ಮಧ್ಯ ಪ್ರದೇಶದ ಬುಡಕಟ್ಟು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರಕಾರದಿಂದ ಅಧಿಕೃತ ಅನುಮೋದನೆ ದೊರೆತಿದ್ದು, ಇದು ಕೇಂದ್ರ ಸರಕಾರದ “ಧರ್ತಿ ಆಬಾ ಅಭಿಯಾನ”ದ ಅಡಿಯಲ್ಲಿ ಮುಂದುವರಿಯಲಿದೆ. ಬುಡಕಟ್ಟು ಜನಾಂಗದ ಬದುಕನ್ನು ಪ್ರವಾಸೋದ್ಯಮದ ಮೂಲಕ ಬಲಪಡಿಸುವುದು ಮತ್ತು ಸ್ಥಳೀಯ ಸಮುದಾಯಕ್ಕೆ ಹೊಸ ಆದಾಯ ಮಾರ್ಗಗಳನ್ನು ಸೃಷ್ಟಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ರಾಜ್ಯ ಪ್ರವಾಸೋದ್ಯಮ ಮಂಡಳಿ ಜಾರಿಗೆ ತರಲಿರುವ ಈ ಯೋಜನೆಯ ಮೂಲಕ 14 ಗ್ರಾಮಗಳಲ್ಲಿ 86 ಹೋಮ್‌ಸ್ಟೇಗಳನ್ನು ನಿರ್ಮಿಸಲಾಗುತ್ತದೆ. ಅನೂಪ್ಪುರ, ಮಂಡ್ಲಾ ಮತ್ತು ಡಿಂಡೋರಿ ಜಿಲ್ಲೆಗಳಲ್ಲಿರುವ ಈ ಗ್ರಾಮಗಳು ನರ್ಮದಾ ಪರಿಕ್ರಮಾ ಮಾರ್ಗದ ಪ್ರಮುಖ ಭಾಗಗಳಾಗಿವೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು ₹10.5 ಕೋಟಿ, ಇದರಲ್ಲಿ ಅರ್ಧವನ್ನು ಕೇಂದ್ರ ಮತ್ತು ಉಳಿದ ಹಣವನ್ನು ರಾಜ್ಯ ಸರಕಾರ ಭರಿಸಲಿದೆ.

Tribal people of Madhya Pradesh


ಬುಡಕಟ್ಟು ಜನಾಂಗದ ಜೀವನಶೈಲಿ, ಆಹಾರ, ಕಲೆ, ಕೈಗಾರಿಕೆ ಮತ್ತು ಸ್ಥಳೀಯ ಪರಂಪರೆಯನ್ನು ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪ್ರಮುಖ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸ್ಥಳೀಯ ಕುಟುಂಬಗಳಿಗೆ ಅತಿಥಿ ವಸತಿ ನಿರ್ವಹಣೆ, ತಮ್ಮ ಸಂಸ್ಕೃತಿಯ ಕುರಿತು ಭೇಟಿ ನೀಡುವ ಪ್ರವಾಸಿಗರಿಗೆ ವಿವರಿಸುವ ಮತ್ತು ಕೈಗಾರಿಕಾ ಉತ್ಪನ್ನಗಳ ಮಾರ್ಕೆಟಿಂಗ್ ಕುರಿತು ತರಬೇತಿಯನ್ನು ನೀಡಲಾಗುತ್ತದೆ.

ಈ ಯೋಜನೆಯಡಿ ಬುಡಕಟ್ಟು ಕಲಾ ಕೇಂದ್ರಗಳನ್ನು ಸ್ಥಾಪನೆಯಾಗಲಿದ್ದು, ಇದರಿಂದ ಪ್ರವಾಸಿಗರಿಗೆ ಪ್ರದೇಶದ ಪರಿಸರ ಮತ್ತು ಬುಡಕಟ್ಟು ಜನಾಂಗದ ಹೇರಿಟೇಜ್‌ ಬಗ್ಗೆ ವಿಸ್ತೃತ ಮಾಹಿತಿ ದೊರೆಯಲಿದೆ. ಈ ಯೋಜನೆಯಿಂದ 400 ಕ್ಕೂ ಹೆಚ್ಚು ಕುಟುಂಬಗಳು ನೇರ ಲಾಭ ಪಡೆಯುವ ವಿಶ್ವಾಸವನ್ನು ಮಧ್ಯ ಪ್ರದೇಶ ಸರಕಾರ ವ್ಯಕ್ತಪಡಿಸಿದೆ. ಮಹಿಳಾ ಸಬಲೀಕರಣಕ್ಕೆ ಪುಷ್ಠಿ ನೀಡುವ ಹಲವಾರು ಕಾರ್ಯಕ್ರಮಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಲಾಗಿದೆ.