ಈ ಬೆಟ್ಟಗಳನ್ನೊಮ್ಮೆ ನೀವು ಹತ್ತಿ ಇಳಿಯಲೇಬೇಕು!
ಹಚ್ಚ ಹಸುರಿನ ಸೌಂದರ್ಯ ಈ ತಾಣದ ವಿಶೇಷತೆ. ವನ್ಯ ಮೃಗಗಳು ಕೂಡ ಇಲ್ಲಿ ಓಡಾಡುತ್ತವೆ. ಬಿಳಿ ಗಿರಿ ರಂಗನಾಥನ ದೇವಾಲಯವು ಇಲ್ಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ.
“Away to the hills, away! There is health in the summer air;-The rustling bough, and the bending spray, And the breath of flowers are there-The honey-bee's hum and the wild bird's song, And sunshine and summer winds all day long! Away to the hills, away!” ಎನ್ನುತ್ತಾನೆ ಕವಿ. ಬೆಟ್ಟಗಳನ್ನು ಹತ್ತಿ ಇಳಿದಾಗ ಸಿಗುವ ಮಜಾವೇ ಬೇರೆ. ಅಲ್ಲಿನ ಪ್ರಶಾಂತತೆ, ಮನೋಹರವಾದ ವಾತಾವರಣ, ಕಿವಿಗೆ ಕಚಗುಳಿ ಇಡುವ ಹಕ್ಕಿಗಳ ಕಲರವ, ಕಾಲುಗಳಿಗೆ ಮುತ್ತಿಕ್ಕುವ ಹುಳ ಹುಪ್ಪಟೆಗಳು, ಕಣ್ಣು ನೆಟ್ಟಷ್ಟೂ ಕಾಣುವ ಗುಡ್ಡಗಳು ಬೆಟ್ಟವೆಂದರೆ ಹೀಗೆಯೇ! ಅಪರೂಪಕ್ಕೊಮ್ಮೆಯಾದರೂ ಬೆಟ್ಟಗಳನ್ನು ಹತ್ತಿ ಇಳಿಯಬೇಕು. ಮನಸ್ಸು ಹಗುರಾಗುತ್ತದೆ. ಅದೆಷ್ಟೋ ಜಂಜಾಟಗಳನ್ನು ಮರೆಯುತ್ತೇವೆ. ನಮ್ಮದೇ ಲೋಕದಲ್ಲಿ ತೇಲಿ ನಲಿಯುತ್ತೇವೆ. ದೈಹಿಕ ಮತ್ತು ಮಾನಸಿಕ ನೆಮ್ಮದಿಗಳೆರಡೂ ಇದರಿಂದ ಸಿಗುತ್ತದೆ. ಹಾಗಾಗಿ ನೀವು ಆಗಾಗ್ಗೆ ಬೆಟ್ಟಗಳನ್ನೊಮ್ಮೆ ಹತ್ತಬೇಕು. ಸಾಧ್ಯವಾದರೆ ಬೆಟ್ಟದ ಮೇಲೆ ಕೂತು ಊಟ ಮಾಡಬೇಕು. ಕರ್ನಾಟಕದಲ್ಲೇ ಇರುವ ಈ ಐದು ದಿ ಬೆಸ್ಟ್ ಬೆಟ್ಟಗಳಿಗೆ ಒಮ್ಮೆ ಭೇಟಿ ಕೊಡಿ. ಹೇಗಿದ್ದರೂ ಈಗ ನಿಮ್ಮ ಮಕ್ಕಳಿಗೆ ರಜೆಯಿದೆ. ಮರು ಯೋಚಿಸದೆ ಈಗಲೇ ಅವರನ್ನು ಕರೆದುಕೊಂಡು ಹೊರಡಿ. ನಿಮ್ಮ ಎದೆಭಾರವೂ ಕಡಿಮೆಯಾಗಲಿ. ಲೈಫ್ ಇಸ್ ಜಿಂಗಲಾಲ!
ಬಿಳಿಗಿರಿ ರಂಗನಬೆಟ್ಟ: ಕರ್ನಾಟಕದ ಬಿಳಿಗಿರಿ ರಂಗನಬೆಟ್ಟ(BR Hills) ಹೆಚ್ಚು ಪ್ರಸಿದ್ಧಿ ಪಡೆದಿರುವ ಪ್ರವಾಸಿ ತಾಣವಾಗಿದೆ. ಇದನ್ನು ಪ್ರವಾಸಿಗರು ಬಿಆರ್ ಹಿಲ್ಸ್ ಎಂದು ಕರೆಯುತ್ತಾರೆ. ಬಿಆರ್ಎಲ್ ಅತ್ಯಂತ ಸುಂದರ ಮತ್ತು ಪ್ರಶಾಂತವಾದ ಗಿರಿಧಾಮವಾಗಿದ್ದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಸಮುದ್ರ ಮಟ್ಟದಿಂದ ಸರಿ ಸುಮಾರು 5900 ಅಡಿ ಎತ್ತರದಲ್ಲಿ ಈ ಗಿರಿಧಾಮವಿದ್ದು,ಕರ್ನಾಟಕವಷ್ಟೇ ಅಲ್ಲದೇ ಹೊರ ರಾಜ್ಯದ ಪ್ರವಾಸಿಗರು ಕೂಡ ಈ ತಾಣಕ್ಕೆ ಭೇಟಿ ನೀಡಿ ಮನಸ್ಸನ್ನು ಚಿಲ್ ಆಗಿಸಿಕೊಳ್ಳುತ್ತಾರೆ. ಹಚ್ಚ ಹಸಿರಿನ ಸೌಂದರ್ಯ ಈ ತಾಣದ ವಿಶೇಷತೆ. ವನ್ಯ ಮೃಗಗಳು ಕೂಡ ಇಲ್ಲಿ ಓಡಾಡುತ್ತವೆ. ಬಿಳಿ ಗಿರಿ ರಂಗನಾಥನ ದೇವಾಲಯವು ಇಲ್ಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ.

ಚಿಕ್ಕಮಗಳೂರು: ಚಿಕ್ಕಮಗಳೂರೆಂದರೆ (Chikkamagaluru) ಪ್ರವಾಸಿಗರು ಹುಚ್ಚೆದ್ದು ಕುಣಿಯುತ್ತಾರೆ. ಪ್ರವಾಸಿಗರ ಮೊದಲ ಆಯ್ಕೆಯೂ ಚಿಕ್ಕಮಗಳೂರೇ ಆಗಿರುತ್ತದೆ. ಇಲ್ಲಿರೋ ಸೌಭಾಗ್ಯ ಎಲ್ಲೂ ಇಲ್ಲ ಎಂಬಂಥ ಅನುಭವವನ್ನು ಚಿಕ್ಕಮಗಳೂರು ಪ್ರವಾಸಿಗರಿಗೆ ನೀಡುತ್ತದೆ. ಎತ್ತ ನೋಡಿದರೂ ಕಾಫಿ ತೋಟಗಳು, ಹಚ್ಚ ಹಸಿರಿನ ಸೌಂದರ್ಯದ ನಡುವೆ ಹರಿಯುವ ಜಲಧಾರೆಗಳು ವಾರೆ ವ್ಹಾ! ಸ್ವರ್ಗಕ್ಕೆ ಮೂರೇ ಗೇಣು! ಸಾಹಸ ಕ್ರೀಡೆ ಇಷ್ಟಪಡುವವರಿಗಂತೂ ಚಿಕ್ಕಮಗಳೂರು ಹೇಳಿ ಮಾಡಿಸಿದ ತಾಣ. ಚಾರಣ ಪ್ರಿಯರು ಮುಳ್ಳಯ್ಯನ ಗಿರಿ ಬೆಟ್ಟವನ್ನು ಹತ್ತಿ ಇಳಿಯುತ್ತಾರೆ. ಬೆಳಗಿನ ಜಾವ ಬೆಟ್ಟವನ್ನು ಹತ್ತಿ ಅಲ್ಲಿ ಸೂರ್ಯೋದಯವನ್ನು ನೋಡಿದಾಗ ಪ್ರವಾಸಿಗರು ಉಲ್ಲಸಿತರಾಗುತ್ತಾರೆ. ಇನ್ನು ಚಿಕ್ಕಮಗಳೂರಿನ ಹಬೆಯಾಡುವ ಕಾಫಿ ನಮ್ಮನ್ನು ಬೆಚ್ಚಗಿರಿಸುತ್ತದೆ. ಹೋಂ ಸ್ಟೇ ಮತ್ತು ರೆಸಾರ್ಟ್ ಪ್ರಿಯರಿಗಂತೂ ಚಿಕ್ಕಮಗಳೂರು ದೇವಲೋಕ.

ನಂದಿಬೆಟ್ಟ: ದೂರದ ಊರಿನ ಬೆಟ್ಟಗಳಿಗೆ ಹೋಗುವುದು ಕಷ್ಟ ಎಂದಾದರೆ ರಾಜಧಾನಿ ಬೆಂಗಳೂರಿನಿಂದ ತೀರಾ ಹತ್ತಿರದಲ್ಲಿರುವ ನಂದಿಬೆಟ್ಟ(Nandi Hills) ಪ್ರವಾಸಿಗರಿಗೆ ಮತ್ತು ಚಾರಣ ಪ್ರಿಯರಿಗೆ ಅಚ್ಚುಮೆಚ್ಚಿನ ಸ್ಥಳ. ಒಂದು ದಿನದ ಪ್ರವಾಸಕ್ಕೆ ತೆರಳುವ ಪ್ರವಾಸಿಗರ ಮೊದಲ ಆದ್ಯತೆ ನಂದಿಬೆಟ್ಟವಾಗಿರಲಿ. ಬೆಳಗಿನ ಸಮಯದಲ್ಲಿ ನಂದಿಬೆಟ್ಟ ಅತ್ಯಂತ ಮನೋಹರವಾಗಿ ಕಾಣಿಸುತ್ತದೆ. ವರ್ಷವಿಡೀ ಆಹ್ಲಾದಕರವಾದ ವಾತಾವರಣವನ್ನು ನಂದಿ ಬೆಟ್ಟ ಹೊಂದಿರುತ್ತದೆ. ಸಮುದ್ರಮಟ್ಟದಿಂದ ಸುಮಾರು 4849 ಅಡಿ ಎತ್ತರದಲ್ಲಿರುವ ನಂದಿ ಬೆಟ್ಟ ಹಚ್ಚ ಹಸಿರಿನ ಆಭರಣ ತೊಟ್ಟು ಸದಾ ಕಂಗೊಳಿಸುತ್ತದೆ. ಬೆಟ್ಟದ ಮೇಲೆ ಪ್ರಾಚೀನ ದೇವಾಲಯ, ಸ್ಮಾರಕಗಳು ಮತ್ತು ಐತಿಹಾಸಿಕ ಕೋಟೆಗಳಿವೆ. ಟ್ರೆಕ್ಕಿಂಗ್, ಸೈಕ್ಲಿಂಗ್, ಕ್ಯಾಂಪಿಂಗ್ನಂತಹ ಹೊರಾಂಗಣ ಚಟುವಟಿಕೆಗಳನ್ನು ಭರಪೂರ ಉತ್ಸಾಹದಲ್ಲಿ ಎಂಜಾಯ್ ಮಾಡಬಹುದು.

ಕೆಮ್ಮಣ್ಣುಗುಂಡಿ: ಕರ್ನಾಟಕದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಕೆಮ್ಮಣ್ಣುಗುಂಡಿಗೆ(Kemmannugundi) ಅಗ್ರ ಸ್ಥಾನವಿದೆ. ಪ್ರವಾಸಿಗರ ಇಷ್ಟದ ತಾಣವಾಗಿ ವರ್ಷವಿಡೀ ಇದು ಎಲ್ಲರನ್ನು ಸೆಳೆಯುತ್ತದೆ. ವಿಶೇಷವಾದ ವಾತಾವರಣ, ಹಿತವಾದ ಗಾಳಿ ಮಧುರಾನುಭೂತಿಯನ್ನು ನೀಡುತ್ತದೆ. ಬಾಬಾ ಬುಡನ್ ಗಿರಿ ಶ್ರೇಣಿಯಲ್ಲಿ ಇದು ಅತ್ಯಂತ ಸುಂದರವಾದ ಗಿರಿಧಾಮವಿದೆ. ಮನಸ್ಸಿಗೆ ಮುದ ನೀಡುವ ವಾತಾವರಣವನ್ನು ಅಲ್ಲಿ ಇರುವ ಅಷ್ಟೂ ಹೊತ್ತು ಅನುಭವಿಸಬಹುದು. ಅಲ್ಲದೆ, ಟ್ರಕ್ಕಿಂಗ್, ಕ್ಯಾಂಪಿಂಗ್ನಂತಹ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಇಲ್ಲಿನ ಮನ ಸೆಳೆಯುವ ಹೆಬ್ಬೆ ಜಲಪಾತ, ರಾಕ್ ಗಾರ್ಡನ್, ರಾಜಭವನ, ಝಡ್ ಪಾಯಿಂಟ್, ಕಲತ್ಗಿರಿ ಜಲಪಾತ, ಬಾಬಾ ಬುಡನ್ ಹಿಲ್ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳು ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಆಗುಂಬೆ: ಆಗುಂಬೆಯ (Agumbe) ಪ್ರೇಮ ಸಂಜೆಯ ಎಂಬ ಸಾಲನ್ನು ಗುನುಗಿಕೊಂಡು ಒಮ್ಮೆಯಾದರೂ ಆಗುಂಬೆ ಬೆಟ್ಟವನ್ನು ಹತ್ತಿ ಇಳಿಯಿರಿ. ಆಗುಂಬೆ ಸದಾ ಪ್ರವಾಸಿಗರ ಹಾಟ್ ಫೇವರಿಟ್ ಜಾಗ. ಈ ತಾಣವನ್ನು‘ದಕ್ಷಿಣ ಭಾರತದ ಚಿರಾಪುಂಜಿʼಎಂದು ಕರೆಯಲಾಗುತ್ತದೆ. ಇದೊಂದು ಸುಂದರವಾದ ಗಿರಿಧಾಮವಾಗಿದ್ದು, ವರ್ಷದಲ್ಲಿ ಬಹು ಕಾಲ ಮಳೆಯನ್ನು ಪಡೆಯುವ ಸ್ಥಳವಾಗಿದೆ. ಒಂದು ವರ್ಷದಲ್ಲಿ ಸುಮಾರು 7000 ಮಿ.ಮೀ ಗಿಂತಲೂ ಹೆಚ್ಚು ಮಳೆ ಈ ಪ್ರದೇಶದಲ್ಲಿ ಬೀಳುತ್ತದೆ. ಚುಮುಚುಮು ಚಳಿಯ ವಾತಾವರಣ ಹಿತಾನುಭವವನ್ನು ನೀಡುತ್ತದೆ. ಅತ್ಯದ್ಭುತವಾದ ಸೂರ್ಯಾಸ್ತ ಮತ್ತು ಸೂರ್ಯೋದಯವು ಮನಸ್ಸಿಗೆ ಆನಂದ ನೀಡುತ್ತದೆ. ಟ್ರಕ್ಕಿಂಗ್ ಮಾಡಲು, ಪ್ರಕೃತಿಯನ್ನು ಆಸ್ವಾದಿಸಲು ಆಗುಂಬೆ ಸದಾ ಜಾಲಿಯಾದ ಜಾಗ.
