ಯಾತ್ರಾರ್ಥಿಗಳಿಗೆ ವಿಶ್ವಮಟ್ಟದ ಸೌಲಭ್ಯ ಹಾಗೂ ಧಾರ್ಮಿಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ

ಆಂಧ್ರ ಪ್ರದೇಶದ ಪ್ರಮುಖ ದೇವಾಲಯಗಳನ್ನು ಅಂತಾರಾಷ್ಟ್ರೀಯ ಮಟ್ಟದ ಧಾರ್ಮಿಕ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರದ PRASHAD (Pilgrimage Rejuvenation and Spiritual, Heritage Augmentation Drive) ಯೋಜನೆಯಡಿ ದೇವಾಲಯಗಳ ಸುತ್ತಮುತ್ತ ಮೂಲಸೌಕರ್ಯ ಮತ್ತು ಪ್ರವಾಸಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ ಮೋಹನ್‌ ನಾಯ್ಡು ಹೇಳಿದ್ದಾರೆ.

Untitled design (41)

ಸಚಿವರು ಮಾತನಾಡಿ, ಪ್ರಸಾದ್ ಯೋಜನೆಯ ಉದ್ದೇಶ ದೇವಾಲಯಗಳ ಸೌಂದರ್ಯವರ್ಧನೆಗೆ ಮಾತ್ರ ಸೀಮಿತವಾಗಿಲ್ಲ. ಯಾತ್ರಾರ್ಥಿಗಳಿಗೆ ಉತ್ತಮ ರಸ್ತೆ ಸಂಪರ್ಕ, ಸ್ವಚ್ಛತೆ, ಕುಡಿಯುವ ನೀರು, ವಿಶ್ರಾಂತಿ ಸೌಲಭ್ಯಗಳು, ಪ್ರವಾಸಿ ಮಾಹಿತಿ ಕೇಂದ್ರಗಳು ಹಾಗೂ ಇತರೆ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿ, ಧಾರ್ಮಿಕ ಪ್ರವಾಸವನ್ನು ಸುಲಭ ಹಾಗೂ ಅನುಕೂಲಕರವಾಗಿಸುವುದಾಗಿದೆ ಎಂದರು.

ಆಂಧ್ರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ರಸ್ತೆ ಸಂಪರ್ಕ ಮತ್ತಷ್ಟು ಸುಧಾರಿಸಿದಂತೆ ದೇವಾಲಯಗಳಿಗೆ ಪ್ರವಾಸಿಗರ ಆಗಮನ ಹೆಚ್ಚಳವಾಗಲಿದೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಹೊಸ ಚೈತನ್ಯ ಸಿಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಈ ಯೋಜನೆಯಿಂದ ದೇವಾಲಯಗಳ ಸುತ್ತಮುತ್ತ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೌಲಭ್ಯಗಳು ಅಭಿವೃದ್ಧಿಯಾಗುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆಯಿದ್ದು, ಧಾರ್ಮಿಕ ಪ್ರವಾಸೋದ್ಯಮವನ್ನು ಆರ್ಥಿಕ ಅಭಿವೃದ್ಧಿಯೊಂದಿಗೆ ಜೋಡಿಸುವ ಉದ್ದೇಶದಿಂದ ಯೋಜನೆ ಜಾರಿಗೊಳ್ಳಲಿದೆ.

ಈಗಾಗಲೇ ಆಂಧ್ರ ಪ್ರದೇಶದ ಶ್ರೀಶೈಲಮ್‌ ಹಾಗೂ ಶ್ರೀ ವರಾಹಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಸಾದ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಇದೀಗ ಇನ್ನಷ್ಟು ಪ್ರಮುಖ ದೇವಾಲಯಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ.

ಏನಿದು PRASHAD ಯೋಜನೆ?

  • PRASHAD ಎಂದರೆ Pilgrimage Rejuvenation and Spiritual, Heritage Augmentation Drive.
  • ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಪ್ರಮುಖ ಯೋಜನೆ.
  • ದೇಶದ ಪ್ರಮುಖ ಧಾರ್ಮಿಕ ಹಾಗೂ ಪಾರಂಪರಿಕ ತಾಣಗಳ ಸಮಗ್ರ ಅಭಿವೃದ್ಧಿ ಇದರ ಗುರಿ.
  • ರಸ್ತೆ, ಸ್ವಚ್ಛತೆ, ಕುಡಿಯುವ ನೀರು, ಬೆಳಕು, ಪ್ರವಾಸಿ ಮಾಹಿತಿ ಕೇಂದ್ರ, ಪಾರ್ಕಿಂಗ್ ಸೇರಿದಂತೆ ವಿವಿಧ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು.
  • ಧಾರ್ಮಿಕ ಪ್ರವಾಸೋದ್ಯಮದ ಮೂಲಕ ಸ್ಥಳೀಯ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ.