ಕೇರಳದಲ್ಲಿದೆ ಸಖತ್ ಪ್ರವಾಸಿ ತಾಣಗಳು!
ಕೇರಳದಲ್ಲಿ ಹತ್ತು ಹಲವು ಪ್ರವಾಸಿ ತಾಣಗಳಿವೆ. ಕೇರಳದ ಪ್ರತಿ ಪ್ರವಾಸ ತಾಣವೂ ಧರೆಗಿಳಿದ ಸ್ವರ್ಗದಂತೆ ಕಂಗೊಳಿಸುತ್ತದೆ. ಅಲ್ಲಿನ ವಾತಾವರಣ ಕಣ್ಮನ ಸೆಳೆಯುತ್ತದೆ.
ಕೇರಳ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ವರ್ಷದ ಯಾವ ಸೀಸನ್ನಲ್ಲಿ ಹೋದರೂ ಕೇರಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿನ ಹಚ್ಚ ಹಸಿರಿನ ವಾತಾವರಣವು ಪ್ರತಿಯೊಬ್ಬರ ಕಣ್ಮನವನ್ನು ಸೆಳೆಯುತ್ತದೆ. ಕೇರಳ ದೇವರನಾಡು ಅಷ್ಟೇ ಅಲ್ಲ. ಪ್ರವಾಸಕ್ಕೆ ಹೇಳಿ ಮಾಡಿಸಿದ ನಾಡೂ ಹೌದು. ಇಡೀ ಕೇರಳ ಸುತ್ತಲು ಕನಿಷ್ಠ ಒಂದು ವಾರವಾದರೂ ಬೇಕು. ನೀವು ಈ ಬೇಸಿಗೆಯಲ್ಲಿ ಕೇರಳಕ್ಕೆ ಹೋಗುವ ಪ್ಲ್ಯಾನ್ ಇದ್ದರೆ ಎರಡು ದಿನಗಳಲ್ಲಿ ದಿ ಮೋಸ್ಟ್ ಪ್ಯಾಪುಲರ್ ತಾಣಗಳಿಗೆ ಹೋಗಬಹುದು. ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಕೇರಳದ ಕೆಲವು ಪ್ರವಾಸ ತಾಣಗಳ ಕುರಿತು ಮಾಹಿತಿ ನೀಡುತ್ತೇವೆ.
ಅಲೆಪ್ಪಿ
ಕೇರಳದ ಅಲೆಪ್ಪಿ(Aleppy) ತಾಣವು ಪ್ರವಾಸಿಗರ ಫೇವರೇಟ್ ತಾಣ. ಅಲ್ಲಿನ ವಾತಾವರಣ ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಅಲೆಪ್ಪಿಯನ್ನು 'ಪೂರ್ವದ ವೆನಿಸ್' ಎಂದು ಕರೆಯಲಾಗುತ್ತದೆ. ನೀವು ಕೇರಳ ಹೋದರೆ ಅಲೆಪ್ಪಿಗೆ ತಪ್ಪದೇ ಭೇಟಿನೀಡಿ. ಅಲ್ಲಿನ ಹೌಸ್ಬೋಟ್ ವಿಹಾರವನ್ನು ಅನುಭವಸಿಬಹುದು. ಮೈಗೆ ಕಚಗುಳಿ ಇಡುವ ವಾತಾವರಣ ಮತ್ತು ತಂಪಾದ ನೀರು ಒಳ್ಳೆಯ ಮಜಾ ನೀಡುತ್ತದೆ. ಪುರಾತನವಾದ ದೇವಾಲಯ, ಸ್ಥಳೀಯ ಮಾರುಕಟ್ಟೆಗಳಿಗೆ ಭೇಟಿ ನೀಡುವುದರ ಮೂಲಕ ಪ್ರವಾಸವನ್ನು ಅದ್ಬುತವಾಗಿಸಬಹುದು.

ಮುನ್ನಾರ್
ಮುನ್ನಾರ್(Munnar) ಇಡೀ ಕೇರಳದ ಸೌಂದರ್ಯವನ್ನು ತನ್ನ ಒಡಲಿನೊಳಗೆ ಇರಿಸಿಕೊಂಡಿದೆ. ತನ್ನ ಪ್ರಶಾಂತವಾದ ವಾತಾವರಣದಿಂದಲೇ ಆ ತಾಣ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುನ್ನಾರ್ ಮಧುಚಂದ್ರದ ತಾಣವೂ ಹೌದು. ಆಗಷ್ಟೇ ಮದುವೆಯಾದ ನವಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಚಹಾ ತೋಟಗಳು ಬೆರಗಿನ ಅನುಭವವನ್ನು ನೀಡುತ್ತದೆ. ಮಾನ್ಸೂನ್ ಸಮಯದಲ್ಲಿ ಅಲ್ಲಿಗೆ ಹೋದರಂತೂ ವ್ಹಾವ್! ಎಂಬಂಥ ಅನುಭವ. ತಲೆ ಮೇಲೆ ಹಿಮ ಬೀಳುತ್ತದೆ. ಎರವಿಕುಲಂ ರಾಷ್ಟ್ರೀಯ ಉದ್ಯಾನವನ ಆ ಸಮಯದಲ್ಲಿ ಕಂಗೊಳಿಸುತ್ತದೆ. ಅಟ್ಟುಕಲ್ ಜಲಪಾತದ ಸೌಂದರ್ಯವನ್ನೂ ಸವಿಯಬಹುದು.

ತ್ರಿಶೂರ್
ತ್ರಿಶೂರ್(Trissur) ಕೇರಳದ ರಾಜಧಾನಿ. ತ್ರಿಶೂರ್ನಲ್ಲಿಯೂ ಸಾಕಷ್ಟು ಪ್ರವಾಸಿ ತಾಣಗಳಿವೆ. ಗತ ಕಾಲದ ಇತಿಹಾಸವನ್ನು ತ್ರಿಶೂರ್ ಹೇಳುತ್ತದೆ. ಪುರಾತನ ದೇವಾಲಯಗಳು, ವಿಶಿಷ್ಟ ವಾಸ್ತುಶಿಲ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿನ ವಡಕ್ಕುನಾಥನ್ ದೇವಾಲಯವಂತೂ ವೈಭವತೆಯನ್ನು ಸಾರುತ್ತದೆ. ಅಷ್ಟೇ ಅಲ್ಲದೆ ಅಲ್ಲಿನ ಸಾಕಷ್ಟು ಸ್ಥಳೀಯ ದೇವಾಲಯಗಳು ತನ್ನದೇ ಆದ ರೋಚಕ ಇತಿಹಾಸವನ್ನು ಹೊಂದಿದೆ. ತ್ರಿಶೂರ್ನಲ್ಲಿ ಸದಾ ಹಬ್ಬ-ಹರಿದಿನ ಮತ್ತು ಜಾತ್ರಾ ಮಹೋತ್ಸವ ಇರುತ್ತದೆ. ದೇವಾಲಯಗಳನ್ನು ಇಷ್ಟಪಡುವವರು ಇಡೀ ಎರಡು ದಿನ ತ್ರಿಶೂರ್ ಅನ್ನು ಸುತ್ತಬಹುದು. ಕಡಿಮೆ ಎಂದರೂ ತ್ರಿಶೂರ್ ನಲ್ಲಿ ಹತ್ತಕ್ಕೂ ಹೆಚ್ಚು ಪುರಾಣ ಪ್ರಸಿದ್ಧ ದೇವಾಲಯಗಳಿವೆ.

ವಯನಾಡು
ನಿರಂತರ ಪ್ರವಾಹ ಮತ್ತು ಭೂಕುಸಿತದ ನಡುವೆಯೂ ಕೇರಳದ ವಯನಾಡು ತನ್ನ ನೈಸರ್ಗಿಕ ಸೌಂದರ್ಯವನ್ನು ಹಾಗೇ ಉಳಿಸಿಕೊಂಡಿದೆ. ಚಾರಣ ಪ್ರಿಯರಿಗೆ ವಯನಾಡು ಸಖತ್ ಇಷ್ಟವಾಗುತ್ತದೆ.ಅಲ್ಲಿನ ಬಾಣಾಸುರ ಸಾಗರ್ ಅಣೆಕಟ್ಟು ಮತ್ತು ವನ್ಯಜೀವ ಅಭಯಾರಣ್ಯವು ಹಿತವಾದ ಅನುಭವವನ್ನು ನೀಡುತ್ತದೆ. ಎಡಕ್ಕಲ್ ಗುಹೆಗೆ ಭೇಟಿ ನೀಡಲೆಂದೇ ಸಾವಿರಾರು ಪ್ರವಾಸಿಗರು ವಯನಾಡಿಗೆ ಭೇಟಿ ನೀಡುತ್ತಾರೆ. ಅಡ್ವೆಂಚರ್ಗಳನ್ನು ಇಷ್ಟಪಡುವ ಪ್ರವಾಸಿಗರು ಜಿಪ್ಲೈನ್ ಕೈಗೊಳ್ಳಬಹುದು. ಒಟ್ಟಾರೆ ವಯನಾಡು ಪ್ರವಾಸಕ್ಕೆ ದಿ ಬೆಸ್ಟ್ ತಾಣ ಎನ್ನಬಹದು. ಮೈಸೂರಿನಿಂದ ನಾಲ್ಕೈದು ಗಂಟೆಗಳ ಅವಧಿಯಲ್ಲಿ ಪ್ರಯಾಣಿಸಬಹುದು.
