ಪ್ರಯಾಣಿಕರಿಗೆ ತಮ್ಮ ದುಬೈ ಕಡೆಗಿನ ಪ್ರಯಾಣವನ್ನು ಮುಂದೂಡುವಂತೆ ಏರ್‌ ಇಂಡಿಯಾ ಮನವಿ ಮಾಡಿದೆ. ಮುಂದುವರೆದ ಭಾಗವಾಗಿ ಭಾರತದಿಂದ ದುಬೈ ಕಡೆಗೆ ಹಾರಾಟ ನಡೆಸುತ್ತಿದ್ದ ತನ್ನೆಲ್ಲ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಮುಂದೂಡಿದೆ.

ಬಿಟ್ಟುಬಿಡದೆ ಮುಂದುವರೆದಿರುವ ಯುದ್ಧ ಸನ್ನಿವೇಶದಿಂದಾಗಿ ದುಬೈ ವಿಮಾನ ನಿಲ್ದಾಣ ಮುನ್ನೆಚ್ಚರಿಕೆಯ ಕ್ರಮವಾಗಿ ವಿಮಾನ ಹಾರಾಟವನ್ನು ನಿರ್ಬಂಧಿಸಿದೆ.

ಈ ಕುರಿತು ಏರ್‌ ಇಂಡಿಯಾ ವಿಮಾನ ಸಂಸ್ಥೆ ಸಾಮಾಜಿಕ ಜಾಲತಾಣ ʻಎಕ್ಸ್‌ʼನಲ್ಲಿ ಮಾಹಿತಿ ಹಂಚಿಕೊಂಡಿದೆ. ದುಬೈಗೆ ಪ್ರಯಾಣ ಮಾಡುವ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಇಂದು ರದ್ದು ಮಾಡಿದೆ.

ಮುಂದೂಡಿ ಅಥವಾ ರದ್ದುಮಾಡಿಕೊಳ್ಳಿ

ಈಗಾಗಲೇ ದುಬೈ ಪ್ರಯಾಣಕ್ಕೆ ಮುಂಗಡ ಬುಕಿಂಗ್‌ ಮಾಡಿಕೊಂಡಿದ್ದರೆ ಪ್ರಯಾಣವನ್ನು ಮುಂದೂಡಿ ಅಥವಾ ರದ್ದುಮಾಡಿಕೊಳ್ಳುವಂತೆ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಮನವಿ ಮಾಡಿದೆ.

ನಿಮ್ಮ ಪ್ರಯಾಣ ರದ್ದು ಮಾಡಿಕೊಂಡರೆ ಪೂರ್ಣ ಹಣ ಮರುಪಾವತಿಯಾಗಲಿದೆ. ನೀವು ಪ್ರಯಾಣವನ್ನು ಮುಂದೂಡಿಕೆ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಿಕೊಡಲಾಗಿದ್ದು, ಹೆಚ್ಚಿನ ಹಣ ಪಾವತಿಸುವ ಅಗತ್ಯವಿಲ್ಲ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

ಈಗಾಗಲೇ ದುಬೈನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಭಾರತಕ್ಕೆ ಕರೆತರಲು ತಂಡ ಕಾರ್ಯ ನಿರ್ವಹಿಸುತ್ತಿರುವುದಾಗಿಯೂ ಸಂಸ್ಥೆ ಹೇಳಿಕೊಂಡಿದೆ.

24x7 ಸಹಾಯಕ್ಕಾಗಿ ಸಂಪರ್ಕಿಸಿ:

+91 11693 29333 +91 11693 29999