ವನ್ಯಜೀವಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇಯ ಅಂಗಸಂಸ್ಥೆಯಾದ ಐಆರ್‌ಸಿಟಿಸಿ (IRCTC) ಮಹಾರಾಷ್ಟ್ರ ಅರಣ್ಯ ಇಲಾಖೆಯ ಸಹಯೋಗದಲ್ಲಿ 'ವಂದರ್ಶನ' (Vandarshan) ಹೆಸರಿನ ಹೊಸ ಸಮಗ್ರ ಸಫಾರಿ ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭಿಸಿದೆ. ಈ ಪ್ಯಾಕೇಜ್‌ಗಳು ಪ್ರವಾಸಿಗರಿಗೆ ರೈಲು ಪ್ರಯಾಣದಿಂದ ಹಿಡಿದು ಸಫಾರಿ, ವಸತಿ ಮತ್ತು ಸ್ಥಳೀಯ ಸಂಚಾರದವರೆಗೆ ಎಲ್ಲ ಸೇವೆಗಳನ್ನು ಒಂದೇ ಬುಕಿಂಗ್‌ನಲ್ಲಿ ಒದಗಿಸಲಿವೆ.

Untitled design - 2026-08-04T153705.422

ಈ ಯೋಜನೆಯಡಿ ಮಹಾರಾಷ್ಟ್ರದ ಆರು ಪ್ರಮುಖ ವನ್ಯಜೀವಿ ತಾಣಗಳನ್ನು ಒಳಗೊಂಡ ಪ್ರವಾಸಗಳನ್ನು ರೂಪಿಸಲಾಗಿದೆ. ಅವುಗಳೆಂದರೆ ತಡೋಬಾ– ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ, ಬೋರ್ ಟೈಗರ್ ರಿಸರ್ವ್, ಪೆಂಚ್ ರಾಷ್ಟ್ರೀಯ ಉದ್ಯಾನ, ನವೇಗಾಂವ್– ನಾಗ್ಜಿರಾ ಟೈಗರ್ ರಿಸರ್ವ್, ಉಮ್ರೆಡ್– ಕರಾಂಡ್ಲಾ ವನ್ಯಜೀವಿ ಅಭಯಾರಣ್ಯ ಹಾಗೂ ಟಿಪೇಶ್ವರ್ ವನ್ಯಜೀವಿ ಅಭಯಾರಣ್ಯ.

ಐಆರ್‌ಸಿಟಿಸಿ ಒಟ್ಟು ಐದು ವಿಶೇಷ ಪ್ರವಾಸ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಪ್ರತಿಯೊಂದು 4 ರಾತ್ರಿ–5 ದಿನಗಳ ಅವಧಿಯದ್ದಾಗಿರಲಿದೆ. ಈ ಪ್ಯಾಕೇಜ್‌ನಲ್ಲಿ ದೃಢೀಕೃತ ರೈಲು ಟಿಕೆಟ್, ಅರಣ್ಯ ಸಫಾರಿ ಪರವಾನಗಿ, ಹೊಟೇಲ್ ವಸತಿ, ಸ್ಥಳೀಯ ವಾಹನ ವ್ಯವಸ್ಥೆ ಹಾಗೂ ಮಾರ್ಗದರ್ಶಿಯೊಂದಿಗೆ ವನ್ಯಜೀವಿ ವೀಕ್ಷಣೆಯ ಅನುಭವವನ್ನು ಒಳಗೊಂಡಿದೆ. ಕುಟುಂಬಗಳು, ವನ್ಯಜೀವಿ ಪ್ರೇಮಿಗಳು, ಛಾಯಾಗ್ರಾಹಕರು, ಪಕ್ಷಿ ವೀಕ್ಷಕರು ಹಾಗೂ ಸಾಹಸ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

Untitled design - 2026-08-04T153818.488

ಪ್ರವಾಸಗಳು ಮುಂಬಯಿನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಲ್ದಾಣದಿಂದ ವಿದರ್ಭ ಎಕ್ಸ್‌ಪ್ರೆಸ್ ಮೂಲಕ ಆರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೋರ್ಡಿಂಗ್ ಕೇಂದ್ರಗಳನ್ನು ಸೇರಿಸುವ ಯೋಜನೆ ಇದೆ. ಈ ಪ್ಯಾಕೇಜ್‌ಗಳ ಬುಕಿಂಗ್‌ಗಳು ಐಆರ್‌ಸಿಟಿಸಿ ಪ್ರವಾಸೋದ್ಯಮ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಾಗಲಿವೆ.

ಐಆರ್‌ಸಿಟಿಸಿ ಪ್ರಕಾರ, 'ವಂದರ್ಶನ' ಯೋಜನೆಯ ಮುಖ್ಯ ಉದ್ದೇಶ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ವನ್ಯಜೀವಿ ಸಂರಕ್ಷಣೆಗೆ ಬೆಂಬಲ ನೀಡುವುದು ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದಾಗಿದೆ.