ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ
ಮಕ್ಕಳು ಪರೀಕ್ಷೆಯ ಒತ್ತಡದಿಂದ ಹೊರಬಂದು ಬೇಸಿಗೆ ರಜೆಯ ಖುಷಿಯಲ್ಲಿದ್ದರೆ, ಹೆತ್ತವರು ಬಿಡುವಿನ ವೇಳೆಯನ್ನು ನಿಗದಿ ಪಡಿಸಿಕೊಂಡು ಕುಟುಂಬದ ಜೊತೆ ಪ್ರವಾಸದ ಸಿದ್ಧತೆಯಲ್ಲಿದ್ದಾರೆ. ಆದರೆ ವಾರಗಟ್ಟಲೇ ಪ್ರವಾಸ,ಊರು ಅಂತ ಹೋಗುವ ಮುನ್ನ ಬೆಂಗಳೂರು ಪೊಲೀಸರು ನೀಡಿರುವ ಈ ಸಲಹೆಗಳನ್ನು ತಪ್ಪದೇ ಪಾಲಿಸಿ.
ಬೆಂಗಳೂರಿಗರು ವಾರಾಂತ್ಯಗಳಲ್ಲಿ ಮನೆಯಲ್ಲಿರುವುದು ಕಷ್ಟ. ಸುತ್ತಮುತ್ತಲ ಊರುಗಳಿಗೆ, ಹತ್ತಿರದ ಪ್ರವಾಸಿತಾಣಗಳಿಗೆ ಭೇಟಿ ನೀಡಲು ತೆರಳುತ್ತಾರೆ. ಅಂಥದ್ದರಲ್ಲಿ ಬೇಸಿಗೆ ರಜೆ ಬಂದರೆ ಊರುಗಳ ಗಡಿ ದಾಡಿ ದೇಶ, ವಿದೇಶಗಳಿಗೆ ವಾರ, ತಿಂಗಳುಗಟ್ಟಲೇ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಆದರೆ ಪ್ರವಾಸಕ್ಕೂ ಮುನ್ನ ತಮ್ಮ ಮನೆಯ ಭದ್ರತೆಯ ಬಗ್ಗೆ ಗಮನವಹಿಸಬೇಕಾಗಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಹಾಗೂ ಕಳ್ಳತನ ಪ್ರಕರಣಗಳ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಸ, ಊರು ಎಂದು ಸುತ್ತಾಟಕ್ಕೆ ತೆರಳುವ ಮುನ್ನ ಮನೆಯ ಸುರಕ್ಷತೆಯ ಬಗ್ಗೆ ಹಾಗೂ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ಗಳಲ್ಲಿ ಇರಿಸುವುದರ ಬಗ್ಗೆಯೂ ಗಮನಹರಿಸಬೇಕಾಗಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯ ಹೈಲೈಟ್ಸ್:
- ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ ಹಾಗೂ ಗುಣಮಟ್ಟದ ಬೀಗ ಅಳವಡಿಸಿಕೊಳ್ಳಿ.
- ದೀರ್ಘ ಅವಧಿಗೆ ಪ್ರವಾಸ ತೆರಳುವ ಸಂದರ್ಭದಲ್ಲಿ ಪೊಲೀಸರ ಗಮನಕ್ಕೆ ತಂದಲ್ಲಿ, ಆ
ಪ್ರದೇಶದಲ್ಲಿ ಗಸ್ತು ನಡೆಸುವುದು ಪೊಲೀಸರಿಗೂ ಸುಲಭವಾಗುತ್ತದೆ.
- ಮನೆ ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಅವರ ಪೂರ್ವಾಪರವನ್ನು ಸರಿಯಾಗಿ
ತಿಳಿದುಕೊಳ್ಳಿ.
ಬೆಂಗಳೂರು ನಗರ ಪ್ರದೇಶದಲ್ಲಿ ಬೇಸಿಗೆ ರಜೆ ಶುರುವಾಗುತ್ತಿದ್ದಂತೆಯೇ ಮನಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಮನೆಗೆ ನುಗ್ಗಿ ಚಿನ್ನ, ಬೆಳ್ಳಿ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ನೇಪಾಳಿ ಗ್ಯಾಂಗನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿದ್ದರು. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಬೆಂಗಳೂರಿಗರಿಗೆ ಸಲಹೆ ನೀಡಿದ್ದಾರೆ.