• ವಾಣಿ ಭಟ್ಟ, ಹಂಡ್ರಮನೆ

ಲೇಖಕಿ ವಿಜಯ ಎಸ್‌ಪಿ ಅವರು ಅನೇಕ ದೇಶಗಳನ್ನು ಸುತ್ತಿದವರು. ಈಗಾಗಲೇ ಅನೇಕ ಪ್ರವಾಸ ಕಥನ ಪುಸ್ತಕಗಳನ್ನು ಬರೆದಿದ್ದಾರೆ. ʼಸಾಗರದಾಚೆಯ ನಾಡಿನಲ್ಲಿʼ ಪುಸ್ತಕದಲ್ಲಿರುವ ವಿವರಗಳು ಅವರ ಮೊದಲ ವಿದೇಶ ಪ್ರವಾಸದ ಅನುಭವಗಳಾಗಿವೆ. ಪ್ರವಾಸದ ಪೂರ್ವ ತಯಾರಿಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ದಾಖಲಿಸಿದ್ದಾರೆ. ಮೊದಲ ಬಾರಿ ವಿದೇಶ ಪ್ರವಾಸಕ್ಕೆ ಹೋಗುವವರಿಗೆ ಸಾಕಷ್ಟು ಉಪಯುಕ್ತ ಸಲಹೆಗಳು ಈ ಪುಸ್ತಕದಲ್ಲಿವೆ.

ಯುರೋಪ್‌ ಸುತ್ತುವ ಅನುಭವ

ಇದು ‘ಕಾಸ್ಮಾಸ್’ ಎಂಬ ಪ್ರವಾಸಿ ಕಂಪೆನಿಯೊಂದು ಅಣಿಗೊಳಿಸಿದ ಹತ್ತೊಂಬತ್ತು ದಿನದ ಪ್ರವಾಸ. ಪ್ರತಿದಿನವೂ ಒಂದೊಂದು ಪ್ರವಾಸಿ ಸ್ಥಳಗಳಿಗೆ ಭೇಟಿನೀಡುತ್ತಾ, ಯುರೋಪಿನ ಹಲವು ದೇಶಗಳನ್ನು ಸಂದರ್ಶಿಸಿದ ಅನುಭವವನ್ನು ಲೇಖಕಿ ಹಂಚಿಕೊಂಡಿದ್ದಾರೆ. ಪ್ರಯಾಣದ ಪ್ರತಿ ಘಟ್ಟವನ್ನು ಹಂತಹಂತವಾಗಿ ವಿವರಿಸುತ್ತಾ ಅಲ್ಲಿನ ವೈವಿಧ್ಯತೆ, ತಂಗುದಾಣಗಳ ಮಾಹಿತಿ, ಅಲ್ಲಿಯ ದೃಶ್ಯಗಳ ವರ್ಣನೆಗಳನ್ನು ಓದುವಾಗ ನಾವೂ ಅವರೊಡನೆ ಯುರೋಪ್ ಸುತ್ತಿದ ಅನುಭವವಾಗುತ್ತದೆ. ಕ್ಯಾಲೈದಲ್ಲಿ ಹಡಗು ಹತ್ತುವ ಮೂಲಕ ಆರಂಭವಾದ ಈ ಪ್ರವಾಸ ಬೆಲ್ಜಿಯಂ, ಜರ್ಮನಿ, ಆಸ್ಟ್ರಿಯಾ, ಇಟಲಿ, ವ್ಯಾಟಿಕನ್ ಸಿಟಿ, ಸ್ವಿಟ್ಜರ್‌ಲ್ಯಾಂಡ್, ಪ್ರಾನ್ಸ್, ದೇಶಗಳ ಮುಖ್ಯ ನಗರಗಳ ಪ್ರಮುಖ ಪ್ರವಾಸಿ ಸ್ಥಳಗತ್ತ ಸಾಗಿದೆ.

ರಾಥೆನ್ಸ್ ಬರ್ಗಿನ ಬೆಟ್ಟದ ಕೋಟೆ, ವಾಹನವಿಲ್ಲದೇ ಓಡಾಡುವ ಆ ಪ್ರದೇಶ! ಅದರ ನಂತರ ಮ್ಯೂನಿಚ್‌ ನಗರದ ವರ್ಣನೆ, ಹಿಮಪಾತ, ವೈಟ್ ಕ್ರಿಸ್ಮಸ್ ವಿವರಗಳಿವೆ. ಲೇಖಕಿಯವರ ಮಗಳು ಅಲ್ಲೇ ನೆಲೆಸಿರುವುದರಿಂದ ಆ ನಗರದ ಸಾಕಷ್ಟು ಮಾಹಿತಿಗಳನ್ನು ಅವರು ಸಂಗ್ರಹಿಸಿ ನೀಡಿದ್ದಾರೆ.

Untitled design - 2026-08-14T172740.075

ವೆನಿಸ್‌ ವಿನ್ಯಾಸದ ಕಥೆ

ಇವರೆಲ್ಲಾ ಮ್ಯೂನಿಚ್‌ ನಂತರ ಹೊರಟಿದ್ದು, ಆಸ್ಟ್ರಿಯಾ ದೇಶಕ್ಕೆ. ಅದು ಸಂಗೀತಗಾರರ ನಾಡು! ಅಲ್ಲಿನ ಸುಂದರ ವಿಯೆನ್ನಾ ನಗರದ ವರ್ಣನೆ ಈ ಪುಸ್ತಕದಲ್ಲಿದೆ. ಮುಂದಿನ ಪ್ರಯಾಣ ತೇಲುವ ನಗರ ವೆನಿಸ್‌ಗೆ. ಇಲ್ಲಿ ವಾಹನಗಳೇನು ರಸ್ತೆಗಳೇ ಇಲ್ಲ! ಅಲ್ಲಿಯ ಕಾಲುವೆಗಳಲ್ಲಿ, ಸಮುದ್ರದಲ್ಲಿ ಗೊಂಡೋಲಾ ಮೂಲಕ ಓಡಾಡುತ್ತಾ, ‘ವೆನಿಸ್’ ಎಂಬ ಅದ್ಭುತ ನಗರಿ ನಿರ್ಮಾಣವಾದ ಇತಿಹಾಸವನ್ನು ಅವರು ವಿವರಿಸುತ್ತಾರೆ. ಜೌಗು ಮಣ್ಣಲ್ಲಿ ಮರದ ದಿಮ್ಮಿಗಳನ್ನು ಹೂತು, ಅದರ ಮೇಲೆ ನಗರ ನಿರ್ಮಿಸಿದ ವೆನಿಷಿಯನ್ನರ ತಾಳ್ಮೆ, ಕರ್ತೃತ್ವ, ಶಕ್ತಿ ಮೆಚ್ಚುವಂಥದ್ದು. ಆ ಶ್ರಮವೆಲ್ಲಾ ಗ್ಲೋಬಲ್ ವಾರ್ಮಿಂಗ್ ಬಿಸಿಗೆ ಮುಳುಗಬಹುದಾ? ಗೊತ್ತಿಲ್ಲ.

ಕೌತುಕಗಳನ್ನು ಕಟ್ಟಿಕೊಟ್ಟ ಲೇಖಕಿ

ಪ್ರಯಾಣದ ಮಧ್ಯದಲ್ಲಿ ಸಿಗುವ ಪುಟ್ಟ ನಿಲ್ದಾಣ, ಪುಟ್ಟ ಪ್ರವಾಸಿ ಸ್ಥಳಗಳನ್ನೂ ಲೇಖಕಿ ಕುತೂಹಲಕಾರಿಯಾಗಿ ವಿವರಿಸಿದ್ದಾರೆ. ಉದಾಹರಣೆಗೆ ಪೆರೂಜಿಯಾ ಎಂಬ ಪುರಾತನ ಊರಿನ ವಿವರ. ಅವರು ಭೇಟಿಯಿತ್ತ ಕಾರ್ಖಾನೆಗಳ, ಗಾಜಿನ ಗೊಂಬೆಗಳ, ಕರಕುಶಲ ವಸ್ತುಗಳ ತಯಾರಿಕೆ ವಿವರ, ಅಲ್ಲಿಯ ಮಾರುಕಟ್ಟೆಗಳ ವಿವರಗಳೂ ಓದುಗರಿಗೆ ಹೊಸ ಜಗತ್ತನ್ನು ತೆರೆದಿಡುತ್ತವೆ. ಅದನ್ನೆಲ್ಲಾ ಓದುವಾಗ, ನಮ್ಮ ದೇಶದ ಪುಟ್ಟ ಊರುಗಳಲ್ಲೂ, ಯಾವುದೋ ಬೆಟ್ಟದ ಮೂಲೆಯಲ್ಲೂ ಎಷ್ಟೊಂದು ಅಂದಚೆಂದವಿದೆ, ಹಳೆಯ ದೇವಸ್ಥಾನಗಳಿವೆ ನಾವು ಅವನ್ನೂ ನೋಡಲಾಗುತ್ತಿಲ್ಲ ಅನ್ನಿಸದಿರದು. ಇಲ್ಲಿಂದ ಅಷ್ಟು ದೂರ ಹೋಗಿಯೂ ಕೆಲವು ಹೆಸರಾಂತ ಸ್ಥಳಗಳು, ಬೆರಳೆಣಿಕೆಯ ಊರುಗಳಷ್ಟನ್ನೇ ನೋಡಲು ಸಾಧ್ಯವಾಗಿದ್ದು ಎನ್ನುವ ಲೇಖಕಿ, ಜೀವನದ ವಾಸ್ತವವನ್ನು ತೆರೆದಿಡುತ್ತಾರೆ. ನಮಗಿರುವ ಅಲ್ಪ ಸಮಯದಲ್ಲಿ ಎಲ್ಲಾ ಪ್ರಾಕೃತಿಕ ಸೌಂದರ್ಯಗಳನ್ನು, ಎಲ್ಲಾ ಶಿಲ್ಪಕಲಾ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದು ಸಾಧ್ಯವಾಗದಿದ್ದರೂ, ಯಥಾಶಕ್ತಿ ವಿವಿಧ ದೇಶಗಳನ್ನು ನೋಡುವ, ಜಗತ್ತಿನ ರೀತಿ- ನೀತಿಯನ್ನು ಅರಿಯುವ ಪ್ರಯತ್ನವನ್ನಂತೂ ಮಾಡುತ್ತಿರಬೇಕು ಅಲ್ಲವೇ?

ಮುಂದಿನ ನಿಲ್ದಾಣ ರೋಮ್!

ರೋಮನ್ ಸಾಮ್ರಾಜ್ಯದ ಭವ್ಯ ಅವಶೇಷಗಳಿರುವ ಊರು ರೋಮ್‌. ಎತ್ತೆತ್ತರದ ಕಟ್ಟಡಗಳು, ವರ್ಣಚಿತ್ರಗಳು, ಕಾರಂಜಿಗಳ ನಗರ. ಕೊಲೋಸಿಯಂ ಭಗ್ನಾವಶೇಷಗಳು, ಅಲ್ಲಿ ನಡೆಯುತ್ತಿದ್ದ ಕ್ರೂರಕ್ರೀಡೆಗಳ ವಿವರವನ್ನು ನೀಡಿದ್ದಾರೆ. ಇಟಲಿಯ ಬಡತನದ ಪರಿಚಯವೂ ಆಗುತ್ತದೆ. ಪ್ರವಾಸವೆಂದಮೇಲೆ ಕೆಲವು ಕಹಿ ಅನುಭವಗಳು ಸಹಜ. ಪುಸ್ತಕದಲ್ಲಿ ಅಂಥ ಅನುಭವಗಳೂ ಇವೆ.

ರೋಮ್ ನಿಂದ ಮುಂದೆ ಈ ಪ್ರವಾಸಿ ಗುಂಪು ಸ್ವಿಟ್ಜರ್‌ಲ್ಯಾಂಡ್‌‌, ಲುಥೆನ್ ಬರ್ಗ್, ಪ್ರಾನ್ಸ್ (ಪ್ಯಾರಿಸ್) ಹಾಗೂ ಇಂಗ್ಲೆಂಡ್ ತಲುಪುತ್ತದೆ. ಪ್ರವಾಸಿ ಕಂಪೆನಿಯ ಪ್ಯಾಕೇಜ್ ಪ್ರವಾಸ ಕೊನೆಗೊಂಡರೂ, ಲೇಖಕಿ ತಮ್ಮ ಪತಿಯೊಂದಿಗೆ ಲಂಡನ್ ನಗರ ಸುತ್ತಿದ ಅನುಭವಗಳನ್ನೂ ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಹಿಂದಿರುಗುವಾಗ ಒಂಟಿಯಾಗಿ ಭಾರತಕ್ಕೆ ಬರುವ ಅನಿವಾರ್ಯತೆ ಅವರಿಗುಂಟಾಯಿತು. ಅ ಕ್ಷಣದ ದಿಗಿಲು, ಕಸಿವಿಸಿಯ ಜತೆಗೆ ಸುರಕ್ಷಿತವಾಗಿ ಭಾರತಕ್ಕೆ ಬಂದು ತಲುಪಿದ ಸಂತಸವನ್ನೂ ಹಂಚಿಕೊಳ್ಳುತ್ತಾರೆ. ಆ ಮೂಲಕ ಪ್ರವಾಸ ಕಥನದ ಓದುಗರಲ್ಲಿ ಒಂದು ಆಪ್ತ ಭಾವ ಸೃಷ್ಟಿಸುವಲ್ಲಿ ಲೇಖಕಿ ಗೆದ್ದಿದ್ದಾರೆ.

--

ಲೇಖಕರು: ಶ್ರೀಮತಿ. ವಿಜಯಲಕ್ಷ್ಮಿ ಎಸ್ ಪಿ

ಬೆಲೆ: 250 ರು.

ಪ್ರಕಾಶಕರು: ನ್ಯೂ ವೇವ್ ಬುಕ್ಸ್