Saturday, September 5, 2026
Saturday, September 5, 2026

ತುಮಕೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ...40ನೆಯ ವರ್ಷದ ಸಡಗರ

ತುಮಕೂರಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ, ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರನ್ನು ಸೆಳೆಯುವ ಅದ್ಭುತ ಕ್ಷಣವೊಂದು ಸನ್ನಿಹಿತವಾಗಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ನಾಡಿನಾದ್ಯಂತ ಅತ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸುವುದು ವಾಡಿಕೆ. ಆದರೆ, ಕಲ್ಪತರು ನಾಡು ತುಮಕೂರಿನಲ್ಲಿ ಈ ಆಚರಣೆ ಕೇವಲ ಒಂದು ಹಬ್ಬವಾಗಿ ಉಳಿದಿಲ್ಲ; ಬದಲಾಗಿ ಇದೊಂದು ಬೃಹತ್ ಸಾಂಸ್ಕೃತಿಕ ಆಂದೋಲನವಾಗಿ, ಮೌಲ್ಯಗಳನ್ನು ಬಿತ್ತುವ ವೇದಿಕೆಯಾಗಿ ಮಾರ್ಪಟ್ಟಿದೆ.

ಆದರ್ಶಪ್ರಾಯ

ಕೃಷ್ಣ ಜನ್ಮಾಷ್ಟಮಿ ಸಮಿತಿ

ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ಸ್ಥಳೀಯ ಹಬ್ಬಗಳನ್ನು ಕೂಡ ಪ್ರವಾಸಿಗರ ದೃಷ್ಟಿಯಿಂದ ಆಚರಣೆ ಮಾಡಲಾಗುತ್ತದೆ. ಇದರಿಂದಾಗಿಯೇ ಫೆಸ್ಟಿವಲ್ ಟೂರಿಸಂ ಎಂಬ ಪರಿಕಲ್ಪನೆ ಚಾಲ್ತಿಗೆ ಬಂದು ಜನಪ್ರಿಯತೆ ಕಂಡುಕೊಂಡಿದೆ. ಆದರೆ ಭಾರತದಲ್ಲಿ ಇಷ್ಟು ಶ್ರೀಮಂತ ಸಂಸ್ಕೃತಿ ಹಾಗೂ ಧಾರ್ಮಿಕ ಪರಿಕಲ್ಪನೆ ಹಾಗೂ ಆಚರಣೆಗಳಿದ್ದರೂ, ಫೆಸ್ಟಿವಲ್ ಟೂರಿಸಂ ಎಂಬ ಹೊಸ ಸಂಪ್ರದಾಯ ಇಲ್ಲಿ ಇನ್ನೂ ಮುನ್ನೆಲೆಗೆ ಬಂದಿಲ್ಲ. ಇಡೀ ದೇಶ ತಿರುಗಿ ನೋಡುವಂತೆ, ರಾಜ್ಯದ ಜನರೆಲ್ಲರೂ ಆಗಮಿಸುವಂತೆ ಒಂದು ಹಬ್ಬವನ್ನು ಆಯೋಜಿಸಿದರೆ ಅದು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ. ಕುಂಭಮೇಳ, ದೀಪೋತ್ಸವ ಇನ್ನಿತರ ಹಬ್ಬಗಳು ಜಾಗತಿಕ ಮಟ್ಟದಲ್ಲಿ ಧಾರ್ಮಿಕ ಪ್ರವಾಸಿಗರನ್ನು ಸೆಳೆಯುವುದು ನಿಜ. ಆದರೆ ದೇಶದ ಸಂಸ್ಕೃತಿ ಹಾಗೂ ಹಬ್ಬಗಳನ್ನು ಪರಿಚಯಿಸುವ, ನಾಡಿನ ಬೇರೆಡೆಗೂ ಖ್ಯಾತಿಗೊಳಿಸುವ ಕಾರ್ಯ ಇನ್ನೂ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ತುಮಕೂರಿನ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಸಾಧನೆ ಇಡೀ ನಾಡನ್ನು ಬೆರಗುಗೊಳಿಸುತ್ತಿದೆ.

ಇದನ್ನೂ ಓದಿ: ಸಿನಿಮಾ ನಗರಿಯಲ್ಲಿದೆ ಇಡೀ ಜಗತ್ತು!

ತುಮಕೂರಿನ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ, ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರನ್ನು ಸೆಳೆಯುವ ಅದ್ಭುತ ಕ್ಷಣವೊಂದು ಸನ್ನಿಹಿತವಾಗಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ನಾಡಿನಾದ್ಯಂತ ಅತ್ಯಂತ ಸಡಗರ, ಸಂಭ್ರಮಗಳಿಂದ ಆಚರಿಸುವುದು ವಾಡಿಕೆ. ಆದರೆ, ಕಲ್ಪತರು ನಾಡು ತುಮಕೂರಿನಲ್ಲಿ ಈ ಆಚರಣೆ ಕೇವಲ ಒಂದು ಹಬ್ಬವಾಗಿ ಉಳಿದಿಲ್ಲ; ಬದಲಾಗಿ ಇದೊಂದು ಬೃಹತ್ ಸಾಂಸ್ಕೃತಿಕ ಆಂದೋಲನವಾಗಿ, ಮೌಲ್ಯಗಳನ್ನು ಬಿತ್ತುವ ವೇದಿಕೆಯಾಗಿ ಮಾರ್ಪಟ್ಟಿದೆ. ಹೌದು, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ಜನಕಲ್ಯಾಣ ಟ್ರಸ್ಟ್ (ರಿ.), ವಿಶ್ವ ಹಿಂದೂ ಪರಿಷತ್, ಸಂಸ್ಕಾರಭಾರತಿ (ರಿ.), ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡಿರುವ ಬಹುನಿರೀಕ್ಷಿತ 'ಶ್ರೀ ಕೃಷ್ಣಲೋಕ ವೈಭವ' ಕಾರ್ಯಕ್ರಮವು ಈ ವರ್ಷ ತನ್ನ 40ನೆಯ ವಾರ್ಷಿಕೋತ್ಸವದ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ನಾಲ್ಕು ದಶಕಗಳ ಕಾಲ ನಿರಂತರವಾಗಿ, ಶ್ರದ್ಧೆ ಮತ್ತು ಭಕ್ತಿಯಿಂದ ಬೆಳೆದುಬಂದಿರುವ ಈ ಬೃಹತ್ ಕಾರ್ಯಕ್ರಮವು ನಾಡಿನ ಸಮಸ್ತ ಜನತೆಗೆ ಒಂದು ಅವಿಸ್ಮರಣೀಯ ಅನುಭವವನ್ನು ನೀಡಲು ಸಜ್ಜಾಗಿದೆ.

Untitled design (37)

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದತ್ತ ಒಂದು ಹೆಜ್ಜೆ

ಯಾವುದೇ ಒಂದು ರಾಷ್ಟ್ರವು ಕೇವಲ ಭೌತಿಕವಾಗಿ ಬೆಳೆದರೆ ಸಾಲದು, ಅಲ್ಲಿನ ಪ್ರಜೆಗಳ ಸಾಂಸ್ಕೃತಿಕ ಹಾಗೂ ಬೌದ್ಧಿಕ ವಿಕಾಸವೂ ಅಷ್ಟೇ ಮುಖ್ಯವಾಗುತ್ತದೆ. ಇದನ್ನೇ ಮನಗಂಡಿರುವ ಸಮಿತಿಯು ಈ ಬಾರಿಯ ಉತ್ಸವಕ್ಕೆ ಅತ್ಯಂತ ಅರ್ಥಗರ್ಭಿತವಾದ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ. ‘ವ್ಯಕ್ತಿ ನಿರ್ಮಾಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ, ಅಂಥ ವ್ಯಕ್ತಿ ನಿರ್ಮಾಣದ ಸಂಸ್ಕಾರ ಬಾಲ್ಯದಲ್ಲಿಯೇ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ’ ಎಂಬ ಮಹತ್ತರವಾದ ಸಂದೇಶವನ್ನು ಸಾರುವ ಮೂಲಕ, ಈ ಕಾರ್ಯಕ್ರಮವು ಕೇವಲ ಮನೋರಂಜನೆಗೆ ಸೀಮಿತವಾಗದೆ, ಯುವಜನತೆಯಲ್ಲಿ ಮತ್ತು ಮಕ್ಕಳಲ್ಲಿ ಸುಸಂಸ್ಕಾರವನ್ನು ಬಿತ್ತುವ ಅತಿದೊಡ್ಡ ಜವಾಬ್ದಾರಿಯನ್ನು ಹೊತ್ತಿದೆ. ಮಕ್ಕಳ ಎಳೆಯ ಮನಸ್ಸಿನಲ್ಲಿ ಕೃಷ್ಣನ ಆದರ್ಶಗಳು, ಭಗವದ್ಗೀತೆಯ ಸಾರ ಮತ್ತು ನಮ್ಮ ಪರಂಪರೆಯ ಮೌಲ್ಯಗಳನ್ನು ಆಳವಾಗಿ ಬೇರೂರುವಂತೆ ಮಾಡುವುದು ಈ 40ನೇ ವರ್ಷದ ಸಂಭ್ರಮಾಚರಣೆಯ ಪ್ರಮುಖ ಆಶಯವಾಗಿದೆ.

ಪ್ರಧಾನ ಕಾರ್ಯಕ್ರಮದ ವಿವರಗಳು

ತುಮಕೂರಿನ ಹೃದಯಭಾಗದಲ್ಲಿರುವ ಸರಕಾರಿ ಜೂನಿಯರ್ ಕಾಲೇಜು ಮೈದಾನವು ಈ ಬೃಹತ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ದಿನಾಂಕ 6-9-2026, ಭಾನುವಾರದಂದು ಮಧ್ಯಾಹ್ನ 3.00 ಗಂಟೆಗೆ ಸರಿಯಾಗಿ ಕಾರ್ಯಕ್ರಮವು ವಿಧ್ಯುಕ್ತವಾಗಿ ಆರಂಭಗೊಳ್ಳಲಿದ್ದು, ಕೃಷ್ಣನ ವಿವಿಧ ಲೀಲೆಗಳನ್ನು ಬಿಂಬಿಸುವ ವಾತಾವರಣವು ಮೈದಾನದಲ್ಲಿ ಸೃಷ್ಟಿಯಾಗಲಿದೆ. ಮಧ್ಯಾಹ್ನದ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಮುದ್ದು ಮಕ್ಕಳ 'ಶ್ರೀ ಕೃಷ್ಣ ವೇಷಧಾರಿಗಳ' ಸಮಾಗಮ. ವಯೋಮಿತಿ ಇರುವ ಮಕ್ಕಳು ನಾನಾ ಬಗೆಯ ಕೃಷ್ಣನ ವೇಷಭೂಷಣಗಳನ್ನು ತೊಟ್ಟು ಮೈದಾನದಲ್ಲಿ ನಲಿದಾಡುವ ದೃಶ್ಯವು ನೋಡುಗರ ಕಣ್ಮನ ಸೆಳೆಯುವುದರಲ್ಲಿ ಸಂದೇಹವಿಲ್ಲ. ಇದರ ಜತೆಗೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಶಾಲೆಗಳಿಗೆ ವಿಶೇಷ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಂದು ಮಗುವಿಗೂ, ಅವರ ಉತ್ಸಾಹವನ್ನು ಇಮ್ಮಡಿಗೊಳಿಸಲು ಮತ್ತು ಈ ಸುಂದರ ಕ್ಷಣದ ನೆನಪಿಗಾಗಿ ಆಕರ್ಷಕ ನೆನಪಿನ ಕಾಣಿಕೆಯನ್ನು ವಿತರಿಸಲಾಗುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ನಮ್ಮ ಸಂಸ್ಕೃತಿಯ ಬಗೆಗಿನ ಒಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Untitled design (38)

ನೃತ್ಯ, ಸಂಗೀತ ಹಾಗೂ ಭಕ್ತಿ ಭಾವದ ಸಂಜೆ

ಸೆಪ್ಟೆಂಬರ್ 6 ರಂದು ನಡೆಯುವ ಮುಖ್ಯ ಕಾರ್ಯಕ್ರಮದ ಸಂಜೆಯು ಅತ್ಯಂತ ರಮಣೀಯವಾಗಿರಲಿದೆ. ಸಂಜೆ 6.00 ಗಂಟೆಯ ನಂತರ ಕಲಾಭಿಮಾನಿಗಳನ್ನು ಮತ್ತು ಭಕ್ತರನ್ನು ರಂಜಿಸಲು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ಕೃಷ್ಣನ ರೋಚಕ ಜೀವನ ಚರಿತ್ರೆ ಮತ್ತು ಭಗವದ್ಗೀತೆಯ ತತ್ತ್ವಗಳನ್ನು ಆಧರಿಸಿದ ನೃತ್ಯ ಸ್ಪರ್ಧೆಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಲಿವೆ. ತದನಂತರ ನಡೆಯುವ 'ಸಾಮೂಹಿಕ ದಾಂಡಿಯಾ ನೃತ್ಯ'ವು ಕಾರ್ಯಕ್ರಮದ ಕಳೆಯನ್ನು ಉತ್ತುಂಗಕ್ಕೇರಿಸಲಿದ್ದು, ಯುವಜನತೆ ಸಂಭ್ರಮದಿಂದ ಪಾಲ್ಗೊಳ್ಳಲು ಅತ್ಯುತ್ತಮ ವೇದಿಕೆಯಾಗಲಿದೆ.

ತಿಂಗಳಿಡೀ ಹಬ್ಬದ ಕಳೆ: ಸರಣಿ ಸ್ಪರ್ಧೆಗಳ ಸಂಭ್ರಮ

ಮುಖ್ಯ ಕಾರ್ಯಕ್ರಮದ ದಿನದ ಮುನ್ನವೇ ತುಮಕೂರಿನಲ್ಲಿ ಜನ್ಮಾಷ್ಟಮಿಯ ವಾತಾವರಣ ನಿರ್ಮಾಣಗೊಳ್ಳವಲ್ಲಿ ಸಮಿತಿಯು ಎಲ್ಲ ಯೋಜನೆ ರೂಪಿಸಿತ್ತು. ವಿವಿಧ ದಿನಾಂಕಗಳಲ್ಲಿ ಸಾರ್ವಜನಿಕರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಹತ್ತಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳು ಕೇವಲ ಪೈಪೋಟಿಯ ವೇದಿಕೆಯಾಗದೆ, ನಮ್ಮ ಪರಂಪರೆಯನ್ನು ಮೆಲುಕುಹಾಕುವ ಅವಕಾಶಗಳಾಗಿದ್ದವು. ದಿನಾಂಕ 23-08-2026, ಭಾನುವಾರದಂದು ಬೆಳಗ್ಗೆ 10.00 ಗಂಟೆಗೆ ಭಗವದ್ಗೀತೆ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 4ನೆಯೇ ತರಗತಿಯವರೆಗಿನ ಮಕ್ಕಳಿಗೆ 12ನೆಯ ಅಧ್ಯಾಯ, 5 ರಿಂದ 7ನೆಯ ತರಗತಿಯವರಿಗೆ 11ನೆಯ ಅಧ್ಯಾಯ ಹಾಗೂ 8 ರಿಂದ 10ನೆಯ ತರಗತಿಯ ಮಕ್ಕಳಿಗೆ 13ನೇ ಅಧ್ಯಾಯವನ್ನು ನಿಗದಿಪಡಿಸಲಾಗಿತ್ತು. ಅದೇ ದಿನ ಮಧ್ಯಾಹ್ನ 12.00 ಗಂಟೆಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದರು. ರಾಮಾಯಣ ಹಾಗೂ ಮಹಾಭಾರತವನ್ನು ಆಧರಿಸಿದ ಚಿತ್ರಗಳನ್ನು ಬಿಡಿಸಲು ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 1.00 ಗಂಟೆಗೆ ನೆನಪಿನ ಶಕ್ತಿ ಸ್ಪರ್ಧೆ ನಡೆಸಲಾಗಿತ್ತು. ದಿನಾಂಕ 29-08-2026, ಶನಿವಾರದಂದು ಸಾಂಪ್ರದಾಯಿಕ ಕಲೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಬೆಳಗ್ಗೆ 11.00 ಗಂಟೆಗೆ ಮಹಿಳೆಯರು ಮತ್ತು ಪುರುಷರಿಗಾಗಿ ಭಜನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದೇ ದಿನ ಮಧ್ಯಾಹ್ನ 2.00 ಗಂಟೆಗೆ ಜಾನಪದ ಗೀತೆ ಸ್ಪರ್ಧೆಯು ವಿವಿಧ ವಯೋಮಾನದವರಿಗೆ (5 ರಿಂದ 7ನೆಯ ತರಗತಿ, 8 ರಿಂದ 10ನೆಯ ತರಗತಿ, ಮತ್ತು 15 ವರ್ಷ ಮೇಲ್ಪಟ್ಟವರಿಗೆ) ನಡೆಸಲಾಗಿದ್ದು , ಮಧ್ಯಾಹ್ನ 4.00 ಗಂಟೆಗೆ ಜನ್ಮಾಷ್ಟಮಿಯ ವಿಶೇಷವಾದ 'ಮೊಸರು ಕುಡಿಕೆ ಒಡೆಯುವ ಸ್ಪರ್ಧೆ'ಯನ್ನೂ ಆಯೋಜಿಸಿದ್ದರು. ಇನ್ನು, ದಿನಾಂಕ 30-8-2026, ಭಾನುವಾರದಂದು ಬೆಳಗ್ಗೆ 10.00 ಗಂಟೆಗೆ ದೇವರನಾಮ ಸ್ಪರ್ಧೆ, ಮಧ್ಯಾಹ್ನ 1.00 ಗಂಟೆಗೆ ರಂಗೋಲಿ ಸ್ಪರ್ಧೆ ಹಾಗೂ ಮಧ್ಯಾಹ್ನ 3.00 ಗಂಟೆಗೆ ರೋಮಾಂಚಕ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆಸಲಾಯಿತು.

Untitled design (39)

ಸ್ವಾಗತ ಸಮಿತಿ ಅಧ್ಯಕ್ಷರ ನುಡಿನಮನ

ಈ ಬೃಹತ್ ಕಾರ್ಯಕ್ರಮದ ರೂವಾರಿಗಳಲ್ಲಿ ಒಬ್ಬರಾದ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಸಿ.ಎಸ್. ಭಾಸ್ಕರ್ ಅವರು ಈ ಶುಭ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದಾರೆ: ‘ಕಳೆದ ನಾಲ್ಕು ದಶಕಗಳಿಂದ ತುಮಕೂರಿನ ಸಮಸ್ತ ನಾಗರಿಕರ ಹಾಗೂ ಭಕ್ತಾದಿಗಳ ಬೆಂಬಲದಿಂದ 'ಶ್ರೀ ಕೃಷ್ಣಲೋಕ ವೈಭವ' ಕಾರ್ಯಕ್ರಮವು ನಾಡಿನ ಹೆಮ್ಮೆಯ ಉತ್ಸವವಾಗಿ ಬೆಳೆದಿದೆ. ಈ 40ನೆಯ ವಾರ್ಷಿಕೋತ್ಸವವು ಕೇವಲ ಆಚರಣೆಯಲ್ಲ, ಇದು ನಮ್ಮ ಭವಿಷ್ಯದ ಪೀಳಿಗೆಗೆ ಸುಸಂಸ್ಕಾರದ ಬೀಜವನ್ನು ಬಿತ್ತುವ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯ ಪ್ರತೀಕವಾಗಿದೆ. ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯುವಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ನಮ್ಮ ಈ ಪ್ರಯತ್ನಕ್ಕೆ ಸರ್ವರೂ ಕೈಜೋಡಿಸಬೇಕು. ನಾಡಿನೆಲ್ಲೆಡೆಯಿಂದ ಆಗಮಿಸುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲು ಸ್ವಾಗತ ಸಮಿತಿಯು ಸಜ್ಜಾಗಿದ್ದು, ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕಾಗಿ ವಿನಮ್ರವಾಗಿ ವಿನಂತಿಸುತ್ತೇನೆ.‌’

ಗಣ್ಯಾತಿಗಣ್ಯರ ಉಪಸ್ಥಿತಿ ಹಾಗೂ ಆಶೀರ್ವಾದ

ಈ 40ನೇ ವರ್ಷದ ಮಹೋತ್ಸವಕ್ಕೆ ನಾಡಿನ ಹತ್ತು ಹಲವು ದಿಗ್ಗಜರು ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು, ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ. ಹಾಗೆಯೇ, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ಕೇಂದ್ರ ಸಚಿವ ಶ್ರೀ ವಿ. ಸೋಮಣ್ಣ, ಮತ್ತು ಶಾಸಕರುಗಳಾದ ಶ್ರೀ ಬಿ. ಸುರೇಶ್‌ಗೌಡ, ಶ್ರೀ ಜಿ.ಬಿ. ಜ್ಯೋತಿಗಣೇಶ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್, ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಸಿ.ಎಸ್. ಭಾಸ್ಕರ್, ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರೇಖಾ ಮಹೇಶ್ ಅವರು ಉಪಸ್ಥಿತರಿರಲಿದ್ದಾರೆ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಈ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿರುವುದು ಕಾರ್ಯಕ್ರಮದ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ.

Untitled design (40)

ಬಹುಮಾನ ವಿತರಣಾ ಸಮಾರಂಭದ ಮಾಹಿತಿ

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಪಾಲ್ಗೊಂಡ ಪ್ರತಿಭಾನ್ವಿತರಿಗೆ ಬಹುಮಾನ ವಿತರಣೆ ಮತ್ತು ಸಂಚಿಕೆ ಬಿಡುಗಡೆಯ ವಿಶೇಷ ಸಮಾರಂಭವನ್ನು ದಿನಾಂಕ 12-09-2026ರ ಶನಿವಾರ ಸಂಜೆ 5 ಗಂಟೆಗೆ, ತುಮಕೂರಿನ ಶಿರಾ ಗೇಟ್ ಬಳಿ ಇರುವ ಬಾಪೂಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಮತ್ತು ಪೋಷಕರು ಈ ಸಮಾರಂಭದಲ್ಲಿ ಪಾಲ್ಗೊಂಡು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಕೋರಲಾಗಿದೆ. ಅಧ್ಯಾತ್ಮ, ಕಲೆ, ಸಂಸ್ಕೃತಿ ಮತ್ತು ಜನಸಾಮಾನ್ಯರ ಒಗ್ಗೂಡುವಿಕೆಯ ಈ ಮಹಾನ್ ಪರ್ವವು ಪ್ರವಾಸಿಗರಿಗೆ, ವಿಶೇಷವಾಗಿ ಕಲೆ ಮತ್ತು ಪರಂಪರೆಯನ್ನು ಆಸ್ವಾದಿಸುವವರಿಗೆ ಒಂದು ಹಬ್ಬದ ಔತಣವನ್ನು ನೀಡಲಿದೆ. 'ಪ್ರವಾಸಿ ಪ್ರಪಂಚ'ದ ಓದುಗರು ತಮ್ಮ ಕುಟುಂಬ ಸಮೇತರಾಗಿ ತುಮಕೂರಿನ ಈ 40ನೆಯ ವರ್ಷದ ಶ್ರೀ ಕೃಷ್ಣಲೋಕ ವೈಭವದಲ್ಲಿ ಪಾಲ್ಗೊಂಡು, ಕಲ್ಪತರು ನಾಡಿನ ಭಕ್ತಿಭಾವದ ರಸದೂಟವನ್ನು ಸವಿಯಲು ಇದೊಂದು ಸುವರ್ಣ ಅವಕಾಶ. ಯುವ ಮನಸುಗಳಲ್ಲಿ ನವ ಚೈತನ್ಯವನ್ನು ತುಂಬುವಲ್ಲಿ ಈ ಕೃಷ್ಣ ಸೇವಾ ಸಮಿತಿಯ ಪಾತ್ರ ನಿಜಕ್ಕೂ ಹಿರಿದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ