ರಾಜ್ಯದ ಪ್ರವಾಸೋದ್ಯಮವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ತೆಲಂಗಾಣ ಸರಕಾರವು ಇಕೋ–ಟೂರಿಸಂ ಆಧಾರಿತ ಹೊಸ ಯೋಜನೆಯನ್ನು ರೂಪಿಸಿದೆ. ‘ಪ್ರಕೃತಿಯನ್ನು ಉಳಿಸಿ, ಉತ್ತಮ ಅನುಭವಗಳನ್ನು ಪಡೆಯಿರಿ’ ಎಂಬ ತತ್ವದಡಿ ರೂಪಿಸಲಾದ ಈ ಯೋಜನೆಯು, ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವುದರ ಜತೆಗೆ ಜೀವ ವೈವಿಧ್ಯ ಸಂರಕ್ಷಣೆಗೆ ಉತ್ತೇಜನ ನೀಡುವ ಗುರಿ ಹೊಂದಿದೆ.

ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಅವರು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ “ಈ ಇಕೋ–ಟೂರಿಸಂ ಯೋಜನೆಯು ರಾಜ್ಯದ ಪ್ರವಾಸೋದ್ಯಮವು ಪರಿಸರ ಸ್ನೇಹಿಯಾಗಿರುವುದಕ್ಕೆ ಉತ್ತಮ ನಿದರ್ಶನವಾಗಿದೆ ಮತ್ತು ಈ ಯೋಜನೆಯಿಂದ ಅರಣ್ಯ ಪ್ರದೇಶಗಳ ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯ ಸಮುದಾಯಗಳಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ” ಎಂದು ತಿಳಿಸಿದರು.

Telangana Charts Sustainable Tourism Path with New Eco-Tourism Policy


ಹೊಸ ಯೋಜನೆಯಡಿ, ನಂದಿಪೇಟ್, ತಡ್ವಾಯಿ, ಪಖಾಲ್ ಸೇರಿದಂತೆ ಹಲವಾರು ಅರಣ್ಯ ಪ್ರದೇಶಗಳನ್ನು ಪರಿಸರ ಆಧಾರಿತ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವವಿದೆ. ಟ್ರೆಕ್ಕಿಂಗ್ ಮಾರ್ಗಗಳು, ವನ್ಯಜೀವಿ ವೀಕ್ಷಣೆ, ಪರಿಸರ ಜಾಗೃತಿ ಕೇಂದ್ರಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಹೋಮ್–ಸ್ಟೇ ಮಾದರಿಯಲ್ಲಿ ವಸತಿ ನಿಲಯಗಳನ್ನು ರೂಪಿಸುವ ಯೋಜನೆಯಿದೆ.

ಸರಕಾರವು ಪ್ರವಾಸಿಗರಿಗೆ ಸುಲಭವಾಗಿ ಸೇವೆಗಳು ದೊರಕುವಂತೆ ಒಂದೇ ಜಾಲತಾಣದ ಮೂಲಕ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಆರಂಭಿಸುವುದಕ್ಕೆ ನಿರ್ಧರಿಸಿದೆ. ಈ ಮೂಲಕ ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳ ಭೇಟಿಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆಯಿದೆ.

ಇಕೋ–ಟೂರಿಸಂ ಜತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ಗುರಿಯನ್ನು ಸರಕಾರ ಹೊಂದಿದೆ. ಪ್ರಮುಖ ದೇವಾಲಯಗಳ ಸುತ್ತಮುತ್ತಲಿನ ನೈಸರ್ಗಿಕ ಪ್ರದೇಶಗಳನ್ನು ಪರಿಸರ ಸ್ನೇಹಿಯಾಗಿ ರೂಪಿಸುವ ಮೂಲಕ, ಧಾರ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವತ್ತ ರಾಜ್ಯ ಸರಕಾರ ಗಮನ ಹರಿಸುತ್ತಿದೆ.