ಭಾರತದ ಮೊದಲ ಎತ್ತರ ಪ್ರದೇಶದ ವನ್ಯಜೀವಿ ಸಫಾರಿ ಆರಂಭ
ಹಿಮ ಚಿರತೆ ಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲೇ ಸುರಕ್ಷಿತವಾಗಿ ವೀಕ್ಷಿಸಲು ಪ್ರವಾಸಿಗರಿಗೆ ಇದು ಅವಕಾಶ ಕಲ್ಪಿಸಲಿದೆ.
ಲಡಾಖ್ನಲ್ಲಿ ಭಾರತದ ಮೊದಲ ‘ಹೈ-ಆಲ್ಟಿಟ್ಯೂಡ್ ವೈಲ್ಡ್ಲೈಫ್ ಸಫಾರಿ’ ಆರಂಭಿಸಲು ಆಡಳಿತ ಮುಂದಾಗಿದೆ. ಹಿಮ ಚಿರತೆ ಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲೇ ಸುರಕ್ಷಿತವಾಗಿ ವೀಕ್ಷಿಸಲು ಪ್ರವಾಸಿಗರಿಗೆ ಇದು ಅವಕಾಶ ಕಲ್ಪಿಸಲಿದೆ. ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಅನುಮೋದನೆಯೊಂದಿಗೆ ಈ ಯೋಜನೆ ಜಾರಿಯಾಗಲಿದೆ.

ತರಬೇತಿ ಪಡೆದ ಸ್ಥಳೀಯ ಚಾಲಕರು ಹಾಗೂ ಮಾರ್ಗದರ್ಶಕರ ನೇತೃತ್ವದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೀಪ್ಗಳಲ್ಲಿ ಸಫಾರಿ ನಡೆಸಲಾಗುತ್ತದೆ. ಖಾಸಗಿ ವಾಹನಗಳ ಅನಿಯಂತ್ರಿತ ಸಂಚಾರ ಮತ್ತು ಅಕ್ರಮ ಆಫ್- ರೋಡಿಂಗ್ನಿಂದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯಾಗುವುದನ್ನು ತಡೆಯುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹಿಮ ಚಿರತೆ ಹಾಗೂ ಪಕ್ಷಿ ವೀಕ್ಷಣೆಗೆ ಸೂಕ್ತವಾದ ಮಾರ್ಗಗಳನ್ನು ಅರಣ್ಯ ಇಲಾಖೆ ಗುರುತಿಸಲಿದೆ. ಹೇಮಿಸ್ ರಾಷ್ಟ್ರೀಯ ಉದ್ಯಾನ, ಚಾಂಗ್ಥಾಂಗ್ ವನ್ಯಜೀವಿ ಅಭಯಾರಣ್ಯ, ಕಾರಾಕೋರಂ ವನ್ಯಜೀವಿ ಅಭಯಾರಣ್ಯ, ನುಬ್ರಾ, ಜಾನ್ಸ್ಕರ್, ಶಾಮ್, ಕಾರ್ಗಿಲ್ ಮತ್ತು ದ್ರಾಸ್ ಪ್ರದೇಶಗಳನ್ನು ಸಂಭಾವ್ಯ ಸಫಾರಿ ತಾಣಗಳಾಗಿ ಪರಿಗಣಿಸಲಾಗಿದೆ.
ಲಡಾಖ್ನಲ್ಲಿ ಸುಮಾರು 477 ಹಿಮ ಚಿರತೆಗಳಿದ್ದು, ಇದು ದೇಶದಲ್ಲೇ ಅತಿ ದೊಡ್ಡ ಸಂಖ್ಯೆಯಾಗಿದೆ. ಈ ಪ್ರದೇಶದಲ್ಲಿ 38ಕ್ಕೂ ಹೆಚ್ಚು ಸಸ್ತನಿ ಪ್ರಭೇದಗಳು ಹಾಗೂ ಸುಮಾರು 340 ಪಕ್ಷಿ ಪ್ರಭೇದಗಳಿವೆ.
ಇದನ್ನೂ ಓದಿ: ಭಾರತದ 101ನೆಯ ಅಂತಾರಾಷ್ಟ್ರೀಯ ಮಹತ್ವದ ಜೌಗು ಪ್ರದೇಶ
‘ಶಾನ್’ ಸಂರಕ್ಷಣಾ ಸೊಸೈಟಿ ಮೂಲಕ ಸ್ಥಳೀಯ ಸಮುದಾಯಗಳನ್ನು ಸಂರಕ್ಷಣಾ ಕಾರ್ಯಗಳಲ್ಲಿ ಪಾಲುದಾರರನ್ನಾಗಿ ಮಾಡಲಾಗುತ್ತಿದೆ. ಸ್ಥಳೀಯ ಯುವಕರಿಗೆ ಪಕ್ಷಿ ವೀಕ್ಷಣೆ ತರಬೇತಿ, ಮಹಿಳಾ ಕುಶಲಕರ್ಮಿಗಳಿಗೆ ವನ್ಯಜೀವಿ ಆಧಾರಿತ ಉತ್ಪನ್ನಗಳ ತರಬೇತಿ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಹಿಮ ಚಿರತೆ ವೀಕ್ಷಣೆಯ ಚಳಿಗಾಲದ ಋತು ಆರಂಭಕ್ಕೂ ಮುನ್ನ ಸಫಾರಿ ಸಿದ್ಧತೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.