ಭಾರತೀಯ ರೈಲಿನ ಕಥೆಯು ಏಪ್ರಿಲ್‌ 16, 1853ರಂದು ಮುಂಬೈ ಮತ್ತು ಥಾಣೆ ನಡುವೆ ಓಡಿದ ಮೊದಲ ಪ್ರಯಾಣಿಕ ರೈಲಿನೊಂದಿಗೆ ಪ್ರಾರಂಭವಾಯಿತು. ದಶಕಗಳು ಉರುಳಿದಂತೆ, ಈ ಜಾಲವು ದೂರದ ಪ್ರದೇಶಗಳನ್ನು ಸಂಪರ್ಕಿಸಿತು ಮತ್ತು ವ್ಯಾಪಾರ, ಪ್ರಯಾಣ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಸುಗಮಗೊಳಿಸಿತು. ಸ್ವಾತಂತ್ರ್ಯದ ನಂತರ, ಭಾರತೀಯ ರೈಲ್ವೆಯು ರಾಷ್ಟ್ರದ ಬೆನ್ನೆಲುಬಾಗಿ ಹೊರಹೊಮ್ಮಿತು.

ಇದನ್ನೂ ಓದಿ: ಭಾರತದ ರೈಲ್ವೆಯಲ್ಲಿ 1.53 ಲಕ್ಷ ಕೋಟಿ ಹೂಡಿಕೆ

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ರೈಲ್ವೆ ವಿಭಾಗವು ಹೊಸ ಯೋಜನೆಗಳನ್ನು ಶುರು ಮಾಡಿವೆ. ಅಷ್ಟೇ ಅಲ್ಲ, ಈಗಾಗಲೇ ನಡೆಯುತ್ತಿರುವ ಯೋಜನೆಗಳನ್ನು ಶೀಘ್ರವಾಗಿ ಹಾಗೂ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡುತ್ತಿದೆ. ಅತ್ಯಂತ ಗಮನಾರ್ಹ ಬೆಳವಣಿಗೆ ಎಂದರೆ ಡಿಜಿಟಲ್‌ ಅಭಿವೃದ್ಧಿ. ಇದಕ್ಕೊಂದು ಸಣ್ಣ ಉದಾಹರಣೆ ಎಂದರೆ, ರೈಲ್ ಒನ್ ಆಪ್ ಮೂಲಕ ಬುಕ್ ಮಾಡಲಾಗುವ ಅನ್ ರಿಸರ್ವ್ಡ್ ಟಿಕೆಟ್‌ಗಳ ಮೇಲೆ ಶೇಕಡಾ 3 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರ ಜತೆಗೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ, ಎಐ ಆಧಾರಿತ ಸುಕ್ಷತಾ ಕಾರ್ಯಗಳು, ಪ್ರಯಾಣಿಕರಿಗೆ ಸುಲಭ ಸೌಲಭ್ಯಗಳ ವ್ಯವಸ್ಥೆ, ಸ್ವಚ್ಛತೆ, ʼಸ್ಮಾರ್ಟ್‌ ರೈಲ್ವೆʼ ಮತ್ತು ನಿಲ್ದಾಣದ ಆಧುನೀಕರಣದೊಂದಿಗೆ ರೈಲ್ವೆ ಗುಣಮಟ್ಟವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯುತ್ತಿದೆ. ಇನ್ನು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂಥ ಅತಿವೇಗದ ರೈಲುಗಳ ಪರಿಚಯ. ಸರಕು ಸಾಗಣೆಯನ್ನು ಸುಗಮಗೊಳಿಸಲು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಗಮನಾರ್ಹ ಬೆಳವಣಿಗೆಗಳು:

ʼಕವಚ್‌ʼ ಎಂಬ ಸುರಕ್ಷಾ ಕವಚವನ್ನು ಅಳವಡಿಸುವ ಜತೆಗೆ ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆಗಳ ಅನುಷ್ಠಾನ, ಕೋಚ್‌ಗಳಲ್ಲಿ ಬಯೋ-ಟಾಯ್ಲೆಟ್‌ಗಳು ಮತ್ತು ಸೌರಶಕ್ತಿ ಚಾಲಿತ ನಿಲ್ದಾಣಗಳಂಥ ನವೀಕರಿಸಬಹುದಾದ ಇಂಧನ ಉಪಕ್ರಮಗಳು ದೂರದೃಷ್ಟಿಯ ಚಿಂತನೆಯನ್ನು ಪ್ರದರ್ಶಿಸುತ್ತವೆ. ಹಲವು ಹೊಸ ವ್ಯವಸ್ಥೆಗಳನ್ನು ಪರಿಚಯಿಸಿದೆ. ರೈಲ್ವೆ ಇಲಾಖೆಯು 'ಗಜರಾಜ್' ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಇದು ಹಳಿಗಳ ಬಳಿ ಆನೆಗಳ ಚಲನವಲನವನ್ನು ಪತ್ತೆಹಚ್ಚಿ ಚಾಲಕರಿಗೆ ಮೊದಲೇ ಎಚ್ಚರಿಕೆ ನೀಡುತ್ತದೆ. ಬೇಸಗೆಯಲ್ಲಿ ಜನರು ಹೆಚ್ಚು ಪ್ರಯಾಣ ಮಾಡುವ ಸ್ಥಳಗಳಿಗೆ, ಉದಾಹರಣೆಗೆ ಬೆಂಗಳೂರಿನಿಂದ ವಿಶೇಷ ರೈಲುಗಳ ಸಂಪರ್ಕವನ್ನು ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಸಂಚಾರ ಸುಲಭಗೊಳಿಸಿದೆ. ದೇಶಾದ್ಯಂತ ರೈಲು ಸಂಪರ್ಕವನ್ನು ಬಲಪಡಿಸಲು ನೂರು ಪ್ರಮುಖ ರೈಲ್ವೆ ವಿಸ್ತರಣೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದಕ್ಕಾಗಿ ಒಟ್ಟು 1.53 ಲಕ್ಷ ಕೋಟಿ ರುಪಾಯಿಗಳ ಬೃಹತ್ ಹೂಡಿಕೆಯನ್ನು ಘೋಷಿಸಲಾಗಿದೆ. ಈ ಎಲ್ಲ ವಿಷಯಗಳ ನಿರಂತರ ಮಾಹಿತಿಗಳನ್ನು ಹಂಚಿಕೊಳ್ಳುವುದರೊಂದಿಗೆ ಭಾರತೀಯ ರೈಲ್ವೆ ಜನಸಾಮನ್ಯರಿಗೆ ಇನ್ನಷ್ಟು ಆಪ್ತವಾಗುತ್ತಿರುವುದು ಗಮನಿಸಬೇಕಾದ ಸಂಗತಿ.

ಯೋಜನೆಗಳ ಪಟ್ಟಿ:

  • ರಿಷಿಕೇಶ–ಕರ್ಣಪ್ರಯಾಗ ರೈಲು ಮಾರ್ಗ: ಇದು 'ಚಾರ್ ಧಾಮ್' ಸಂಪರ್ಕದ ಭಾಗವಾಗಿದ್ದು, ಹೆಚ್ಚಿನ ಭಾಗ ಸುರಂಗ ಮಾರ್ಗವನ್ನು ಹೊಂದಿದೆ.
  • ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲು ಸಂಪರ್ಕ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ 'ಚೆನಾಬ್ ಸೇತುವೆ'ಯನ್ನು ಒಳಗೊಂಡಿದೆ.
  • ಸಿವೋಕ್-ರಂಗ್ಪೋ ರೈಲು ಮಾರ್ಗ: ಸಿಕ್ಕಿಂ ರಾಜ್ಯಕ್ಕೆ ಮೊದಲ ರೈಲು ಸಂಪರ್ಕವನ್ನು ಒದಗಿಸುವ ಈಶಾನ್ಯ ಭಾರತದ ಆಯಕಟ್ಟಿನ ಯೋಜನೆ.
  • ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (ಬುಲೆಟ್ ಟ್ರೈನ್): ಜಪಾನಿನ ಶಿಂಕನ್ಸೆನ್ ತಂತ್ರಜ್ಞಾನವನ್ನು ಬಳಸುತ್ತಿರುವ ಭಾರತದ ಮೊದಲ ಬುಲೆಟ್ ಟ್ರೈನ್ ಯೋಜನೆ.
  • ವಂದೇ ಭಾರತ್ ವಿಸ್ತರಣೆ: ಹೊಸ ಮಾರ್ಗಗಳು, ಉತ್ಪಾದನಾ ಘಟಕಗಳು ಮತ್ತು ನಿರ್ವಹಣಾ ಡಿಪೋಗಳ ಸ್ಥಾಪನೆ.
  • ಭವಿಷ್ಯದ ಹೈ-ಸ್ಪೀಡ್ ಕಾರಿಡಾರ್‌ಗಳು (ಪ್ರಸ್ತಾವಿತ): ದೆಹಲಿ-ವಾರಣಾಸಿ, ಮುಂಬೈ-ನಾಗ್ಪುರ ಮತ್ತು ಚೆನ್ನೈ-ಮೈಸೂರು ಮಾರ್ಗಗಳು.
  • ಪಶ್ಚಿಮ ಡಿಎಫ್‌ಸಿ: ಉತ್ತರ ಪ್ರದೇಶದ ದಾದ್ರಿಯಿಂದ ಮುಂಬೈನ ಜವಾಹರಲಾಲ್ ನೆಹರು ಬಂದರಿನವರೆಗೆ.
  • ಪೂರ್ವ ಡಿಎಫ್‌ಸಿ: ಪಂಜಾಬ್‌ನಿಂದ ಪಶ್ಚಿಮ ಬಂಗಾಳದವರೆಗೆ.
  • ಕರ್ನಾಟಕ ಸೇರಿದಂತೆ ದೇಶಾದ್ಯಂತ ಸುಮಾರು 150ಕ್ಕೂ ಹೆಚ್ಚು ಹೊಸ ಮಾರ್ಗಗಳ ಕೆಲಸ ನಡೆಯುತ್ತಿದೆ: ತುಮಕೂರು – ದಾವಣಗೆರೆ, ಗದಗ – ವಾಡಿ, ಗಿನಿ ಗೆರಾ – ರಾಯಚೂರು
  • ಇಟಾರ್ಸಿ - ಭೋಪಾಲ್ - ಬಿನಾ 4ನೇ ಮಾರ್ಗ, ವರ್ಧಾ - ಭುಸಾವಲ್ ವಿಸ್ತರಣೆ ಮತ್ತು ಹೊಟಗಿ - ಗದಗ ದ್ವಿಗುಣಗೊಳಿಸುವುದು ಮತ್ತು ಇತ್ಯಾದಿ.
  • ಬ್ರಾಡ್ ಗೇಜ್ ಜಾಲದ ಬಹುತೇಕ 100% ವಿದ್ಯುದೀಕರಣ ಗುರಿ.
  • ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ರೈಲ್ವೆಯತ್ತ ಗಮನ.
  • ಅಮೃತ್ ಭಾರತ್ ಸ್ಟೇಷನ್ ಯೋಜನೆ: 1000ಕ್ಕೂ ಹೆಚ್ಚು ನಿಲ್ದಾಣಗಳ ನವೀಕರಣ. ವಿಮಾನ ನಿಲ್ದಾಣದಂಥ ಸೌಲಭ್ಯಗಳು, ಸ್ಮಾರ್ಟ್ ವ್ಯವಸ್ಥೆಗಳು.
  • ಹೊಸ ಪಂಬನ್ ರೈಲ್ವೆ ಸೇತುವೆ: ತಮಿಳುನಾಡಿನಲ್ಲಿ ಸಮುದ್ರದ ಮೇಲೆ ನಿರ್ಮಾಣವಾಗುತ್ತಿರುವ ಆಧುನಿಕ ಸೇತುವೆ.
  • ಅಸ್ಸಾಂನ ಬೋಗಿಬೀಲ್ ಸೇತುವೆ ಸಂಪರ್ಕ ಸುಧಾರಣೆ
  • ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು ಮತ್ತು ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಸ್ಥಾಪನೆ.
  • ರೈಲ್ವೆಯನ್ನು ದೇಶದ ಸಾರಿಗೆಯ ಬೆನ್ನೆಲುಬನ್ನಾಗಿ ಮಾಡುವ ಪ್ರಯತ್ನ.
  • ಕವಚ: ರೈಲುಗಳ ಮುಖಾಮುಖಿ ಡಿಕ್ಕಿ ತಪ್ಪಿಸುವ ಸ್ವದೇಶಿ ತಂತ್ರಜ್ಞಾನ.
  • ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣೆ ಮತ್ತು ಸ್ಮಾರ್ಟ್ ಸಿಗ್ನಲಿಂಗ್ ವ್ಯವಸ್ಥೆ.