ತತ್ಕಾಲ್ ಟಿಕೆಟ್ ಬುಕಿಂಗ್ಗೆ ಆಧಾರ್ ಕಾರ್ಡ್ ಕಡ್ಡಾಯ: ಜುಲೈ 1ರಿಂದ ಜಾರಿ
ಭಾರತೀಯ ರೈಲ್ವೆ ಸಚಿವಾಲಯವು ಜುಲೈ 1ರಿಂದ ತತ್ಕಾಲ್ ಯೋಜನೆಯಡಿ ಟಿಕೆಟ್ ಬುಕಿಂಗ್ ಕೇವಲ ಆಧಾರ್ ದೃಢೀಕರಣಗೊಂಡ ಬಳಕೆದಾರರಿಗೆ ಮಾತ್ರ ಲಭ್ಯ ಎಂದು ಘೋಷಿಸಿದೆ. 2025ರ ಜೂ. 10ರಂದು ಜಾರಿಯಾದ ಸುತ್ತೋಲೆಯಲ್ಲಿ “ತತ್ಕಾಲ್ ಯೋಜನೆಯ ಪ್ರಯೋಜನಗಳು ಸಾಮಾನ್ಯ ಪ್ರಯಾಣಿಕರಿಗೆ ದೊರೆಯುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಸಚಿವಾಲಯ ತಿಳಿಸಿದೆ.
ನವದೆಹಲಿ: ಭಾರತೀಯ ರೈಲ್ವೆ ಸಚಿವಾಲಯವು (Railway Ministry) ಜುಲೈ 1ರಿಂದ ತತ್ಕಾಲ್ (Tatkal) ಯೋಜನೆಯಡಿ ಟಿಕೆಟ್ ಬುಕಿಂಗ್ ಕೇವಲ ಆಧಾರ್ ದೃಢೀಕರಣಗೊಂಡ ಬಳಕೆದಾರರಿಗೆ (Aadhar Authenticated Users) ಮಾತ್ರ ಲಭ್ಯ ಎಂದು ಘೋಷಿಸಿದೆ. 2025ರ ಜೂ. 10ರಂದು ಜಾರಿಯಾದ ಸುತ್ತೋಲೆಯಲ್ಲಿ “ತತ್ಕಾಲ್ ಯೋಜನೆಯ ಪ್ರಯೋಜನಗಳು ಸಾಮಾನ್ಯ ಪ್ರಯಾಣಿಕರಿಗೆ ದೊರೆಯುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಸಚಿವಾಲಯ ತಿಳಿಸಿದೆ.
“2025ರ ಜು. 1ರಿಂದ ತತ್ಕಾಲ್ ಟಿಕೆಟ್ಗಳನ್ನು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಕೇವಲ ಆಧಾರ್ ದೃಢೀಕರಣಗೊಂಡ ಬಳಕೆದಾರರು ಬುಕ್ ಮಾಡಬಹುದು” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. 2025ರ ಜುಲೈ 15ರಿಂದ ತತ್ಕಾಲ್ ಬುಕಿಂಗ್ಗೆ ಆಧಾರ್ ಆಧಾರಿತ OTP ದೃಢೀಕರಣವನ್ನೂ ಕಡ್ಡಾಯಗೊಳಿಸಲಾಗುತ್ತದೆ.

“ತತ್ಕಾಲ್ ಟಿಕೆಟ್ಗಳನ್ನು ಭಾರತೀಯ ರೈಲ್ವೆಯ ಕಂಪ್ಯೂಟರೈಸ್ಡ್ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಕೌಂಟರ್ಗಳು ಅಥವಾ ಅಧಿಕೃತ ಏಜೆಂಟ್ಗಳ ಮೂಲಕ ಬುಕ್ ಮಾಡಲು, ಬಳಕೆದಾರರು ನೀಡಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಸಿಸ್ಟಮ್-ಜನರೇಟೆಡ್ OTP ದೃಢೀಕರಣ ಅಗತ್ಯವಾಗಿರುತ್ತದೆ. ಇದನ್ನು ಜುಲೈ 15ರೊಳಗೆ ಜಾರಿಗೊಳಿಸಲಾಗುವುದು” ಎಂದು ಸುತ್ತೋಲೆ ತಿಳಿಸಿದೆ.
ಅಧಿಕೃತ ಟಿಕೆಟ್ ಏಜೆಂಟ್ಗಳಿಗೆ ತತ್ಕಾಲ್ ಬುಕಿಂಗ್ ಆರಂಭವಾಗುವ ಮೊದಲ 30 ನಿಮಿಷಗಳಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವಿರುವುದಿಲ್ಲ. ವಿಶೇಷವಾಗಿ, ಎಸಿ ಶ್ರೇಣಿಗಳಿಗೆ ಬೆಳಗ್ಗೆ 10ರಿಂದ 10:30ರವರೆಗೆ ಮತ್ತು ನಾನ್ ಎಸಿ ಶ್ರೇಣಿಗಳಿಗೆ 11ರಿಂದ 11:30ರವರೆಗೆ ಈ ನಿರ್ಬಂಧ ಜಾರಿಯಲ್ಲಿರುತ್ತದೆ.
ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ (CRIS) ಮತ್ತು IRCTCಗೆ ಸಿಸ್ಟಮ್ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಸಚಿವಾಲಯ ಸೂಚಿಸಿದೆ. ಈ ಬದಲಾವಣೆಗಳನ್ನು ಎಲ್ಲ ರೈಲ್ವೆ ವಲಯಗಳಿಗೆ ತಿಳಿಸಲಾಗುವುದು. ಈ ತಿದ್ದುಪಡಿಗಳ ಬಗ್ಗೆ ಸಾರ್ವಜನಿಕರಿಗೆ ಎಲ್ಲ ಸಾಧ್ಯ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗುವುದು ಎಂದು ಸುತ್ತೋಲೆ ತಿಳಿಸಿದೆ. ಸಾಮಾನ್ಯ ಪ್ರಯಾಣಿಕರಿಗೆ ತತ್ಕಾಲ್ ಯೋಜನೆಯ ಪ್ರಯೋಜನ ದೊರೆಯುವಂತೆ ಈ ಕ್ರಮವು ಖಾತರಿಪಡಿಸಲಿದೆ ಎಂದು ಸಚಿವಾಲಯ ತಿಳಿಸಿದೆ.