ನಾನು ಕಂಡ ಕಳೆದು ಹೋದ ಕರ್ನಾಟಕದ ಸುಂದರ ಕೋಟೆ – ಬೇಕಲ
ಪ್ರಸ್ತುತ ಕೇರಳ ರಾಜ್ಯ ಸರಕಾರ ಹಾಗೂ ಪುರಾತತ್ವ ಇಲಾಖೆ (ಎಎಸ್ಐ) ಉತ್ತಮ ನಿರ್ವಹಣೆ ಮಾಡುತ್ತಿರುವುದರಿಂದ ಕೋಟೆ ಅತ್ಯಂತ ಸ್ವಚ್ಛ, ಸುರಕ್ಷಿತ ಹಾಗೂ ಅಚ್ಚುಕಟ್ಟಾದ ಪರಿಸರ ಹೊಂದಿದೆ. ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ನಿಯಂತ್ರಿತ ತಂಪು ಪಾನೀಯ ಮಳಿಗೆ ಹಾಗೂ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಒದಗಿಸಲಾಗಿದೆ. ಪ್ರವೇಶ ಶುಲ್ಕ ಸಹ ಸಾಮಾನ್ಯ ಜನರಿಗೆ ಅನುಕೂಲಕರವಾಗಿದೆ – ಭಾರತೀಯ ಪ್ರವಾಸಿಗರಿಗೆ 25 ರು. ಹಾಗೂ ವಿದೇಶಿ ಪ್ರವಾಸಿಗರಿಗೆ 300 ರು.ನಿಗದಿಯಾಗಿದೆ.
- ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ)
-
ಗಡಿನಾಡಿನ ಇತಿಹಾಸದ ನೆನಪುಗಳನ್ನು ಮನದಲ್ಲಿ ಮೂಡಿಸುವ ಅದ್ಭುತ ತಾಣವೆಂದರೆ ಬೇಕಲ ಕೋಟೆ. ಇಂದಿನ ಆಡಳಿತಾತ್ಮಕವಾಗಿ ಕೇರಳ ರಾಜ್ಯದಲ್ಲಿದ್ದರೂ, ಇದರ ಇತಿಹಾಸ ಕರ್ನಾಟಕದ ಕೆಳದಿ ರಾಜಮನೆತನದೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ಸುಮಾರು 1650ರಲ್ಲಿ ಕರ್ನಾಟಕದ ಶಿವಪ್ಪ ನಾಯಕ ಅವರ ಕಾಲದಲ್ಲಿ ನಿರ್ಮಾಣಗೊಂಡ ಈ ಕೋಟೆ ಸುಮಾರು 40 ಎಕರೆ ವಿಸ್ತೀರ್ಣ ಹೊಂದಿರುವ ಭವ್ಯ ರಕ್ಷಣಾತ್ಮಕ ಕಟ್ಟಡವಾಗಿದೆ.
ಚಂದ್ರಗಿರಿ ಭಾಗದ ಸಾಮಂತರಾಜರುಗಳ ಮೂಲಕ ಆಡಳಿತ ಮುಂದುವರಿದ ಈ ಕೋಟೆ, ನಂತರ ಮೈಸೂರು ಸಾಮ್ರಾಜ್ಯದ ಪ್ರಮುಖ ಸೈನಿಕ ಕೇಂದ್ರವಾಗಿ ಬೆಳವಣಿಗೆ ಕಂಡಿತು. 1760ರ ನಂತರ ಹೈದರ್ ಅಲಿ ಹಾಗೂ ನಂತರ ಟಿಪ್ಪು ಸುಲ್ತಾನ್ ಅವರ ಆಡಳಿತದಲ್ಲಿ ಕೋಟೆಯ ಮಹತ್ವ ಇನ್ನಷ್ಟು ಹೆಚ್ಚಾಯಿತು. ಸಮುದ್ರದತ್ತ ಮುಖಮಾಡಿ ನಿರ್ಮಿಸಲಾದ ಬಲಿಷ್ಠ ಗೋಡೆಗಳು, ಎತ್ತರದ ಗೋಪುರಗಳು, ಬಾವಿಗಳು ಹಾಗೂ ಗುಪ್ತ ಸುರಂಗ ಮಾರ್ಗಗಳು ಆ ಕಾಲದ ಯುದ್ಧತಂತ್ರದ ನೈಪುಣ್ಯವನ್ನು ಪ್ರತಿಬಿಂಬಿಸುತ್ತವೆ.
ಇದನ್ನೂ ಓದಿ: ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಛಾಯಾಗ್ರಾಹಕರು ಮತ್ತು ಪ್ರವಾಸಿ ಮಾರ್ಗದರ್ಶಿಗಳ ಪಾತ್ರವೇ ಪ್ರಮುಖ
ಕೋಟೆಯ ಮೇಲಿನಿಂದ ಕಾಣುವ ಅರಬ್ಬೀ ಸಮುದ್ರದ ಮನಮೋಹಕ ದೃಶ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಕಾಣುತ್ತದೆ. ಪ್ರಕೃತಿ ಸೌಂದರ್ಯ ಮತ್ತು ಇತಿಹಾಸ ಒಂದೇ ಸ್ಥಳದಲ್ಲಿ ಸೇರುವ ಅಪರೂಪದ ಅನುಭವವನ್ನು ಇಲ್ಲಿ ಕಾಣಬಹುದು.
ಪ್ರಸ್ತುತ ಕೇರಳ ರಾಜ್ಯ ಸರಕಾರ ಹಾಗೂ ಪುರಾತತ್ವ ಇಲಾಖೆ (ಎಎಸ್ಐ) ಉತ್ತಮ ನಿರ್ವಹಣೆ ಮಾಡುತ್ತಿರುವುದರಿಂದ ಕೋಟೆ ಅತ್ಯಂತ ಸ್ವಚ್ಛ, ಸುರಕ್ಷಿತ ಹಾಗೂ ಅಚ್ಚುಕಟ್ಟಾದ ಪರಿಸರ ಹೊಂದಿದೆ. ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ನಿಯಂತ್ರಿತ ತಂಪು ಪಾನೀಯ ಮಳಿಗೆ ಹಾಗೂ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಒದಗಿಸಲಾಗಿದೆ. ಪ್ರವೇಶ ಶುಲ್ಕ ಸಹ ಸಾಮಾನ್ಯ ಜನರಿಗೆ ಅನುಕೂಲಕರವಾಗಿದೆ – ಭಾರತೀಯ ಪ್ರವಾಸಿಗರಿಗೆ 25 ರು. ಹಾಗೂ ವಿದೇಶಿ ಪ್ರವಾಸಿಗರಿಗೆ 300 ರು.ನಿಗದಿಯಾಗಿದೆ.
ಈ ಕೋಟೆ ಚಿತ್ರರಂಗದ ಗಮನವನ್ನೂ ಸೆಳೆದಿದೆ. ವಿಶೇಷವಾಗಿ ʻಬಾಂಬೆʼ ಚಿತ್ರದ ಪ್ರಸಿದ್ಧ “ತು ಹೀ ರೇ” ಹಾಡಿನ ಚಿತ್ರೀಕರಣ ಇಲ್ಲಿ ನಡೆದಿದ್ದು, ಇದರ ಸೌಂದರ್ಯವನ್ನು ದೇಶದಾದ್ಯಂತ ಪರಿಚಯಿಸಿತು. ಅನೇಕ ಚಿತ್ರ ನಿರ್ಮಾಣ ಸಂಸ್ಥೆಗಳು, ಛಾಯಾಗ್ರಾಹಕರು ಹಾಗೂ ಕಲಾವಿದರು ಈ ತಾಣವನ್ನು ಮೆಚ್ಚಿದ್ದಾರೆ.
ಅರಬ್ಬೀ ಸಮುದ್ರದ ತೀರದಲ್ಲಿ ಕೈ ಬೀಸಿ ಕರೆಯುವಂತೆ ಕಾಣುವ ಬೇಕಲ ಕೋಟೆ, ಇತಿಹಾಸ, ಪ್ರಕೃತಿ ಹಾಗೂ ಪ್ರವಾಸೋದ್ಯಮದ ಸುಂದರ ಸಂಗಮವಾಗಿದೆ. ಇಂಥ ಐತಿಹಾಸಿಕ ತಾಣಗಳ ಉತ್ತಮ ನಿರ್ವಹಣೆ ಕರ್ನಾಟಕದಲ್ಲಿಯೂ ಹೆಚ್ಚಾದರೆ, ನಮ್ಮ ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೊಸ ಚೈತನ್ಯ ದೊರೆಯುತ್ತದೆ.