ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ʼಅಂತಾರಾಷ್ಟ್ರೀಯ ಗಾಳಿಪಟ ಉತ್ಸವʼ (International Kite Festival-2026) ಭಾನುವಾರದಂದು ಅದ್ದೂರಿ ತೆರೆ ಕಂಡಿತು. ಕನ್ನಡ ಚಿತ್ರರಂಗದ ಖ್ಯಾತ ಗಾಯಕ ನಕುಲ್ ಅಭ್ಯಂಕರ್, ಖ್ಯಾತ ಬಹುಭಾಷಾ ಗಾಯಕ ಸೋನು ನಿಗಮ್ ಅವರ ಸುಮಧುರ ಕಂಠಸಿರಿಯ ಲಹರಿ ನೆರೆದಿದ್ದ ಸಂಗೀತಾಭಿಮಾನಿಗಳನ್ನು ಖುಷಿಯಲ್ಲಿ ಕುಣಿಸಿತು.

ಜೀ ಕನ್ನಡ `ಸರಿಗಮಪ' ಖ್ಯಾತಿಯ ಪಂಜಾಬ್ ಮೂಲದ ಗಾಯಕ ಜಸ್ಕರನ್ ಸಿಂಗ್, ಪ್ರಸಿದ್ದ ಗಾಯಕಿ ದಿವ್ಯಾ ರಾಮಚಂದ್ರ ತಂಡ ಹರಿಸಿದ ಸಂಗೀತ ಸುಧೆ ಪ್ರೇಕ್ಷಕರಿಗೆ ಸಂಗೀತ ರಸದೌತಣ ಉಣಬಡಿಸಿತು. ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜ್ ಬಳಿಯ ಮೈದಾನದಲ್ಲಿ ಎರಡೂ ದಿನ ಗಾಳಿಪಟ ಉತ್ಸವದ ಕಲರವ ಸ್ಮಾರ್ಟ್ ಸಿಟಿಗೆ ಹೊಸ ಮೆರುಗು ತಂದಿತು. ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಗಾಳಿಪಟ ಸ್ಪರ್ಧಿಗಳು ಬಾನಂಗಳದಲ್ಲಿ ಹಾರಾಡಿಸಿದ ಬಣ್ಣ ಬಣ್ಣದ ಗಾಳಿಪಟಗಳು ಉತ್ತರ ಕರ್ನಾಟಕ ಮಂದಿಯ ಮನಸೆಳೆದವು.

ಇದನ್ನೂ ಓದಿ: ಕೆಎಸ್‌ಟಿಡಿಸಿ 6 ದಿನಗಳ ವಿಶೇಷ ಧಾರ್ಮಿಕ ಪ್ರವಾಸಿ ಪ್ಯಾಕೇಜ್ ಘೋಷಣೆ

ವಾಣಿಜ್ಯ ನಗರಿಯಲ್ಲಿ ಸತತ ಏಳನೇ ಬಾರಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಸಾರಥ್ಯದಲ್ಲಿ ಆಯೋಜಿಸಿದ್ದ ’ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ-2026' ಕ್ಕೆ ಈ ಬಾರಿ ಹಿಂದೆಂದಿಗಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಮುಗಿಲೆತ್ತರಕ್ಕೆ ಕಲರ್ ಕಲರ್ ಗಾಳಿಪಟಗಳನ್ನು ಹಾರಿಬಿಟ್ಟು ಸಹಸ್ರಾರು ಜನರ ಕಣ್ಣರಳಿಸಿದರು.

kite fest

ಹುಬ್ಬಳ್ಳಿಯಲ್ಲಿ ನಲಿದ ವಿದೇಶಿ ಪಟುಗಳು

ಹಾಲೆಂಡ್, ಯುಕೆ, ಸೌಥ್ ಯುರೋಪಿಯನ್, ನೆದರ್‌ಲ್ಯಾಂಡ್, ಇಂಡೋನೇಷಿಯಾ, ಗ್ರೀಸ್ ಹಾಗೂ ದೇಶೀಯವಾಗಿ ಗುಜರಾತ್, ರಾಜಸ್ಥಾನ, ಒಡಿಶಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸರಿ ಸುಮಾರು 70ಕ್ಕೂ ಹೆಚ್ಚು ಗಾಳಿಪಟ ಸ್ಪರ್ಧಿಗಳು ಆಗಸದೆತ್ತರದಲ್ಲಿ ಕಲರ್ ಫುಲ್ ಗೊಂಬೆಗಳುಳ್ಳ ಗಾಳಿಪಟಗಳನ್ನು ಹಾರಿಬಿಟ್ಟು ಕಣ್ಮನ ಸೆಳೆದರು. ಯುವಕ-ಯುವತಿಯರು, ಮಕ್ಕಳು ಗಾಳಿಪಟ ತೇಲಿಬಿಟ್ಟು ಶಿಳ್ಳೆ, ಚಪ್ಪಾಳೆ ಹೊಡೆಯುತ್ತ, ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು.

ಈ ಅಂತಾರಾಷ್ಟಿಯ ಗಾಳಿಪಟ ಉತ್ಸವದಲ್ಲಿ ವಿವಿಧ ದೇಶಗಳ ಹಾಗೂ ದೇಶದ ಪ್ರಸಿದ್ದ ಕೈಟ್ ಫ್ಲೆಯರ್ಸ್ ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರತಿಯೊಬ್ಬರೂ ರಂಗು ರಂಗಿನ, ಗೊಂಬೆ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸಿ ಎಲ್ಲರ ಮನ ಸೆಳೆದರು. ಗುಜರಾತ್, ಗೋವಾ ಅಹಮಾದಾಬಾದ್‌ಗೆ ಸೀಮಿತವಾಗಿದ್ದ ಗಾಳಿಪಟ ಉತ್ಸವವನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲೂ ಹುಬ್ಬಳ್ಳಿಗೂ ಪರಿಚಯಿಸಿದ ರೂವಾರಿ, ಸಚಿವ ಪ್ರಲ್ಹಾದ್‌ ಜೋಶಿ ಅವರೂ ಕುಟುಂಬ ಸಮೇತರಾಗಿ ಮುಗಿಲೆತ್ತರದಲ್ಲಿ ಗಾಳಿಪಟ ಹಾರಿಸಿ ಖುಷಿಪಟ್ಟರು.

kite fest 1

ಅದ್ದೂರಿ ಸಾಂಸ್ಕೃತಿಕ ಮಹೋತ್ಸವದಲ್ಲಿ ಬಾಲ ಗಾಯಕಿ ಮಹನ್ಯ ಪಾಟೀಲ ಗಾಯನಕ್ಕೆ ಪ್ರೇಕ್ಷಕರೂ ದನಿಗೂಡಿಸಿದರು. ನೆರೆದಿದ್ದ ಸಾವಿರಾರು ಜನರ ಮನರಂಜಿಸಿತು. ಸಂಸದ ಕ್ರೀಡಾ ಮಹೋತ್ಸವ ಪ್ರಯುಕ್ತ ದೇಶಿ ಕ್ರೀಡೆಗಳಾದ ಯೋಗ, ಮಲ್ಲಕಂಬ, ಗೋಲಿ ಆಟ, ಲಗೋರಿ, ಹಗ್ಗ ಜಗ್ಗಾಟ, ಚಿನ್ನಿ-ದಾಂಡು ಸ್ಪರ್ಧೆ ಸಹ ಕ್ರೀಡಾಳುಗಳ ಮನಸೆಳೆಯಿತು. ಸಚಿವರೂ ಎರಡೂ ದಿನ ಪ್ರತಿ ಆಟದಲ್ಲಿ ತೊಡಗಿ ಪ್ರೇರಣೆ ನೀಡಿದ್ದು ಕ್ರೀಡಾ ಮಹೋತ್ಸವಕ್ಕೆ ವಿಶೇಷ ಮೆರುಗು ತಂದಿತ್ತು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ಅಸಂಖ್ಯಾತ ಸಾರ್ವಜನಿಕರು ಕ್ರೀಡಾ ಮಹೋತ್ಸವ ಹಾಗೂ ಗಾಳಿಪಟ ಉತ್ಸವಕ್ಕೆ ಸಾಕ್ಷಿಯಾದರು.

ಮಹಿಳೆಯರಿಗಾಗಿ ಮ್ಯೂಜಿಕ್ ಚೇರ್, ಕೃಷ್ಣ-ರಾಧೆ ಸೇರಿದಂತೆ ಹಲವು ಕ್ರೀಡೆಗಳು ಮತ್ತು ಸಂಗೀತ ಹಬ್ಬ ಹೃನ್ಮನ ತಣಿಸಿತು. ನೂರಾರು ಮಹಿಳೆಯರು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಗೆಬಗೆಯ ಆಹಾರ ಉತ್ಸವ ಮತ್ತು ಪ್ರದರ್ಶನ ಸವಿರುಚಿ ನೀಡಿತು. ಉತ್ತರ ಕರ್ನಾಟಕದ ಫೆವರೇಟ್ ಮಿರ್ಜಿ- ಮಂಡಕ್ಕಿ, ವಡಾ ಪಾವ್ ಹೀಗೆ ಹಲವು ಬಗೆಯ ತಿಂಡಿ ತಿನಿಸು ನೆರೆದವರ ನಾಲಿಗೆ ರುಚಿ ಹೆಚ್ಚಿಸಿತು.