ಉತ್ತರಾಖಂಡದ ಅತ್ಯಂತ ಪ್ರಸಿದ್ಧ ಮತ್ತು ಸುಂದರ ಸರೋವರಗಳ ನಗರಿ 'ನೈನಿತಾಲ್'ಗೆ ಪ್ರಯಾಣಿಸುವ ದೆಹಲಿ ಮತ್ತು ಎನ್‌ಸಿ‌ಆರ್ ಪ್ರವಾಸಿಗರಿಗೆ ಕೇಂದ್ರ ಸರಕಾರವು ಮತ್ತೊಂದು ಮಹತ್ತರ ಮೂಲಸೌಕರ್ಯ ಕೊಡುಗೆಯನ್ನು ನೀಡಲು ಸಜ್ಜಾಗಿದೆ.

ಇತ್ತೀಚೆಗಷ್ಟೇ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಯಶಸ್ವಿಯಾಗಿ ಉದ್ಘಾಟನೆಗೊಂಡ ಬೆನ್ನಲ್ಲೇ, ಈಗ ದೆಹಲಿ ಮತ್ತು ನೈನಿತಾಲ್ ನಡುವಿನ ರಸ್ತೆ ಸಂಪರ್ಕವನ್ನು ಸುಧಾರಿಸಲು ಹೊಸದಾಗಿ 'ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ' ಯೋಜನೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ಅತ್ಯಾಧುನಿಕ ಹೆದ್ದಾರಿಯು ದೆಹಲಿ ಮತ್ತು ಕುಮಾಂವ್ ವಲಯದ ಪ್ರವೇಶ ದ್ವಾರವಾದ ಹಲ್ದ್ವಾನಿ ನಡುವಿನ ಪ್ರಯಾಣದ ಸಮಯವನ್ನು 3 ಗಂಟೆಗಿಂತಲೂ ಹೆಚ್ಚು ಕಡಿತಗೊಳಿಸಲಿದೆ.

ಇದನ್ನೂ ಓದಿ: ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ವೇ ಏಪ್ರಿಲ್‌ನಲ್ಲಿ ಪ್ರಾರಂಭ

ಪ್ರಸ್ತುತ ದೆಹಲಿಯಿಂದ ನೈನಿತಾಲ್ ತಲುಪಲು ವಾಹನ ಸವಾರರು ಮುರಾದಾಬಾದ್, ರಾಂಪುರ್ ಮತ್ತು ಬಿಲಾಸ್‌ಪುರ್ ಮಾರ್ಗವಾಗಿ ಸಾಗಬೇಕಾಗಿದ್ದು, ಭಾರಿ ಟ್ರಾಫಿಕ್ ದಟ್ಟಣೆ ಮತ್ತು ಕಿರಿದಾದ ರಸ್ತೆಗಳಿಂದಾಗಿ ಸರಿಸುಮಾರು 7 ರಿಂದ 8 ಗಂಟೆಗಳ ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ಹೊಸದಾಗಿ ನಿರ್ಮಾಣವಾಗಲಿರುವ ಈ ಗ್ರೀನ್‌ಫೀಲ್ಡ್ ಹೆದ್ದಾರಿಯು ಈ ಪ್ರಯಾಣದ ಅವಧಿಯನ್ನು ಕೇವಲ 4 ಗಂಟೆಗಿಂತ ಕಡಿಮೆ ಅವಧಿಗೆ ಇಳಿಸಲಿದೆ. ಇದು ದೆಹಲಿ ಎನ್‌ಸಿಆರ್ ನಿವಾಸಿಗಳಿಗೆ ವಾರಾಂತ್ಯದ ರಜೆಗಳಲ್ಲಿ ಯಾವುದೇ ಆಯಾಸವಿಲ್ಲದೆ ನೈನಿತಾಲ್, ಭೀಮ್ತಾಲ್ ಮತ್ತು ರಾಣಿಖೇತ್‌ನಂತಹ ಸುಂದರ ಗಿರಿಧಾಮಗಳಿಗೆ ಭೇಟಿ ನೀಡಲು ದಿಕ್ಸೂಚಿಯಾಗಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಗಳ ಪ್ರಕಾರ, ಈ ಹೊಸ ಗ್ರೀನ್‌ಫೀಲ್ಡ್ ಕಾರಿಡಾರ್ ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ NH 9 ಮತ್ತು NH 109ರ ಮಾರ್ಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ಹೊಸ ಭೂಭಾಗದ ಮೂಲಕ ಹಾದುಹೋಗಲಿದೆ. ಈ ಹೆದ್ದಾರಿಯು ಉತ್ತರ ಪ್ರದೇಶದ ಪ್ರಮುಖ ಕೈಗಾರಿಕಾ ನಗರಗಳು ಮತ್ತು ಮುರಾದಾಬಾದ್‌ನಂಥ ದಟ್ಟಣೆಯ ವಲಯಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡಲಿದೆ. ಇದರಿಂದಾಗಿ ವಾಹನಗಳು ಯಾವುದೇ ಅಡೆತಡೆಯಿಲ್ಲದೆ ಗಂಟೆಗೆ 100 ಕಿಲೋಮೀಟರ್ ಸ್ಥಿರ ವೇಗದಲ್ಲಿ ಚಲಿಸಲು ಸಾಧ್ಯವಾಗುತ್ತದೆ.

ಈ ಇಡೀ ಕಾರಿಡಾರ್ ಅನ್ನು ಆರಂಭದಲ್ಲಿ 4-ಲೇನ್ ಹೆದ್ದಾರಿಯನ್ನಾಗಿ ನಿರ್ಮಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದನ್ನು 6-ಲೇನ್‌ಗೆ ವಿಸ್ತರಿಸಲು ಅಗತ್ಯವಿರುವ ಭೂಮಿಯನ್ನು ಮೊದಲೇ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.