ಚಾಲಕರಿಗೆ ಸಾಫ್ಟ್ ಸ್ಕಿಲ್ಸ್ ತರಬೇತಿ ನೀಡಲು ಕರ್ನಾಟಕ ಸರಕಾರ ನಿರ್ಧಾರ
ಕರ್ನಾಟಕದ ಪ್ರವಾಸೋದ್ಯಮವನ್ನು ವಿಶ್ವದರ್ಜೆಗೆ ಏರಿಸಲು ಮತ್ತು ಇಲ್ಲಿಗೆ ಬರುವ ಅತಿಥಿಗಳಿಗೆ ಸುರಕ್ಷಿತ ಹಾಗೂ ಸ್ನೇಹಪರ ವಾತಾವರಣ ಕಲ್ಪಿಸಲು ಈ ಸಾಫ್ಟ್ ಸ್ಕಿಲ್ಸ್ ತರಬೇತಿ ಪೂರಕ.
ಕರ್ನಾಟಕಕ್ಕೆ ಬರುವ ಪ್ರವಾಸಿಗರ ಮೇಲೆ ಉತ್ತಮ ಭಾವನೆ ಮೂಡಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪ್ರವಾಸಿಗರು ಮೊದಲು ಸಂಪರ್ಕಕ್ಕೆ ಬರುವ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ವೃತ್ತಿಪರ ನಡವಳಿಕೆ ಅಥವಾ ಮೃದು ಕೌಶಲಗಳ ತರಬೇತಿ ನೀಡಲು ಸರಕಾರ ಯೋಜಿಸಿದೆ.
ಇದನ್ನೂ ಓದಿ: ಕೆಎಸ್ಟಿಡಿಸಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವಪ್ರಸಾದ್ ಪಿ.ಆರ್ ನೇಮಕ
ಇತ್ತೀಚಿನ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯನ್ನು ಘೋಷಿಸಿದ್ದಾರೆ. ಪ್ರವಾಸಿಗರು, ವಿಶೇಷವಾಗಿ ವಿದೇಶಿಯರು, ಚಾಲಕರಿಂದ ಹೆಚ್ಚಿನ ಹಣ ವಸೂಲಿ ಅಥವಾ ಕಿರುಕುಳದ ಬಗ್ಗೆ ಪದೇ ಪದೆ ದೂರು ನೀಡುತ್ತಿದ್ದರು. ಇದನ್ನು ತಡೆಗಟ್ಟಲು ಮತ್ತು ರಾಜ್ಯದ ಘನತೆಯನ್ನು ಹೆಚ್ಚಿಸಲು ಈ ತರಬೇತಿ ಅನಿವಾರ್ಯವಾಗಿದೆ ಎಂದು ಇಲಾಖೆ ಭಾವಿಸಿದೆ.
ಕೇವಲ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಮಾತ್ರವಲ್ಲದೆ, ಪ್ರವಾಸಿ ಮಾರ್ಗದರ್ಶಿಗಳಿಗೆ, ಪೋರ್ಟರ್ಗಳಿಗೆ, ಪ್ರವಾಸೋದ್ಯಮ ಸ್ಥಳಗಳಲ್ಲಿ ನಿಯೋಜಿತವಾಗಿರುವ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ತರಬೇತಿ ನೀಡಲಾಗುವುದು. ಪ್ರವಾಸಿಗರನ್ನು ಗೌರವಯುತವಾಗಿ ಸ್ವಾಗತಿಸುವುದು, ವಿನಯಶೀಲವಾಗಿ ಸಂವಹನ ಮಾಡುವುದು, ಪ್ರವಾಸಿ ತಾಣಗಳ ಬಗ್ಗೆ ಮೂಲಭೂತ ಮಾಹಿತಿ ನೀಡುವುದು ಈ ತರಬೇತಿಯ ಪ್ರಮುಖ ವಿಷಯಗಳು.
ಈ ಕಾರ್ಯಕ್ರಮಕ್ಕಾಗಿ ಸರ್ಕಾರ 1 ಕೋಟಿ ರು. ಮೀಸಲಿಟ್ಟಿದ್ದು, ಹಂತ ಹಂತವಾಗಿ ಜಿಲ್ಲಾವಾರು ತರಬೇತಿ ನೀಡಲಾಗುವುದು. ಪ್ರತಿಯೊಂದು ಪ್ರವಾಸಿ ತಾಣದ ಅಗತ್ಯಕ್ಕೆ ತಕ್ಕಂತೆ ತರಬೇತಿಯನ್ನು ರೂಪಿಸಲಾಗುತ್ತದೆ. ಉದಾಹರಣೆಗೆ, ಐತಿಹಾಸಿಕ ತಾಣಗಳ ಚಾಲಕರಿಗೆ ನೀಡುವ ತರಬೇತಿಗೂ ಮತ್ತು ಕರಾವಳಿ ಭಾಗದ ಚಾಲಕರಿಗೆ ನೀಡುವ ತರಬೇತಿಗೂ ಸ್ವಲ್ಪ ವ್ಯತ್ಯಾಸವಿರಬಹುದು.
ವಿವಿಧ ಜಿಲ್ಲೆಗಳ ಚಾಲಕರ ಸಂಘಗಳ ಜತೆಗೂಡಿ ಇಲಾಖೆಯು ಈ ಮಾಡ್ಯೂಲ್ಗಳನ್ನು ಸಿದ್ಧಪಡಿಸಲಿದೆ. ಚಾಲಕರು ಸ್ವಚ್ಛವಾಗಿರುವುದು (ಉದಾಹರಣೆಗೆ ಶೇವ್ ಮಾಡಿಕೊಂಡಿರುವುದು) ಮತ್ತು ಅಚ್ಚುಕಟ್ಟಾದ ಉಡುಗೆ ತೊಡುವುದು ಕೂಡ ಪ್ರವಾಸಿಗರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಏರ್ಪೋರ್ಟ್ನಲ್ಲಿ ಸಂಚರಿಸುವ ವಾಹನಗಳಿಗೆ ಹೊಸ ರೂಲ್ಸ್
ಕರ್ನಾಟಕ ಪ್ರವಾಸೋದ್ಯಮ ಫೋರಂನ ಅಧ್ಯಕ್ಷರಾದ ಪ್ಯಾಟ್ರಿಕ್ ಜಾರ್ಜ್, “ಮೆಜೆಸ್ಟಿಕ್ನಿಂದ ಕೇವಲ 60-70 ರು. ಆಗುವ ದೂರಕ್ಕೆ ಇಂದಿಗೂ ಆಟೋ ಚಾಲಕರು ೨೦೦-೩೦೦ ರು. ಕೇಳುತ್ತಾರೆ. ಇಂಥ ವರ್ತನೆ ಪ್ರವಾಸಿಗರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ. ಮೃದು ಕೌಶಲ ತರಬೇತಿಯು ಪ್ರವಾಸಿಗರ ಅನುಭವವನ್ನು ಉತ್ತಮಗೊಳಿಸುವಲ್ಲಿ ಮಹತ್ತರ ಬದಲಾವಣೆ ತರಬಲ್ಲದು” ಎಂದಿದ್ದಾರೆ.