ಅತಿಥಿ ದೇವೋಭವ ಘೋಷವಾಕ್ಯವಲ್ಲ, ಕಾರ್ಯಯೋಜನೆಯಾಗಲಿ
ಪ್ರವಾಸೋದ್ಯಮ ಸ್ನೇಹಿ ರಾಜ್ಯವಾಗಬೇಕಾದರೆ, “Tourist Friendly Policy” ಮತ್ತು “Regulatory Reforms” ಅನ್ನು ಜಾರಿಗೆ ತರಬೇಕು. ಅದಕ್ಕಾಗಿ ಸಾರಿಗೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ವಾಹನ ಮಾಲೀಕರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆ ಅಗತ್ಯ. ಸಂಯೋಜಿತ ಚರ್ಚೆ, ಸ್ಪಷ್ಟ ಮಾರ್ಗಸೂಚಿ ಮತ್ತು ಏಕೀಕೃತ ವ್ಯವಸ್ಥೆಯಿಂದ ಮಾತ್ರ ಶಾಂತಿಯುತ ಹಾಗೂ ಸುಗಮ ಪ್ರವಾಸ ಸಾಧ್ಯ.
ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ)
“ಅತಿಥಿ ದೇವೋಭವ” ಎನ್ನುವ ಘೋಷವಾಕ್ಯವನ್ನು ಗೋಡೆಯ ಮೇಲೆ ಅಂಟಿಸುವುದರಿಂದ ಮಾತ್ರ ಪ್ರವಾಸೋದ್ಯಮ ಬೆಳೆಯುವುದಿಲ್ಲ. ಅದು ನೆಲಮಟ್ಟದ ನೀತಿ, ಸರಳ ನಿಯಮಾವಳಿ ಮತ್ತು ಜವಾಬ್ದಾರಿಯುತ ಆಡಳಿತದ ಮೂಲಕ ಜಾರಿಗೆ ಬರಬೇಕು.
ಇತ್ತೀಚಿನ ದಿನಗಳಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರವಾಸಿ ವಾಹನಗಳು ಸಂಚರಿಸುವಾಗ, ಅತಿಯಾದ ತಪಾಸಣೆ ಎಂಬ ಹೆಸರಿನಲ್ಲಿ ಪ್ರವಾಸಿಗರು ಮತ್ತು ವಾಹನ ಮಾಲೀಕರು ಕಿರುಕುಳ ಅನುಭವಿಸುತ್ತಿದ್ದಾರೆ. ಕುಟುಂಬ ಸಮೇತ ಪ್ರವಾಸಕ್ಕೆ ಹೊರಡುವವರಿಗೂ ಅನಗತ್ಯ ವಿಳಂಬ, ದಂಡ, ಕಾಗದಪತ್ರಗಳ ಅತಿರೇಕದ ಪರಿಶೀಲನೆ — ಇವೆಲ್ಲವೂ ರಾಜ್ಯದ ಸಕಾರಾತ್ಮಕ ಚಿತ್ರಕ್ಕೆ ಧಕ್ಕೆ ತರುತ್ತಿವೆ.
ಇಲ್ಲಿ ಸ್ಪಷ್ಟವಾಗಿ ಹೇಳಬೇಕಾದ ವಿಷಯ ಏನೆಂದರೆ — Red Tapism (ಅಧಿಕಾರದ ಕಾಗದ ಪತ್ರದ ಜಂಜಾಟ) ನಿಲ್ಲಬೇಕು. ನಿಯಮಗಳು ಸುರಕ್ಷತೆಗಾಗಿ ಇರಬೇಕು; ಉದ್ಯಮವನ್ನು ಕಂಗೆಡಿಸಲು ಅಲ್ಲ. ನಿಯಂತ್ರಣದ ಹೆಸರಿನಲ್ಲಿ ಉಂಟಾಗುತ್ತಿರುವ ಅತಿಯಾದ ಕ್ರಮಗಳು ಪ್ರವಾಸೋದ್ಯಮ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ.
ಪ್ರವಾಸೋದ್ಯಮ ಸ್ನೇಹಿ ರಾಜ್ಯವಾಗಬೇಕಾದರೆ, “Tourist Friendly Policy” ಮತ್ತು “Regulatory Reforms” ಅನ್ನು ಜಾರಿಗೆ ತರಬೇಕು. ಅದಕ್ಕಾಗಿ ಸಾರಿಗೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ವಾಹನ ಮಾಲೀಕರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚನೆ ಅಗತ್ಯ. ಸಂಯೋಜಿತ ಚರ್ಚೆ, ಸ್ಪಷ್ಟ ಮಾರ್ಗಸೂಚಿ ಮತ್ತು ಏಕೀಕೃತ ವ್ಯವಸ್ಥೆಯಿಂದ ಮಾತ್ರ ಶಾಂತಿಯುತ ಹಾಗೂ ಸುಗಮ ಪ್ರವಾಸ ಸಾಧ್ಯ.

ಪ್ರವಾಸೋದ್ಯಮ ವರ್ಷಪೂರ್ತಿ ನಡೆಯುವ ವ್ಯವಹಾರವಲ್ಲ; ಕೆಲವೇ ತಿಂಗಳುಗಳಲ್ಲಿ ಅದರ ಆದಾಯ ಸೀಮಿತ. ಆ ಸಂದರ್ಭದಲ್ಲಿ ಹೊಸ ಉದ್ಯಮಿಗಳು ಕ್ಷೇತ್ರಕ್ಕೆ ಬರಲು ಪ್ರೋತ್ಸಾಹ ನೀಡಬೇಕು. ಆದರೆ ಪ್ರವಾಸಿ ವಾಹನ ಮಾಲೀಕರಿಗೆ ಯಾವುದೇ ಮೂಲಧನ (capital) ಬೆಂಬಲ ಅಥವಾ ರಕ್ಷಣಾತ್ಮಕ ಪ್ಯಾಕೇಜ್ ಸರಕಾರದಿಂದ ಲಭ್ಯವಿಲ್ಲ ಎಂಬುದು ವಾಸ್ತವ.
ಯಾವುದೇ ದೇಶದಲ್ಲಿ ಬಾಂಬ್ ದಾಳಿ, ಪ್ರಕೃತಿ ವಿಕೋಪ, ಪ್ರವಾಹ, ಗಲಭೆ ಅಥವಾ ಸಾಂಕ್ರಾಮಿಕ ರೋಗ ಉಂಟಾದಾಗ ಮೊದಲ ಹೊಡೆತ ತಗೊಳ್ಳುವ ಕ್ಷೇತ್ರವೇ ಪ್ರವಾಸೋದ್ಯಮ. ಆದರೂ ಈ ಕ್ಷೇತ್ರಕ್ಕೆ ಸುರಕ್ಷಿತ ಆರ್ಥಿಕ ವಾತಾವರಣ ಕಲ್ಪಿಸುವ ಕ್ರಮಗಳು ಸ್ಪಷ್ಟವಾಗಿಲ್ಲ.
ಅಭಿವೃದ್ಧಿಯ ವಿಷಯದಲ್ಲಿ ಸರಕಾರದ ನಿಗಮ ಮಂಡಳಿಗಳಿಗೆ ಸಿಗುವ ಅನುಕೂಲಕರ ವಾತಾವರಣ ಖಾಸಗಿ ಉದ್ಯಮಕ್ಕೆ ಸಿಗಬೇಕು. ಸರಕಾರ ನಿಜವಾದ ಅರ್ಥದಲ್ಲಿ ಸಹಭಾಗಿಯಾಗಬೇಕು; ನಿಯಂತ್ರಣದ ಮನೋಭಾವದಿಂದ ಹೊರಬಂದು ಸಹಕಾರದ ಧೋರಣೆ ಅಳವಡಿಸಿಕೊಳ್ಳಬೇಕು.
Red Tapism ನಿಲ್ಲಿಸಿ, Ease of Doing Tourism ಜಾರಿಗೆ ತರಬೇಕು.
ಅಷ್ಟೇ ಆಗ “ಅತಿಥಿ ದೇವೋಭವ” ಎನ್ನುವ ಘೋಷವಾಕ್ಯ ಜೀವಂತವಾಗುತ್ತದೆ.