ಮಲೆಯ-ಮಳೆಯ ನಾಡಲ್ಲಿ ಅದ್ಭುತ ಪ್ರವಾಸಿ ತಾಣಗಳು!
ಮಲೆನಾಡು ಎಂದರೆ ಪ್ರವಾಸಿಗರಿಗೆ ಪುಳಕ. ಆ ತಾಣವು ಸದಾ ಹಚ್ಚ ಹಸುರಿನಿಂದ ಕಂಗೊಳಿಸುತ್ತದೆ. ಅಲ್ಲಿನ ಹತ್ತಾರು ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಸರಿ ಸುಮಾರು 346 ಕಿ,ಮೀ ದೂರದಲ್ಲಿರುವ ತೀರ್ಥಹಳ್ಳಿ ಕರ್ನಾಟಕದ ಅದ್ಭುತವಾದ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಪವಿತ್ರವಾದ ತುಂಗಾ ನದಿಯ ದಡದಲ್ಲಿ ನೆಲೆಗೊಂಡಿದೆ. ಪ್ರವಾಸಿ ಪ್ರಿಯರು ಒಮ್ಮೆಯಾದರೂ ತೀರ್ಥಹಳ್ಳಿಗೆ ಪ್ರವಾಸ ಕೈಗೊಳ್ಳಬೇಕು. ತೀರ್ಥಹಳ್ಳಿಯು ಪ್ರಖ್ಯಾತ ಕನ್ನಡ ಲೇಖಕರ ತವರೂರಾಗಿದೆ. ಸಫಾರಿಗೆ ಹೇಳಿ ಮಾಡಿಸಿದ ಜಾಗ. ಮೈಮನ ಸೆಳೆಯುವ ವಾತಾವರಣ ಹಿತವಾದ ಅನುಭವವನ್ನು ನೀಡುತ್ತದೆ. ಮಾನ್ಸೂನ್ನಲ್ಲಿ ಈ ತಾಣಕ್ಕೆ ಭೇಟಿ ಕೊಟ್ಟರಂತೂ ಖುಷಿ ದುಪ್ಪಟ್ಟಾಗುತ್ತದೆ. ತೀರ್ಥಹಳ್ಳಿಯಲ್ಲಿ ಪ್ರವಾಸಿಗರು ಭೇಟಿಕೊಡಲೇಬೇಕಾದ ಕೆಲವು ಸ್ಥಳಗಳ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ನಾಗರಾ ಕೋಟೆ
ತೀರ್ಥಹಳ್ಳಿಯಲ್ಲಿ ಮನಮೋಹಕವಾದ ನಾಗರಾಕೋಟೆ ಇದೆ. ಇದನ್ನು ನಗರಕೋಟೆ ಎಂತಲೂ ಕರೆಯಲಾಗುತ್ತದೆ. ಇದು ಸುಂದರವಾದ ಸರೋವರದ ಬಳಿ ಸಣ್ಣದಾದ ಒಂದು ಬೆಟ್ಟದ ಮೇಲೆ ನೆಲೆಸಿದೆ. ಪ್ರವಾಸಿರ ಆಕರ್ಷಣೀಯ ಕೇಂದ್ರವಾಗಿ ನಾಗರಾಕೋಟೆ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಹಚ್ಚ ಹಸುರಿನ ವಾತಾವರಣವು ಈ ತಾಣದ ಸೌಂದರ್ಯವನ್ನು ಹೆಚ್ಚಿಸಿದೆ. ಇನ್ನು ಕೋಟೆಯ ಒಳಭಾಗದಲ್ಲಿ ಫಿರಂಗಿ, ಅಕ್ಕ-ತಂಗಿ ಕೋಲ ಎಂದು ಕರೆಯಲ್ಪಡುವ ಟ್ಯಾಂಕ್ಗಳು ಇಲ್ಲಿವೆ. ಜೊತೆಗೆ ಭವ್ಯವಾದ ದರ್ಬಾರ್ ಹಾಲ್ ಪ್ರವಾಸಿಗರನ್ನು ಮೋಡಿ ಮಾಡುತ್ತದೆ. ವೀಕೆಂಡ್ನಲ್ಲಿ ಟ್ರಿಪ್ ಪ್ಲ್ಯಾನ್ ಮಾಡುವವರು ಇಲ್ಲಿಗೆ ತಪ್ಪದೇ ಹೋಗಬಹುದು.

ಸಿದ್ದೇಶ್ವರ ಗುಡ್ಡ
ಚಾರಣದಲ್ಲಿ ಆಸಕ್ತಿ ಇರುವವರು ತಮ್ಮ ಗೆಳೆಯರೊಟ್ಟಿಗೆ ತೀರ್ಥಹಳ್ಳಿ ಸಮೀಪವಿರುವ ಸಿದ್ದೇಶ್ವರ ಗುಡ್ಡಕ್ಕೆ ಒಮ್ಮೆ ಭೇಟಿ ನೀಡಬಹುದು. ಇದು ಸುಮಾರು 200 ಅಡಿ ಎತ್ತರದಲ್ಲಿದೆ. ಬೆಟ್ಟದ ಒಂದು ಬದಿಯಲ್ಲಿ ನಿಂತು ಅಲ್ಲಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಶಿವಮೊಗ್ಗದ ಅನೇಕ ಬೆಟ್ಟಗಳಾದ ಕುಂದಾದ್ರಿ, ಕೊಡಚಾದ್ರಿ ಮತ್ತು ಇನ್ನೂ ಅನೇಕ ಬೆಟ್ಟಗಳನ್ನು ಈ ಸಿದ್ದೇಶ್ವರ ಬೆಟ್ಟದ ಮೇಲೆ ನಿಂತು ನೋಡಬಹುದಾಗಿದೆ. ಗುಡ್ಡದ ಸೌಂದರ್ಯವನ್ನು ಸವಿಯಲು ಅಕ್ಟೋಬರ್ ಹಾಗು ನವೆಂಬರ್ ತಿಂಗಳಿನಲ್ಲಿ ಹೋಗುವುದು ಸೂಕ್ತ.

ತಾವರೆಕೊಪ್ಪ
ಸಫಾರಿಯಲ್ಲಿ ಆಸಕ್ತಿ ಇರುವವರು ಮಲೆನಾಡಿನ ಮಡಿಲಲ್ಲಿ ಇರುವ ತೀರ್ಥಹಳ್ಳಿಯ ಸಮೀಪದ ತಾವರೆಕೊಪ್ಪ ಟೈಗರ್ ಸಫಾರಿಗೆ ಹೋಗಲೇಬೇಕು. ಇದು ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಎತ್ತ ನೋಡಿದರೂ ದಟ್ಟವಾದ ಅರಣ್ಯ ಕಣ್ಣಿಗೆ ಬೀಳುತ್ತದೆ. ಅನೇಕ ವನ್ಯಜೀವಿಗಳನ್ನು ಇಲ್ಲಿ ನೋಡಬಹುದು. ಜೊತೆಗೆ ಥ್ರಿಲಿಂಗ್ ಇರುವ ಸಫಾರಿಯನ್ನು ಕೈಗೊಳ್ಳಬಹುದು. ಮಕ್ಕಳಿಗೆ ವಿಶೇಷವಾದ ಮನರಂಜನಾ ಸ್ಥಳಗಳು ಈ ತಾಣದಲ್ಲಿದೆ. ಕುಟುಂಬದ ಜೊತೆ ಹೊರಹೋಗಲು ಅಥವಾ ಪಿಕ್ನಿಕ್ಗೆ ಈ ತಾಣ ದಿ ಬೆಸ್ಟ್ ಎನ್ನಬಹುದು

ತುಂಗಾ ಸೇತುವೆ
ತೀರ್ಥಹಳ್ಳಿಯ ಮತ್ತೊಂದು ಪ್ರವಾಸಿ ಆಕರ್ಷಣೆಯೆಂದರೆ ಅದು ತುಂಗಾ ಸೇತುವೆ. ಈ ಸೇತುವೆಯನ್ನು ಪವಿತ್ರವಾದ ತುಂಗಾ ನದಿಯ ಮೇಲೆ ನಿರ್ಮಿಸಲಾಗಿದೆ. ಸ್ಥಳೀಯರು ಇದನ್ನು ‘ಜಯಚಾಮರಾಜೇಂದ್ರ ಒಡೆಯರ್ ಸೇತುವೆ’ ಎಂದು ಕರೆಯುತ್ತಾರೆ. ಇದನ್ನು ಸರ್ ಎಂ ವಿಶ್ವೇಶ್ವರಯ್ಯನವರು ನಿರ್ಮಿಸಿದ್ದು, ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರು ಉದ್ಘಾಟಿಸಿದ್ದಾರೆ. ತೀರ್ಥಹಳ್ಳಿಯ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟು ಕೊನೆಗೆ ಈ ಸ್ಥಳಕ್ಕೆ ಭೇಟಿಕೊಡಬಹುದು. ಸೂರ್ಯಾಸ್ತಮದ ವೇಳೆ ಈ ಬ್ರಿಡ್ಜ್ ಮೇಲೆ ನಿಂತುಕೊಂಡರೆ ಒಳ್ಳೆಯ ಅನುಭವ ಸಿಗುತ್ತದೆ.
