ಮತ್ತು ಹೊಸ ಮಾರ್ಗಗಳ ಪರಿಚಯ ಮತ್ತು ಆಲ್ ಇನ್‌ಕ್ಲೂಸಿವ್ ಯೋಜನೆಗಳು ಪ್ರವಾಸಿಗರ ಅನುಭವವನ್ನು ಸುಗಮಗೊಳಿಸುತ್ತಿವೆ.

ಪಿಲಿಕುಳದ ಮಯೂರ ಹೊಟೇಲ್‌ನಂತೆ ಇನ್ನಷ್ಟು ಹೊಟೇಲ್ ಹಾಗೂ ರೆಸಾರ್ಟ್‌ಗಳು ಬರುವ ಸೂಚನೆಗಳೂ ಕಾಣುತ್ತಿವೆ. ಏತನ್ಮಧ್ಯೆ ಬೆಂಗಳೂರಿನಲ್ಲಿ ನಗರ ವೀಕ್ಷಣೆಗಾಗಿ ಅಂಬಾರಿ ಬಂದಿರುವುದು ಅತ್ಯಂತ ಸಂತಸಕರ ಸುದ್ದಿ. ಒಂದು ಕಾಲದಲ್ಲಿ ಡಬಲ್ ಡೆಕ್ಕರ್ ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿತ್ತು. ಈಗ ಪ್ರವಾಸಿಗರಿಗಾಗಿ ಹೊಸ ಮಾದರಿಯ ಡಬಲ್ ಡೆಕ್ಕರ್ ಅಂಬಾರಿಯಾಗಿ ಬಂದಿದ್ದು ಇದಕ್ಕಾಗಿ ಕೆ ಎಸ್ ಟಿ ಡಿ ಸಿ ಗೆ ಬೆನ್ತಟ್ಟಲೇಬೇಕಿದೆ. ಇನ್ನು ಚಾಲುಕ್ಯ ಉತ್ಸವ, ಕೊಪ್ಪಳ ಉತ್ಸವ, ಹಂಪಿ ಉತ್ಸವ, ಹಾರ್ನಬಿಲ್ ಫೆಸ್ಟಿವಲ್, ಬೆಂಗಳೂರು ಹಬ್ಬ ಇವೆಲ್ಲವೂ ಸದ್ದು ಮಾಡುತ್ತಿರುವುದು ಕರ್ನಾಟಕ ಪ್ರವಾಸೋದ್ಯಮ ಗರಿಗೆದರಿರುವುದರ ಸ್ಪಷ್ಟ ಸೂಚನೆ. ಈ ವೇಗಕ್ಕೆ ಯಾವುದೇ ಬ್ರೇಕ್ ಬೀಳದಂತೆ ಕಾಪಾಡುವಲ್ಲಿ ಪ್ರವಾಸಿಗರ ಜವಾಬ್ದಾರಿಯೂ ಇದೆ. ಅಂತೆಯೇ ಪ್ರವಾಸೋದ್ಯಮದ ಪ್ರಮುಖ ಅಂಗವಾಗಿರುವ ಟ್ರಾವೆಲ್ ಆಪರೇಟರ್ಸ್, ಗೈಡ್ಸ್, ಹೊಟೇಲ್ ಉದ್ಯಮ, ರೆಸಾರ್ಟ್ ಹೋಮ್ ಸ್ಟೇಗಳ ಹೊಣೆಯೂ ಇದೆ. ಸರಕಾರದ ಜತೆಗೆ ಇವರೆಲ್ಲರೂ ಕೈಜೋಡಿಸಿದ್ದೇ ಆದರೆ ಕರ್ನಾಟಕ ಟೂರಿಸಂ ಎಲ್ಲರ ಸರಿಸಮವೇನು, ಎಲ್ಲರನ್ನೂ ಮೀರಿಸಿ ಮುನ್ನಡೆಯುವುದರಲ್ಲಿ ಸಂಶಯವಿಲ್ಲ. ಹಾಗಾಗಲೆಂದು ನಿರೀಕ್ಷಿಸೋಣ.