ಆಂಧ್ರಪ್ರದೇಶ ಸರಕಾರ ವಿಶೇಷ ಚೇತನರ ಸಬಲೀಕರಣಕ್ಕಾಗಿ ಮತ್ತು ಅವರ ಪ್ರಯಾಣವನ್ನು ಸುಲಭಗೊಳಿಸಲು 'ದಿವ್ಯಾಂಗ ಶಕ್ತಿ' ಎಂಬ ಯೋಜನೆಯನ್ನು ಗುರುವಾರ (ಮಾರ್ಚ್‌ 18) ಅನಾವರಣಗೊಳಿಸಿದೆ.

ಈ ಯೋಜನೆಯಡಿ, ರಾಜ್ಯದ ವಿಶೇಷ ಚೇತನರು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಬಹುದು. ಅರ್ಹ ಫಲಾನುಭವಿಗಳಿಗೆ ವಿಶೇಷ 'ದಿವ್ಯಾಂಗ ಶಕ್ತಿ' ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದನ್ನು ತೋರಿಸುವ ಮೂಲಕ ಅವರು ಯಾವುದೇ ಅಡೆತಡೆಯಿಲ್ಲದೆ ಸಾರಿಗೆ ಸೌಲಭ್ಯ ಪಡೆಯಬಹುದು.

ಇದನ್ನೂ ಓದಿ: ಯುರೋಪ್‌ನ ಅತ್ಯುತ್ತಮ ಪ್ರವಾಸಿ ತಾಣಗಳಿಗೆ ಪೈಪೋಟಿ ನೀಡುವ ಒಡಿಶಾ ಕಡಲು

ಪ್ರಮುಖ ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವೀಲ್‌ ಚೇರ್‌ ಸುಲಭ ಸಂಚಾರಕ್ಕಾಗಿ ರ‍್ಯಾಂಪ್‌ಗಳನ್ನು ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗುತ್ತಿದೆ. ಬಸ್‌ಗಳಲ್ಲಿ ವಿಶೇಷ ಚೇತನರಿಗಾಗಿ ಮೀಸಲಿಟ್ಟ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ವಿಶೇಷ ಚೇತನರಿಗೆ ಪೂರಕವಾದ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

'ದಿವ್ಯಾಂಗ ಶಕ್ತಿ' ಹೆಸರಿನ ವಿಶೇಷ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ವಿಶೇಷ ಚೇತನರಿಗೆ ಮಾರ್ಗದರ್ಶನ ನೀಡಲು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.