ಅರಕು ಕಣಿವೆಯ ಗಿರಿಜನ ಸಂಗ್ರಹಾಲಯ
1990ರ ದಶಕದಲ್ಲಿ ಸ್ಥಾಪಿತ ಈ ಸಂಗ್ರಹಾಲಯವು ಪೂರ್ವಘಟ್ಟ ಪ್ರದೇಶದಲ್ಲಿ ವಾಸಿಸುವ ಗಿರಿಜನ ಸಮುದಾಯಗಳ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಸಂಗ್ರಹಾಲಯದ ಒಳಗೆ ಕಾಲಿಟ್ಟರೆ ಒಂದು ಆದಿವಾಸಿ ಹಳ್ಳಿಯ ವಾತಾವರಣ ನಮ್ಮ ಮುಂದೆ ಮೂಡುತ್ತದೆ. ಮಣ್ಣಿನ ಮನೆಗಳು, ಹುಲ್ಲಿನ ಮೇಲ್ಚಾವಣಿಗಳು, ಮರದ ಕಂಬಗಳಿಂದ ನಿರ್ಮಿತ ಗೃಹಗಳು—ಇವುಗಳು ಗಿರಿಜನ ಜನರ ಸರಳ ಬದುಕಿನ ಪ್ರತಿಬಿಂಬಗಳಾಗಿ ಕಾಣಿಸುತ್ತವೆ.
- ವೆಂಕಟೇಶ್ ಮುದಗಲ್
ಪ್ರವಾಸಕ್ಕೆ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ನಮ್ಮ ಸಮಾನ ಮನಸ್ಕ ಗೆಳೆಯರೆ ತಂಡ ಕಳೆದ ವರ್ಷ ದೇಶದ ಪೂರ್ವ ಕಡಲ ತೀರದ ನಗರ ವಿಶಾಖಪಟ್ಟಣಂಗೆ ಪಾದ ಬೆಳೆಸಿತ್ತು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿಂದ ಸುಮಾರು117 ಕಿಮೀ. ದೂರದಲ್ಲಿನ ಪ್ರಕೃತಿ ಸೌಂದರ್ಯದ ಖನಿ ‘ಅರಕು ವ್ಯಾಲಿ’ಯನ್ನು ತಪ್ಪದೆ ನೋಡಬೇಕು. ಅದು ಅಂಥ ಸುಂದರ ತಾಣ. ಅರಕು ವ್ಯಾಲಿಯಲ್ಲಿನ ಕಾಫಿ ಮ್ಯೂಸಿಯಂ ಮತ್ತು ಗಿರಿಜನ ಸಂಗ್ರಹಾಲಯಗಳು ಮರೆಯದೆ ಭೇಟಿ ನೀಡಬೇಕಾದ ತಾಣಗಳು. ಪೂರ್ವಘಟ್ಟದ ಮಡಿಲಲ್ಲಿನ ಆದಿವಾಸಿ ಜನರ ಜೀವನದ ಜೀವಂತ ಚಿತ್ರಣ ಈ ಮ್ಯೂಸಿಯಂನಲ್ಲಿದೆ.
ಇದನ್ನೂ ಓದಿ: ಕನಸಿನ ಪ್ರವಾಸಕ್ಕೆ ಈಗಲೇ ಸಾಲ ಮಾಡಬೇಕೆ? ಇಲ್ಲಿದೆ ಟ್ರಾವೆಲ್ ಲೋನ್ ಮಾಹಿತಿ
ಪೂರ್ವಘಟ್ಟ ಪರ್ವತಗಳ ಹಸಿರು ಹೊದಿಕೆಯ ಮಧ್ಯೆ ನೆಲೆಗೊಂಡಿರುವ ಅರಕು ವ್ಯಾಲಿ ಪ್ರಕೃತಿಯ ಸೌಂದರ್ಯದ ಜತೆಗೆ ವಿಶಿಷ್ಟ ಗಿರಿಜನ ಸಂಸ್ಕೃತಿಗೂ ಪ್ರಸಿದ್ಧವಾಗಿದೆ. ಈ ವ್ಯಾಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಲ್ಲಿನ ಪ್ರಕೃತಿ ಸೊಬಗು ಎಷ್ಟು ಆಕರ್ಷಕವೋ, ಅಷ್ಟೆ ಆಕರ್ಷಕ ಅಲ್ಲಿನ ಆದಿವಾಸಿ ಸಂಸ್ಕೃತಿ. ಈ ಸಂಸ್ಕೃತಿಯ ಸಂಪತ್ತನ್ನು ಪರಿಚಯಿಸುವ ಮಹತ್ವದ ತಾಣವೇ ‘ಅರಕು ಗಿರಿಜನ ಮ್ಯೂಸಿಯಂ’.

ಗಿರಿಜನ ಜೀವನದ ಜೀವಂತ ನೋಟ
1990ರ ದಶಕದಲ್ಲಿ ಸ್ಥಾಪಿತ ಈ ಸಂಗ್ರಹಾಲಯವು ಪೂರ್ವಘಟ್ಟ ಪ್ರದೇಶದಲ್ಲಿ ವಾಸಿಸುವ ಗಿರಿಜನ ಸಮುದಾಯಗಳ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಸಂಗ್ರಹಾಲಯದ ಒಳಗೆ ಕಾಲಿಟ್ಟರೆ ಒಂದು ಆದಿವಾಸಿ ಹಳ್ಳಿಯ ವಾತಾವರಣ ನಮ್ಮ ಮುಂದೆ ಮೂಡುತ್ತದೆ. ಮಣ್ಣಿನ ಮನೆಗಳು, ಹುಲ್ಲಿನ ಮೇಲ್ಚಾವಣಿಗಳು, ಮರದ ಕಂಬಗಳಿಂದ ನಿರ್ಮಿತ ಗೃಹಗಳು—ಇವುಗಳು ಗಿರಿಜನ ಜನರ ಸರಳ ಬದುಕಿನ ಪ್ರತಿಬಿಂಬಗಳಾಗಿ ಕಾಣಿಸುತ್ತವೆ. ಈ ಪ್ರದೇಶದಲ್ಲಿ ಜಟಾಪು, ಕೊಂಡಡೋರಾ, ಬಗತಾ, ವಾಲ್ಮೀಕಿ ಮೊದಲಾದ ಗಿರಿಜನ ಸಮುದಾಯಗಳು ವಾಸಿಸುತ್ತಿವೆ. ಸಂಗ್ರಹಾಲಯದಲ್ಲಿ ಅವರ ಜೀವನದ ವಿವಿಧ ಘಟ್ಟಗಳನ್ನು ಚಿತ್ರಿಸುವ ಮೂರ್ತಿಗಳು ಮತ್ತು ದೃಶ್ಯಾವಳಿಗಳನ್ನು ನೋಡಬಹುದು. ಕೃಷಿ ಕೆಲಸಗಳಲ್ಲಿ ತೊಡಗಿರುವ ಮಹಿಳೆಯರು, ಬೇಟೆಗೆ ತೆರಳುವ ಪುರುಷರು, ಹಬ್ಬದ ಸಂಭ್ರಮದಲ್ಲಿ ನರ್ತಿಸುತ್ತಿರುವ ಯುವಕರು—ಇಂಥ ದೃಶ್ಯಾವಳಿಗಳು ಗಿರಿಜನ ಜೀವನದ ಚೈತನ್ಯವನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತವೆ.
ಗಿರಿಜನರ ಕಲೆ ಮತ್ತು ಕರಕುಶಲ
ಗಿರಿಜನ ಸಮಾಜಗಳು ಪ್ರಕೃತಿಯೊಂದಿಗೆ ಬೆಸೆದುಕೊಂಡು ಜೀವನ ಸಾಗಿಸುತ್ತವೆ. ಹಾಗಾಗಿ ಅವರ ಕಲೆ ಮತ್ತು ಕರಕುಶಲ ಕಾರ್ಯಗಳಲ್ಲಿ ಪ್ರಕೃತಿಯ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಸಂಗ್ರಹಾಲಯದಲ್ಲಿ ಬಿದಿರು ಮತ್ತು ಮರದಿಂದ ತಯಾರಿಸಿದ ಬುಟ್ಟಿಗಳು, ಕೃಷಿ ಉಪಕರಣಗಳು, ಬೇಟೆಗಾರಿಕೆ ಸಾಧನಗಳು, ಮಣ್ಣಿನ ಪಾತ್ರೆಗಳು ಮತ್ತು ಪರಂಪರೆಯ ಆಭರಣಗಳು ಪ್ರದರ್ಶನಕ್ಕಿವೆ. ಇವುಗಳ ಮೂಲಕ ಗಿರಿಜನರ ಕೈಚಳಕ ಮತ್ತು ಸೃಜನಶೀಲತೆ ಸ್ಪಷ್ಟವಾಗಿ ನಮಗೆ ಅರಿವಾಗುತ್ತದೆ.
ನೃತ್ಯ, ಸಂಗೀತ ಮತ್ತು ಹಬ್ಬಗಳು
ಗಿರಿಜನರ ಜೀವನದಲ್ಲಿ ಹಬ್ಬ-ಹರಿದಿನಗಳಿಗೆ ವಿಶೇಷ ಸ್ಥಾನವಿದೆ. ಸಂಭ್ರಮಗಳಲ್ಲಿ ಅವರು ಸಂಗೀತ ಮತ್ತು ನೃತ್ಯದ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಸಂಗ್ರಹಾಲಯದಲ್ಲಿನ ಶಿಲ್ಪ ಮತ್ತು ದೃಶ್ಯಾವಳಿಗಳು ಗಿರಿಜನರ ನೃತ್ಯ ಸಂಪ್ರದಾಯಗಳು, ಮದುವೆ ಆಚರಣೆಗಳು ಮತ್ತು ಹಬ್ಬಗಳ ವೈಭವವನ್ನು ಮನೋಜ್ಞವಾಗಿ ಪ್ರದರ್ಶಿಸುತ್ತವೆ. ಆಧುನಿಕತೆಯ ಪ್ರಭಾವದಿಂದ ಅನೇಕ ಪರಂಪರೆಗಳು ಮರೆಯಾಗುತ್ತಿರುವ ಈ ಕಾಲದಲ್ಲಿ ಗಿರಿಜನ ಸಂಗ್ರಹಾಲಯ ಅವರ ಸಂಸ್ಕೃತಿಯನ್ನು ಉಳಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ಇಲ್ಲಿ ಬರುವ ಪ್ರವಾಸಿಗರು ಗಿರಿಜನರ ಸರಳ ಜೀವನದ ತತ್ತ್ವವನ್ನು ಅರಿತುಕೊಳ್ಳುತ್ತಾರೆ. ಪ್ರಕೃತಿಯೊಂದಿಗೆ ಹೊಂದಿಕೊಂಡಿರುವ ಅವರ ಬದುಕು ಮಾನವನಿಗೆ ಪರಿಸರದ ಮಹತ್ವವನ್ನು ನೆನಪಿಸುತ್ತದೆ.

--
ವಾರದ ಏಳು ದಿನಗಳಲ್ಲೂ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ. ಬೆಳಗ್ಗೆ 9 - ಸಂಜೆ 5 ಗಂಟೆಯವರೆಗೆ ಪ್ರವೆಶಕ್ಕೆ ಅವಕಾಶವಿರುತ್ತದೆ.
ಪ್ರವೇಶ ಶುಲ್ಕ ಹಿರಿಯರಿಗೆ 60 ರುಪಾಯಿಗಳು. ಕಿರಿಯರಿಗೆ 30ರುಪಾಯಿಗಳು.
ದಾರಿ ಹೇಗೆ?
ವಿಶಾಖಪಟ್ಟಣಂಗೆ ರೈಲು ಸಂಪರ್ಕ ಉತ್ತಮವಾಗಿದೆ. ಅಲ್ಲಿಂದ ಅರಕು ವ್ಯಾಲಿಗೆ ವಿಶಾಖಪಟ್ಟಣಂನಿಂದ ಸರಕಾರಿ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.