ನವದೆಹಲಿ ಮೃಗಾಲಯದಲ್ಲಿ ಹೊಸ ಆಪ್..ಏನಿದು ವಿಶೇಷ?
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರು ಈ ಹೊಸ ಡಿಜಿಟಲ್ ಉಪಕ್ರಮಗಳನ್ನು ಉದ್ಘಾಟಿಸಿದರು.
ಪ್ರವಾಸಿಗರಿಗೆ ಮತ್ತಷ್ಟು ಸುಲಭ ಮತ್ತು ತಂತ್ರಜ್ಞಾನ ಆಧಾರಿತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನವದೆಹಲಿಯ ರಾಷ್ಟ್ರೀಯ ಪ್ರಾಣಿಸಂಗ್ರಹಾಲಯವು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡುವ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸದಾಗಿ 'NZP ಸಾಥಿ ಆಪ್' ಮತ್ತು ಸ್ವಯಂ-ಟಿಕೆಟ್ ವಿತರಣಾ ಕಿಯೋಸ್ಕ್ಗಳನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರು ಈ ಹೊಸ ಡಿಜಿಟಲ್ ಉಪಕ್ರಮಗಳನ್ನು ಉದ್ಘಾಟಿಸಿದರು. ಸ್ಮಾರ್ಟ್ ನ್ಯಾವಿಗೇಷನ್ ಮತ್ತು ತಡೆರಹಿತ ಟಿಕೆಟ್ ಬುಕಿಂಗ್ ಮೂಲಕ ಪ್ರವಾಸಿಗರ ಅನುಭವವನ್ನು ಉತ್ತಮಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರಮುಖ ವೈಶಿಷ್ಟ್ಯಗಳು:
- ಈ ಮೊಬೈಲ್ ಅಪ್ಲಿಕೇಶನ್ ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಪ್ಲಾಟ್ಫಾರ್ಮ್ಗಳಲ್ಲೂ ಲಭ್ಯವಿದೆ.
- ಇದರಲ್ಲಿ ಇಂಟರಾಕ್ಟಿವ್ ಡಿಜಿಟಲ್ ಮ್ಯಾಪ್ ಮತ್ತು ಸ್ಮಾರ್ಟ್ ನ್ಯಾವಿಗೇಷನ್ ವ್ಯವಸ್ಥೆ ಇರಲಿದೆ.
- ಪ್ರವಾಸಿಗರಿಗಾಗಿ ಎಕ್ಸ್ಪ್ರೆಸ್, ಫ್ಯಾಮಿಲಿ, ಗ್ರಾಂಡ್ ಜೂ ಮತ್ತು ಕಸ್ಟಮೈಸ್ ಮಾಡಬಹುದಾದ ʼಮೈ ಟೂರ್ʼನಂಥ ವಿಷಯಾಧಾರಿತ ಪ್ರವಾಸದ ಆಯ್ಕೆಗಳನ್ನು ನೀಡಲಾಗಿದೆ.
- ಪ್ರಾಣಿಗಳ ಆವರಣಗಳು, ಶೌಚಾಲಯಗಳು, ಬಗ್ಗಿ ಪಾಯಿಂಟ್ಗಳು, ನಿರ್ಗಮನ ದ್ವಾರಗಳು ಮತ್ತು ಇತರ ಸೌಲಭ್ಯಗಳನ್ನು ಸುಲಭವಾಗಿ ಪತ್ತೆಹಚ್ಚಲು ಇದು ಪ್ರವಾಸಿಗರಿಗೆ ಸಹಾಯ ಮಾಡುತ್ತದೆ.
ಸ್ವಯಂ-ಟಿಕೆಟ್ ಕಿಯೋಸ್ಕ್ಗಳು:
- ಟಿಕೆಟ್ ಕೌಂಟರ್ಗಳ ಮುಂದೆ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಸ್ವಯಂ-ಟಿಕೆಟ್ ಕಿಯೋಸ್ಕ್ಗಳನ್ನು ಪರಿಚಯಿಸಲಾಗಿದೆ.
- ಇವುಗಳಲ್ಲಿ UPI ಆಧಾರಿತ ಡಿಜಿಟಲ್ ಪಾವತಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
- ಪ್ರಾಣಿಸಂಗ್ರಹಾಲಯದ ಆವರಣದಲ್ಲೇ ತಕ್ಷಣವೇ ಟಿಕೆಟ್ ಬುಕ್ ಮಾಡಿಕೊಳ್ಳಲು ಪ್ರವಾಸಿಗರಿಗೆ ಉಚಿತ ವೈ-ಫೈ ಸೌಲಭ್ಯವನ್ನೂ ಒದಗಿಸಲಾಗಿದೆ.
ಉದ್ಘಾಟನೆಯ ನಂತರ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿ, ಪ್ರಾಣಿಗಳ ಆವರಣಗಳನ್ನು ವೀಕ್ಷಿಸಿದರು ಹಾಗೂ ಅಲ್ಲಿನ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಪ್ರಾಣಿಸಂಗ್ರಹಾಲಯದಲ್ಲಿರುವ 'ಕಾರ್ತಿಕ್' ಮತ್ತು 'ಕರಣಿ' ಹೆಸರಿನ ಏಷ್ಯಾಟಿಕ್ ಸಿಂಹಗಳನ್ನು ವೀಕ್ಷಿಸಿದ ಸಚಿವರು, ಅವುಗಳ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.