ಭಾರತದ ಈ ಪ್ರಸಿದ್ಧ ದೇವಾಲಯಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತದಲ್ಲಿ ಸಾವಿರಾರು ಪುರಾಣ ಪ್ರಸಿದ್ಧ ದೇವಾಲಯಗಳಿವೆ. ಪ್ರತಿ ದೇವಸ್ಥಾನಕ್ಕೂ ಅದರದ್ದೇ ಐತಿಹ್ಯವಿದೆ. ಇಲ್ಲಿನ ದೇವಸ್ಥಾನಗಳು ಕಲೆ,ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ.
ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳ ಭಾಗವಾಗಿರುವ ಭಾರತವು ತನ್ನದೇ ಆದ ಇತಿಹಾಸ, ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿರುವ ದೇಶವಾಗಿದೆ. ಭಾರತದಲ್ಲಿ ಲಕ್ಷಾಂತರ ಪುರಾಣ ಪ್ರಸಿದ್ಧ ಹಿಂದೂ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ವಿಶೇಷವಾದ ಇತಿಹಾಸ ಮತ್ತು ಐತಿಹ್ಯವಿದೆ. ಪ್ರಾಚೀನ ಕಾಲದಲ್ಲಿ, ಆಡಳಿತಗಾರರು ತಮ್ಮ ಆಳ್ವಿಕೆಯ ಅವಧಿಯಲ್ಲಿ ದೇವಾಲಯಗಳನ್ನು ಸ್ಥಾಪಿಸಿದ್ದರು. ಅಂದಿನ ರಾಜ ಮಹಾರಾಜರು ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಭಾರತದ ಐದು ಪ್ರಮುಖ ದೇವಾಲಯಗಳ ಕುರಿತಾದ ಮಾಹಿತಿ ಇಲ್ಲಿದೆ.
ಸೂರ್ಯ ದೇವಾಲಯ,ಒರಿಸ್ಸಾ
ಸೂರ್ಯ ದೇವಾಲಯವು ಒರಿಸ್ಸಾದ ಪುರಿ ಜಿಲ್ಲೆಯಲ್ಲಿರುವ ಕೊನಾರ್ಕ್ ಎಂಬ ಪಟ್ಟಣದಲ್ಲಿದೆ. ಭಾರತೀಯ ವಾಸ್ತು ಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ ಈ ದೇವಾಲಯವನ್ನು ಸೂರ್ಯ ದೇವರಾದ ಸೂರ್ಯನಿಗೆ ಸಮರ್ಪಿಸಲಾಗಿದೆ. ಏಳು ಕುದುರೆಗಳು ಎಳೆಯುವ ಅವನ ರಥದ ಆಕಾರದಲ್ಲಿ ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು 13 ನೇ ಶತಮಾನದಲ್ಲಿ ನರಸಿಂಹದೇವ ಎಂಬ ರಾಜನಿಂದ ನಿರ್ಮಿಸಲಾಯಿತು ಎನ್ನುತ್ತದೆ ಸ್ಥಳ ಪುರಾಣ. ಈ ದೇವಾಲಯಕ್ಕೆ ಸಂಬಂಧಿಸಿದ ದಂತಕಥೆಯ ಪ್ರಕಾರ, ಒಮ್ಮೆ ಭಗವಾನ್ ಶ್ರೀಕೃಷ್ಣನು ತನ್ನ ಸ್ವಂತ ಮಗನಿಗೆ ಕುಷ್ಠರೋಗದಿಂದ ಬಳಲುವಂತಾಗಲಿ ಎಂದು ಶಪಿಸಿದನು. ತಪಸ್ಸು ಮಾಡಲು, ಅವನ ಮಗ ಸಾಂಬನು ಹನ್ನೆರಡು ವರ್ಷಗಳ ಕಾಲ ಸೂರ್ಯನನ್ನು ಆರಾಧಿಸಿದನು. ಅವನ ಭಕ್ತಿಗೆ ಸಂತೃಪ್ತಗೊಂಡ ಸೂರ್ಯ ಅವನನ್ನು ಗುಣಪಡಿಸಿದನು. ಸಾಂಬಾ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರತಿಯಾಗಿ ಸೂರ್ಯ ದೇವಾಲಯವನ್ನು ಇಲ್ಲಿ ಸ್ಥಾಪಿಸಿದನು ಎಂದು ನಂಬಲಾಗಿದೆ.

ಬೃಹದೀಶ್ವರ ದೇವಸ್ಥಾನ, ತಮಿಳುನಾಡು
ಅತ್ಯಂತ ಪ್ರಸಿದ್ಧವಾದ ಬೃಹದೀಶ್ವರ ದೇವಾಲಯವು ತಮಿಳುನಾಡಿನ ತಂಜಾವೂರಿನಲ್ಲಿರುವ ದಕ್ಷಿಣ-ಭಾರತದ ಬೃಹತ್ತಾದ ದೇವಾಲಯಗಳಲ್ಲಿ ಒಂದಾಗಿದೆ. ಪೆರುವುಡೈಯರ್ ಕೋವಿಲ್ ಮತ್ತು ರಾಜರಾಜೇಶ್ವರಂ ಎಂದೂ ಕರೆಯಲ್ಪಡುವ ಈ 11ನೇ ಶತಮಾನದ ದೇವಾಲಯವನ್ನು ಚೋಳ ಚಕ್ರವರ್ತಿ 1ನೇ ರಾಜ ರಾಜ ಚೋಳ ನಿರ್ಮಿಸಿದನು. ಚೋಳರ ಕಲಾ ವೈಭವವನ್ನು ನಾವಿಲ್ಲಿ ನೋಡಬಹುದು.

ಸೋಮನಾಥ ದೇವಾಲಯ, ಗುಜರಾತ್
ಸೋಮನಾಥ ದೇವಾಲಯವು ಭಾರತದ ಅತ್ಯಂತ ಹಳೆಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಅತ್ಯಂತ ಪುರಾತನ ಗ್ರಂಥಗಳಾದ ಶಿವ ಪುರಾಣ, ಸ್ಕಂದ ಪುರಾಣ ಮತ್ತು ಶ್ರೀಮದ್ ಭಗವದ್ಗೀತೆಗಳಲ್ಲಿ ಈ ದೇವಾಲಯದ ಉಲ್ಲೇಖವಿದೆ. ಸೋಮ ಎಂದರೆ ಚಂದ್ರ ಎಂದರ್ಥ. ಚಂದ್ರ ದೇವನು ತನ್ನ ಮಾವನಿಂದ ಶಾಪಗ್ರಸ್ಥನಾಗುತ್ತಾನೆ. ಈ ಶಾಪದಿಂದ ವಿಮೋಚನೆ ಪಡೆದುಕೊಳ್ಳಲು ಶಿವನನ್ನು ಪೂಜಿಸುತ್ತಾನೆ. ಶಿವನು ಚಂದ್ರನನ್ನು ಶಾಪದಿಂದ ಮುಕ್ತಗೊಳಿಸುತ್ತಾನೆ. ಈ ಕಾರಣಕ್ಕಾಗಿ ಚಂದ್ರನು ಶಿವನಿಗೆ ಕೃತಜ್ಞತೆಯ ರೂಪದಲ್ಲಿ ಈ ದೇವಾಲಯನ್ನು ನಿರ್ಮಿಸಿದ್ದಾನೆ ಎಂದು ನಂಬಲಾಗಿದೆ.

ರಾಮನಾಥಸ್ವಾಮಿ ದೇವಸ್ಥಾನ, ತಮಿಳುನಾಡು
ತಮಿಳುನಾಡಿನ ರಾಮೇಶ್ವರಂ ದೇವಾಲಯವು ಕೂಡ ಹಿಂದೂಗಳ ಧಾರ್ಮಿಕ ಚಾರ್ ಧಾಮ್ಗಳಲ್ಲಿ ಒಂದಾಗಿದೆ. ದಂತಕಥೆಯ ಪ್ರಕಾರ, ರಾಮನು ತನ್ನ ಪತ್ನಿ ಸೀತೆಯೊಂದಿಗೆ ಈ ದ್ವೀಪದ ದಡಕ್ಕೆ ಬಂದಿಳಿದ ನಂತರ ರಾಕ್ಷಸ ರಾಜ, ಬ್ರಾಹ್ಮಣನಾಗಿದ್ದ ರಾವಣನನ್ನು ಸೋಲಿಸಿದನು ಎಂದು ಹೇಳಲಾಗುತ್ತದೆ. ಶ್ರೀರಾಮನು ಬ್ರಹ್ಮ ಹತ್ಯೆ ದೋಷದಿಂದ ಮುಕ್ತನಾಗಲು ಇಲ್ಲಿ ಶಿವನನ್ನು ಪೂಜಿಸಲು ಮುಂದಾಗುತ್ತಾನೆ. ಹಾಗಾಗಿ ಹನುಮಂತನು ಕೂಡಲೇ ಶಿವಲಿಂಗವನ್ನು ತರಲು ಕೈಲಾಸಕ್ಕೆ ಹಾರುತ್ತಾನೆ. ಅಷ್ಟರಲ್ಲಿ ಸೀತಾದೇವಿ ಮರಳಿನಿಂದ ಪುಟ್ಟ ಶಿವಲಿಂಗವನ್ನು ತಯಾರಿಸುತ್ತಾಳೆ. ಇಲ್ಲಿ ನಾವು ಈ ಎರಡೂ ಲಿಂಗಗಳ ದರ್ಶನ ಮಾಡಬಹುದಾಗಿದ್ದು, ಸೀತಾ ದೇವಿಯು ಮಾಡಿದ ಲಿಂಗವನ್ನು ರಾಮಲಿಂಗವೆಂದೂ, ಹನುಮಂತನು ತಂದ ಲಿಂಗವನ್ನು ವಿಶ್ವಲಿಂಗವೆಂದು ಕರೆಯಲಾಗುತ್ತದೆ. ದೇವಾಲಯಗಳ ಬಗ್ಗೆ ಆಸಕ್ತಿ ಮತ್ತು ಭಕ್ತಿ ಇರುವವರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ವೈಷ್ಣೋ ದೇವಿ ದೇವಸ್ಥಾನ, ಜಮ್ಮು ಮತ್ತು ಕಾಶ್ಮೀರ
ಹಿಂದೂ ಯಾತ್ರಾರ್ಥಿಗಳಿಗೆ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ವೈಷ್ಣೋ ದೇವಿ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ತ್ರಿಕೂಟ ಪರ್ವತದ ಮೇಲೆ ನೆಲೆಸಿದೆ. ದಂತಕಥೆಯ ಪ್ರಕಾರ, ವೈಷ್ಣೋ ದೇವಿ ವೈಷ್ಣವಿಯಾಗಿ ಚಿಕ್ಕ ಹುಡುಗಿಯಾಗಿದ್ದಾಗ ಆಕೆಯನ್ನು ವಿವಾಹವಾಗುವಂತೆ ಭೈರೋ ನಾಥ ಎನ್ನುವ ಮಾಂತ್ರಿಕ ಸಾಕಷ್ಟು ಕಾಟ ಕೊಡುತ್ತಾನೆ. ಆಕೆಯನ್ನು ಇನ್ನಿಲ್ಲದಂತೆ ಒತ್ತಾಯಿಸಿದಾಗ ವೈಷ್ಣವಿ ಈ ದೇವಸ್ಥಾನವಿರುವ ಗುಹೆಯಲ್ಲಿ ಆತನ ತಲೆಯನ್ನು ಕತ್ತರಿಸುತ್ತಾಳೆ. ಮಾಂತ್ರಿಕನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸುತ್ತಾನೆ. ಆಗ ದೇವಿ ಆತನನ್ನು ಕ್ಷಮಿಸಿ, ಯಾವ ಭಕ್ತರು ವೈಷ್ಣೋ ದೇವಿ ದೇವಾಲಯಕ್ಕೆ ತೀರ್ಥಯಾತ್ರೆ ಮಾಡಲು ಬರುತ್ತಾರೋ ಅವರು ಮೊದಲು ಭೈರೋನಾಥ ದೇವಾಲಯಕ್ಕೆ ಭೇಟಿ ನೀಡಬೇಕು, ಆಗ ಮಾತ್ರ ಪ್ರಯಾಣವು ಪೂರ್ಣಗೊಳ್ಳುತ್ತದೆ ಎಂದು ವರವನ್ನು ಅನುಗ್ರಹಿಸುತ್ತಾಳೆ. ಇಂದಿಗೂ ಇಲ್ಲಿಗೆ ಭೇಟಿ ನೀಡುವ ಭಕ್ತರು ಭೈರೋನಾಥ ದೇವಾಲಯಕ್ಕೆ ಭೇಟಿ ನೀಡಿ ನಂತರ ವೈಷ್ಣೋ ದೇವಿ ದೇವಸ್ಥಾನಕ್ಕೆ ಹೋಗುತ್ತಾರೆ.
