ಪ್ರಧಾನಿ ನರೇಂದ್ರ ಮೋದಿ ದೆಹಲಿ–ಅಮೃತಸರ–ಕತ್ರಾ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯ ಪ್ರಮುಖ ಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು, ಇದರಿಂದ ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರದ ಕತ್ರಾಕ್ಕೆ ಪ್ರಯಾಣದ ಸಮಯವು ಸುಮಾರು 14 ಗಂಟೆಯಿಂದ ಕೇವಲ 6 ಗಂಟೆಗೆ ಇಳಿಯಲಿದೆ. ಇದೇ ವೇಳೆ ದೆಹಲಿ–ಅಮೃತಸರ ನಡುವಿನ ಪ್ರಯಾಣವೂ ಸುಮಾರು 8 ಗಂಟೆಯಿಂದ 4 ಗಂಟೆಗೆ ಕಡಿಮೆಯಾಗಲಿದೆ.

Untitled design - 2026-07-20T115334.680

ಹರಿಯಾಣದ ಜಿಂದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 157.92 ಕಿಮೀ. ಉದ್ದದ ನಾಲ್ಕು ಪಥಗಳ ಎಕ್ಸ್‌ಪ್ರೆಸ್‌ವೇಯ ಮೊದಲ ಐದು ಪ್ಯಾಕೇಜ್‌ಗಳನ್ನು ಪ್ರಧಾನಿ ಉದ್ಘಾಟಿಸಿದರು. ಈ ಯೋಜನೆಯನ್ನು ಸುಮಾರು 9,680 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇ ರಾಷ್ಟ್ರೀಯ ರಾಜಧಾನಿಯನ್ನು ಪಂಜಾಬ್ ಹಾಗೂ ಜಮ್ಮು–ಕಾಶ್ಮೀರದೊಂದಿಗೆ ವೇಗವಾಗಿ ಸಂಪರ್ಕಿಸುವ ಮಹತ್ವದ ಮೂಲಸೌಕರ್ಯ ಯೋಜನೆಯಾಗಿದೆ.

ಈ ಯೋಜನೆಯಿಂದ ವೈಷ್ಣೋದೇವಿ ಯಾತ್ರಿಕರು, ಪ್ರವಾಸಿಗರು ಹಾಗೂ ಸರಕು ಸಾಗಣೆ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ರಸ್ತೆ ಪ್ರಯಾಣದ ಸಮಯ ಮತ್ತು ಇಂಧನ ವೆಚ್ಚ ಕಡಿಮೆಯಾಗುವುದರ ಜತೆಗೆ ಉತ್ತರ ಭಾರತದ ಪ್ರಮುಖ ನಗರಗಳ ನಡುವಿನ ಸಂಪರ್ಕವೂ ಮತ್ತಷ್ಟು ಬಲಗೊಳ್ಳಲಿದೆ. ಪ್ರವಾಸೋದ್ಯಮ, ವ್ಯಾಪಾರ ಮತ್ತು ಕೈಗಾರಿಕಾ ಬೆಳವಣಿಗೆಗೆ ಇದು ಹೊಸ ಉತ್ತೇಜನ ನೀಡಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಇದನ್ನೂ ಓದಿ: ಅದ್ಭುತ ಶಿಲ್ಪಕಲೆಯ ಮೋಧೇರಾ ಸೂರ್ಯ ಮಂದಿರ

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಜಲಂಧರ್‌ನಲ್ಲಿ ಎಕ್ಸ್‌ಪ್ರೆಸ್‌ವೇಯ ಮತ್ತೊಂದು ಪ್ಯಾಕೇಜ್‌, ರೈಲು ಹಾಗೂ ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ, ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ನವೀಕರಿಸಲಾದ ಹಲವು ರೈಲು ನಿಲ್ದಾಣಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಎಲ್ಲ ಯೋಜನೆಗಳು ದೇಶದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಿಸುವ ಉದ್ದೇಶ ಹೊಂದಿವೆ.