ನಂಬಿ ಬರುವ ಭಕ್ತರಿಗೆ ಚಿನ್ನ, ಬೆಳ್ಳಿಯೇ ಪ್ರಸಾದ
ಸಾಮಾನ್ಯವಾಗಿ ದೇವಾಲಯಗಳಲ್ಲಿ ಪೂಜೆ, ಅರ್ಚನೆಯ ನಂತರ ಪ್ರಸಾದ ರೂಪದಲ್ಲಿ ಹೂವು, ಹಣ್ಣು, ಲಡ್ಡು ಪ್ರಸಾದ ಹೀಗೆ ವಿಧ ವಿಧ ಭಕ್ಷ್ಯಗಳನ್ನು ನೀಡುವುದು ವಾಡಿಕೆ. ಆದರೆ ಮಧ್ಯಪ್ರದೇಶದಲ್ಲಿರುವ ಈ ದೇವಾಲಯದಲ್ಲಿ ವಿಶೇಷವೆಂಬಂತೆ ಚಿನ್ನ ಅಥವಾ ಬೆಳ್ಳಿಯನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ ಅಂದರೆ ನಂಬಲೇ ಬೇಕು.
ಚಿನ್ನ ಬೆಳ್ಳಿಯನ್ನು ಪ್ರಸಾದ ರೂಪದಲ್ಲಿ ಕೊಡುವ ದೇವಸ್ಥಾನವಿದೆಯೆಂದರೆ ನಂಬುತ್ತೀರಾ..? ನಂಬಲೇ ಬೇಕು. ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ನೀಡುವ ದೇಶದ ಏಕೈಕ ದೇವಾಲಯವೆಂದರೆ ಮಧ್ಯಪ್ರದೇಶದ ರತ್ನಗಿರಿ ರತ್ನಂನ ಈ ಮಹಾಲಕ್ಷ್ಮೀ ದೇವಾಲಯವಾಗಿದೆ.
ವರ್ಷಪೂರ್ತಿ ಇಲ್ಲಿಗೆ ಚಿನ್ನ ಹಾಗೂ ಬೆಳ್ಳಿಯ ನಗ-ನಾಣ್ಯಗಳು ದೇಣಿಗೆಯ ರೂಪದಲ್ಲಿ ಬಂದು ಸೇರುತ್ತಿದ್ದು, ಸಂಪತ್ತಿನ ದೇವತೆಯಾಗಿರುವ ಮಹಾಲಕ್ಷ್ಮಿಯನ್ನು ಸಾವಿರಾರು ಕೋಟಿಯ ನಗದು ಹಾಗೂ ಆಭರಣಗಳಿಂದ ಅಲಂಕರಿಸಲಾಗುತ್ತದೆ. ದೇಣಿಗೆಯ ರೂಪದಲ್ಲಿ ಬರುವ ಚಿನ್ನ ಹಾಗೂ ಬೆಳ್ಳಿಯನ್ನು ಇಲ್ಲಿಗೆ ಬರುವ ಭಕ್ತರಿಗೆ ದೀಪಾವಳಿಯ ಮೂರು ದಿನ ನೀಡಲಾಗುತ್ತದೆ. ಇಲ್ಲಿ ಸಿಗುವಂತಹ ಬೆಳ್ಳಿ ಬಂಗಾರವನ್ನು ಮನೆಯಲ್ಲಿ ತಂದಿಟ್ಟುಕೊಂಡು ಪೂಜಿಸಿದರೆ ಲಕ್ಷ್ಮೀ ನೆಲೆಸುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗೆಯೇ ಇಲ್ಲಿ ಪ್ರಸಾದ ರೂಪವಾಗಿ ನೀಡುವ ಚಿನ್ನ ಬೆಳ್ಳಿಯನ್ನು ಇತರ ಉಪಯೋಗಕ್ಕಾಗಿ ಬಳಸಬಾರದು.

ಭಕ್ತರಿಗೆ ಚಿನ್ನ, ಬೆಳ್ಳಿಯೇ ಪ್ರಸಾದ :
ದೀಪಾವಳಿಯ ಧನ ತ್ರಯೋದಶಿಯಿಂದ ಈ ದೇವಾಲಯದಲ್ಲಿ ಆರಂಭವಾಗುವ ಉತ್ಸವವು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿದ್ದು, ನಗದು ಹಾಗೂ ಆಭರಣಗಳಿಂದ ದೇವಿಯನ್ನು ಸಿಂಗರಿಸಲಾಗುತ್ತದೆ. ವರ್ಷದಲ್ಲಿ ಐದು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಹೊಸದಾಗಿ ಆಭರಣಗಳನ್ನು ಕೊಂಡವರೂ ಈ ದೇವಸ್ಥಾನಕ್ಕೆ ಬಂದು ಹೊಸ ಆಭರಣವನ್ನು ಧನತ್ರಯೋದಶಿಯಂದು ಪೂಜಾರಿಗೆ ನೀಡಿ, ಗರ್ಭಗುಡಿಯಲ್ಲೇ ಇಟ್ಟು ಮೂರು ದಿನ ಕಳೆದ ನಂತರ ಮತ್ತೆ ಪಡೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದೆಂದು ಹೇಳಲಾಗುತ್ತದೆ. ಈ ಸಂಪ್ರದಾಯವು ದಶಕಗಳ ಹಿಂದಿನಿಂದಲೂ ಮುಂದುವರಿದುಕೊಂಡು ಬಂದಿದೆ. ಅಲ್ಲದೆ ದೀಪಾವಳಿಯಂದು ಭೇಟಿ ನೀಡುವ ವಿವಾಹಿತ ಮಹಿಳೆಯರಿಗೆ ಮಾತ್ರ ಚಿನ್ನ ಮತ್ತು ಬೆಳ್ಳಿಯ ಪ್ರಸಾದವನ್ನು ನೀಡಲಾಗುತ್ತದೆ.
ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ರಾಜರುಗಳು ರಾಜ್ಯದ ಸಂಪತ್ತು ಅಭಿವೃದ್ಧಿಯಾಗಲೆಂದು ಈ ದೇವಾಲಯಕ್ಕೆ ಹಣವನ್ನು ನೀಡುತ್ತಿದ್ದರಂತ ಈ ಪದ್ಧತಿ ಮುಂದುವರಿದು ಇದೀಗ ಭಕ್ತರು ಇಲ್ಲಿಗೆ ದೇಣಿಗೆಯ ರೂಪದಲ್ಲಿ ನಗದು ಹಾಗೂ ಆಭರಣವನ್ನು ಇಲ್ಲಿಗೆ ಅರ್ಪಿಸುತ್ತಾರೆ ಹೀಗೆ ಮಾಡುವುದರಿಂದ ಲಕ್ಷ್ಮೀಯು ಸದಾ ಕಾಲ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ಸಂಪತ್ತು ಐಶ್ವರ್ಯ ಇನ್ನಷ್ಟು ವೃದ್ಧಿಯಾಗುವುದು ಎನ್ನುವುದು ಜನರ ನಂಬಿಕೆ.