‘ಡಂಬಳ’ದಲ್ಲಿ ಚಾಲುಕ್ಯರ ಇತಿಹಾಸ
ಇತಿಹಾಸದಲ್ಲಿ ಧರ್ಮಪುರ, ಧರ್ಮವೊಳಲ್ ಎಂದು ಕರೆಯಲ್ಪಟ್ಟಿರುವ ಡಂಬಳ, ಘತಕಾಲದಲ್ಲಿ ಪ್ರಸಿದ್ಧ ಭೌದ್ದ ಕೇಂದ್ರವಾಗಿತ್ತು. ನಂತರ ಶೈವ ಮಠದ ಕೇಂದ್ರವಾಗಿದ್ದ ಇಲ್ಲಿ ಕೆಳದಿ ಅರಸರು ದತ್ತಿ ನೀಡಿದ ಉಲ್ಲೇಖವಿದೆ. ಕೆಳದಿಯ ಬಸಪ್ಪ ನಾಯಕರು ಕಳಸ ಮಾಡಿಕೊಟ್ಟ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಈಗಲೂ ಇಲ್ಲಿನ ತೋಂಟದಾರ್ಯ ಮಠ ಪ್ರಸಿದ್ಧವಾಗಿದೆ. ಇದರ ಶಾಖೆಯನ್ನು ಕೆಳದಿಯ ರಾಜಧಾನಿಯಾಗಿದ್ದ ಬಿದನೂರಿನಲ್ಲಿ ಈಗಲೂ ನೋಡಬಹುದು. ಬೌದ್ಧ, ಜೈನ ಹಾಗೂ ಶೈವರ ಕೇಂದ್ರವಾಗಿದ್ದ ಡಂಬಳ ಮೂರು ಧರ್ಮಗಳ ನಾಡಾಗಿದ್ದು ವಿಶೇಷ..
- ಶ್ರೀನಿವಾಸ ಮೂರ್ತಿ ಎನ್ ಎಸ್
ಕಲ್ಯಾಣಿ ಚಾಲುಕ್ಯರು, ತಮ್ಮದೇ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸಿ ವಾಸ್ತುಶಿಲ್ಪಕ್ಕೆ ಹೊಸ ನಾಂದಿ ಹಿಡಿದಿರುವರು. ಸುಂದರ ಶಿಲ್ಪಗಳು, ಜಾಲಂದ್ರಗಳು, ಬಾಗಿಲುವಾಡಗಳು ವಾಸ್ತುಶಿಲ್ಪದ ಅಧ್ಯಯನಕ್ಕೆ ಹೊಸ ಸ್ವರೂಪ ನೀಡಿದವು. ಇವುಗಳಲ್ಲಿ ಗದಗ ಜಿಲ್ಲೆಯ ಡಂಬಳದ ದೊಡ್ಡಬಸಪ್ಪ ದೇವಾಲಯ ವಿಭಿನ್ನವಾದದ್ದು. ನಕ್ಷತ್ರಾಕರಾದ ತಳಪಾಯ ಪರಿಕಲ್ಪನೆಗೆ ನಾಂದಿ ಹಾಡಿದ ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಅತ್ಯುತ್ತತ್ತಮ ಉದಾಹರಣೆ.
ಇತಿಹಾಸದಲ್ಲಿ ಧರ್ಮಪುರ, ಧರ್ಮವೊಳಲ್ ಎಂದು ಕರೆಯಲ್ಪಟ್ಟಿರುವ ಈ ಸ್ಥಳ, ಗತಕಾಲದಲ್ಲಿ ಪ್ರಸಿದ್ಧ ಭೌದ್ದ ಕೇಂದ್ರವಾಗಿತ್ತು. ನಂತರ ಶೈವ ಮಠದ ಕೇಂದ್ರವಾಗಿದ್ದ ಇಲ್ಲಿ ಕೆಳದಿ ಅರಸರು ದತ್ತಿ ನೀಡಿದ ಉಲ್ಲೇಖವಿದೆ. ಕೆಳದಿಯ ಬಸಪ್ಪ ನಾಯಕರು ಕಳಸ ಮಾಡಿಕೊಟ್ಟ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಈಗಲೂ ಇಲ್ಲಿನ ತೋಂಟದಾರ್ಯ ಮಠ ಪ್ರಸಿದ್ಧವಾಗಿದೆ. ಇದರ ಶಾಖೆಯನ್ನು ಕೆಳದಿಯ ರಾಜಧಾನಿಯಾಗಿದ್ದ ಬಿದನೂರಿನಲ್ಲಿ ಈಗಲೂ ನೋಡಬಹುದು. ಬೌದ್ಧ, ಜೈನ ಹಾಗೂ ಶೈವರ ಕೇಂದ್ರವಾಗಿದ್ದ ಡಂಬಳ ಮೂರು ಧರ್ಮಗಳ ನಾಡಾಗಿದ್ದು ವಿಶೇಷ.

ದೊಡ್ಡ ಬಸಪ್ಪ ದೇವಾಲಯ
ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಮುಖಮಂಟಪ ಹಾಗೂ ನಂದಿ ಮಂಟಪವನ್ನು ಹೊಂದಿದೆ. ಸುಮಾರು 1124ರಲ್ಲಿ ಅಜ್ಜಯ್ಯ ನಾಯಕ ಅವರು ಈ ದೇವಾಲಯವನ್ನು ಕಟ್ಟಿಸಿದ ಉಲ್ಲೇಖವಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಪಾಣೀಪೀಠದಲ್ಲಿನ ಕೆತ್ತನೆ ಗಮನ ಸೆಳಯುತ್ತದೆ. ಗರ್ಭಗುಡಿಯ ಮೇಲ್ಚಾವಣಿಯ ಕೆತ್ತನೆ ಸುಂದರವಾಗಿದೆ. ಇದಕ್ಕೆ ಸಪ್ತ ಶಾಖೆಯ ಬಾಗಿಲುವಾಡ ಇದ್ದು, ಗರ್ಭಗುಡಿಯ ಮುಂದೆ ವಿಸ್ತಾರವಾದ ಅಂತರಾಳವಿದೆ. ಇದಕ್ಕೆ ಇರುವ ತೋರಣ ಅಲಂಕಾರ ಕಲಾತ್ಮಕವಾಗಿದೆ. ಗರ್ಭಗುಡಿಯಲ್ಲಿ 24 ಮೂಲೆಗಳಿದ್ದು, ಶಿಖರದ ರೂಪಕ್ಕೆ ತಳಪಾಯದಂತಿದೆ.
ಇಲ್ಲಿನ ವಿಸ್ತಾರವಾದ ನವರಂಗದಲ್ಲಿ ನಾಲ್ಕು ಸುಂದರ ಕೆತ್ತನೆಯ ಕಂಬಗಳಿವೆ. ಇವುಗಳಲ್ಲಿ ಹೂಬಳ್ಳಿಯಂಥ ಉಬ್ಬು ಶಿಲ್ಪಗಳ ಕೆತ್ತನೆ ನೋಡಬಹುದು. ಎಲ್ಲಾ ಒಂದಕ್ಕಿಂತ ಒಂದು ವಿಭಿನ್ನವಾಗಿದೆ.
ಇಲ್ಲಿ ಪ್ರತ್ಯೇಕ ನಂದಿ ಮಂಟಪವಿದ್ದು, ದೇವಾಲಯ ಭಾಗವಾಗಿಯೇ ಕಟ್ಟಲಾಗಿದೆ. ಇಲ್ಲಿನ ನಂದಿ ಬೃಹದಾಕಾರವಾಗಿ ಇರುವುದರಿಂದಲೇ ಈ ದೇವಾಲಯಕ್ಕೆ ದೊಡ್ಡ ಬಸಪ್ಪ ದೇವಾಲಯ ಎಂಬ ಹೆಸರು ಬಂದಿದೆ. ಇಲ್ಲಿಯೂ ಕಲಾತ್ಮಕ ಕಂಬಗಳಿವೆ.
ಈ ದೇವಾಲಯದ ಶಿಖರಕ್ಕೆ ಅರ್ಧಕಂಬಗಳ ರಚನೆಯಿವೆ. ಚಾಲುಕ್ಯರ ನಿರ್ಮಾಣದ ವೇಸರ ಶೈಲಿಯಲ್ಲಿರುವ ಗೋಪುರ ಬಹುಕೋನಗಳನ್ನು ಹೊಂದಿದ್ದು, ಅಧಿಷ್ಟಾನದಿಂದ ಆರಂಭವಾಗಿ ಕಳಸದಲ್ಲಿ ಕೊನೆಗೊಳ್ಳುವದರಿಂದ ಗಮನ ಸೆಳೆಯುತ್ತದೆ.
ಸೋಮೇಶ್ವರ ದೇವಾಲಯ
ದೊಡ್ಡ ಬಸಪ್ಪ ದೇವಾಲಯಕ್ಕೆ ಸನಿಹದಲ್ಲಿಯೇ ಈ ದೇವಾಲಯವಿದೆ. ಗರ್ಭಗುಡಿ, ಅಂತರಾಳ, ನವರಂಗಗಳನ್ನು ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಅಂತರಾಳದಲ್ಲಿ ಹೊಸದಾದ ನಂದಿ ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಬಾಗಿಲವಾಡದ ಜಾಲಂದ್ರಗಳು ಲಲಾಟವನ್ನು ಆವರಿಸಿಕೊಂಡಿದ್ದು, ಕೆತ್ತನೆ ಗಮನಾರ್ಹವಾಗಿದೆ. ನವರಂಗದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಬಳಿವೆ. ಈ ದೇವರಿಗೆ ಶಾಸನಗಳಲ್ಲಿ ಮಾದವೇಶ್ವರ ಎಂಬ ಉಲ್ಲೇಖವಿದ್ದು, ಸ್ಥಳೀಯವಾಗಿ ಸೋಮೇಶ್ವರ ಎಂದು ಕರೆಯಲಾಗುತ್ತಿದೆ.

ಜಪ ಬಾವಿ
ಇದು ಇಲ್ಲಿನ ಕಲ್ಯಾಣಿ. ಚಿಕ್ಕ ಚಿಕ್ಕ ಮಂಟಪಗಳೊಂದಿಗೆ ಘಾಂಸನಾ (ಕದಂಬ ನಾಗರ) ಶೈಲಿಯಲ್ಲಿದೆ. ಸುಮಾರು 20 ಅಡಿ ಆಳದ ಈ ಕಲ್ಯಾಣಿ ಚಾಲುಕ್ಯ ಶೈಲಿಯ ಉತ್ತಮ ಉದಾಹರಣೆ.
ಇಲ್ಲಿ ಕೋಟೆಯ ಕುರುಹುಗಳಿದ್ದು, ಜೈನ ಬಸದಿಯೂ ಇದ್ದ ಉಲ್ಲೇಖವಿದೆ. ಇಲ್ಲಿನ ಕಲ್ಲೇಶ್ವರ ದೇವಾಲಯ ಕಣ್ಮರೆಯಾಗುವ ಹಂತದಲ್ಲಿದ್ದು, ಕಾಳಮ್ಮ ದೇವಾಲಯ ನವೀಕರಣಗೊಂಡಿದೆ. ಇಲ್ಲಿನ ತೋಂಟದಾರ್ಯ ಮಠ ನಿತ್ಯ ದಾಸೋಹದೊಂದಿಗೆ ದೇವಾಲಯಗಳ ನಿರ್ವಹಣೆಗೂ ಸಾಕಷ್ಟು ಕೋಡುಗೆ ನೀಡಿದೆ.
ಈ ದೇವಾಲಯಯ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿದ್ದು, ಗದಗದಿಂದ ಸುಮಾರು 20 ಕಿಮೀ ದೂರದಲ್ಲಿದೆ. ಲಕ್ಕುಂಡಿಯಿಂದ ಸುಮಾರು 16 ಕಿಮೀ ದೂರದಲ್ಲಿದೆ.