ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಉತ್ತರ ಮಧ್ಯ ರೈಲ್ವೇ (NCR) ಪ್ರಯಾಗ್‌ರಾಜ್‌ನಿಂದ ದೇಶದ ಮೂರು ಪ್ರಮುಖ ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಈ ಸೇವೆಗಳು ದೇವಘರ್‌ನ ಬಾಬಾ ಬೈದ್ಯನಾಥ ಧಾಮ, ಉಜ್ಜಯಿನಿಯ ಮಹಾಕಾಳೇಶ್ವರ ಹಾಗೂ ಗುಜರಾತ್‌ನ ಸೋಮನಾಥ ಕ್ಷೇತ್ರಗಳಿಗೆ ನೇರ ಸಂಪರ್ಕ ಕಲ್ಪಿಸಲಿವೆ.

Untitled design - 2026-07-25T181036.701

ಪ್ರಯಾಗರಾಜ್–ವೇರಾವಲ್ ವಾರಾಂತ್ಯ ವಿಶೇಷ ರೈಲು (04173/04174) ಆಗಸ್ಟ್‌ 6ರಿಂದ ಸೆಪ್ಟೆಂಬರ್‌ 25ರವರೆಗೆ ಪ್ರತಿ ಗುರುವಾರ ಪ್ರಯಾಗರಾಜ್‌ನಿಂದ ಹಾಗೂ ಪ್ರತಿ ಶುಕ್ರವಾರ ವೇರಾವಲ್‌ನಿಂದ ಸಂಚರಿಸಲಿದೆ. ಇದರಿಂದ ಸೋಮನಾಥ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಲಿದೆ. ಸಬೇದಾರ್ಗಂಜ್–ಇಂದೋರ್ ದ್ವೈವಾರಿಕ ವಿಶೇಷ ರೈಲು ಉಜ್ಜಯಿನಿಯಲ್ಲಿ ನಿಲುಗಡೆ ಹೊಂದಿದ್ದು, ಮಹಾಕಾಳೇಶ್ವರ ದರ್ಶನಕ್ಕೆ ಹೋಗುವವರಿಗೆ ನೆರವಾಗಲಿದೆ. ದೇವಘರ್‌ಗೆ ತೆರಳುವ ಭಕ್ತರು ಜಸಿದಿಹ್ ಮತ್ತು ಮಧುಪುರ ನಿಲ್ದಾಣಗಳ ಮೂಲಕ ಬೈದ್ಯನಾಥ ಧಾಮ ತಲುಪಬಹುದು.

ಶ್ರಾವಣ ಮಾಸದಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಜುಲೈ 29ರಿಂದ ಆಗಸ್ಟ್‌ 31ರವರೆಗೆ ಝಾನ್ಸಿ–ಅಸನ್ಸೋಲ್ ವಿಶೇಷ ರೈಲಿನ 10 ಹೆಚ್ಚುವರಿ ಸಂಚಾರಗಳನ್ನೂ ರೈಲ್ವೇ ಇಲಾಖೆ ಘೋಷಿಸಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಕಾಶಿ ವಿಶ್ವನಾಥ ಧಾಮಕ್ಕೂ ವಿಶೇಷ ಸಂಪರ್ಕ ಕಲ್ಪಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.