ನೈಸರ್ಗಿಕ ಸೌಂದರ್ಯವನ್ನು ಮೈಗೆ ಮೆತ್ತಿಕೊಂಡಿರುವ ಪಿಲಿಕುಳ ನಿಸರ್ಗಧಾಮ
ತುಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಲ್ಲಿ ಅದ್ಭುತ ವಿನ್ಯಾಸದಲ್ಲಿ ಕಲಾಗ್ರಾಮವನ್ನು ನಿರ್ಮಿಸಲಾಗಿದೆ. ಇಲ್ಲಿ ಗ್ರಾಮೀಣ ಪರಿಸರವನ್ನು ಬಿಂಬಿಸುವ ಕಲಾಕೃತಿಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಗೆ ಅಕ್ಷರಶಃ ಕನ್ನಡಿ ಹಿಡಿಯುತ್ತದೆ.
ಈ ಬೇಸಿಗೆ ರಜೆಯಲ್ಲಿ ಪ್ರವಾಸ ಹೋಗಲು ನೀವು ಖಂಡಿತ ಪ್ಲ್ಯಾನ್ ಮಾಡಿಕೊಂಡಿರುತ್ತೀರಿ. ಪ್ರವಾಸಕ್ಕೆ ಹೊರಡಲು ಸಿದ್ಧರಾಗಿರುವ ನೀವು ತಪ್ಪದೇ ಮಂಗಳೂರು ನಗರದ ಹೊರವಲಯದಲ್ಲಿರುವ ಕಡಲತೀರದ ಭಾರ್ಗವ ಶಿವರಾಮ ಕಾರಂತರ(Shivarama Karantha) ಪಿಲಿಕುಳ(Pilikula) ನಿಸರ್ಗಧಾಮಕ್ಕೆ(Nature Garden) ಭೇಟಿ ನೀಡಬಹುದು. ಪ್ರವಾಸಿ ಪ್ರಿಯರನ್ನು ಆಕರ್ಷಿಸುವ ಅತ್ಯಂತ ಸುಂದರ ತಾಣವಿದು. ಅಚ್ಚ ಹಸುರಿನ ವಾತಾವರಣದಲ್ಲಿನ ಪಕ್ಷಿಗಳ ಕಲರವ ಕಿವಿಗಳಿಗೆ ಕಚಗುಳಿ ಇಡುತ್ತದೆ. ನಾನಾ ಪ್ರಾಣಿಗಳು ಕಣ್ಣಿಗೆ ಬೀಳುವುದರಿಂದ ಸಂತಸ ಉಂಟಾಗುತ್ತದೆ. ಪಿಲಿಕುಳದಲ್ಲಿ ಜೀವ ವೈವಿಧ್ಯತೆಗಳ ಅಪೂರ್ವ ಸಂಗಮವಿದೆ.
ಪಿಲಿಕುಳ ಎನ್ನುವುದು ತುಳು ಭಾಷೆಯ ವ್ಯುತ್ಫತ್ತಿಯಾಗಿದೆ. 'ಪಿಲಿ' ಎಂದರೆ ಕನ್ನಡದಲ್ಲಿ ಹುಲಿ ಎಂದು, 'ಕುಳ' ಎಂದರೆ ಕೊಳ ಎಂಬ ಅರ್ಥವನ್ನು ನೀಡುತ್ತದೆ. ಹಿಂದಿನ ಕಾಲದಲ್ಲಿ ಪಿಲಿಕುಳ ಎಂಬ ಸ್ಥಳವು ದಟ್ಟಾರಣ್ಯವಾಗಿತ್ತು ಎನ್ನಲಾಗಿದೆ. ಆಗ ಸಾಕಷ್ಟು ಹುಲಿಗಳು ಅಲ್ಲಿದ್ದವು ಆದ್ದರಿಂದ, ಅದಕ್ಕೆ ಪಿಲಿಕುಳ ಎಂಬ ಹೆಸರು ಬಂದಿತು ಎನ್ನುತ್ತದೆ ಸ್ಥಳ ಇತಿಹಾಸ.
ಅತ್ಯಾಕರ್ಷಕ ಉದ್ಯಾನ : ಸರಿ ಸುಮಾರು 370 ಎಕರೆಯಲ್ಲಿ ಪಿಲಿಕುಳ ನಿಸರ್ಗಧಾಮವಿದೆ. ಸಸ್ಯಧಾಮ, ಮತ್ಸ್ಯಾಲಯ, ಸಂಸ್ಕೃತಿ ಗ್ರಾಮ, ಕರಕುಶಲ ಗ್ರಾಮ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಅಮ್ಯೂಸ್ ಮೆಂಟ್ ಪಾರ್ಕ್, ಗಾಲ್ಫ್ ಕೋರ್ಸ್, ಪ್ರವಾಸಿ ಕುಟೀರ ( ರೆಸಾರ್ಟ್), ದೋಣಿ ವಿಹಾರ ಮುಂತಾದ ಆಕರ್ಷಣೆಯ ಸ್ಥಳಗಳು ಇಲ್ಲಿವೆ. 150 ಎಕರೆಯ ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ, ಕರಡಿ, ಆನೆ, ಜಿಂಕೆ, ಕಡವೆ, ಕಾಡುಕುರಿ ಸಹಿತ 400ಕ್ಕೂ ಹೆಚ್ಚು ವನ್ಯ ಪ್ರಾಣಿ ಮತ್ತು ಪಕ್ಷಿ ಸಂಕುಲಗಳಿವೆ. 15ಕ್ಕಿಂತಲೂ ಹೆಚ್ಚು ಕಾಳಿಂಗ ಸರ್ಪಗಳಿವೆ. ಸಸ್ಯಧಾಮದಲ್ಲಿ 282 ಅಪರೂಪದ ಜಾತಿಗೆ ಸೇರಿದ ಸಸ್ಯಗಳಿವೆ. 60000ಕ್ಕೂ ಅಧಿಕ ಗಿಡಗಳಿವೆ. ಪಶ್ಚಿಮ ಘಟ್ಟ ಕರಾವಳಿ ಪ್ರದೇಶದ 82ಕ್ಕೂ ಅಧಿಕ ಜಾತಿಯ ಸಿಹಿ ನೀರಿನ ಮೀನು ತಳಿಗಳನ್ನು ಕೂಡ ಇಲ್ಲಿ ನೋಡಬಹುದು.

ಕಲಾ ಗ್ರಾಮ : ತುಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಲ್ಲಿ ಅದ್ಭುತ ವಿನ್ಯಾಸದಲ್ಲಿ ಕಲಾಗ್ರಾಮವನ್ನು ನಿರ್ಮಿಸಲಾಗಿದೆ. ಇಲ್ಲಿ ಗ್ರಾಮೀಣ ಪರಿಸರವನ್ನು ಬಿಂಬಿಸುವ ಕಲಾಕೃತಿಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಗೆ ಅಕ್ಷರಶಃ ಕನ್ನಡಿ ಹಿಡಿಯುತ್ತದೆ. ಗುತ್ತಿಗೆ ಮನೆ, ಕೊಟ್ಟಿಗೆ, ಗದ್ದೆಯಲ್ಲಿ ಕಂಬಳ, ಮನೆಯ ಕುಂಬಾರಿಕೆ, ಕಮ್ಮಾರಿಕೆ ಹೀಗೆ ಹಲವು ವೃತ್ತಿಗಳ ಕಲಾಕೃತಿಗಳಿವೆ. ವಿಜ್ಞಾನದ ಮ್ಯೂಸಿಯಂ, ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ವಾಟರ್ ಪಾರ್ಕ್, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಗಳು ಅಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಲಭ್ಯವಿದೆ. ದೊಡ್ಡ ಕೆರೆಯಲ್ಲಿ ದೋಣಿ ವಿಹಾರವನ್ನೂ ಮಾಡಿ ಸಂತಸಪಡಬಹುದು.

ಹೋಗುವುದು ಹೇಗೆ: ಮಂಗಳೂರು ನಗರದಿಂದ ನಂತೂರು ಮಾರ್ಗವಾಗಿ ಸಾಗಿ ಮುಡುಷೆದ್ಡೆ ಜಂಕ್ಷನ್ ಇಂದ ಎಡಕ್ಕೆ ತಿರುಗಿದರೆ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಬಹುದು. ಹತ್ತಾರು ಸಿಟಿ ಬಸ್ ಸೌಲಭ್ಯವೂ ಇದೆ. ಮಂಗಳೂರಿಗೆ ಬಂದರೆ ಖಾಸಗಿ ಬಸ್ಗಳ ಮೂಲಕವೂ ತಲುಪಬಹುದು. ಖಾಸಗಿ ವಾಹನಗಳಿದ್ದರೆ ಬಹಳ ಸುಲಭವಾಗಿ ಪ್ರವಾಸಿಧಾಮವನ್ನು ತಲುಪಬಹುದು.