ಸಂಜು ಮತ್ತು ಗೀತಾ ಮಾಡಿದ ಟೂರ್ಗೆ ಇಂಪಾಕ್ಟ್ ಪ್ರಶಸ್ತಿ
ಸಿನಿಮಾ ಮತ್ತು ಪ್ರವಾಸೋದ್ಯಮ ಜತೆಯಾಗಿ ಸಾಗುತ್ತವೆ. ಉತ್ತಮ ದೃಶ್ಯವನ್ನು ಸೆರೆ ಹಿಡಿಯಲು ನಿರ್ದೇಶಕರು ಹೊಸ ಹೊಸ ಜಾಗಗಳನ್ನು ಹುಡುಕಿಕೊಂಡು ಹೋಗುವ ಜತೆಗೆ ಅದನ್ನು ಅಷ್ಟೇ ಸುಂದರವಾಗಿ ತೆರೆ ಮೇಲಿ ತೋರಿಸುತ್ತಾರೆ. ಅಂಥದ್ದೊಂದು ಪ್ರಯತ್ನ ಮಾಡಿರುವ ಚಿತ್ರಕ್ಕೀಗ ಪ್ರಶಸ್ತಿ ಸಿಕ್ಕಿದೆ.
ಯಾವುದೋ ಒಂದು ಜಾಗವನ್ನು ಸಿನಿಮಾಗಳಲ್ಲಿ ಸುಂದರವಾಗಿ ತೋರಿಸಿದಾಗ ಕೆಲವರಿಗೆ ಅಲ್ಲಿಗೊಮ್ಮೆ ಹೋಗಬೇಕು ಎಂಬ ಆಸೆ ಮೂಡಬಹುದು. ಕೆಲವೊಮ್ಮೆ ಅಂಥ ಸ್ಥಳಗಳು ಶೂಟಿಂಗ್ ಸ್ಪಾಟ್ ಎಂದೇ ಖ್ಯಾತಿ ಪಡೆಯುವುದಿದೆ. ಮೇಲುಕೋಟೆ ರಾಯಗೋಪುರದಲ್ಲಿ ಮಣಿರತ್ನ ಬಹುತೇಕ ಎಲ್ಲ ಸಿನಿಮಾಗಳ ಒಂದು ದೃಶ್ಯವನ್ನಾದರೂ ಚಿತ್ರೀಕರಿಸಿದ್ದಾರೆ. ಸಕಲೇಶಪುರ, ಊಟಿ ಹೀಗೆ ಅನೇಕ ಸ್ಥಳಗಳಲ್ಲಿ ಶೂಟಿಂಗ್ ಸ್ಪಾಟ್ಗಳೀವೆ. ಕಿರಿಕ್ ಪಾರ್ಟಿ ಚಿತ್ರದ ಕಾಗದದ ದೋಣಿಯಲ್ಲಿ ಹಾಡಿನಲ್ಲಿ ಬೈಕ್ ಹತ್ತಿ ಹೋಗುವ ದಾರಿಗಳನ್ನು ಹುಡುಕಿಕೊಂಡು ಹೋದವರ ಸಂಖ್ಯೆ ಕೂಡ ಸಾಕಷ್ಟಿವೆ. ಇವೆಲ್ಲವೂ ಒಂದು ಸಿನಿಮಾ ಪ್ರವಾಸೋದ್ಯಮದ ಮೇಲೆ ಮಾಡುವ ಪರಿಣಾಗಳು. ಇಂಥ ಒಳ್ಳೆಯ ಪ್ರಭಾವವನ್ನು ಗುರುತಿಸಿ ʼಇಂಟರ್ನ್ಯಾಶನಲ್ ಇಂಡಿಯನ್ ಫಿಲ್ಮ್ ಟೂರಿಸಂ ಕಾನ್ಕ್ಲೇವ್ (IIFTC) ಪ್ರವಾಸೋದ್ಯಮ ಪ್ರಭಾವ ಪ್ರಶಸ್ತಿ ನೀಡುತ್ತದೆ. ಈ ವರ್ಷದ ಈ ಪ್ರಶಸ್ತಿ ಕನ್ನಡ ಸಿನಿಮಾ ವಿಭಾಗದಲ್ಲಿ ನಾಗಶೇಖರ್ ನಿರ್ದೇಶನದ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ನಟಿಸಿದ ʼಸಂಜು ವೆಡ್ಸ್ ಗೀತಾ 2ʼ ಚಿತ್ರಕ್ಕೆ ಸಿಕ್ಕಿದೆ. ಈ ಖುಷಿಯನ್ನು ನಾಗಶೇಖರ್ ಪ್ರವಾಸಿ ಪ್ರಪಂಚದ ಜತೆ ಹಂಚಿಕೊಂಡು ಮಾತನಾಡಿದ್ದಾರೆ.
ಇದನ್ನೂ ಓದಿ: ಐಕಾನಿಕ್ ನಟಿಯ ಟ್ರಾವೆಲ್ ಕಹಾನಿ
ಅಂತಾರಾಷ್ಟ್ರೀಯ ಮನ್ನಣೆ:
ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರ ಮಾಡುವಾಗಲೇ ಇದನ್ನು ಸ್ವಿಟ್ಜರ್ಲ್ಯಾಂಡ್ ಹಾಗೂ ನೆದರ್ಲ್ಯಾಂಡ್ ಅಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿ ಚಳೀಯಲ್ಲಿ ಎಷ್ಟು ಕಷ್ಟ ಇತ್ತು ಎಂದು ಹೇಳಿದ್ದರು. ಈ ಹಿಂದೆ ಯಶ್ ಚೋಪ್ರಾ ಸಿನಿಮಾಗಳಲ್ಲಿ ಸ್ವಿಟ್ಜರ್ಲ್ಯಾಂಡ್ ಅನ್ನು ಸುಂದರವಾಗಿ ತೋರಿಸಿದ್ದಕ್ಕೆ ಅಲ್ಲಿಗೆ ಹೋಗಬೇಕು ಎಂದು ಅನೇಕರು ಅಂದುಕೊಂಡರು. ಅದೇ ರೀತಿಯ ಪ್ರಭಾವ ʼಸಂಜು ವೆಡ್ಸ್ ಗೀತಾ ೨ʼ ಸಿನಿಮಾ ದೃಶ್ಯಗಳು ಕೂಡ ಮಾಡಿದೆ ಎಂದು ಗುರುತಿಸಿ ಪ್ರಶಸ್ತಿ ನೀಡಿದ್ದು ಖುಷಿಯಾಗುತ್ತಿದೆ ಎನ್ನುವುದು ನಾಗಶೇಖರ್ ಮಾತು. ಈ ಪ್ರಶಸ್ತಿಯನ್ನು ಭಾರತದ ಎಲ್ಲ ಸಿನಿಮಾ ರಂಗಗಳಿಗೂ ನೀಡಲಾಗುತ್ತಿದ್ದು, ಒಂದು ಚಿತ್ರರಂಗದಿಂದ ಒಂದು ಚಿತ್ರವನ್ನು ಮಾತ್ರ ಗುರುತಿಸಲಾಗುತ್ತದೆ. ʼನಮ್ಮ ಸಿನಿಮಾಗೆ ನಮ್ಮ ದೇಶದಲ್ಲಿ ಅಲ್ಲದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದ್ದು ಹೆಮ್ಮೆಯ ವಿಷಯʼ ಎಂದು ಹೇಳಿದ್ದಾರೆ ನಾಗಶೇಖರ್.

ಪ್ರಶಸ್ತಿಯ ಹಿನ್ನೆಲೆ:
ಭಾರತೀಯ ಚಿತ್ರರಂಗ ಮತ್ತು ಜಾಗತಿಕ ಪ್ರವಾಸೋದ್ಯಮ ಮಂಡಳಿಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ IIFTC, ಸಿನಿಮಾ ಮೂಲಕ ಪ್ರವಾಸೋದ್ಯಮಕ್ಕೆ ಚಾಲನೆ ನೀಡುವ ಚಿತ್ರಗಳನ್ನು ಕಳೆದ ಎಂಟು ವರ್ಷಗಳಿಂದ ಗೌರವಿಸುತ್ತಾ ಬಂದಿದೆ. ಈ ಹಿಂದೆ ಕನ್ನಡದ ʼಅಮರ್ʼ ಚಿತ್ರಕ್ಕೂ ಈ ಪ್ರಶಸ್ತಿ ಸಿಕ್ಕಿತ್ತು. ಈ ವರ್ಷ ಒಟ್ಟು ೯ ಭಾರತೀಯ ಸಿನಿಮಾಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸುಮಾರು ೫೦-೬೦ ದೇಶದ ಪ್ರಮುಖರು ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರಂತೆ. ʼಚಿತ್ರೀಕರಣಕ್ಕೆ ಖರ್ಚಾದ ಶೇ. ೫೦ರಷ್ಟು ಹಣವನ್ನು ನೀಡುತ್ತೇವೆ ಎಂದು ತಿಳಿಸಿಲಾಗಿದೆ. ಇಂಥ ಬೆಂಬಲ ಸಿಕ್ಕಾಗ ಇನ್ನೂ ಹೆಚ್ಚಿನ ಕೆಲಸ ಮಾಡಬೇಕು ಅನಿಸುತ್ತದೆ. ನಮ್ಮ ಸಿನಿಮಾದ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆʼ ಎಂದಿದ್ದಾರೆ ನಾಗಶೇಖರ್.

ಚಿತ್ರದಲ್ಲಿನ ಅದ್ಭುತ ಲೋಕೇಷನ್ಗಳು ಕಥೆಗೆ ಪೂರಕವಾದ ಮೆರುಗನ್ನು ನೀಡಿರುವುದಲ್ಲದೆ, ವಿದೇಶಿ ಪ್ರವಾಸಿ ತಾಣಗಳನ್ನು ಭಾರತೀಯ ಪ್ರೇಕ್ಷಕರಿಗೆ ಆಕರ್ಷಕವಾಗಿ ಪರಿಚಯಿಸಿವೆ. ಈ ಸಿನಿಮೀಯ ಶ್ರೇಷ್ಠತೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತಿದೆ. ವಿವಿಧ ದೇಶಗಳ ರಾಯಭಾರಿಗಳು, ಹೈಕಮಿಷನರ್ಗಳು ಹಾಗೂ ಚಿತ್ರರಂಗದ ಪ್ರಮುಖ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದರು.
-ನಾಗಶೇಖರ್, ನಿರ್ದೇಶಕ