Sunday, June 15, 2025
Sunday, June 15, 2025

ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳು!

ಕಲಬುರಗಿಯಲ್ಲಿ ಹತ್ತು ಹಲವು ಪ್ರವಾಸಿ ತಾಣಗಳಿವೆ. ಅಲ್ಲಿ ಉರಿ ಬಿಸಿಲಿರುತ್ತದೆಯಾದರೂ ಕಣ್ಮನ ಸೆಳೆಯುವ ಅದ್ಭುತವಾದ ಪ್ರವಾಸಿ ಜಾಗಗಳಿವೆ.

ಸದಾ ಉರಿ ಬಿಸಿಲಿರುವ ಕಲಬುರಗಿಯಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಬಿಸಿಲಿನ ಜಳದಲ್ಲೂ ಅದ್ಭುತವಾದ ಜಾಗಗಳು ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತವೆ. ಜಿಲ್ಲೆಯ ಸೆರಗಿಗೆ ಅಂಟಿಕೊಂಡಿರುವ ರಾಷ್ಟ್ರಕೂಟರ ರಾಜಧಾನಿ ಕೋಟೆ ನಾಡು ಮಳಖೇಡ, ದತ್ತನ ಕ್ಷೇತ್ರ ಗಾಣಗಾಪುರ, ಚಿಂಚೋಳಿಯ ಚಂದ್ರಮಪಳ್ಳಿ ಅಣೆಕಟ್ಟು, ಎತ್ತಪೋ ಜಲಪಾತ, ಗೊಟ್ಟಂಗೊಟ್ಟ ಅರಣ್ಯ, ಸನ್ನತಿ ಚಂದ್ರಲಾಂಬ, ಕನಗನಹಳ್ಳಿ, ಕಾಳಗಿ, ಚಿತ್ತಾಪುರದ ನಾಗಾವಿ ಎಲ್ಲಮ್ಮ ಮಂದಿರ ಸೇರಿದಂತೆ ಇನ್ನು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿಗೆ ಬಸ್ಸು, ರೈಲುಗಳಲ್ಲಿ ಹೋಗಬಹುದು. ಜಿಲ್ಲೆಯಿಂದ ಸರಿ ಸುಮಾರು 150 ಕಿಮೀ ಸಮೀಪದಲ್ಲಿರುವ ಬೀದರ್‌ ನಗರ ಹಾಗೂ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪ, ಕೋಟೆ, ಶರಣರ ಗವಿಗಳು ಹೀಗೆ ನಾನಾ ತೆರನಾದ ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.

​​ಕಲಬುರಗಿ ಕೋಟೆ
ಕಲಬುರಗಿ ಜಿಲ್ಲೆಯಲ್ಲಿ ಸಾಕಷ್ಟು ವಿಶಿಷ್ಟ ತಾಣಗಳಿವೆ. ಜಿಲ್ಲೆಯನ್ನು ಪ್ರವೇಶಿಸುತ್ತಿದ್ದಂತೆ ಗುಮ್ಮಟ-ಗೋರಿಗಳು ಕಾಣಿಸಿಕೊಳ್ಳುತ್ತವೆ. ಹಲವು ವಿಶೇಷತೆಯನ್ನೊಳಗೊಂಡ ಕಲಬುರಗಿಯ ಹೃದಯ ಭಾಗದಲ್ಲಿರುವ ಕೋಟೆಯು ಇಸ್ಲಾಮಿಕ್‌ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಈ ಕೋಟೆಯನ್ನು ಮೂಲತಃ ವಾರಂಗಲ್‌ ಕಾಕತೀಯರ ರಾಜಾ ಗುಲ್‌ಚಂದ್‌ ನಿರ್ಮಿಸಿದ ಎನ್ನಲಾಗಿದೆ. ದೌಲತ್‌ಬಾದಿನ ಮಾಂಡಲಿಕ ಅರಸ ರಾಜಾ ಕಲಿಚಂದ ಈ ಕೋಟೆ ನಿರ್ಮಿಸಿದ ಎಂಥಲೂ ಹೇಳಲಾಗಿದೆ. ಬಹಮನಿ ಸಾಮ್ರಾಜ್ಯದ ದೊರೆ ಅಲಾವುದ್ಧೀನ್‌ ಬಹುಮನ್‌ ಷಾ (1847-58) ಪಶ್ಚಿಮ ಏಷ್ಯಾದ ಮತ್ತು ಯುರೋಪಿಯನ್‌ ಕ್ಷಾತ್ರ (ಮಿಲಿಟರಿ) ವಾಸ್ತುಶಿಲ್ಪದ ಶೈಲಿಯಲ್ಲಿ ಪುನರ್‌ ರಚಿಸಿದನು. ಅಲ್ಲಿನ ಪುರಾತನದ ಕೋಟೆ, ಕೊತ್ತಲಗಳನ್ನು ಪುರಾತತ್ವ ಇಲಾಖೆಯು ಸಂರಕ್ಷಿಸುತ್ತಿದೆ.

Kalaburagi Fort


ಜುಮ್ಮಾ ಮಸೀದಿ
ಕೋಟೆಯೊಳಗಿನ ಜುಮ್ಮಾ ಮಸೀದಿ ಎಲ್ಲಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಸುವ್ಯವಸ್ಥಿತವಾಗಿರುವ ಈ ಮಸೀದಿ ಇಡೀ ದಕ್ಷಿಣ ಏಷ್ಯಾದಲ್ಲಿ ಕಲಬುರಗಿಯಲ್ಲಿ ಮಾತ್ರ ರೂಪಿತವಾಗಿದೆ. ಮಸೀದಿಯು 140 ಸ್ತಂಭಗಳ ಮೇಲೆ ನಿಂತಿದ್ದು, 250 ಕಮಾನುಗಳಿಂದ ಕಂಗೊಳಿಸುತ್ತಿದೆ. ಪಾರ್ಸಿ ವಸ್ತು ಸಂಪ್ರದಾಯದ ಹೂಬಳ್ಳಿಗಳಿಂದ ಅಲಂಕೃತವಾಗಿದೆ. ಇದು ಸ್ಪೇನಿನ ಕಾರ್ಡೋವಾ ನಗರದ ಪ್ರಸಿದ್ಧ ಮಸೀದಿಯನ್ನು ಹೋಲುತ್ತಿದ್ದು, ಸುಮಾರು 6000 ಜನರು ಒಟ್ಟಿಗೆ ನಮಾಜು ಮಾಡಬಹುದಾದಷ್ಟು ವಿಶಾಲವಾಗಿದೆ.

ಇನ್ನು ಮಸೀದಿಯ ಸಮೀಪದಲ್ಲಿಯೇ ಮದ್ದು ಗುಂಡುಗಳ ಸಂಗ್ರಹದ ಕೋಣೆಯಿದೆ. ಇರಾನಿನ ಕ್ವಾಜ್ವಿನ್‌ ಪ್ರಾಂತ್ಯದ ನಿವಾಸಿ ರಫಿ ಎಂಬ ಶಿಲ್ಪಿ ರಚಿಸಿದ ಈ ಭವ್ಯ ಕೋಟೆಯು, 1362 ರಲ್ಲಿ ಪೂರ್ಣಗೊಂಡಿದೆ. ಎರಡು ಕೋಟೆ ಗೋಡೆಯ ಮೂಲಕ ಭದ್ರತೆಯನ್ನು ಒದಗಿಸಲಾಗಿದ್ದು, ಶತ್ರುಗಳು ನುಸುಳದಂತೆ 30 ಅಡಿ ಅಗಲವಾದ ಕಂದಕವು ಕೋಟೆಯ ಸುತ್ತುವರೆದಿದೆ. 3 ಕಿ.ಮೀ ಸುತ್ತಳತೆಯ ಕೋಟೆಯು, 26 ಫಿರಂಗಿಗಳು, 15 ಗೋಪುರಗಳನ್ನು ಒಳಗೊಂಡಿದೆ. ಒಳಗಿನ ಒಂದು ಗನ್‌ 8 ಮೀಟರ್‌ ಉದ್ದವಾಗಿದ್ದು, ಇಲ್ಲಿನ ಪ್ರತಿಯೊಂದು ಕಲ್ಲು, ಮತ್ತಿತರ ಪರಿಕರಗಳು ಇಂದಿಗೂ ಅಸ್ತಿತ್ವ ಕಳೆದುಕೊಳ್ಳದೆ ವೈಭವದ ಇತಿಹಾಸದ ಕತೆ ಹೇಳುತ್ತಿವೆ.

ಕಾವಲುಗಾರರ ಕೊಠಡಿಗಳು, ಎತ್ತರವಾದ ಅನೇಕ ಬುರುಜುಗಳ ಮೇಲೆ ಒಂದು 16 ಅಡಿ ಉದ್ದದ, 2 ಗೋಳಾಕಾರದ ತೋಪುಗಳಿದ್ದು, ಇವು ಯುದ್ಧದಲ್ಲಿ ಬಳಕೆಯಾಗಿವೆ ಎನ್ನಲಾಗಿದೆ. ಕೋಟೆಯ ಒಳಗೆ ಹೋಗಲು ಮತ್ತು ಹೊರ ಬರಲು ಮೂರು ಗುಪ್ತ ಮಾರ್ಗಗಳಿದ್ದು, ಅಲ್ಲಿಂದ ಶೇಖರೋಜಾ, ಚೋರ್‌ಗುಂಬಜ್‌, ರಂಗಮಹಲ್‌ಗೆ ಸಂಪರ್ಕ ಕಲ್ಪಿಸಿವೆ.

Jami Masjid


ಹಫ್ತ್‌ ಗುಂಬಜ್
ಬಂದೇನವಾಜರ ದರ್ಗಾಕ್ಕೆ ಹೋಗುವ ದಾರಿಯಲ್ಲಿ ಸಾತ್‌ ಗುಂಬಜ್‌ ಕೂಡ ಪ್ರೇಕ್ಷಣೀಯ ತಾಣವಾಗಿ ಪ್ರವಾಸಿಗರಿಗೆ ಸಿಗುತ್ತದೆ. ಈ 7 ಗುಂಬಜ್‌ಗಳು ಬಹುಮನಿ ಸುಲ್ತಾನರು ಹಾಗೂ ಅವರ ದಂಡನಾಯಕರ ಸಮಾಧಿಗಳಾಗಿವೆ. 100ಕ್ಕೂ ಹೆಚ್ಚು ಮಸೀದಿ, 70ಕ್ಕೂ ಹೆಚ್ಚು ದರ್ಗಾಗಳಿರುವ ಗುಮ್ಮಟಗಳ ನಗರಿ ಎಂದು ಕಲಬುರಗಿ ಜಿಲ್ಲೆಯನ್ನು ಕರೆಯಲಾಗುತ್ತದೆ.

Haft Gumbaz


ಶರಣ ಬಸವೇಶ್ವರ ದೇವಸ್ಥಾನ
ಶ್ರೀ ಶರಣಬಸವೇಶ್ವರ ದೇವಸ್ಥಾನ ಕಲಬುರಗಿ ನಗರದ ಮಧ್ಯ, ಬ್ರಹ್ಮಪುರ ಬಡಾವಣೆಯ ಪ್ರದೇಶದಲ್ಲಿದೆ. ಮೂಲತಃ ಜೇವರ್ಗಿ ತಾಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು ಬಸವಣ್ಣನವರ ಶರಣ ತತ್ವಗಳ ಸಂದೇಶಗಳನ್ನು ಪ್ರಚಾರ ಮಾಡಿದವರು. ಕಲ್ಯಾಣಕ್ಕೆ ಹೋಗುವಾಗ, ಕಲಬುರಗಿಯಲ್ಲಿಯೇ ಉಳಿಯುವಂತೆ ಮಾಡಿದವರು ಇವರ ಶಿಷ್ಯ ದೊಡ್ಡಪ್ಪ ಶರಣರು. ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಬೆಳ್ಳಿ ಮುಖಗಳನ್ನುಳ್ಳ ಜೋಡಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಇಂದು ಈ ದೇವಾಲಯವು ಭಕ್ತರ ಅಚ್ಚುಮೆಚ್ಚಿನ ತಾಣವಾಗಿದೆ. ಹೋಳಿ ಹುಣ್ಣಿಮೆಯ 5 ದಿನಗಳ ನಂತರ ತಿಂಗಳವರೆಗೆ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ.

Sharana Basava


ಬಂದೇನವಾಜ್‌ ದರ್ಗಾ
ಮುಸ್ಲಿಂ ಸೂಫಿ ಸಂತರಲ್ಲಿ ಸೈಯದ್‌ ಮೊಹ್ಮದ ಹುಸೈನಿ ಹಜರತ್‌ ಖ್ವಾಜಾ ಬಂದೇನವಾಜ ಒಬ್ಬರಾಗಿದ್ದಾರೆ. ಭಾರತದಲ್ಲಿಇಸ್ಲಾಂ ಧರ್ಮ ಪ್ರಚಾರ ಮಾಡುತ್ತಾ ಅವರು ಕಲಬುರಗಿಗೆ ಬಂದರು ಎನ್ನಲಾಗಿದೆ. ಇಲ್ಲಿನ ಬಂದೇನವಾಜ್‌ ದರ್ಗಾವು ಭಾರತೀಯ ಮುಸ್ಲಿಂ ವಾಸ್ತುಕಲೆಯಿಂದ ನಿರ್ಮಿಸಲಾಗಿದೆ. ತುರ್ಕಿ, ಇರಾನಿ, ಬಹಮನಿ ಶೈಲಿಯು ಕಾಣಸಿಗುತ್ತದೆ. ಈ ಭವ್ಯವಾದ ಕಟ್ಟಡವನ್ನು ಇಂಡೋ-ಸಾರ್ಸೆನಿಕ್‌ ಶೈಲಿಯಲ್ಲಿನಿರ್ಮಿಸಲಾಗಿದೆ. ಕಮಾನುಗಳು ಬಹಮನಿ ವಾಸ್ತುಶೈಲಿಯ ವಿಶೇಷತೆಯಾಗಿದ್ದರೂ, ಗೋಡೆಗಳ ಮೇಲಿನ ವರ್ಣಚಿತ್ರಗಳು ಮತ್ತು ಗುಮ್ಮಟಗಳು ಟರ್ಕಿಶ್‌ ಮತ್ತು ಇರಾನಿನ ಶೈಲಿಯಲ್ಲಿವೆ. ಉರ್ದು, ಪರ್ಷಿಯನ್‌ ಮತ್ತು ಅರೇಬಿಕ್‌ ಭಾಷೆಗಳಲ್ಲಿ ಬರೋಬ್ಬರಿ 10,000 ಪುಸ್ತಕಗಳನ್ನು ಇಲ್ಲಿನ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ.

Bandenawaz


ಬುದ್ದ ವಿಹಾರ
ಏಷ್ಯಾದ 2ನೇ ಅತಿ ದೊಡ್ಡ ಬುದ್ಧ ವಿಹಾರವು ಕಲಬುರಗಿಯಲ್ಲಿದೆ. ನಗರದಿಂದ ಕೇವಲ 6 ಕಿ.ಮೀ. ದೂರದಲ್ಲಿ, ವಿವಿ ರಸ್ತೆ ಮಾರ್ಗದಲ್ಲಿದೆ. ಸಿದ್ದಾರ್ಥ ವಿಹಾರ್‌ ಟ್ರಸ್ಟ್‌ ವತಿಯಿಂದ 70 ಎಕರೆ ಭೂಮಿಯಲ್ಲಿ ಬೃಹತ್‌ ಕಟ್ಟಡ, ಮೂರ್ತಿಗಳು, ಪ್ರತಿಯೊಂದು ಕಲೆ, ಅಜಂತಾ ಮತ್ತು ಎಲ್ಲೋರ ಶಿಲ್ಪಕಲೆಗಳನ್ನು ಪ್ರತಿಬಿಂಬಿಸುತ್ತವೆ. ವಿಹಾರ್‌ ಮೈದಾನದಲ್ಲಿ ಮೊದಲ ಮಹಡಿಯಲ್ಲಿ ಗೌತಮ ಬುದ್ಧನ ಎರಡು ಸುಂದರ ಕೆತ್ತನೆಯ ಮೂರ್ತಿಗಳು ಜೀವಕಳೆ ತುಂಬಿಕೊಂಡಂತಿವೆ. ಚಿನ್ನದ ಲೇಪನ ಹೊಂದಿರುವ ಪಂಚಲೋಹದ ಬುದ್ಧನ ಮೂರ್ತಿ ದಕ್ಷಿಣ ಭಾರತದಲ್ಲೇ ಅತಿ ದೊಡ್ಡದಾಗಿದೆ.

Buddha Vihar


Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!