I will pray ಎಂಬ ಮಾತಿನಲ್ಲಿ ಅಡಗಿದ್ದ ಗಾಢ ಸಂದೇಶ!
ಇಲ್ಲಿ ವಾಸವಿರುವುದು ಹದಿನಾಲ್ಕನೆಯ ಬೌದ್ಧಗುರು ಇಂದಿನ ದಲೈ ಲಾಮ ಅವರು. ಇವರ ನಿಜ ನಾಮಧೇಯ ತೆಂಡ್ಜಿನ್ ಗ್ಯಾಟ್ಸೋ ಎಂದು. ದಲೈ ಲಾಮ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಆದರೆ ಅದರ ಮುಖ್ಯಸ್ಥಾನ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ 1959ರಲ್ಲಿ ಇದೇ ನ್ಯಾಂಗಲ್ ಬೌದ್ಧ ಮಂದಿರಕ್ಕೆ. ಇದು ದಲೈ ಲಾಮ ಅವರ ಖಾಸಗಿ ಮನೆ ಮತ್ತು ಮಂದಿರ. ಆದರೂ ಒಮ್ಮೊಮ್ಮೆ ಸಾರ್ವಜನಿಕ ಭೇಟಿಗೆ ಅವಕಾಶ ನೀಡಲಾಗುತ್ತದೆ.
- ಅಂಜಲಿ ರಾಮಣ್ಣ
ಕಾರ್ ಕಾರ್ ಕಾರ್ ಎಲ್ನೋಡು ಕಾರ್ ಎಂದು ಹಾಡಿಕೊಳ್ಳುತ್ತಿದ್ದ ನಾವೆಲ್ಲರೂ ಈಗ ವಾರ್ ವಾರ್ ವಾರ್ ಯಾವಾಗ್ನೋಡು ವಾರ್ ಎನ್ನುವ ಚಿಂತೆಗೆ ಬೀಳುವಂತಾಗಿದೆ. ವಿಶ್ವಶಾಂತಿಗಾಗಿ ಪರಿತಪಿಸುವ ಈ ಘಟ್ಟದಲ್ಲಿ ಅದಕ್ಕಾಗಿಯೇ ದುಡಿದ ಮಹನೀಯರ ಭೇಟಿಯ ನೆನಪು ಒತ್ತರಿಸಿ ಬರುವುದು ಸಹಜವೇ ಆಗಿದೆ.
ಹಿಮಾಚಲಪ್ರದೇಶದಲ್ಲಿ ಇರುವ ಪುಟ್ಟ ಗಿರಿಧಾಮ ಧರ್ಮಶಾಲಾ. ಇಲ್ಲಿನ ಜನ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎನ್ನುವ ಕನಕೋಕ್ತಿಯನ್ನು ಅಕ್ಷರಶಃ ಬದುಕುತ್ತಿದ್ದರು. ಇಲ್ಲಿನ ಜನರೊಳಗಿನ ಶಾಂತಿಯನ್ನು ಆಸ್ವಾದಿಸುತ್ತಲೇ ಒಂದು ಹದಿನೈದು ಕಿಲೋಮೀಟರ್ಗಳಷ್ಟು ಬೆಟ್ಟ ಹತ್ತಿ, ಕಣಿವೆಯೊಳಗೆ ತೂರಿ, ಹಸಿರು ಪ್ರಪಾತವನ್ನು ಕಂಡು ಪುಂಗಿ ನಾದದಂತೆ ಬಾಗಿದರೆ, ಹಾವಿನಂತೆ ಹೊರಳಿ ಬಿಟ್ಟರೆ ಸಿಗುತ್ತೆ ಮೆಕ್ಲಿಯಾಡ್ ಗಂಜ್ ಎನ್ನುವ ಪ್ರಶಾಂತಿ ಧಾಮ. ಅಲ್ಲಿಯೇ ಇದೆ ‘ನ್ಯಾಂಗಲ್ ಬೌದ್ಧ ಮಂದಿರ’.
ಇದನ್ನೂ ಓದಿ: ಕತ್ತಲ ಕನ್ನಡಿಗಳು ಎಂಬ ಕತ್ತಲೆಯ ಕೂಪ; ಮಾನವೀಯತೆ ಮೆರೆಯಲು ಪಯಣ ಆರಂಭವಾಗಬೇಕು
ಇಲ್ಲಿ ವಾಸವಿರುವುದು ಹದಿನಾಲ್ಕನೆಯ ಬೌದ್ಧಗುರು ಇಂದಿನ ದಲೈ ಲಾಮ ಅವರು. ಇವರ ನಿಜ ನಾಮಧೇಯ ತೆಂಡ್ಜಿನ್ ಗ್ಯಾಟ್ಸೋ ಎಂದು. ದಲೈ ಲಾಮ ಪರಂಪರೆಗೆ 500 ವರ್ಷಗಳ ಇತಿಹಾಸವಿದೆ. ಆದರೆ ಅದರ ಮುಖ್ಯಸ್ಥಾನ ಭಾರತಕ್ಕೆ ಸ್ಥಳಾಂತರಗೊಂಡಿದ್ದು ಮಾತ್ರ 1959ರಲ್ಲಿ ಇದೇ ನ್ಯಾಂಗಲ್ ಬೌದ್ಧ ಮಂದಿರಕ್ಕೆ. ಇದು ದಲೈ ಲಾಮ ಅವರ ಖಾಸಗಿ ಮನೆ ಮತ್ತು ಮಂದಿರ. ಆದರೂ ಒಮ್ಮೊಮ್ಮೆ ಸಾರ್ವಜನಿಕ ಭೇಟಿಗೆ ಅವಕಾಶ ನೀಡಲಾಗುತ್ತದೆ.

ಭೇಟಿಯ ಆಸೆ ವ್ಯಕ್ತ ಪಡಿಸಿ ಇ-ಮೇಲ್ ಮೂಲಕ ಸಂಪರ್ಕಿಸಿದಾಗ ತಿಳಿದು ಬಂದದ್ದು ಒಂದಷ್ಟು ತಿಂಗಳುಗಳಿಂದ ಅವರು ಸಾರ್ವಜನಿಕ ಭೇಟಿಯನ್ನು ರದ್ದು ಪಡಿಸಿ ವಿಶ್ರಾಂತಿಯಲ್ಲಿ ಇದ್ದಾರೆ ಎಂದು . ಈಗಂತೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು ಇನ್ನೂ ಒಂದು ತಿಂಗಳಿನ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿರುವುದರಿಂದ ಭೇಟಿ ಸಾಧ್ಯವೇ ಇಲ್ಲ ಎನ್ನುವ ಉತ್ತರ. ಪದೇಪದೆ ಮಿಂಚಂಚೆ ಕಳಿಸುತ್ತಿದ್ದೆ ಮತ್ತು ಫೋನ್ ಕೂಡ ಮಾಡುತ್ತಿದ್ದೆ. ಹತ್ತು ನಿಮಿಷಕ್ಕಿಂತ ಹೆಚ್ಚಿಗೆ ಅವರೊಡನೆ ಇರಲಾರೆ ಎನ್ನುವ ಭಾಷೆ ಇತ್ತಿದ್ದೆ. ಅವಕಾಶ ಕೊಟ್ಟರೆ ನಾಲ್ಕು ಪ್ರಶ್ನೆಗಳನ್ನು ಮಾತ್ರ ಕೇಳುತ್ತೇನೆ ಎನ್ನುವ ಪ್ರಮಾಣ ಮಾಡಿದ್ದೆ.
ಇಲ್ಲಿಂದ ಹೊರಡುವ ದಿನ ಅಲ್ಲಿಂದ ಬಂದ ಕಡೆಯ ಉತ್ತರ ‘ಕ್ಷಮಿಸಿ. ವೈದ್ಯರ ಮಾತನ್ನು ಮೀರಲಾಗದು. ನೀವು ಇಲ್ಲಿಗೆ ಬರಬಹುದು ಆದರೆ ದಲೈ ಲಾಮ ಅವರ ಭೇಟಿ ಅಸಾಧ್ಯ. ಇಲ್ಲಿಗೆ ಬಂದಾಗ ನಮಗೆ ಕರೆ ಮಾಡಿ ನೋಡೋಣ’ ಎಂದು. ಸರಿ, ಅಲ್ಲಿ ಹೋಗಿ ಬಾಗಿಲಲ್ಲಿ ಬಿದ್ದಿಹ ಭಜಕನು ನಾನು ಎಂದು ವಿನಂತಿಸಿಕೊಳ್ಳೋಣ ಎಂದು ಹೊರಟೇ ಬಿಟ್ಟೆ. ತಲುಪಿದ ಕೂಡಲೇ ಫೋನ್ ಮಾಡಲು ಪ್ರಾರಂಭಿಸಿದೆ. ‘ಭೇಟಿ ಅಸಾಧ್ಯ’ ಎನ್ನುವುದು ಅಲ್ಲಿನ ರೆಕಾರ್ಡೆಡ್ ಸಂದೇಶವೆನ್ನುವಂತೆ ಪ್ರತಿ ಬಾರಿಯೂ ಉಸಿರುತ್ತಿತ್ತು.
ಎರಡು ದಿನಗಳ ನಂತರ ಒಂದು ಎಸ್ಎಂಎಸ್ ಬಂತು. ‘ನಾಳೆ 11.30ಕ್ಕೆ ನ್ಯಾಂಗಲ್ ಬೌದ್ಧ ಮಂದಿರದ ಕಚೇರಿಗೆ ಬನ್ನಿ. ಬರುವಾಗ ನಿಮ್ಮ ಗುರುತಿನ ಚೀಟಿಯನ್ನು ಮರೆಯದೇ ತನ್ನಿ’
ಚೀನಾದಂಥಾ ಚೀನಾ ದೇಶದಿಂದ ಬೆದರಿಕೆಗೆ ಒಳಗಾಗಿರುವ ಈ ಜಾಗಕ್ಕೆ ಮತ್ತು ದಲೈ ಲಾಮರಿಗೆ ಇರುವ ಭದ್ರತೆ ಊಹೆಗೂ ನಿಲುಕದ್ದು. ಇಂಥ ಭದ್ರತಾ ಸಿಬ್ಬಂದಿಯನ್ನು ವೈಟ್ ಹೌಸ್ ಮುಂದೆಯೂ ನೋಡಿಲ್ಲ. ಕಡೆಪಕ್ಷ ಯಾವ ಬ್ರೂಸ್ಲಿ ಸಿನೆಮಾದಲ್ಲೂ ನೋಡಿದ ನೆನಪಿಲ್ಲ. ಆ ಸಿಬ್ಬಂದಿಗಳ ಎತ್ತರ , ಗಾತ್ರ ಮತ್ತು ಅವರ ಸೊಂಟಗಳಲ್ಲಿ ನೇತಾಡುತ್ತಿದ್ದ ಮೂರು ಮೂರು ಪಿಸ್ತೂಲುಗಳನ್ನು ಕಂಡೇ ನನಗೆ ಬವಳಿ ಬರುತ್ತಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದಂತೆ ಜಾಮರ್ಗಳನ್ನು ಅಳವಡಿಸಿದ್ದಾರೆ. ಗುರುತಿನ ಚೀಟಿಯ ಪರಿಶೀಲನೆ ನಡೆಸಿದ ನಂತರ ಮೈಮೇಲಿನ ಬಟ್ಟೆಯೊಂದನ್ನು ಉಳಿಸಿ ನಮ್ಮ ಬಳಿ ಇರುವ ಎಲ್ಲವನ್ನೂ ಅವರೇ ತೆಗೆದಿರಿಸಿಕೊಳ್ಳುತ್ತಾರೆ. ನಮ್ಮನ್ನೂ ಸ್ಕ್ಯಾನರ್ ಒಳಗೆ ತೂರಿಸಿಬಿಡುತ್ತಾರೆ. ಅಲ್ಲಿಂದ ಮುಂದೆ ಹೋದರೆ ನಮ್ಮ ವಿಳಾಸ, ವಿವರ, ಉದ್ದೇಶಗಳ ಅರ್ಜಿಯೊಂದನ್ನು ಭರ್ತಿ ಮಾಡಿಸಿಕೊಳ್ಳುತ್ತಾರೆ. ನಂತರ ಮಹಿಳಾ ಭದ್ರತಾ ಸಿಬ್ಬಂದಿ ಬಂದು ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿ ದೇಹದ ಪ್ರತೀ ಅಂಗಕ್ಕೂ ಸ್ಕ್ಯಾನರ್ ಇಟ್ಟು ಪರೀಕ್ಷೆ ಮಾಡುತ್ತಾರೆ. ಹಾಂ, ಹೇಳುವುದು ಮರೆತೆ. ಹೀಗೆ ದಲೈ ಲಾಮ ಅವರನ್ನು ಭೇಟಿ ಮಾಡಲು ಹೋಗುವ ಮಹಿಳೆಯರು ತುಂಬು ತೋಳಿನ ಮತ್ತು ಪೂರ್ತಿ ಕಾಲಿನ ಬಟ್ಟೆಯನ್ನು ಹಾಕಿಕೊಳ್ಳಬೇಕಿರುತ್ತದೆ. ಉಡುಗೊರೆ ಕೊಡಲು ಇಷ್ಟ ಪಡುವವರು ಮೊದಲೇ ಅನುಮತಿ ಪಡೆದಿರಬೇಕಿರುತ್ತೆ ಮತ್ತು ಅದು ಏನು ಎನ್ನುವುದನ್ನು ಮೊದಲೇ ಬರೆದುಕೊಡಬೇಕಿರುತ್ತದೆ. ಭದ್ರತಾ ಸಿಬ್ಬಂದಿ ಒಪ್ಪುವ ಸಾಮಗ್ರಿಗಳನ್ನು ಮಾತ್ರ ಉಡುಗೊರೆಯನ್ನಾಗಿ ಕೊಡಬಹುದಿರುತ್ತೆ. ಕೆಲವೊಮ್ಮೆ ದಲೈ ಲಾಮ ಅವರ ಕೈಗೇ ಕೊಡುವ ಅವಕಾಶ ಸಿಗಬಹುದು ಇಲ್ಲವಾದಲ್ಲಿ ಅವರ ಪರಿಚಾರಕರೇ ಉಡುಗೊರೆಯನ್ನು ತೆಗೆದುಕೊಂಡು ಪಕ್ಕಕ್ಕೆ ಇಟ್ಟುಕೊಳ್ಳುತ್ತಾರೆ.
ಅಂತೂ ನನ್ನನ್ನು ಒಳಕ್ಕೆ ಬಿಟ್ಟರು. ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ಮೈಸೂರು ಸ್ಯಾಂಡಲ್ ಅಗರಬತ್ತಿಯ ಕಟ್ಟು ಇತ್ತು.
ಮುಂದಿನ ಕ್ಷಣದಲ್ಲಿ ಎಳೆ ಬಿಸಿಲು ಹಸಿರು ರಾಶಿಯನ್ನು ಆವರಿಸಿಕೊಂಡಿದ್ದ ಪರ್ವತದ ಏರಿನಲ್ಲಿ ಬಣ್ಣಬಣ್ಣದ ಹೂವಿನ ಗಿಡಗಳ ಜಾರಿನಲ್ಲಿ ಸ್ತೂಪದಂತೆ ಕಾಣುವ ಮನೆಯ ಕಾಲುದಾರಿಯಲ್ಲಿ ನಿಂತಿದ್ದೆ. ವಿಶಾಲವಾದ ಹಜಾರದ ತುಂಬ ಭದ್ರತಾ ಸಿಬ್ಬಂದಿಯಿದ್ದರು. ನಡುವಿನಲ್ಲೊಂದು ಸೋಫಾ ಇತ್ತು. ಒಳಗೆ ಹೋಗಿ ನಿಂತ ಹತ್ತು ನಿಮಿಷಗಳಲ್ಲಿ ಕಡುಗೆಂಪು ಬಣ್ಣದ ನಿಲುವಂಗಿ ಧರಿಸಿ, ಕೇಸರಿ ಬಣ್ಣದ ಕಾಲುಚೀಲ, ಅಚ್ಚ ಕಂದು ಬಣ್ಣದ ಲೆದರ್ ಬೂಟ್ಸ್ ಹಾಕಿಕೊಂಡು, ಚೌಕಾಕಾರದ ಕಪ್ಪು ಬಣ್ಣದ ಆವರಣವಿದ್ದ ಕನ್ನಡಕ ಧರಿಸಿಕೊಂಡಿದ್ದ, ಎಂಬತ್ತು ವರ್ಷ ದಾಟಿದ ದೇಹದಲ್ಲಿ ಬೆಳಕೊಂದು ನಗುತ್ತಾ, ನಗುವೊಂದು ನಡೆದಾಡುತ್ತಾ, ಅನೂಹ್ಯ ಶಾಂತಿಯೊಂದು ಗಾಳಿಯಾಗುತ್ತಾ, ಧ್ಯಾನವೊಂದು ಪರಿಮಳವಾಗುತ್ತಾ ನನ್ನೆಡೆಗೆ ಬರುವುದು ಗೊತ್ತಾಗುತ್ತಿತ್ತು. ಹಿಂದೆಯೇ ಅವರೇ ದಲೈ ಲಾಮ ಎನ್ನುವ ಅರಿವೂ ಬಂತು. ಅವರೇ ನಗುತ್ತಾ ಬಳಿಬಂದು ಕೈ ಹಿಡಿದುಕೊಂಡರು. ಮುಂದಿನ ಹದಿನೈದು ನಿಮಿಷಗಳು ಅವರು ನನ್ನ ಕೈ ಬಿಡಲೇ ಇಲ್ಲ. ನಾನವರ ತೋಳಿಗೆ ಬಳ್ಳಿಯಾಗಿಬಿಟ್ಟಿದ್ದೆ ಎನ್ನುವುದು ತಿಳಿದದ್ದು ನಂತರ ಸಿಬ್ಬಂದಿ ಕೊಟ್ಟ ಫೊಟೋಗಳಿಂದ.
ನೋಡಲು ಉತ್ಸಾಹದ ಚಿಲುಮೆಯಂತೆ ಪುಟಿದೇಳುತ್ತಿದ್ದ ಹಿರಿಯರು ಮಾತನಾಡಲು ಹೊರಟಾಗ ತುಂಬಾ ಬಳಲಿರುವುದು ತಿಳಿಯುತ್ತಿತ್ತು. ಮಾತಿಗೊಮ್ಮೆ ಅವರು ಬಳಸುತ್ತಿದ್ದ ‘certainly’ ಎನ್ನುವ ಪದ ಮೂರು ವರ್ಷದ ಮಗುವಿನ ಮಾತಿನಲ್ಲಿನ ದೈವಿಕತೆಯನ್ನು ಸ್ಫುರಿಸುತ್ತಿತ್ತು. ನನ್ನ ಕೈಲಿದ್ದ ಉಡುಗೊರೆಯನ್ನು ಅವರೇ ತೆಗೆದುಕೊಂಡರು. ಕೇಳಬೇಕು ಎಂದು ಮೊದಲೇ ನಿರ್ಧಾರ ಮಾಡಿಟ್ಟುಕೊಂಡು ಬಂದಿದ್ದ ನಾಲ್ಕೇ ಪ್ರಶ್ನೆಗಳು ನೆನಪಿಗೆ ಬಂದವು.

ಸ್ವಚ್ಛ ಭಾರತದ ಕನಸು ನನಸು ಆಗಲು ಸಾಧ್ಯವೇ ಇಲ್ಲ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿರುವ ನಾನು ದಲೈ ಲಾಮರನ್ನು ಅವರ ಅಭಿಪ್ರಾಯಕ್ಕಾಗಿ ಕೇಳಿಯೇ ಬಿಟ್ಟೆ. ಆಹಾರ ರಾಜಕೀಯದಿಂದ ಒಡೆದು ಆಳುವ ನೀತಿಯ ಬಗ್ಗೆ, ಮತಾಂತರದಿಂದಲೂ ಬಗೆಹರಿಯದ ಮಾನವ ಸಹಜ ಅಹಂ ಬಗ್ಗೆ ಮತ್ತು ಎಲ್ಲಕ್ಕೂ ಪ್ರಚಾರ ಬಯಸುವ ಮನುಷ್ಯನ ಕ್ಷುಲ್ಲಕ ಬುದ್ಧಿಯ ಬಗ್ಗೆ ಏನೇನೋ ಬಡಬಡಿಸಿದೆ. ಪ್ರಶ್ನೆಗಳು ನಾಲ್ಕು ಆದರೂ ಅವರು ಎಲ್ಲಕ್ಕೂ ನೀಡಿದ್ದು ಒಂದೊಂದೇ ಉತ್ತರ ಮತ್ತು ಒಂದೇ ಉತ್ತರ ‘I will pray’.
ತಾಯಿಯೊಬ್ಬಳು ಮಗನನ್ನು ಬೆಳೆಸುವ ಹಾದಿಯಲ್ಲಿ ತನ್ನ ಕೈ ಮೀರಿದ ಪರಿಸ್ಥಿತಿಯಿಂದ ಅಸಹಾಯಕಳಾದರೂ ಭರವಸೆಯ ಊಟೆಯಂತೆ, ಒಳಿತಿನ ಹರಿಕಾರಳಂತೆ ದೇವರ ಕೋಣೆಯಲ್ಲಿ ತುಪ್ಪದ ದೀಪ ಬೆಳಗುತ್ತಲೋ, ಗಂಧದ ಕಡ್ಡಿ ಹಚ್ಚುತ್ತಲೋ, ಮಂತ್ರ ಪಠಿಸುತ್ತಲೋ ಗುಟ್ಟಾಗಿ ಸಲ್ಲಿಸುವ ಪ್ರಾರ್ಥನೆಯಂತೆ ಕಂಡರು ದಲೈ ಲಾಮ. ಅವರ ‘I will pray’ ಎನ್ನುವ ಉತ್ತರದಲ್ಲಿ ಎಂಥ ಗಾಢವಾದ ಸಂದೇಶ ಅಡಗಿದೆ. ಉಚ್ಚ್ವಾಸವು ನಿಶ್ವಾಸದೆಡೆಗೆ ಕತ್ತಿ ಮಸೆಯುತ್ತಿರುವ ಈ ಕಾಲಘಟ್ಟದಲ್ಲಿ ಹರಸಿ ದಾರಿತೋರಬೇಕಾದ ಕೈಗಳೇ ನಿಶ್ಶಕ್ತಗೊಂಡಿವೆ ಎಂದನಿಸುವ ಈ ದಿನಗಳಲ್ಲಿ, ನಮ್ಮನಮ್ಮ ವಿವೇಚನೆ ಉದ್ದೀಪನಗೊಳ್ಳಬೇಕಿದೆ.
ಸಗ್ಗಸಮಾನ ಆ ಹದಿನೈದು ನಿಮಿಷಗಳೂ ಅವರು ಹಿಡಿದುಕೊಂಡಿದ್ದ ನನ್ನ ಕೈಗಳಲ್ಲಿ ಅವರ ಅಂಗೈನ ತಣಿವು ಭರವಸೆಯ ಶಾಖವನ್ನು ತುಂಬುತ್ತಿದೆ. ಈ ಘಳಿಗೆಯಲ್ಲಿ ನನ್ನ ಪ್ರಾರ್ಥನೆಗೂ ಶಕ್ತಿ ತುಂಬುತ್ತಿದೆ ದಲೈ ಲಾಮ ಎನ್ನುವ ನಕ್ಷತ್ರ.