ಬಹಳ ಹಿಂದಿನಿಂದಲೂ ದೇಶಾದ್ಯಂತ ಅತ್ಯಂತ ವೈಭವದಿಂದ ಆಚರಿಸಲ್ಪಡುವ ದೀಪಾವಳಿಯನ್ನು ಇದೀಗ ಯುನೆಸ್ಕೋ (UNESCO) ಪರಂಪರೆಯ ಪಟ್ಟಿಗೆ (UNESCOs heritage List) ಸೇರಿಸಲಾಗಿದೆ. ನವದೆಹಲಿಯ ಕೆಂಪು ಕೋಟೆಯಲ್ಲಿ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ (Safeguarding of Intangible Cultural Heritage) ನಡೆಯುತ್ತಿರುವ ಅಂತರ್‌ಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ ಈ ಘೋಷಣೆ ಮಾಡಲಾಗಿದೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಜ್ಞಾನೋದಯ ಮತ್ತು ಸದಾಚಾರದ ಸಂಕೇತವಾಗಿರುವ ದೀಪಾವಳಿ ನಮ್ಮ ನಾಗರಿಕತೆಯ ಆತ್ಮವಾಗಿದೆ ಎಂದು ಹೇಳಿದರು.

ಸಾಮಾಜಿಕ ಒಗ್ಗಟ್ಟು, ಸಾಂಪ್ರದಾಯಿಕ ಕರಕುಶಲತೆ, ಔದಾರ್ಯ, ಯೋಗಕ್ಷೇಮ ಮತ್ತು ಸಮುದಾಯ ಮನೋಭಾವದ ಮೌಲ್ಯಗಳನ್ನು ಎತ್ತಿಹಿಡಿಯುವ ಜೀವಂತ ಸಂಪ್ರದಾಯ ದೀಪಾವಳಿ ಎಂದು ಯುನೆಸ್ಕೋ ಮಾನ್ಯತೆಯಲ್ಲಿ ದೃಢಪಡಿಸಿದೆ.

Deepavali celebration (1)


ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಗೆ ಹಿಂದೂಗಳ ಹಬ್ಬವಾದ ದೀಪಾವಳಿಯನ್ನು ಯುನೆಸ್ಕೋ ಸೇರಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, “ಇದು ಸ್ವಾಗತಾರ್ಹವಾಗಿದೆ. ಇದರಿಂದ ಭಾರತ ಮತ್ತು ಪ್ರಪಂಚದಾದ್ಯಂತ ನೆಲೆಸಿರುವ ಭಾರತೀಯರು ಸಂತೋಷ ವ್ಯಕ್ತಪಡಿಸಿದ್ದಾರೆ. ದೀಪಾವಳಿಯು ಭಾರತದ ಸಂಸ್ಕೃತಿ ಮತ್ತು ನೀತಿಯಲ್ಲಿ ಆಳವಾಗಿ ಬೇರೂರಿದೆ” ಎಂದು ಹೇಳಿದರು.

ದೀಪಾವಳಿಯನ್ನು ಯುನೆಸ್ಕೋ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದರಿಂದ ಇದರ ಆಚರಣೆಗೆ ಜಾಗತಿಕ ಮನ್ನಣೆ ದೊರೆತಂತಾಗಿದೆ. ರಾಮಾಯಣ ಕಾಲದಿಂದ ಆಚರಿಸಲ್ಪಡುತ್ತಿರುವ ಈ ಹಬ್ಬಕ್ಕೆ ಕಾರಣವಾಗಿರುವ ಪ್ರಭು ಶ್ರೀ ರಾಮನ ಆದರ್ಶಗಳು ಶಾಶ್ವತವಾಗಿ ನಮಗೆ ಮಾರ್ಗದರ್ಶನ ನೀಡಲಿ ಎಂದು ಪ್ರಧಾನಿ ತಿಳಿಸಿದರು.

ಇದೇ ಮೊದಲ ಬಾರಿಗೆ ಡಿಸೆಂಬರ್ 8 ರಿಂದ ಭಾರತದಲ್ಲಿಆರಂಭವಾಗಿರುವ ಯುನೆಸ್ಕೋದ ವಾರ್ಷಿಕ ಸಭೆಯು ಡಿಸೆಂಬರ್ 13 ರವರೆಗೆ ನಡೆಯಲಿದೆ.