• ದೀಪಾ ಗೋಡಖಿಂಡಿ

ಕಾಡಿಗೆ ಹೋಗುವ ಪ್ರತಿಯೊಬ್ಬರೂ ಈ ಮಾತನ್ನು ಒಂದಲ್ಲೊಂದು ಬಾರಿ ಕೇಳಿರುತ್ತಾರೆ. ಮೊದಲಿಗೆ ಈ ಮಾತು ಕೇಳಿದಾಗ ನನಗೂ ಅದು ಸ್ವಲ್ಪ ಅತಿಶಯೋಕ್ತಿ ಅನಿಸಿತ್ತು. ಆದರೆ, ಕಳೆದ ಮೂರು ವರ್ಷಗಳಲ್ಲಿ ಭಾರತದ ವಿವಿಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸುತ್ತಾಡಿದ ನಂತರ, ಈ ಮಾತಿಗಿಂತ ನಿಜವಾದದ್ದು ಇನ್ನೊಂದಿಲ್ಲ ಅನ್ನೋದು ನನಗೆ ಅರ್ಥವಾಗಿದೆ.

ಕಾಡಿಗೆ ನಮ್ಮ ಸಮಯದ ಲೆಕ್ಕಾಚಾರವೇ ಇಲ್ಲ. ನಾವು ಯಾವಾಗ ಹುಲಿಯನ್ನು ನೋಡಬೇಕು ಅಂತ ತೀರ್ಮಾನಿಸಿದರೂ, ಕಾಡು ತನ್ನ ಸಮಯದಲ್ಲೇ ತನ್ನನ್ನು ತೋರಿಸಿಕೊಳ್ಳುತ್ತದೆ.

ಇದನ್ನೂ ಓದಿ: ಅನುಕರಣೆ ಸಾಕು ನಮ್ಮತನ ಬೇಕು

ಪಾಠದ ಮೊದಲ ಗುರು – ಬಾಂಧವಗಢ

2023 ಏಪ್ರಿಲ್ ತಿಂಗಳು, ಬಾಂಧವಗಢದ ಬಫರ್ ವಲಯದಲ್ಲಿ ರಾತ್ರಿ ಸಫಾರಿಗೆ ಹೋಗಿದ್ದೆವು. ದಿನವಿಡೀ ಬೇಸಿಗೆಯ ಬಿಸಿಲು ಕಾಡನ್ನು ಸುಡಿಸಿದ್ದರೂ, ರಾತ್ರಿ ಹೊತ್ತಿಗೆ ಗಾಳಿ ತಣ್ಣಗಾಗಿತ್ತು. ಮೇಲೊಂದು ಪುಟ್ಟ ಅರ್ಧಚಂದ್ರ, ಅದರ ಸುತ್ತ ಸಾವಿರಾರು ನಕ್ಷತ್ರಗಳು, ಸುತ್ತಲೂ ದಟ್ಟ ಕತ್ತಲು... ದೂರದಿಂದ ಕೇಳಿಬರುತ್ತಿದ್ದ ಕಾಡಿನ ಶಬ್ದಗಳು... ಇವೆಲ್ಲವೂ ಸೇರಿ ಒಂದೊಂದು ಕ್ಷಣವೂ ನಮ್ಮ ಕುತೂಹಲವನ್ನು ಹೆಚ್ಚಿಸುತ್ತಿದ್ದವು.

ಆಗಲೇ ಅವಳು ಕಾಣಿಸಿಕೊಂಡಳು.

ಸುಂದರವಾದ ಒಂದು ಕಿರಿಯ ಹುಲಿಹೆಣ್ಣು.

ಅವಳು ನಡೆದು ಬರುತ್ತಿದ್ದ ರೀತಿ, ಆ ಕತ್ತಲೆಯ ನಡುವೆ ಅವಳ ಪಟ್ಟೆಗಳು ಹೊಳೆಯುತ್ತಿದ್ದ ರೀತಿ, ಅವಳ ನಿಶ್ಚಿಂತ ಹೆಜ್ಜೆಗಳು... ಇವೆಲ್ಲವೂ ಸೇರಿ ಆ ಕ್ಷಣವನ್ನು ಇನ್ನೂ ವಿಶೇಷವಾಗಿಸಿತು. ಕೆಲವೇ ನಿಮಿಷಗಳ ಆ ಭೇಟಿಯಾದರೂ, ಆ ರಾತ್ರಿ ಕಾಡು ಕೊಟ್ಟ ಅನುಭವ ಇಂದಿಗೂ ಮನಸಿನಲ್ಲಿ ಹಾಗೆಯೇ ಉಳಿದಿದೆ.

--

Untitled design (61)

ಅದೇ ಡಿಸೆಂಬರ್‌ನಲ್ಲಿ ಕಾನ್ಹಾ ಮತ್ತೊಂದು ಪಾಠ ಕಲಿಸಿತು

ಮೂರು ಸತತ ಡ್ರೈ ಸಫಾರಿಗಳ ನಂತರ, ಒಂದೂವರೆ ದಿನ ಹುಡುಕಿದ ಮೇಲೆ, ಕೊನೆಗೂ "ಧವಾ ಝಂಡಿ" (DJ) ಎನ್ನುವ ಸುಂದರ ಹೆಣ್ಣುಹುಲಿಯನ್ನು ನೋಡಲು ಸಾಧ್ಯವಾಯಿತು. ತನ್ನ ವ್ಯಾಪ್ತಿಯೊಳಗೆ ಗಾಂಭೀರ್ಯದಿಂದ ನಡೆದುಕೊಂಡು ಬರುತ್ತಿದ್ದ ಅವಳನ್ನು ನೋಡುತ್ತಿದ್ದಷ್ಟರಲ್ಲಿ, ಎಲ್ಲಿಂದಲೋ ಒಂದು ಗೌರ್ ಓಡಿಬಂತು!

ಕ್ಷಣಮಾತ್ರದಲ್ಲಿ ಪರಿಸ್ಥಿತಿ ತಲೆಕೆಳಗಾಯಿತು.

ಕಾಡಿನ ರಾಣಿ ಎಂದುಕೊಂಡಿದ್ದ ಅವಳೇ ಹಿಂದಿರುಗಿ ಓಡಬೇಕಾಯಿತು!

ಆ ದೃಶ್ಯ ನನ್ನನ್ನು ನಿಜಕ್ಕೂ ಆಶ್ಚರ್ಯಕ್ಕೀಡು ಮಾಡಿತ್ತು. ಪ್ರಕೃತಿಯಲ್ಲಿ ಯಾರಿಗೂ ಶಾಶ್ವತ ಅಧಿಕಾರ ಇಲ್ಲ. ಎಷ್ಟೇ ಬಲಿಷ್ಠ ಪ್ರಾಣಿಯಾಗಿದ್ದರೂ, ಅಲ್ಲಿನ ನಿಯಮಗಳಿಗೆ ತಲೆಬಾಗಲೇಬೇಕು ಅನ್ನೋದನ್ನು ಆ ಐದು ನಿಮಿಷಗಳು ನನಗೆ ಕಲಿಸಿಬಿಟ್ಟವು.

--

ತಾಳ್ಮೆಗೆ ಸವಾಲೊಡ್ಡಿದ ತಡೋಬಾ

ಹುಲಿಗಳ ಸಾಂದ್ರತೆ ಹೆಚ್ಚಿರುವ ಕಾಡು ಎಂದೇ ಹೆಸರು ಪಡೆದಿರುವ ತಡೋಬಾದಲ್ಲಿ ಸತತ ಐದು ಸಫಾರಿಗಳಾದರೂ ಹುಲಿ ಕಾಣಲೇ ಇಲ್ಲ! ಪ್ರತಿ ಬಾರಿ ಜೀಪಿನಿಂದ ಇಳಿಯುವಾಗ, ‘ಮುಂದಿನ ಸಫಾರಿಯಲ್ಲಿ ಖಂಡಿತ ಕಾಣುತ್ತದೆ’ ಅನ್ನುವ ಆಶೆಯೇ ನಮ್ಮನ್ನು ಮತ್ತೆ ಜೀಪಿಗೆ ಹತ್ತಿಸುತ್ತಿತ್ತು.

ಆರನೇ ಸಫಾರಿಯಲ್ಲಿ ಕೊನೆಗೂ ಒಬ್ಬ ಕಿರಿಯ ಗಂಡು ಹುಲಿ ಕಾಣಿಸಿಕೊಂಡ.

ಅವನು ಏನು ಮಾಡುತ್ತಿದ್ದ ಗೊತ್ತಾ?

ಸಾಂಬಾರ್ ಜಿಂಕೆಯನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು, ನಿರಾಳವಾಗಿ ಮಲಗಿದ್ದ!

ಅವನು ಓಡಲಿಲ್ಲ, ಘರ್ಜಿಸಲಿಲ್ಲ, ನಮ್ಮ ಕಡೆ ನೋಡಲೂ ಇಲ್ಲ.

ಹೆಚ್ಚಿನ ಸಮಯ ನಿದ್ದೆಯಲ್ಲೇ ಕಳೆದ.

ಆದರೂ ಎರಡು ದಿನಗಳ ಕಾಯುವಿಕೆಯ ನಂತರ, ಅವನನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದ ಆ ಕೆಲ ನಿಮಿಷಗಳ ಸಂತೋಷವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ.

--

Untitled design (60)

ಮೂರು ಅನುಭವಗಳು ಕಲಿಸಿದ ಒಂದು ಪಾಠ!

ವನ್ಯಜೀವಿ ಛಾಯಾಗ್ರಹಣ ಎಂದರೆ ಕೇವಲ ಒಂದು ಅದ್ಭುತ ಚಿತ್ರ ತೆಗೆಯುವುದು ಅಲ್ಲ. ಅದು ಕಾಯುವುದು... ನಿರಾಶೆಯಾಗುವುದು... ಮತ್ತೆ ಆಶೆ ಇಟ್ಟು ಮುಂದಿನ ಸಫಾರಿಗೆ ಹೊರಡುವುದು... ಪ್ರಕೃತಿಯನ್ನು ಒಪ್ಪಿಕೊಳ್ಳುವುದು.

ಜನರು ಆಗಾಗ ನನ್ನನ್ನು ಕೇಳುತ್ತಾರೆ,

‘ಇಲ್ಲಿಯವರೆಗೆ ಎಷ್ಟು ಹುಲಿಗಳನ್ನು ಫೊಟೋ ತೆಗೆದಿದ್ದೀರಾ?’

ನನಗಂತೂ ಆ ಪ್ರಶ್ನೆಗಿಂತ ಬೇರೆ ಪ್ರಶ್ನೆ ಮುಖ್ಯ ಅನ್ನಿಸುತ್ತದೆ.

ಆ ಒಂದು ಹುಲಿಯನ್ನು ನೋಡುವ ಮೊದಲು ನಾವು ಏನು ಅನುಭವಿಸಿದ್ದೆವು?

ಬೆಳಗಿನ ನಾಲ್ಕು ಗಂಟೆಗೆ ಎದ್ದು ಹೊರಡುವುದು...
ಧೂಳು ತುಂಬಿದ ರಸ್ತೆಗಳಲ್ಲಿ ಗಂಟೆಗಟ್ಟಲೆ ಸಂಚರಿಸುವುದು...
ಅಲಾರ್ಮ್ ಕಾಲ್ ಕೇಳಿದಾಗ ಹೃದಯ ಬಡಿತ ಹೆಚ್ಚಾಗುವುದು...
ಒಂದೂ ಕಾಣದೇ ಹಿಂದಿರುಗಿದ ದಿನಗಳಲ್ಲೂ ಮತ್ತೆ ಹೊಸ ಭರವಸೆಯೊಂದಿಗೆ ಕಾಡಿಗೆ ಕಾಲಿಡುವುದು...

ನನಗೆ ವನ್ಯಜೀವಿ ಛಾಯಾಗ್ರಹಣ ಎಂದರೆ ಇದೇ.

ಈ ವಿಶ್ವ ಹುಲಿ ದಿನದಂದು ನಾವು ಕೇವಲ ಹುಲಿಗಳ ಸಂಖ್ಯೆಯನ್ನು ಆಚರಿಸುವುದಷ್ಟೇ ಅಲ್ಲ, ಅವು ಬದುಕುವ ಕಾಡುಗಳನ್ನು, ಅವುಗಳಿಗೆ ಆಶ್ರಯ ನೀಡುವ ಪರಿಸರವನ್ನು ಮತ್ತು ಅವುಗಳ ಅಸ್ತಿತ್ವವನ್ನು ಗೌರವಿಸೋಣ.

ಕೊನೆಗೆ ವಿಷಯ ಎಷ್ಟು ಹುಲಿಗಳನ್ನು ನೋಡಿದ್ದೇವೆ ಅಥವಾ ಎಷ್ಟು ಚಿತ್ರಗಳನ್ನು ತೆಗೆದಿದ್ದೇವೆ ಅನ್ನುವುದಲ್ಲ... ಆ ಒಂದು ಕ್ಷಣವನ್ನು ಕಾಣಲು ಕಾಡು ನಮ್ಮನ್ನು ಎಷ್ಟು ದೂರ ಕರೆದೊಯ್ದಿತು ಅನ್ನುವುದೇ ನಿಜವಾದ ಅನುಭವ.

ಕಾಡು ನಮಗೆ ಏನನ್ನೂ ಕೊಡಬೇಕಾದ ಹೊಣೆ ಹೊತ್ತಿಲ್ಲ. ಆದರೆ, ಕೆಲವೊಮ್ಮೆ ಅದು ತನ್ನ ಬಾಗಿಲನ್ನು ಸ್ವಲ್ಪ ಹೊತ್ತು ತೆರೆದಾಗ, ಆ ಒಂದು ಅನುಭವವೇ ಜೀವಮಾನವಿಡೀ ಸಾಕಾಗುತ್ತದೆ.