• ಜಯಂತ್ ದೇಸಾಯಿ

ಕಲಬುರಗಿ ಜಿಲ್ಲೆಯ ಸಣ್ಣ ಪಟ್ಟಣ ಮಳಖೇಡ. ಕಲಬುರ್ಗಿಯಿಂದ 50 ಕಿಮೀ ದೂರದಲ್ಲಿ, ಸೇಡಂ ಪಟ್ಟಣದಿಂದ 15 ಕಿಮೀ ದೂರದಲ್ಲಿದೆ. ಈ ಊರು ಹಿಂದೆ ಮಾನ್ಯಖೇಟವಾಗಿ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಇಲ್ಲಿನ ಅಳಿದುಳಿದ ಕೋಟೆಯ ಅವಶೇಷಗಳು, ಪುರಾತನ ದೇವಸ್ಥಾನಗಳು, ಕೋಟೆಯ ಕಾವಲು ಗೋಪುರಗಳು ಇದರ ಇತಿಹಾಸವನ್ನು, ಗತವೈಭವವನ್ನು ಸಾರಿ ಹೇಳುತ್ತವೆ.

ಇದನ್ನೂ ಓದಿ:ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳು!

ಕನ್ನಡಕ್ಕೆ ಮೊದಲು ಗ್ರಂಥದ ಕೊಡುಗೆ

ಕನ್ನಡದು ಮೊದಲ ಗ್ರಂಥ ʻಕವಿರಾಜಮಾರ್ಗʼ. ಕನ್ನಡದ ಈ ಗ್ರಂಥ ದೊರಕಿದ ಸ್ಥಳ ಮಳಖೇಡ. ಈ ಗ್ರಂಥವನ್ನು ರಚಿಸಿದವನು ʻಶ್ರೀವಿಜಯʼಎಂಬ ಕವಿ. ಇವನು ಅಮೋಘ ವರ್ಷ ನೃಪತುಂಗ ಅಸ್ತಾನದ ಹಿರಿಯ ಕವಿಯಾಗಿದ್ದನು. ಮಾನ್ಯಖೇಟದ ವೈಭವವನ್ನು ಕವಿರಾಜಮಾರ್ಗದಲ್ಲಿ ʻತಸ್ಯ ಶ್ರೀಮದ್ ಅಮೋಘವರ್ಷ ನೃಪತಿ ಅಸದಳ ಇಂದ್ರಪುರಂ ಅಧಿಕಂʼ ಎಂದು ವರ್ಣಿಸಿದ್ದಾನೆ. ಅಮೋಘ ವರ್ಷನ ಆಡಳಿತ ವೈಖರಿ ಇಂದ್ರಪುರ ಅಂದರೆ ಇಂದ್ರನ ಸ್ವರ್ಗದ ವೈಭವಕ್ಕಿಂತಲೂ ಅಧಿಕವಾಗಿತ್ತು. ಇದಲ್ಲದೆ ಅಮೋಘವರ್ಷ ನೃಪತುಂಗನ ಆಡಳಿತದಲ್ಲಿ ʻಕಾವೇರಿಯಿಂದಮಾ ಗೋದಾವರಿವರಮಿರ್ಪನಾಡದ ಕನ್ನಡದೋಳ್‌ ಭಾವಿಸಿದ ಜನಪದಂʼ ಎಂದು ರಚಿಸಿ ಅಮೋಘವರ್ಷ ಆಡಳಿತದಲ್ಲಿ ಕನ್ನಡವು ಕಾವೇರಿ ಇಂದ ಗೋದಾವರಿವರೆಗೂ ಹಬ್ಬಿತ್ತು ಎಂದು ವರ್ಣಿಸಿದ್ದಾನೆ.

Untitled design (4)

ಅಮೋಘವರ್ಷ ನೃಪತುಂಗ

ಮಾನ್ಯಖೇಟವನ್ನು ರಾಜಧಾನಿಯಾಗಿ ಮಾಡಿಕೊಂಡು, 50 ವರ್ಷಕ್ಕೂ ಹೆಚ್ಚು ಕಾಲ ಆಳಿದವನು ʻಅಮೋಘವರ್ಷ ನೃಪತುಂಗ ರಾಜʼ. ಇವನು ಆಡಳಿತ ಅದೆಷ್ಟು ಸ್ವಾಯತ್ತವಾಗಿತ್ತೆಂದರೆ ಭರತ ಖಂಡದ ನಾಲ್ಕು ಮಹಾ ಚಕ್ರವರ್ತಿಗಳಲ್ಲಿ ನೃಪತುಂಗನೂ ಒಬ್ಬ, ಹೀಗೆಂದು ಇಲ್ಲಿಗೆ ಭೇಟಿ ನೀಡಿದ್ದ ಅರಬ್ ಪ್ರವಾಸಿ ಬರೆದುಕೊಂಡಿದ್ದಾನೆ.

ಕೋಟೆಯ ಆಂಜನೇಯ ಸ್ವಾಮಿ ಮಂದಿರವು ಕೋಟೆಯ ಮೇಲ್ಭಾಗದಲ್ಲಿದೆ. ವಿಶೇಷವೆಂದರೆ ಈ ದೇವಾಲಯದಲ್ಲಿ ಇಂದಿಗೂ ಪೂಜೆಗಳು ನೆರವೇರುತ್ತಿವೆ. ಪಕ್ಕದ ಸೇಡಂ ಪಟ್ಟಣ, ನೃಪತುಂಗನ ಅಸ್ತಾನದ ರಾಣಿಯ ರಾಣಿಗೃಹವಾಗಿತ್ತು. ಅಂದು ಮಲ್ಲಕಂಬ ನಡೆಯುತ್ತಿದ ಸ್ಥಳವೇ ಇಂದು ʻಕಲ್ಕಂಬʼವೆನ್ನುವ ಊರಾಗಿದೆ. ಚಿತ್ತಾಪುರ ಹತ್ತಿರುವಿರುವ ʻದಂಡೋತಿʼ ಹೆಸರಿನ ಊರು ರಾಷ್ಟ್ರಕೂಟರ ಸೈನಿಕ ದಂಡಿನ ನೆಲೆಯಾಗಿತ್ತು.

ಸಂತಾನ ವೇಣು ಗೋಪಾಲ ಸ್ವಾಮಿ

ನೃಪತುಂಗ ರಾಜನಿಗೆ ಮಕ್ಕಳಿರಲಿಲ್ಲ, ಆಗ ಊರಿನ ಮಧ್ಯಭಾಗದಲ್ಲಿದ್ದ ವೇಣು ಗೋಪಾಲ ಸ್ವಾಮಿ ಇವನಿಗೆ ಪುತ್ರ ಸಂತಾನ ಕರುಣಿಸಿದ ಎನ್ನಲಾಗಿದೆ. ಅಂದಿನಿಂದ ಪ್ರತಿವರ್ಷ ರಾಜ ಕುಟುಂಬಸಮೇತ ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಉತ್ಸವನ್ನು ಏರ್ಪಡಿಸುತ್ತಿದ್ದ ಎಂದು ಇಲ್ಲಿನ ಅರ್ಚಕರಿಂದ ನಮಗೆ ತಿಳಿಯಿತು. ಈ ದೇವಸ್ಥಾನ ಈಗ ಸಂತಾನ ವೇಣು ಗೋಪಾಲಸ್ವಾಮಿ ಮಂದಿರವಾಗಿದೆ.

ಜಯತೀರ್ಥ ಬೃಂದಾವನ ಉತ್ತರಾಧಿಮಠ

ಕೋಟೆಯ ಉತ್ತರಕ್ಕೆ ಕಾಗಿಣ ನದಿ ಇದೆ. ಇದರ ದಡದಲ್ಲಿ ಮಾಧ್ವ ಸಮಾಜಕ್ಕೆ ವೈದಿಕ ಜಗತ್ತಿಗೆ ʻಮಹಾನ್‌ ಸುಧಾʼವನ್ನು ರಚಿಸಿ ಅನೇಕ ಟೀಕೆಗಳನ್ನು ರಚಿಸಿ ಟೀಕಾಚಾರ್ಯ ಎಂದು ಕರೆಸಿಕೊಂಡ ಜಯತೀರ್ಥರ ಮೂಲ ಬೃಂದಾವನವಿದೆ. ಇವರು ರಾಜರ ಆಸ್ಥಾನ ಗುರುಗಳಾಗಿದ್ದರು ಎಂದು ಹೇಳಲಾಗಿದೆ.

ಒಟ್ಟಾರೆ ಮಳಖೇಡದ ಇಂಥ ತಾಣಗಳಲ್ಲಿ ಅಡ್ಡಾಡುತ್ತಿದ್ದರೆ ಮಾನ್ಯಖೇಟದ ಮಹೋನ್ನತ ಇತಿಹಾಸ ತೆರೆದುಕೊಳ್ಳುತ್ತಾ ಹೋಗುತ್ತದೆ.